Advertisement

ನಟನಾಗಿ ನನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು.. ಸಿನಿ ದುನಿಯಾದಲ್ಲಿ ಸಲಗ ಮಾತು…

12:12 PM Jan 08, 2022 | Team Udayavani |

“ಸಲಗ’ ಸಿನಿಮಾದ ಸೂಪರ್‌ ಹಿಟ್‌ ಸಕ್ಸಸ್‌ನಲ್ಲಿರುವ ನಟ ಕಂ ನಿರ್ದೇಶಕ ದುನಿಯಾ ವಿಜಯ್‌, ಹೊಸ ವರ್ಷದ ಆರಂಭದಲ್ಲಿಯೇ ಟಾಲಿವುಡ್‌ಗೆ ಎಂಟ್ರಿ ಕೊಡುವ ಸುದ್ದಿಯನ್ನು ನೀಡಿದ್ದಾರೆ. “ಸಲಗ’ ಸಿನಿಮಾದ ಸಕ್ಸಸ್‌ ಬಳಿಕ ದುನಿಯಾ ವಿಜಯ್‌ ಯಾವ ಸಿನಿಮಾ ಸಿನಿಮಾ ಮಾಡ್ತಾರೆ ಅನ್ನೋ ಅಭಿಮಾನಿಗಳ ಪ್ರಶ್ನೆಗಳಿಗೆ, ಚಿಕ್ಕ ಉತ್ತರ ಸಿಕ್ಕಿದೆ. ಆದರೆ, ಸದ್ಯ ನಾಯಕ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿಯೂ ಗೆಲುವಿನ ನಗೆ ಬೀರಿರುವ ದುನಿಯಾ ವಿಜಯ್‌, ಮುಂದಿನ ದಿನಗಳಲ್ಲಿ ಆ್ಯಕ್ಟಿಂಗ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರಾ ಅಥವಾ ಡೈರೆಕ್ಟರ್‌ ಆಗಿ ಹೆಚ್ಚು ಕಾಣಿಸಿಕೊಳ್ಳುತ್ತಾರಾ? ಕನ್ನಡದ ಜೊತೆಗೆ ತೆಲುಗಿನಲ್ಲೂ ಪದಾರ್ಪಣೆ ಮಾಡುತ್ತಿರುವ ವಿಜಯ್‌ ಮುಂದಿನ ನಡೆ ಏನು? ಅನ್ನೋದರ ಬಗ್ಗೆ ಸ್ವತಃ ದುನಿಯಾ ವಿಜಯ್‌ ಅವರೇ ಒಂದಷ್ಟು ಮಾತನಾಡಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ದುನಿಯಾ ವಿಜಯ್‌ ತಮ್ಮ ಮುಂದಿನ ಯೋಚನೆಗಳು, ಯೋಜನೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ದುನಿಯಾ ವಿಜಯ್‌ ಏನಂದ್ರೂ ಅನ್ನೋದು ಅವರದ್ದೇ ಮಾತುಗಳಲ್ಲಿ….

Advertisement

 “ಸಲಗ’ ಅಂದುಕೊಂಡಿದ್ದನ್ನು ಪ್ರೂವ್‌ ಮಾಡಿದೆ…

ನಾನು ಹೀರೋ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಯ್ತು. ಒಬ್ಬ ನಟನಾಗಿ ನಾನು ಏನು ಅನ್ನೋದನ್ನ ಪ್ರೂವ್‌ ಮಾಡಿದ್ದೀನಿ. ಬೇರೆ ಬೇರೆ ಥರದ ಪಾತ್ರಗಳನ್ನ ಮಾಡಿದ್ದೀನಿ. ಆದ್ರೆ, “ಸಲಗ’ ಸಿನಿಮಾದಲ್ಲಿ ನಟ ಮತ್ತು ನಿರ್ದೇಶಕ ಎರಡೂ ನಾನೇ ಆಗಿದ್ದೆ. ಇಲ್ಲಿಯವರೆಗೆ ಒಬ್ಬ ನಟನನ್ನಾಗಿ ನೋಡಿದ ಫ್ಯಾನ್ಸ್‌, ಇಂಡಸ್ಟ್ರಿ ಎಲ್ಲರಿಗೂ, “ಸಲಗ’ ಸಿನಿಮಾದಲ್ಲಿ ನಿರ್ದೇರ್ಶಕನಾಗಿ ನಾನು ಏನು ಅನ್ನೋದನ್ನ ಪ್ರೂವ್‌ ಮಾಡಬೇಕಿತ್ತು. ಈಗ “ಸಲಗ’ ಸಿನಿಮಾದಲ್ಲಿ ಅದೂ ಪ್ರೂವ್‌ ಆಗಿದೆ. ನಾನು ಏನು ಮಾಡಬೇಕು ಅಂಥ ಅಂದುಕೊಂಡಿದ್ದೆನೋ ಅದನ್ನ ಮಾಡಿದ ತೃಪ್ತಿ ಇದೆ.

ನನ್ನ ಕೆಲ್ಸ ಹೆಚ್ಚು ಮಾತಾಡ್ಬೇಕು ಅಂಥ ಸುಮ್ಮನಿದ್ದೆ

ನಾನು ನಿರ್ದೇಶನ ಮಾಡ್ಬೇಕು ಅಂದುಕೊಂಡಾಗಲೇ, ಇದು ಹೀಗೇ ಬರಬೇಕು, ನಾನು ಹೀಗೇ ಮಾಡ್ಬೇಕು ಅಂಥ ಮುಂಚಿತವಾಗಿಯೇ ಫಿಕ್ಸ್‌ ಆಗಿದ್ದೆ. ಆದ್ರೆ ನಾನು ಏನು ಮಾಡಿದ್ದೇನೆ ಅನ್ನೋದರ ಬಗ್ಗೆ ನಾನು ಹೆಚ್ಚು ಮಾತನಾಡಬಾರದು. ಸಿನಿಮಾ ರಿಲೀಸ್‌ ಆದ್ಮೇಲೆ ನನ್ನ ಕೆಲಸ ಮಾತಾಡ್ಬೇಕು ಅಂಥಲೂ ನಿರ್ಧರಿಸಿ, ಸುಮ್ಮನಿದ್ದೆ. ಈಗಲೂ ಅಷ್ಟೇ ನನ್ನ ಕೆಲಸದ ಬಗ್ಗೆ ನಾನೇನೂ ಹೆಚ್ಚು ಮಾತನಾಡಲಾರೆ. ನನ್ನ ಕೆಲಸವೇ ಎಲ್ಲವನ್ನೂ ಮಾತನಾಡುತ್ತಿದೆ. ಮಾತನಾಡುವವರಿಗೂ ಕೆಲಸವೇ ಉತ್ತರ ಕೊಟ್ಟಿದೆ. ಮುಂದೆಯೂ ಅಷ್ಟೇ, ನನ್ನ ಮಾತಿಗಿಂತ ಕೆಲಸವೇ ಮಾತಾಡಬೇಕು.

Advertisement

ಇದನ್ನೂ ಓದಿ:ಇಂದು ರಾಕಿಂಗ್ ಸ್ಟಾರ್ ಯಶ್‌ ಬರ್ತ್‌ಡೇ: ಮುಂದಿನ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

ಸಕ್ಸಸ್‌ ತಲೆಗೇರಿಸಿಕೊಂಡಿಲ್ಲ, ತಲೆಬಾಗಿ ಮುನ್ನಡೆಯುತ್ತೇನೆ…

ಸಾಮಾನ್ಯವಾಗಿ ಒಂದು ದೊಡ್ಡ ಸಕ್ಸಸ್‌ ಸಿಗುತ್ತಿದ್ದಂತೆ, ನಮಗೇ ಗೊತ್ತಿಲ್ಲದಂತೆ ಅದು ತಲೆಗೇರಿಸಿಕೊಳ್ಳುತ್ತದೆ. ಆದ್ರೆ, ನಾನು ಈ ವಿಷಯದಲ್ಲಿ ತುಂಬ ಜಾಗರೂಕನಾಗಿದ್ದೇನೆ. ಸಕ್ಸಸ್‌ ಸಿಕ್ಕಿದ್ದಷ್ಟೂ ಅದನ್ನು ತಲೆಗೇರಿಸಿಕೊಳ್ಳದೆ, ವಿನಯದಿಂದ ಸ್ವೀಕರಿಸಬೇಕು ಅನ್ನೋದನ್ನ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಸಕ್ಸಸ್‌ ಸಿಕ್ಕಿದಷ್ಟೂ ಅದನ್ನ ತಲೆಬಾಗಿ ಸ್ವೀಕರಿಸಿ ಮುನ್ನಡೆಯಬೇಕು. ಹಾಗಾಗಿ “ಸಲಗ’ ಹಿಟ್‌, ಅದರ ಸಕ್ಸಸ್‌ ಅಲ್ಲಿಗೇ ಬಿಟ್ಟು, ಮುಂದೇನೂ ಮಾಡ್ಬೇಕೋ ಅದರ ಕಡೆಗೆ ಗಮನ ಹರಿಸುತ್ತಿದ್ದೇನೆ. ಈಗಾಗಲೇ ಮಾಡಬೇಕಾಗಿರುವ ಮುಂದಿನ ಕೆಲಸ ಶುರು ಮಾಡಿದ್ದೇನೆ.

ನಟನಾಗಿ ನನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು…

ಒಬ್ಬ ನಟನಾದವನು ಯಾವಾಗಲೂ ಒಂದೇ ಥರದ ಪಾತ್ರಗಳಿಗೆ ಅಂಟಿಕೊಳ್ಳಬಾರದು ಅನ್ನೋದು ನನ್ನ ವೈಯಕ್ತಿಕ ನಿಲುವು. ಹಾಗಾಗಿ ನಾನು ಹೊಸಥರದ, ನನಗೆ ಚಾಲೆಂಜಿಂಗ್‌ ಅನಿಸುವಂಥ ಪಾತ್ರಗಳನ್ನು ಹುಡುಕು ¤ರುತ್ತೇನೆ. ಈಗಲೂ ಅದೇ ಕಾರಣದಿಂದ, ಮೊದಲ ತೆಲುಗು ಸಿನಿಮಾ ಒಪ್ಪಿಕೊಂಡಿದ್ದೇನೆ. ಇಲ್ಲಿ ನನ್ನದು ವಿಲನ್‌ ಪಾತ್ರ. ಇಡೀ ಸಿನಿಮಾದಲ್ಲಿ ನನಗೆ ಹೊಸಥರದ ಪಾತ್ರವಿದೆ. ಒಬ್ಬ ನಟನಾಗಿ ನನ್ನನ್ನು ಪ್ರೂವ್‌ ಮಾಡಿಕೊಳ್ಳಲು ಸಾಕಷ್ಟು ಅವಕಾಶವಿದೆ. ಈ ಮೂಲಕ ನನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. ನಟನಾದವನು ಹೊಸಥರದ ಪಾತ್ರಗಳಿಗೆ ತೆರೆದುಕೊಂಡಾಗಲೇ, ಆತ ಎಲ್ಲ ಕಡೆಯೂ ಅವಕಾಶ ಪಡೆದುಕೊಳ್ಳುತ್ತಾನೆ.

ಮೊದಲ ತೆಲುಗು ಸಿನಿಮಾದ ಸಾಕಷ್ಟು ನಿರೀಕ್ಷೆ ಇದೆ…

ಕನ್ನಡದಲ್ಲಿ ನಾನು ಇಷ್ಟು ಸಿನಿಮಾಗಳನ್ನು ಮಾಡಿದ್ರೂ, ತೆಲುಗಿನವರಿಗೆ ನಾನು ಹೊಸಬ. ನನಗೂ ತೆಲುಗು ಸಿನಿಮಾ ಹೊಸದು. ಹಾಗಾಗಿ ಅವರಿಗೆ ನನ್ನ ಮೇಲೆ, ನನಗೆ ಅವರ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇರುತ್ತದೆ. ಈಗಾಗಲೇ ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೇಳಿದ್ದಾರೆ. ನಾನು ಕೂಡ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೆಶಕ ಗೋಪಿಚಂದ್‌ ನನ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು ಭೇಟಿ ಮಾಡಿ ಕಥೆ ಹೇಳಿದಾಗ ಖುಷಿಯಾಯ್ತು. ನೆಗೆಟಿವ್‌ ಪಾತ್ರವಾದರೂ, ನನ್ನ ಪರ್ಫಾರ್ಮೆನ್ಸ್‌ಗೆ ಹೆಚ್ಚು ಆದ್ಯತೆ ಕೊಡುವಂತೆ ನಿರ್ದೇಶಕರನ್ನು ಕೇಳಿಕೊಂಡಿದ್ದೇನೆ ಅಷ್ಟೇ. ಅವರು ಕೂಡ ಅದಕ್ಕೆ ಒಪ್ಪಿಕೊಂಡಿದ್ದಾರೆ.

ಬಾಲಯ್ಯ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುವ ಕಾತುರ

ತೆಲುಗು ನಟ ಬಾಲಕೃಷ್ಣ ಅವರ ಸಿನಿಮಾಗಳನ್ನು ಚಿಕ್ಕವಯಸ್ಸಿನಲ್ಲಿ ನೋಡಿ ಎಂಜಾಯ್‌ ಮಾಡಿದ್ದವನು ನಾನು. ಬಾಲಯ್ಯ ಅವರಿಗೆ ಅವರದ್ದೇ ಆದ ಬಿಗ್‌ ಫ್ಯಾನ್ಸ್‌ ಇದ್ದಾರೆ. ಅಷ್ಟು ದೊಡ್ಡ ಸ್ಟಾರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿ ಕೊಳ್ಳುತ್ತಿದ್ದೇನೆ ಅನ್ನೋದೇ ಅದೊಂದು ರೀತಿಯಲ್ಲಿ ಅದೃಷ್ಟ ಎನ್ನಬಹುದು. ನನ್ನನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಂಡಿದ್ದಕ್ಕೆ ನಿರ್ದೇಶಕರಿಗೆ, ನನ್ನನ್ನು ಆ ಪಾತ್ರಕ್ಕೆ ಆಯ್ಕೆ ಮಾಡಿಕೊಂಡ ಚಿತ್ರತಂಡಕ್ಕೆ ಥ್ಯಾಂಕ್ಸ್‌ ಹೇಳಬೇಕು. ಇದೇ ಸಂಕ್ರಾಂತಿ ಬಳಿಕ ನನ್ನ ಮೊದಲ ತೆಲುಗು ಸಿನಿಮಾದ ಶೂಟಿಂಗ್‌ ಶುರುವಾಗಲಿದೆ. ಸದ್ಯಕ್ಕೆ ನಾನು ಬಾಲಯ್ಯ ಅವರಿಗೆ ವಿಲನ್‌ ಅನ್ನೋದಷ್ಟು ಬಿಟ್ಟರೆ ಈಗಲೇ ಪಾತ್ರದ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ.

ಈಗಾಗಲೇ ಐದಾರು ತೆಲುಗು-ತಮಿಳು ಸಿನಿಮಾ ಮಾಡ್ಬೇಕಿತ್ತು… ಆದ್ರೆ..,

ಇಲ್ಲಿಯವರೆಗೆ ಕನಿಷ್ಟ ಅಂದ್ರೂ ಐದಾರು ತೆಲುಗು – ತಮಿಳು ಸಿನಿಮಾಗಳಾದ್ರೂ ಮಾಡಬಹುದಿತ್ತು. ಆದ್ರೆ ಗಾಂಧಿನಗರಕ್ಕೆ ಬರುವಷ್ಟರಲ್ಲಿ ಅದು ನನ್ನಿಂದ ಬೇರೆಯವರಿಗೆ ಹೋಗುತ್ತಿತ್ತು. ದುನಿಯಾ ವಿಜಯ್‌ ಅವರನ್ನೇ ಈ ಪಾತ್ರಕ್ಕೆ ಹಾಕಿಕೊಳ್ಳಬೇಕು ಎಂದು ತೆಲುಗು – ತಮಿಳು ನಿರ್ದೇಶಕರು ನಿರ್ಧರಿಸಿದ್ದರೂ, ಗಾಂಧಿನಗರಕ್ಕೆ ಬರುವಷ್ಟರಲ್ಲಿ ಕೆಲವರಿಂದಾಗಿ, ಕೆಲವೊಮ್ಮೆ ಮಿಸ್‌ ಕಮ್ಯುನಿಕೇಶನ್‌ನಿಂದಾಗಿ ಅಂಥ ಅನೇಕ ಸಿನಿಮಾಗಳು ಕೈ ತಪ್ಪಿ ಹೋಗಿರುವುದಿದೆ. ಆದ್ರೆ ಈ ಬಾರಿ ಹಾಗಾಗಲಿಲ್ಲ. ನೇರವಾಗಿ ತೆಲುಗು ಸಿನಿಮಾದ ನಿರ್ದೇಶಕರೇ ನನ್ನನ್ನು ಭೇಟಿಯಾಗಿ ಈ ಸಿನಿಮಾದ ಅಪ್ರೋಚ್‌ ಮಾಡಿದ್ರು.

ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿಲ್ಲ…

“ಸಲಗ’ ಸಿನಿಮಾದ ನಂತರ ಒಂದಷ್ಟು ಸಿನಿಮಾಗಳ ಆಫ‌ರ್ ಬರುತ್ತಿರುವುದೇನೋ ನಿಜ. ಕೆಲವೊಂದು ಕಥೆ ಕೇಳಿದ್ದರೂ, ಇಷ್ಟವಾಗದಿದ್ದರಿಂದ ಆ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇನ್ನು ಕೆಲವು ನಿರ್ಮಾಪಕರು ನೀವೇ ಆ್ಯಕ್ಟಿಂಗ್‌ ಮತ್ತು ಡೈರೆಕ್ಷನ್ಸ್‌ ಎರಡೂ ಮಾಡಿ ಅಂತಾನೂ ಹೇಳುತ್ತಿದ್ದಾರೆ. ಆದ್ರೆ ಸದ್ಯಕ್ಕೆ ತೆಲುಗು ಸಿನಿಮಾ ಒಪ್ಪಿಕೊಂಡಿರುವುದರಿಂದ, ಇನ್ನೂ ನಾಲ್ಕೈದು ತಿಂಗಳು ಆ ಸಿನಿಮಾಕ್ಕೆ ನಾನು ಸಮಯ ಕೊಡಬೇಕಾಗುತ್ತದೆ. ಆ ಸಿನಿಮಾದ ಕೆಲಸ ಮುಗಿಯುವವರೆಗೂ ಯಾವುದೇ ಸಿನಿಮಾ ಒಪ್ಪಿಕೊಳ್ಳಬಾರದು ಅಂದುಕೊಂಡಿದ್ದೇನೆ.

ಎರಡನೇ ನಿರ್ದೇಶನದ ಬಗ್ಗೆ ಯೋಚನೆ ಮಾಡಿಲ್ಲ…

ಈಗಾಗಲೇ ಕೆಲವೊಂದು ಕಥೆಗಳ ಸಣ್ಣ ಎಳೆ ನನ್ನ ತಲೆಯಲ್ಲಿದೆ. ಆದರೆ, ಅದನ್ನು ಸ್ಕ್ರಿಪ್ಟ್ ಮಾಡಿ ಸಿನಿಮಾ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಈಗಲೇ ಮತ್ತೂಂದು ಸಿನಿಮಾ ನಿರ್ದೇಶನ ಮಾಡುವ ಯಾವುದೇ ಯೋಚನೆ ಇಲ್ಲ. ನಿರ್ದೇಶನ ಅನ್ನೋದು ಮತ್ತೂಂದು ದೊಡ್ಡ ಜವಾಬ್ದಾರಿ. ಅದಕ್ಕೆ ಬೇರೆಯದೇ ಮನಸ್ಥಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಂತ ನಿರ್ದೇಶನ ಮಾಡದೆಯೋ ಇರುವುದಿಲ್ಲ. ಮುಂದೆ ಖಂಡಿತಾ ನಿರ್ದೇಶನ ಮಾಡುತ್ತೇನೆ. ಆದ್ರೆ, ಸದ್ಯದ ಮಟ್ಟಿಗೆ ಯಾವಾಗ ನಿರ್ದೇಶನ ಮಾಡುತ್ತೇನೆ ಅನ್ನೋದನ್ನ ನಿರ್ಧರಿಸಿಲ್ಲ.

ಕನ್ನಡದಲ್ಲಿ ಬರಹಗಾರರಿಗೆ ಕೊರತೆ ಇದೆ, ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ…

ನಾವು ಬೇರೆ ಭಾಷೆಯ ಸಿನಿಮಾಗಳ ಬಗ್ಗೆ ಮಾತಾಡುತ್ತೇವೆ. ಆ ಸಿನಿಮಾಗಳ ಸ್ಕ್ರಿಪ್ಟ್ ಬಗ್ಗೆ ಮಾತಾಡುತ್ತೇವೆ. ಅದಕ್ಕೆಲ್ಲ ಕಾರಣ ರೈಟರ್. ಆದ್ರೆ ನಮ್ಮಲ್ಲಿ ಬರಹಗಾರನ್ನು ಗುರುತಿಸಿ ಬೆಳೆಸುವ ಕೆಲಸ ಆಗುತ್ತಿಲ್ಲ. ನನ್ನ ಪ್ರಕಾರ ಕನ್ನಡದಲ್ಲಿ ರೈಟರ್ಗೆ ತುಂಬಾನೇ ಕೊರತೆ ಇದೆ. ಹುಡುಕಿದರೆ ಕೇವಲ ಬೆರಳೆಣಿಕೆಯಷ್ಟು ರೈಟರ್ ನಮ್ಮಲ್ಲಿ ಸಿಗುತ್ತಾರೆ. ರೈಟರ್ಗೆ ಸಿಗಬೇಕಾದ ಮನ್ನಣೆ ಸಿಗದಿರುವುದರಿಂದ, ಹೊಸ ರೈಟರ್ ಸಿನಿಮಾದ ಕಡೆಗೆ ಬರುತ್ತಿಲ್ಲ. ಬೇರೆ ಭಾಷೆಗಳಂತೆ, ನಮ್ಮಲ್ಲೂ ಬರಹಗಾರನ್ನು ಬೆಳೆಸುವ ಕೆಲಸವಾಗಬೇಕು. ಬರಹಗಾರರೇ ಸಿನಿಮಾದ ನಿಜವಾದ ಸ್ಟ್ರೆಂಥ್‌ ಅನ್ನೋದನ್ನ ನಾವಿನ್ನೂ ಅರ್ಥ ಮಾಡಿಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next