Advertisement

ದುಬೈ: ಮನಸೆಳೆದ ಶೃಂಗೇರಿ ಪೀಠದ ಪ್ರತಿಕೃತಿ

01:47 PM Oct 31, 2023 | Team Udayavani |

ಸುಂದರ ಶೈಲಿಯ ಕಲ್ಲಿನ ಶಿಲಾಕೃತಿ, ತಲೆಬಾಗಿ ಒಳಗೆ ಹೋದರೆ ಶಾರದಾಂಬೆ ವಿರಾಜಮಾನಳಾಗಿದ್ದಾಳೆ. ಸುತ್ತಲೂ ತಣ್ಣನೆಯ ಪರಿಸರ, ಹಸುರ ನಿಸರ್ಗದ ಸಮೀಪದಲ್ಲಿ ಶಾರದಾ ಮಾತೆಯನ್ನು ಆದಿ ಶಂಕರಾಚಾರ್ಯರು ಕರ್ನಾಟಕ ಶೃಂಗೇರಿಯಲ್ಲಿ ತಂದು ಸ್ಥಾಪಿಸಿದ್ದರು. ಶೃಂಗೇರಿಯಲ್ಲಿರುವ ಶಿಲ್ಪಕಲಾಕೃತಿಗಳು ಎಂದಿಗೂ ಮನಸೆಳೆಯುವಂತದ್ದು. ಶ್ರೀಮಂತ ನಗರಿ ದುಬೈನಲ್ಲೂ ಇತ್ತೀಚೆಗೆ ಶೃಂಗೇರಿಯನ್ನು ನೋಡಿದ ಅನುಭವವಾಯಿತು.

Advertisement

ದುಬೈ ಗಿನ್ನೆಸ್‌ ದಾಖಲೆಗಳ ಸರಮಾಲೆಯನ್ನು ಧರಿಸಿರುವ ವಿಶ್ವದ ವಾಣಿಜ್ಯ ಕೇಂದ್ರ. ಒಂದೊಂದು ವಿಸ್ಮಯಗಳನ್ನು ಸೃಷ್ಟಿಸಿ ಜನಮನ ಸೆಳೆಯುತಿರುತ್ತದೆ. ಗಣೇಶನನ್ನು ಪೂಜಿಸುವ ಚೌತಿ ಹಬ್ಬವನ್ನು ಭಾರತದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜತೆಗೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದುಬೈನಲ್ಲಿಯೂ ಚೌತಿ ಹಬ್ಬ ಬಂದರೆ ಪ್ರಮುಖ ಮಳಿಗೆಗಳಲ್ಲಿ ವಿವಿಧ ಭಂಗಿಗಳಲ್ಲಿ ಶ್ರೀ ಮಹಾಗಣಪತಿ ಮೂರ್ತಿ ಪ್ರದರ್ಶನಗೊಂಡು, ಜನರು ಮನೆ ಮನೆಗಳಿಗೆ ಭಕ್ತಿ ಶೃದ್ಧೆಯಿಂದ ತೆಗೆದುಕೊಂಡು ಹೋಗುತ್ತಾರೆ.

ದುಬೈಯ ಹೃದಯ ಭಾಗದಲ್ಲಿ ಭಾರತೀಯ ಉದ್ಯಮಿಯ ಒಂದು ಭವ್ಯಬಂಗಲೆ ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತೀ ವರ್ಷ ವಿವಿಧ ರೀತಿಯ ಪುರಾಣ ಪ್ರಸಿದ್ಧ ಕಥೆಗಳನ್ನು ಆಧರಿಸಿ ಭವ್ಯ ಸೆಟ್ಟಿಂಗ್ಸ್‌ನಲ್ಲಿ ದೇವಲೋಕವನ್ನೇ ಸೃಷ್ಟಿಸಿಕೊಂಡು ಬರುತ್ತಿದ್ದು, ಈ ಬಾರಿ ಕರ್ನಾಟಕದ ಪವಿತ್ರ ಕ್ಷೇತ್ರ ಶೃಂಗೇರಿ ದೇವಾಲಯದ ಪ್ರತಿಕೃತಿ ನಿರ್ಮಿಸಲಾಗಿತ್ತು.

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಋಷ್ಯಶೃಂಗ ಗಿರಿ ತಪ್ಪಲಿನಲ್ಲಿದೆ. ಶ್ರೀ ಆದಿ ಶಂಕರಾಚಾರ್ಯರು ಸನಾತನ ಧರ್ಮವನ್ನು ಜನರಲ್ಲಿ ಜಾಗೃತಿಗೊಳಿಸುತ್ತಾ ಭಾರತದಾದ್ಯಂತ ಸಂಚರಿಸುತ್ತಾ ಸಾಗುವಾಗ ಶೃಂಗೇರಿಯ ತುಂಗಭದ್ರಾ ನದಿಯ ತೀರದಲ್ಲಿ ಪ್ರಸವ ವೇದನೆಯಿಂದ ತನ್ನ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ಬಿಸಿಲ ಬೇಗೆಯಿಂದ ಬಳಲುತ್ತಿರುವಾಗ, ಹೆಡೆ ಬಿಚ್ಚಿದ ಸರ್ಪವು ಕಪ್ಪೆಯ ಮೇಲೆ ನೆರಳನ್ನು ಮೂಡಿಸಿದ್ದ ದೃಶ್ಯವನ್ನು ಶ್ರೀ ಆದಿ ಶಂಕರರು ನೋಡಿದ ಅನಂತರ ಇದೊಂದು ಪವಿತ್ರ ಭೂಮಿ ಎಂದು ತೀರ್ಮಾನಿಸಿ ಅಲ್ಲಿ ಒಂದು ಮಠವನ್ನು ಕಟ್ಟಲು ನಿರ್ಧರಿಸಿದರು.

Advertisement

ಅದ್ವೈತ ವೇದಾಂತ ತತ್ತÌ ಶಾಸ್ತ್ರದ ಆಧಾರದಲ್ಲಿ ಶ್ರೀ ಶಾರದಾ ಪೀಠವನ್ನು ಸ್ಥಾಪಿಸಿದರು. ಅನಂತರದ ಜ್ಯೋತಿರ್‌ಮಠ ಬದರಿನಾಥದಲ್ಲಿ, ಪುರಿ, ಧಾರಕದಲ್ಲಿ ಸಹ ಸ್ಥಾಪಿಸಿದ್ದಾರೆ. ಶೃಂಗೇರಿ ಮಠ ಸಂಪೂರ್ಣವಾಗಿ ಶಿಲೆಯಿಂದ ಕೆತ್ತಲ್ಪಟ್ಟಿರುವ ಭವ್ಯ ಶಿಲಾ ದೇಗುಲವಾಗಿದೆ. ಕ್ರಿ.ಶ. 1338ರಲ್ಲಿ ಹೊಯ್ಸಳ ಚಾಲುಕ್ಯ ದ್ರಾವಿಡ ಶೈಲಿಯ ಗೋಪುರಾಕಾರದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಮಠ ಶತ ಶತಮಾನಗಳಿಂದ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ರೀತಿಯಾದ ಪ್ರಸಿದ್ಧ ಹಿನ್ನೆಲೆ ಇರುವ ಶೃಂಗೇರಿ ಪೀಠದ ಶಿಲಾಮಯ ಪ್ರತಿಕೃತಿಯನ್ನು ದುಬೈಯಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ಶಿಲ್ಪಿಗಳು ಅತ್ಯಂತ ಸೊಗಸಾಗಿ ವಿನ್ಯಾಸಗೊಳಿಸಿದ್ದರು.

ಇದು ಹಲವು ಭಾರತೀಯರನ್ನು ಅದರಲ್ಲೂ ಇಲ್ಲಿ ನೆಲೆಸಿರುವ ಕನ್ನಡಿಗರಿಗೆ ತವರು ನಾಡಿನ ನೆನಪನ್ನು ನೀಡುತ್ತಿತ್ತು. ಶೃಂಗೇರಿ ಪೀಠದ ಮೂಲ ಸ್ವರೂಪವನ್ನು ಯಥವತ್ತಾಗಿ ಇಲ್ಲಿ ನಿರ್ಮಾಣ ಮಾಡಲು ಬಳಸಾಗಿರುವ ಮೂಲ ವಸ್ತು ಥರ್ಮಕೋಲ್‌ ಶೀಟ್‌ಗಳು. ದೇವಾಲಯದ ಪ್ರತಿಕೃತಿ ಹಾಗೂ ದೇವರ ಕಲಾಕೃತಿಗಳೊಂದಿಗೆ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಮಾಡಲಾಗಿತ್ತು. ಉಳಿದ ಕಲಾಕೃತಿಗಳ ಜತೆಗೆ ಶಂಕರಾಚಾರ್ಯರ ಪ್ರತಿಮೆಯೂ ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿತ್ತು. ಥರ್ಮ್ಕೋಲ್‌ನಲ್ಲಿ ರೂಪಿಸಿದ ಪ್ರತಿಮೆಯು ನಿಜವಾಗಿಯೂ ಕಂಚಿನ ಪ್ರತಿಮೆಯಂತೆ ಕಾಣುತ್ತಿತ್ತು.

ನಿರ್ಮಿಸಿರುವ ಪ್ರತಿಯೊಂದು ಆಕೃತಿಗಳು ಶಿಲಾ ಶಿಲ್ಪದಂತೆ ನೈಜತೆಯನ್ನು ಹೊಂದಿದ್ದು, ವೀಕ್ಷಕರು ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸುತ್ತಾ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಾ ನಿರ್ಮಾಣ ಮಾಡಿರುವ ಬಂಗಲೆಯ ಯಜಮಾನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶ್ರೀ ಗಣಪತಿ ವಿಗ್ರಹದ ದರ್ಶನ ಪಡೆಯುತ್ತಾ ತೆರಳುತ್ತಿದ್ದ ದೃಶ್ಯ ಅವಿಸ್ಮರಣೀಯವಾಗಿತ್ತು.

*ಬಿ. ಕೆ. ಗಣೇಶ್‌ ರೈ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next