Advertisement

ಅಣ್ಣ, ಅತ್ತಿಗೆಯನ್ನು ಕೊಂದು ಆತ್ಮಹತ್ಯೆ :ಆಸ್ತಿ ವಿವಾದ ಕಾರಣ

10:21 AM Feb 04, 2018 | Team Udayavani |

ಮಡಿಕೇರಿ:  ಆಸ್ತಿ ಕಲಹದ ಹಿನ್ನೆಲೆಯಲ್ಲಿ ಅಣ್ಣ ಮತ್ತು  ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ವ್ಯಕ್ತಿ ಯೋರ್ವ ಆತ್ಮಹತ್ಯೆ ಮಾಡಿಕೊಂಡ  ಆಘಾತಕಾರಿ ಘಟನೆ ಮೂರ್ನಾಡುವಿನ ಎಂ. ಬಾಡಗ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಮೂರ್ನಾಡು ಎಂ.ಬಾಡಗ ನಿವಾಸಿ, ಪ್ರಸ್ತುತ  ಮೈಸೂರಿನಲ್ಲಿ ವಾಸವಿದ್ದ ಮಾಜಿ ಸೈನಿಕ ಪಳಂಗಿಯಂಡ ಉತ್ತಪ್ಪ (62)ನೇ ಹಂತಕನಾಗಿದ್ದು,  ಪಳಂಗಿಯಂಡ ದೇವಯ್ಯ (66) ಹಾಗೂ ಅವರ ಪತ್ನಿ ಪ್ರೇಮಾ ದೇಚಮ್ಮ (53) ಗುಂಡೇಟಿಗೆ ಬಲಿಯಾದವರು.

ವಿವರ
ಸಹೋದರರಾಗಿದ್ದ ಪಳಂಗಿಯಂಡ ದೇವಯ್ಯ ಮತ್ತು ಉತ್ತಪ್ಪ ನಡುವೆ ಕುಟುಂಬದ ಆಸ್ತಿ ವಿಚಾರಕ್ಕೆ ಸಂಬಂಧಿಸಿ  ಎಂಟು ವರ್ಷಗಳಿಂದ  ವಿವಾದವಿತ್ತು. ಈ  ಕುರಿತು ಸಹೋದರರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆಯೂ  ಹಲವು ಬಾರಿ ಇವರ ನಡುವೆ ಜಗಳ ನಡೆದಿತ್ತು. ಆಗ  ಕುಟುಂಬಸ್ಥರೇ  ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದರು.

ಮೈಸೂರಿನಲ್ಲಿ ನೆಲೆಸಿದ್ದ ಉತ್ತಪ್ಪ ಕಾಫಿ, ಕರಿಮೆಣಸು ಕೊಯ್ಲು ಸಂದರ್ಭ ಮೂರ್ನಾಡಿಗೆ ಆಗಮಿಸಿ ಕೊಯ್ಲು  ಮುಗಿದ ಬಳಿಕ ಮೈಸೂರಿಗೆ ತೆರಳುತ್ತಿದ್ದರು.  

ಕೆಲವು ದಿನಗಳ ಹಿಂದೆ ಉತ್ತಪ್ಪ ಪತ್ನಿಯೊಂದಿಗೆ  ಮೂರ್ನಾಡಿಗೆ ಬಂದು ಕರಿಮೆಣಸು ಕೊಯ್ಲು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ದೇವಯ್ಯ ಅವರ ಕಾಫಿ ತೋಟದ ಪಕ್ಕದಲ್ಲೇ ಸಹೋದರ ಉತ್ತಪ್ಪ ಅವರ ಕಾಫಿ ತೋಟವಿದ್ದು, ತೋಟಕ್ಕೆ  ಹೋಗುವ  ದಾರಿ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಿತ್ತು.  ಈ  ವಿವಾದದ ಕುರಿತು ದೇವಯ್ಯ ಅವರು ಜನವರಿ ಕೊನೆಯ ವಾರದಲ್ಲಿ  ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. 

Advertisement

ಶನಿವಾರ ಬೆಳಗ್ಗೆ ದೇವಯ್ಯ ಮತ್ತು ಅವರ ಪತ್ನಿ ಪ್ರೇಮಾ ದೇಚಮ್ಮ  ಕಾರ್ಮಿಕರೊಂದಿಗೆ  ಕಾಫಿ ಮತ್ತು ಕರಿಮೆಣಸು ಕೊಯ್ಲು ಮಾಡುತ್ತಿದ್ದುದ್ದನ್ನು ಗಮನಿಸಿದ ಉತ್ತಪ್ಪ  ಸುಮಾರು 9.15 ಗಂಟೆಗೆ ಏಕಾಏಕಿ  ಅವರ ಮೇಲೆ ಡಬ್ಬಲ್‌ ಬ್ಯಾರಲ್‌ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ದೇವಯ್ಯ ಅವರ ಹೊಟ್ಟೆಭಾಗಕ್ಕೆ ಮತ್ತು ಪ್ರೇಮಾ  ಅವರ ಬೆನ್ನಿಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಅಲ್ಲಿಂದ  ಬಂದೂಕಿನೊಂದಿಗೆ ತೆರಳಿದ ಉತ್ತಪ್ಪ ತನ್ನ ಮನೆಯ ಮುಂದಿನ ಕಾಫಿ ತೋಟದಲ್ಲಿ ಸ್ವಯಂ  ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡರು.  ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ  ಬಿದ್ದಿದ್ದ ಆತನನ್ನು  ತತ್‌ಕ್ಷಣವೇ  ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ   ಜೀವ ಉಳಿಸಲಾಗಲಿಲ್ಲ.

ಮಡಿಕೇರಿ ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕ ಪ್ರದೀಪ್‌, ಉಪನಿರೀಕ್ಷಕ ಭೋಜಪ್ಪ, ಎಎಸ್‌ಐ ಅಲೆಕ್ಸ್‌ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು. ಕೃತ್ಯಕ್ಕೆ ಬಳಸಿದ ಡಬ್ಬಲ್‌ ಬ್ಯಾರಲ್‌ ಬಂದೂಕು, 3 ಸಿಡಿದ ಕಾಡತೂಸು ಮತ್ತು ಒಂದು ಜೀವಂತ ಕಾಡತೂಸನ್ನು  ವಶಕ್ಕೆ ಪಡೆದಿದ್ದಾರೆ. 

ಮೃತ ದೇವಯ್ಯ -ಪ್ರೇಮಾ ದಂಪತಿ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.  ಉತ್ತಪ್ಪ ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ  ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.  

ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next