Advertisement

ಒಣ ಕಸ ಸಂಗ್ರಹ ಕೇಂದ್ರಕ್ಕಿಲ್ಲಿ ಗ್ರಹಣ!

01:41 PM Oct 13, 2022 | Team Udayavani |

ಕಾರ್ಕಳ: ಕಸವನ್ನು ತಂದು ಎಲ್ಲೆಡೆ ಎಸೆಯುವುದರಿಂದ ಪರಿಸರ, ಪಟ್ಟಣದ ಸೌಂದರ್ಯ ಹಾಳಾಗುತ್ತಿದೆ, ಸಾಂಕ್ರಾಮಿಕ ರೋಗರುಜಿನಗಳ ಉಲ್ಬಣಕ್ಕೂ ಅದು ದಾರಿ ಮಾಡಿಕೊಡುತ್ತಿದೆ, ಈ ಕಾರಣಕ್ಕೆ ಪುರಸಭೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಪರನೀರು ವಸತಿ ಗೃಹದಲ್ಲಿ ಒಣ ಕಸ ಸಂಗ್ರಹಕ್ಕೆಂದು ನಿರ್ಮಿಸಿದ ಕಟ್ಟಡ ಸ್ಥಳೀಯರ ವಿರೋಧದಿಂದ ಪಾಳು ಬಿದ್ದಿದೆ.

Advertisement

ಸುಂದರ ಸ್ವಚ್ಛ ಕಾರ್ಕಳ ಕಲ್ಪನೆಯಡಿ ತ್ಯಾಜ್ಯ ನಿರ್ವಹಣೆಗೆಂದು ಕಾರ್ಕಳ ಪುರಸಭೆ ವತಿಯಿಂದ ಬಂಗ್ಲೆಗುಡ್ಡೆಯ ಪರನೀರು ವಸತಿ ಪ್ರದೇಶದಲ್ಲಿ ಒಣ ಕಸ ಸಂಗ್ರಹಕ್ಕೆಂದು ಕಟ್ಟಡವೊಂದನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅಧಿಕಾರಿ ಅವಧಿಯಲ್ಲಿ ನಿರ್ಮಾಣವಾಗಿದ್ದ ಕಟ್ಟಡವಿದು. ಆದರೇ ಕಟ್ಟಡ ನಿರ್ಮಿಸಿದ್ದರೂ ಸ್ಥಳೀಯರ ವಿರೋಧದಿಂದ ಒಣ ಕಸ ಸಂಗ್ರಹ ಮಾತ್ರ ಕಟ್ಟಡದಲ್ಲಿ ಸಾಧ್ಯವಾಗಿಲ್ಲ. ಸಿಮೆಂಟ್‌ ಮೇಲ್ಛಾವಣಿಯ ಕಟ್ಟಡ ಕಳೆದ ಎಂಟು ವರ್ಷಗಳಿಂದ ನಿರ್ಮಾಣವಾಗಿ ಹಾಗೇ ಉಳಿದುಕೊಂಡಿದೆ. ಶಿಥಿಲವಾಗುತ್ತ ಬರುತ್ತಿದೆ. ಲಕ್ಷಾಂತರ ರೂ. ವೆಚ್ಚದ ಕಟ್ಟಡ ನಿರುಪಯುಕ್ತವಾಗಿದೆ.

ಪುರಸಭೆಯ ಎರಡನೇ ವಾರ್ಡ್‌ ವ್ಯಾಪ್ತಿಯಲ್ಲಿ ಕಟ್ಟಡವಿದೆ. ವಾರ್ಡ್‌ನಲ್ಲಿ ಬಹುತೇಕ ಎಲ್ಲ ಮನೆಗಳ ಜಾಗವು ಸರಕಾರದಿಂದಲೇ ಮಂಜೂರುಗೊಂಡ ಮನೆಗಳಾಗಿವೆ. ಬಡ ಹಾಗೂ ಮಧ್ಯಮ ಕುಟುಂಬಕ್ಕೆ ಒಳಪಟ್ಟವರು ಹೆಚ್ಚಿರುವುದರಿಂದ ಜನವಸತಿ ಪ್ರದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಒಣ ಕಸ ಉತ್ಪತ್ತಿಯಾಗುತ್ತದೆ. ಈ ಕಾರಣಕ್ಕೆ ಸ್ಥಳೀಯ ಕಸ ಸಂಗ್ರಹಕ್ಕೆ ನೆರವಾಗಲೆಂದು ಪುರಸಭೆ ಒಣಕಸ ಸಂಗ್ರಹ ಕೇಂದ್ರವನ್ನು ವಸತಿ ಪ್ರದೇಶದ ಮಧ್ಯಭಾಗದಲ್ಲಿ ಸ್ಥಾಪಿಸಲಾಗಿತ್ತು.

ಒಣ ಸಂಗ್ರಹ ಕೇಂದ್ರ ಕಾರ್ಯಾರಂಭಿಸಲು ಅಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಒಣ ಕಸ ಸಂಗ್ರಹದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವುದು ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ವಿಂಗಡಣೆ ಕಾರ್ಯಕ್ಕೆ ಕಟ್ಟಡವನ್ನು ಬಳಸದೆ ಹಾಗೇ ಬಿಡಲಾಗಿತ್ತು. ಅದು ಇಂದಿಗೂ ಬಳಕೆಯಾಗದೆ ಅನಾಥವಾಗಿ ಉಳಿದುಕೊಂಡಿದೆ. ತ್ಯಾಜ್ಯ ವಿಂಗಡಣೆ ಕಾರ್ಯ ನಡೆಯದೆ ಕಟ್ಟಡ ನನೆಗುದಿಗೆ ಬಿದ್ದಿದೆ.

ಸ್ಥಳೀಯರ ಸಹಕಾರಕ್ಕೆ ಪುರಸಭೆ ಮನವಿ

Advertisement

ಸ್ಥಳೀಯ ಜನರಿಗೆ ಅನುಕೂಲವಾಗಲೆಂದು ನಿರ್ಮಿಸಿದ ಈ ಒಣ ಕಸ ಸಂಗ್ರಹ ಕಟ್ಟಡದ ಪ್ರಯೋಜನ, ಮೂಲ ಆಶಯದ ಬಗ್ಗೆ ಸ್ಥಳೀಯ ಜನತೆಗೆ ತಿಳಿಸುವ ಪ್ರಯತ್ನವನ್ನು ಪುರಸಭೆ ವತಿಯಿಂದ ಮಾಡುತ್ತ ಬರಲಾಗಿದೆ. ಸದುದ್ದೇಶದಿಂದ ನಿರ್ಮಾಣಗೊಂಡ ಕಟ್ಟಡ ಸದ್ಬಳಕೆಯಾಗುವುದಕ್ಕೆ ಸ್ಥಳೀಯರ ಸಹಕಾರ ಅಗತ್ಯ.ಒಣಕಸ ಸಂಗ್ರಹ ಕೇಂದ್ರದ ಕಾರ್ಯ ನಿರ್ವಹಣೆಗೆಂದು ಕಟ್ಟಡ ನಿರ್ಮಿಸಲಾಗಿತ್ತು. ಸ್ಥಳೀಯರು ಅಡ್ಡಿಪಡಿಸಿದ್ದ ಕಾರಣಕ್ಕೆ ಅದು ನಿಂತಿದೆ. ಈ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ ಮೂಲ ಆಶಯವನ್ನು ತಿಳಿಸುವ ಕಾರ್ಯ ನಡೆಸುತ್ತ ಬಂದಿದ್ದೇವೆ. ಸ್ಥಳೀಯರಿಗೆ ಮಾಹಿತಿ ನೀಡಿ, ಮನವರಿಕೆ ಮಾಡಿ, ಅವರ ಮನವೊಲಿಸಿ ಮತ್ತೆ ಒಣಕಸ ಸಂಗ್ರಹ ಕೇಂದ್ರವನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗುವುದು ಎಂದು ಪುರಸಭೆ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್‌ ತಿಳಿಸಿದ್ದಾರೆ.

ಕಟ್ಟಡ ನಿಧಾನಕ್ಕೆ ಶಿಥಿಲವಾಗುತ್ತ ಬಂದಿದೆ. 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡ ನಯಾ ಪೈಸೆ ಪ್ರಯೋಜನಕ್ಕೆ ಬಂದಿಲ್ಲ. ಒಣಕಸ ಸಂಗ್ರಹ ಕೇಂದ್ರಕ್ಕೆ ಪುರಸಭೆ ವತಿಯಿಂದ ಹಾಕಲಾಗಿದ್ದ ಬೀಗವನ್ನು ಯಾರೋ ಮುರಿದಿದ್ದಾರೆ. ಪರಿಸರದ ನಿವಾಸಿಗಳು ಮನೆಯ ಸಾಮಗ್ರಿಗಳನ್ನು ಅದರೊಳಗೆ ಇಡುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕೆಲವೊಂದು ಅಕ್ರಮ ಚಟುವಟಿಕೆಗಳಿಗೂ ಕಟ್ಟಡ ಬಳಕೆಯಾಗುತ್ತಿದೆ.

ಚರ್ಚಿಸಿ ನಿರ್ಧಾರ: ಒಣ ಕಸ ಸಂಗ್ರಹ ಕೇಂದ್ರ ಬಳಕೆ ಸಾಧ್ಯವಾಗಿರಲಿಲ್ಲ. ಪುರಸಭೆಯಲ್ಲಿ ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಸ್ಥಳೀಯರಿಗೆ ಅನುಕೂಲವಾಗುವ ರೀತಿ ಕಟ್ಟಡವನ್ನು ಬಳಕೆ ಮಾಡಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. -ಪ್ರತಿಮಾ ರಾಣೆ, ಕೌನ್ಸಿಲರ್‌ ಪುರಸಭೆ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next