Advertisement

8 ಸಾವಿರ ರೂ.ಗೆ ಕುಸಿದ ಕೊಬ್ಬರಿ ಧಾರಣೆ

03:20 PM Jun 26, 2023 | Team Udayavani |

ತಿಪಟೂರು: ಕಲ್ಪತರು ನಾಡಿನ ರೈತರ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬೆಳೆ ಆಗಿದ್ದು, ಇದರ ಮುಖ್ಯ ಉತ್ಪನ್ನವಾದ ಒಣ ಕೊಬ್ಬರಿ ಬೆಲೆ ಇಲ್ಲಿನ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿರುವುದು ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ.

Advertisement

ಕಳೆದ ಹತ್ತಾರು ವರ್ಷಗಳ ಹಿಂದೆ ಕ್ವಿಂಟಲ್‌ ಕೊಬ್ಬರಿ ಬೆಲೆ 8 ರಿಂದ 10 ಸಾವಿರ ರೂ. ಅಸುಪಾಸಿನಲ್ಲಿತ್ತು. ತದನಂತರ ಕೊಬ್ಬರಿ ಬೆಲೆ ನಿಧಾನವಾಗಿ ಮೇಲೇರುತ್ತ 2022ರ ವೇಳೆಗೆ 18 ಸಾವಿರ ರೂ.ವರೆಗೂ ಏರಿಕೆ ಆಗಿ ಬೆಳೆಗಾರರಲ್ಲಿ ಒಂದು ರೀತಿಯ ಚೈತನ್ಯ ತಂದಿತ್ತು.

ಮತ್ತೆ ಕುಸಿಯುವ ಭೀತಿ: ಆದರೆ, ಕಳೆದ 8-10 ತಿಂಗಳಿನಿಂದ ಕೊಬ್ಬರಿ ಬೆಲೆ ಗಣನೀಯವಾಗಿ ಇಳಿಯುತ್ತಲೇ ಇದ್ದು, ಶನಿವಾರ ಕೇವಲ 8000 ರೂ.ಕ್ಕೆ ಕುಸಿದಿದ್ದು, ಮುಂದಿನ ದಿನಗಳಲ್ಲಿ ಬೆಲೆ ಇನ್ನೆಷ್ಟು ಇಳಿಕೆಯಾಗಲಿದೆ ಎಂಬ ಆತಂಕ, ದುಗುಡ ತೆಂಗು ಬೆಳೆಗಾರರಲ್ಲಿ ಮನೆ ಮಾಡಿದೆ.

ಗುಣಮಟ್ಟದ ಕೊಬ್ಬರಿ: ದೇಶದಲ್ಲಿಯೇ ತಿಪಟೂರು ಒಣ ಕೊಬ್ಬರಿಯು ರುಚಿ ಹಾಗೂ ಎಣ್ಣೆ ತಯಾರಿಕೆಗೆ ಉತ್ತಮ ದರ್ಜೆ ಯಾಗಿರುವ ಕಾರಣ, ಇಲ್ಲಿನ ಮಾರುಕಟ್ಟೆಯಿಂದ ಬಹುಪಾಲು ಕೊಬ್ಬರಿ ತಿನ್ನಲು, ಸಿಹಿ ಪದಾರ್ಥಗಳನ್ನು ತಯಾರಿಸಲು, ಸೌಂದರ್ಯವರ್ಧಕ ವಸ್ತುಗಳ ಉತ್ಪಾದನೆಗೂ ಬಳಕೆಯಾಗುತ್ತಿದೆ. ಇದರಿಂದ ತಿಪ ಟೂರು ಕೊಬ್ಬರಿಗೆ ದೇಶಾದ್ಯಂತ ಅದರಲ್ಲೂ, ಉತ್ತರ ಭಾರತದ ಸಾಕಷ್ಟು ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಉತ್ತರ ಭಾರತದಲ್ಲಿ ಕುಸಿದ ಬೇಡಿಕೆ: ಉತ್ತರ ಭಾರತದಲ್ಲಿ ಚಳಿಗಾಲದ ದಿನಗಳಲ್ಲಿ ಕೊಬ್ಬರಿಯನ್ನು ತಿನ್ನಲು, ಶ್ರಾವಣ ಮಾಸದಿಂದ ದೀಪಾವಳಿಯವರೆಗೂ ವಿವಿಧ ಹಬ್ಬ-ಹರಿದಿನ, ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚು ಉಪಯೋಗಿಸುತ್ತಾರೆ. ಇಂತಹ ದಿನಗಳಲ್ಲಿ ಬೇಡಿಕೆ, ಬೆಲೆಯೂ ಗಮನಾರ್ಹವಾಗಿ ಹೆಚ್ಚುತ್ತದೆ. ಆದರೆ, ಈ ವರ್ಷ ಉತ್ತರ ಭಾರತದ ರಾಜ್ಯಗಳಲ್ಲಿ ಉಷ್ಣಾಂಶ ಹೆಚ್ಚು ಇದ್ದದ್ದರಿಂದ 2022ರ ಜೂನ್‌ ನಿಂದಲೇ ಕೊಬ್ಬರಿ ತಿನ್ನುವುದು ಕಡಿಮೆ ಯಾಗಿ, ಬೇಡಿಕೆಯೂ ಸಹಜವಾಗಿ ಕುಸಿದಿದೆ ಎಂಬ ಚರ್ಚೆ ಇದೆ. 18 ಸಾವಿರ ರೂ.

Advertisement

ಬೆಲೆ ಸಿಕ್ಕರೆ ಉತ್ತಮ: ಇತ್ತೀಚೆಗೆ ತೆಂಗು ಬೆಳೆಗಾರರಿಗೆ ತೋಟಗಾರಿಕಾ ಕೃಷಿ ಹಾಗೂ ನಿರ್ವಹಣಾ ವೆಚ್ಚ ಬಲು ದುಬಾರಿಯಾಗಿದೆ. ಒಂದು ಕ್ವಿಂಟಲ್‌ ಕೊಬ್ಬರಿ ಉತ್ಪಾದಿಸಲು ಕನಿಷ್ಠವೆಂದರೂ 16 ಸಾವಿರ ರೂ. ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಲ್‌ ಕೊಬ್ಬರಿಗೆ 18 ಸಾವಿರ ರೂ. ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ಮಾಡಬಹದಾಗಿದೆ. ಆದರೆ, ಪ್ರಸ್ತುತ 8 ಸಾವಿರಕ್ಕೆ ಕೊಬ್ಬರಿ ಬೆಲೆ ಕುಸಿದಿದ್ದು, ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಸಾಲ ತೀರಿಸುವುದು ಹೇಗೆ ಎಂಬ ಚಿಂತೆ: ಬೆಲೆ ಇಳಿಕೆಯ ಜೊತೆಗೆ ತೆಂಗು ಬೆಳೆಗಾರರಿಗೆ ತೋಟಗಾ ರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ಕಪ್ಪು ತಲೆ ಹುಳು ರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡ ಹಾಗೂ ಸುಳಿ ಕೊರಕ ಇತ್ಯಾದಿ ರೋಗಗಳ ಜೊತೆಗೆ ತೋಟಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲೂ ಬೆಲೆ ಕುಸಿತ ಕಂಗಾಲಾಗುವಂತೆ ಮಾಡಿದೆ.

18 ಸಾವಿರಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ: ಕೊಬ್ಬರಿ ಬೆಲೆ ಆಯೋಗ ಹಾಲಿ ಇರುವ ಕೊಬ್ಬರಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ 11,750 ರೂ.ನಿಂದ ವೈಜ್ಞಾನಿಕ ಕನಿಷ್ಠ ಬೆಲೆ 18 ಸಾವಿರ ರೂ.ಗೆ ಏರಿಸಿದಲ್ಲಿ ತೆಂಗು ಬೆಳೆಗಾರರು ನೆಮ್ಮದಿ ಜೀವನ ನಡೆಸಬಹು ದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೋರಾಟ ಮಾಡಿದ್ರೂ ಪ್ರಯೋಜನವಿಲ್ಲ: ಬೆಳೆಗಾರರು ಹಾಗೂ ರೈತ ಸಂಘಟನೆಗಳೂ ಈ ಬೇಡಿಕೆಯನ್ನು ಸಾಕಷ್ಟು ಹೋರಾಟಗಳ ಮೂಲಕ ಸರ್ಕಾರಗಳ ಗಮನ ಸೆಳೆದಿವೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 18 ಸಾವಿರ ರೂ.ಗೆ ಏರಿಸದಿದ್ದರೆ ಪುನಃ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ವಿವಿಧ ಸಂಘಟನೆಗಳು ತಾಲೂಕು ಆಡಳಿತಗಳ ಮೂಲಕ ಸಾಕಷ್ಟು ಎಚ್ಚರಿಕೆ ನೀಡುತ್ತಿವೆ.

ಪ್ರೋತ್ಸಾಹ ನೀಡಿ: ರಾಜ್ಯದ ತಿಪಟೂರು ಸೇರಿ ಹತ್ತಾರು ಜಿಲ್ಲೆಗಳಲ್ಲಿ ತೆಂಗು ಬೆಳೆ ಗಣನೀಯವಾಗಿ ಹೆಚ್ಚುತ್ತಲೇ ಇದ್ದು, ಲಕ್ಷಾಂತರ ಕುಟುಂಬಗಳು ತೆಂಗನ್ನೇ ಜೀವಾಧಾರವಾಗಿರಿಸಿಕೊಂಡಿವೆ. ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ವೈಜ್ಞಾನಿಕವಾಗಿ ತೆಂಗು ಬೆಳೆಸಲು, ಸಂರಕ್ಷಿಸಿ ಆ ಮೂಲಕ ಹೆಚ್ಚು ಆದಾಯ ಗಳಿಸಲು ನೂತನ ತಾಂತ್ರಿಕತೆಗಳ ಆವಿಷ್ಕಾರ ಗಳನ್ನು ನಡೆಸಿ ಬೆಳೆಗಾರರಿಗೆ ಪೋ›ತ್ಸಾಹಿಸಬೇಕಿದೆ. ಅಲ್ಲದೆ, ತೆಂಗಿನಕಾಯಿ ಹಾಗೂ ಕೊಬ್ಬರಿಯ ಉಪ ಉತ್ಪನ್ನಗಳ ತಯಾರಿಕೆಗೆ ನೂತನ ತಾಂತ್ರಿಕತೆ, ಅರಿವು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಸೌಲಭ್ಯಗಳ ಒದಗಿಸಿದಲ್ಲಿ ಈಗಿನ ತೆಂಗು ಬೆಳೆಗಾರರ ವೆಚ್ಚ ಕಡಿಮೆಯಾಗಿ ಕೊಬ್ಬರಿ ದರ ಕೆಲ ಬಾರಿ ಕುಸಿತ ಕಂಡರೂ ನಷ್ಟ ಕಡಿಮೆಯಾಗಿ ನೆಮ್ಮದಿ ಜೀವನ ನಡೆಸಬಹುದಾಗಿದೆ.

ರೈತರ ನೆರವಿಗೆ ಬನ್ನಿ: ಪ್ರಮುಖವಾಗಿ ರೈತರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳ ಏರಿಕೆ ಜೊತೆಗೆ ತೋಟಗಾರಿಕೆಗೆ ಅಗತ್ಯವಿರುವ ರಸಗೊಬ್ಬರ, ಔಷಧ, ಉಳುಮೆ, ಡೀಸೆಲ್‌, ಕೂಲಿದರ, ಇತರೆ ವೆಚ್ಚಗಳ ಅಂತರ ವಿಪರೀತ ಏರುಪೇರಾಗಿ ದಿನೇ ದಿನೆ ಖರ್ಚು-ವೆಚ್ಚಗಳು ಗಗನಕ್ಕೇರುತ್ತಿರುವುದರಿಂದ ತೆಂಗು ಬೆಳೆಗಾರರ ಉತ್ಪನ್ನಗಳ ಬೆಲೆ ಹಾಗೂ ಬಳಕೆಯ ವಸ್ತುಗಳ ಬೆಲೆಗಳು ಒಂದಕ್ಕೊಂದು ತಾಳೆಯಾಗ ದಂತಾಗಿದೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ರೂಪಿಸಿ ನೆರವಿಗೆ ಬರುವ ಕೆಲಸ ಮಾಡಬೇಕಿದೆ.

ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಯನ್ನು 18 ಸಾವಿರ ರೂ.ಗೆ ಏರಿಸಬೇಕು, ರಾಜ್ಯ ಸರ್ಕಾರ ಕನಿಷ್ಠ 2 ಸಾವಿರ ರೂ. ಸಹಾಯಧನ ನೀಡಬೇಕೆಂದು ಕಳೆದೊಂದು ವರ್ಷದಿಂದ ತೆಂಗು ಬೆಳೆಗಾ ರರು ಹಾಗೂ ರೈತ ಸಂಘದವರು ಸಾಕಷ್ಟು ಹೋರಾಟ, ಬಂದ್‌ ಸಹ ನಡೆಸಿದ್ದಾರೆ. ಆದರೆ, ಸರ್ಕಾರ ಈವರೆಗೆ ತೆಂಗು ಬೆಳೆಗಾ ರರ ನೆರವಿಗೆ ದಾವಿಸಿದಿರುವುದರಿಂದ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ● ಟೂಡಾ ಶಶಿಧರ್‌, ತೆಂಗು ಬೆಳೆಗಾರರ ಪರ ಹೋರಾಟಗಾರ

ಇಂದಿನ ದುಬಾರಿ ವೆಚ್ಚದಲ್ಲಿ 1 ಕ್ವಿಂಟಲ್‌ ಒಣಕೊಬ್ಬರಿ ಉತ್ಪಾದಿಸಲು 18 ಸಾವಿರ ರೂ.ಗೂ ಹೆಚ್ಚು ಖರ್ಚು ಬರು ತ್ತಿದೆ. ಶನಿವಾರದ ಹರಾಜಿನಲ್ಲಿ ಕೊಬ್ಬರಿ ಬೆಲೆ 8 ಸಾವಿರ ರೂ.ಗೆ ಕುಸಿತ ಕಂಡಿದೆ. ಹಾಲಿ ಇರುವ ಬೆಂಬಲ ಬೆಲೆ 11,750 ರೂ.ಗೆ ನಫೆಡ್‌ ಮೂಲಕ ಕೆಲವೇ ರೈತರ ಕೊಬ್ಬರಿ ಯನ್ನು ಸರ್ಕಾರ ಖರೀದಿ ಮಾಡು ತ್ತಿದ್ದು, ಇದನ್ನು ಎಲ್ಲ ರೈತರ ಬಳಿ ಇರುವ ಕೊಬ್ಬರಿ ಖರೀದಿಗೆ ವಿಸ್ತರಿಸಿ, ಕೂಡಲೆ ಹಣ ಬಿಡಗಡೆ ಮಾಡಬೇಕು. ಸದ್ಯಕ್ಕೆ ಸರ್ಕಾರ ಕ್ವಿಂಟಲ್‌ಗೆ 2 ಸಾವಿರ ರೂ. ಸಹಾಯ ಧನ ನೀಡಬೇಕು. ● ಯೋಗೀಶ್‌, ಸಾವಯವ ಕೃಷಿಕ, ತಡಸೂರು

-ಬಿ.ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next