Advertisement

ನಗರದಲ್ಲಿ ಮತ್ತೆ ಕುಡಿಯುವ ನೀರಿಗೆ ಬರ

12:15 AM Apr 22, 2019 | Sriram |

ಬೇಸಗೆಯ ಬಿಸಲಿನ ಬೇಗೆ ಹೆಚ್ಚಾಗುತ್ತಿದ್ದು,ಜತೆಗೆ ನಗರದ ಲ್ಲಿ ಕುಡಿಯುವ ನೀರಿನ ಬರ ಎದುರಾಗಿದೆ.ಸದ್ಯ ರೇಷನಿಂಗ್‌ ವ್ಯವಸ್ಥೆ ಆರಂಭಿಸಿ ನೀರು ಪೂರೈಸಲಾಗುತ್ತಿದ್ದರೂ ಎಲ್ಲೆಡೆಗೆ ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಎದುರಾಗಿ ರುವ ನೀರಿನ ಬರದ ವಾಸ್ತವದ ಬಗ್ಗೆ ಓದುಗರಿಗೆ ತಿಳಿಸಿ, ನೀರು ಸಂರಕ್ಷಿಸುವ ಅಭಿಯಾನವೇ ಜೀವ ಜಲ; ಪ್ರತಿ ಹನಿ ಉಳಿಸೋಣಾ ಬನ್ನಿ- ಸುದಿನ ಜನಪರ ಕಾಳಜಿ.

Advertisement

ಮಹಾನಗರ: ತುಂಬೆ ಡ್ಯಾಂನಲ್ಲಿ ಸಂಗ್ರಹದಲ್ಲಿರುವ ನೀರು ದಿನೇ ದಿನೇ ಇಳಿಕೆಯಾಗುತ್ತಿದೆ. ಮುಂದಿನ ಮೇ ಅಂತ್ಯದವರೆಗೆ ಈ ನೀರಿನಲ್ಲಿಯೇ ನಗರ ಜನತೆಯ ದಾಹವನ್ನು ನೀಗಿಸಬೇಕಿದೆ. ಪ್ರಸ್ತುತ ನೀರಿನ ಮಿತ ಬಳಕೆ ಹಾಗೂ ಪೋಲಾಗದಂತೆ ನೀರನ್ನು ಉಳಿಸುವತ್ತ ನಗರದ ಪ್ರತಿ ನಾಗರಿಕನೂ ಹೆಚ್ಚಿನ ಗಮನಹರಿಸಬೇಕಾಗಿದೆ.

ನೀಲ ಸಾಗರದಂಚಿನಲ್ಲಿರುವ ಮಂಗಳೂರು ನಗರದ ಕುಡಿಯುವ ನೀರಿನ ಏಕೈಕ ಮೂಲ ಎಂದರೆ ನೇತ್ರಾವತಿ ನದಿ. ನೇತ್ರಾವತಿ ಬತ್ತಿದರೆ ನಗರ ಬಾಯಾರುತ್ತದೆ. ಈ ವರ್ಷವೂ ನೀರಿನ ಸಮಸ್ಯೆ ಎದುರಾಗಿದೆ. ಪ್ರಸ್ತುತ ತುಂಬೆ ವೆಂಟೆಡ್‌ಡ್ಯಾಂನಲ್ಲಿ ನೀರಿನ ಮಟ್ಟ ಸುಮಾರು 5 ಮೀಟರ್‌ಗಳಷ್ಟಿದೆ. ನೀರಿನ ಕೊರತೆ ನಿರ್ವಹಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನೀರು ರೇಷನಿಂಗ್‌ ಪ್ರಾರಂಭವಾಗಿದೆ. ಪಾಲಿಕೆಯ ಪ್ರಕಟನೆ ಪ್ರಕಾರ ವಾರದಲ್ಲಿ 4 ದಿನ ನೀರು ಸರಬರಾಜಾಗಲಿದೆ. ಎರಡು ದಿನ ನಿಲುಗಡೆಯಾಗಲಿದೆ. ಆದರೆ ವಾಸ್ತವವಾಗಿ ಮೂರು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ.

ಜಿಲ್ಲಾಡಳಿತದ ಪ್ರಕಾರ, ಪ್ರಸ್ತುತ ಇರುವ ನೀರು ಸಂಗ್ರಹದಲ್ಲಿ ರೇಷನ್‌ ಮೂಲಕ ಗರಿಷ್ಠ ಅಂದರೆ ಜೂ. 4ರ ವರೆಗೆ ತುಂಬೆ ವೆಂಟೆಡ್‌ ಡ್ಯಾಂನಿಂದ ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡಬಹುದಾಗಿದೆ. ಜೂನ್‌ ಆರಂಭದೊಳಗೆ ಮಳೆ ಬರದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ
ಭೀತಿ ಇದೆ.

ಮಂಗಳೂರಿನ
ನೀರಿನ ಸಂಪರ್ಕ
ಒಟ್ಟು 132 ಚದರ ಕಿಲೋ ಮೀಟರ್‌ ವ್ಯಾಪ್ತಿಯನ್ನು ಹೊಂದಿರುವ ಮಂಗಳೂರು ನಗರದ ಪ್ರಸ್ತುತ ಜನಸಂಖ್ಯೆ ಸುಮಾರು 6 ಲಕ್ಷ ಎಂದು ಅಂದಾಜಿಸಲಾಗಿದೆ. (2011ರ ಜನಗಣತಿ ಪ್ರಕಾರ 4.99 ಲಕ್ಷ) ದಿನಂಪ್ರತಿ ಸುಮಾರು 1 ಲಕ್ಷದವರೆಗೆ ಜನರು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಿಂದ ಮಂಗಳೂರು ನಗರಕ್ಕೆ ಬಂದು ಹೋಗುತ್ತಿದ್ದಾರೆ. ಸುಮಾರು 88,239 ಕುಡಿಯುವ ನೀರಿನ ಸಂಪರ್ಕಗಳಿವೆ. ಇದರಲ್ಲಿ 81,041 ಮನೆಗಳ ಸಂಪರ್ಕ, ಇತರ ಮನೆಗಳ ಸಂಪರ್ಕ 4,901, ನಿರ್ಮಾಣಗಳಿಗೆ 1,240, ಬಹುಮಹಡಿ ಕಟ್ಟಡಗಳು, ಸಂಕೀರ್ಣಗಳಿಗೆ 805, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳಿಗೆ 805, ಸಾರ್ವಜನಿಕ ನಳ್ಳಿ ಸಂಪರ್ಕಗಳು 5,300 ( ಶಾಲೆ, ಧಾರ್ಮಿಕ ಕೇಂದ್ರಗಳು) ಇವೆ ಎಂದು ಮನಪಾದ 2018ರ ಅಂಕಿ-ಅಂಶ ಹೇಳುತ್ತಿವೆ.

Advertisement

ಒಟ್ಟಾರೆಯಾಗಿ ಮನೆ ಬಳಕೆಗೆ ದಿನವೊಂದಕ್ಕೆ 73 ಮಿಲಿಯನ್‌ ಲೀಟರ್‌, ಇತರ ಕಟ್ಟಡಗಳಿಗೆ 15 ಮಿಲಿಯನ್‌ ಲೀಟರ್‌, ನಿರ್ಮಾಣ ಕಟ್ಟಡಗಳಿಗೆ 6 ಮಿಲಿಯನ್‌ ಲೀಟರ್‌, ಬಹು ಮಹಡಿ ಕಟ್ಟಡ, ಸಂಕೀರ್ಣಗಳಿಗೆ 10 ಮಿಲಿಯನ್‌ ಲೀಟರ್‌, ಕೈಗಾರಿಕೆಗಳಿಗೆ 18 ಮಿಲಿಯನ್‌ ಲೀಟರ್‌, ಸಾರ್ವಜನಿಕ ನಳ್ಳಿಗಳಿಗೆ 13 ಮಿಲಿಯನ್‌ ಲೀಟರ್‌ ನೀರು ಬಳಕೆಯಾಗುತ್ತಿದೆ.

ದಿನಕ್ಕೆ ಬೇಕಾದ ನೀರು
ನಗರಕ್ಕೆ ದಿನವೊಂದಕ್ಕೆ ಓರ್ವ ವ್ಯಕ್ತಿ ಸರಾಸರಿ 138 ಲೀಟರ್‌ ನೀರು ಬಳಸುತ್ತಿದ್ದಾನೆ ಎಂದು ಅಂದಾಜಿ ಸಲಾಗಿದೆ. ಅಂದರೆ ಒಟ್ಟು ದಿನವೊಂದಕ್ಕೆ 137 ಎಂಎಲ್‌ಡಿ ನೀರಿಗೆ ಬೇಡಿಕೆ ಇದೆ. ತುಂಬೆಯಿಂದ ಪ್ರತಿದಿನ 18 ಎಂಜಿಡಿ ಪೈಪ್‌ಲೈನ್‌ನಲ್ಲಿ ನಗರಕ್ಕೆ 160 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. ಲೆಕ್ಕಾಚಾರ ಪ್ರಕಾರ ಸುಮಾರು 25 ಎಂಎಲ್‌ಡಿ ನೀರು ಮಿಗತೆ ಇರಬೇಕು. ಆದರೆ ಸೋರಿಕೆ ಹಾಗೂ ಇನ್ನಿತರ ಕಾರಣಗಳಿಂದ ಸರಬರಾಜು ಹಾಗೂ ವಿತರಣೆಯಲ್ಲಿ ಈ ಲೆಕ್ಕಾಚಾರ ಬುಡಮೇಲು ಆಗುತ್ತಿದೆ.

ಒಳಹರಿವು ಸ್ಥಗಿತ
ಸಾಮಾನ್ಯವಾಗಿ ಮಾರ್ಚ್‌ 10ರ ವೇಳೆಗೆ ನೇತ್ರಾವತಿ ನದಿಯಲ್ಲಿ ಒಳಹರಿವು ಸ್ಥಗಿತಗೊಳ್ಳುತ್ತದೆ. ಇದರೊಂದಿಗೆ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟದ ಏರಿಕೆ ನಿಲ್ಲುತ್ತದೆ. ತುಂಬೆಯಲ್ಲಿ ಗರಿಷ್ಠ 7 ಮೀಟರ್‌ ನೀರು ಸಂಗ್ರಹ ಮಾಡಲು ಸಾಧ್ಯವಿದ್ದರೂ ಪ್ರಸ್ತುತ 6 ಮೀಟರ್‌ ನೀರು ಸಂಗ್ರಹ ಮಾಡಲಾಗುತ್ತದೆ. ಕಳೆದ ಸಾಲಿನಲ್ಲಿ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆ ತಲೆದೋರಿರಲಿಲ್ಲ. ಆದರೆ ಈ ಬಾರಿ ನೇತ್ರಾವತಿ ನದಿಯಲ್ಲಿ ನವೆಂಬರ್‌ ತಿಂಗಳಿನಿಂದಲೇ ಒಳಹರಿವಿನಲ್ಲಿ ತೀವ್ರಗತಿಯಲ್ಲಿ ಇಳಿಮುಖ ಗೋಚ ರಿಸಿದ್ದ ಹಿನ್ನೆಲೆಯಲ್ಲಿ ನವೆಂಬರ್‌ ಮಧ್ಯಭಾಗದಲ್ಲೇ ತುಂಬೆ ವೆಂಟೆಡ್‌ಡ್ಯಾಂನ ಎಲ್ಲ ಗೇಟ್‌ಗಳನ್ನು ಮುಚ್ಚಿ 6 ಮೀಟರ್‌ ನೀರು ನಿಲ್ಲಿಸಲಾಗಿತ್ತು. ಪ್ರಸ್ತುತ ನಗರದ 137 ಮತ್ತು ಸುರತ್ಕಲ್‌ನಲ್ಲಿ 59 ಸೇರಿ ಒಟ್ಟು ಪಾಲಿಕೆ ವ್ಯಾಪ್ತಿಯಲ್ಲಿ 196 ಬೋರ್‌ವೆಲ್‌ಗ‌ಳಿವೆ. ತುಂಬೆಯಿಂದ ಸರಬರಾಜಾಗುವ ಜತೆಗೆ ಈ ಬೋರ್‌ವೆಲ್‌ಗ‌ಳಿಂದಲೂ ನೀರು ಸರಬರಾಜಾಗುತ್ತಿವೆ. ಬಳಕೆಗೆ ಯೋಗ್ಯವಾದ 90 ಬಾವಿಗಳಿವೆ.

ನೀರಿನ ಸಮಸ್ಯೆ ತೀವ್ರವಾಗಿರುವ ಪ್ರದೇಶ
ಅಶೋಕ ನಗರ, ದಂಬೇಲ್‌, ಕುಲಶೇಖರ, ಬಜೊjàಡಿ,ಮರೋಳಿ, ಜೆಪ್ಪು ಕುಡಾ³ಡಿ, ಮಹಾಕಾಳಿ ಪಡು#, ಮಂಗಳಾದೇವಿ, ಮೊರ್ಗನ್ಸ್‌ ಗೇಟ್‌, ಪಾಂಡೇಶ್ವರ ಜೆಪ್ಪು ಮಾರ್ಕೆಟ್‌,ಬೋಳಾರ , ದೇರೇಬೈಲ್‌,ಕೊಂಚಾಡಿ, ದೇರೇಬೈಲ್‌, ಬೋರುಗುಡ್ಡೆ, ಕುಳೂರು,ಪಂಜಿಮೊಗರು, ಕಾವೂರು, ಜಪ್ಪು ಬಪ್ಪಾಲ್‌, ಬಜಾಲ್‌, ಜಲ್ಲಿಗುಡ್ಡೆ, ಬೋರು ಗುಡ್ಡೆ ಸಹಿತ ಹೆಚ್ಚಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.

2016ರಲ್ಲೂ ಬಿಗಡಾಯಿಸಿತ್ತು
ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಹೊಸತಲ್ಲ. 2016ರ ಎಪ್ರಿಲ್‌ನಲ್ಲಿ ತೀವ್ರ ನೀರಿನ ಕೊರತೆ ಎದುರಾಗಿತ್ತು. ಆಗ ನಗರದಲ್ಲಿ ಹೆಚ್ಚಿನ ಹೊಟೇಲ್‌ಗ‌ಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿತ್ತು. ಹಾಸ್ಟೇಲ್‌ಗ‌ಳಲ್ಲಿದ್ದ ವಿದ್ಯಾರ್ಥಿಗಳನ್ನು ಊರುಗಳಿಗೆ ಕಳುಹಿಸಲಾಗಿತ್ತು. ಕೈಗಾರಿಕೆಗಳನ್ನೂ ಮುಚ್ಚಲಾಗಿತ್ತು. ಖಾಸಗಿ ಬೋರ್‌ವೆಲ್‌ನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.

ನೀರು ಸಂಗ್ರಹ ಪ್ರಮಾಣ ಮತ್ತು ಬಳಕೆ
ತುಂಬೆ ವೆಂಟೆಡ್‌ ಡ್ಯಾಂನ ಎತ್ತರ 7 ಮೀಟರ್‌
ನೀರು ಸಂಗ್ರಹ ಸಾಮರ್ಥ್ಯ 14.73 ಮಿಲಿಯನ್‌ ಕ್ಯೂಬಿಕ್‌ ಮೀಟರ್‌
ಎಎಂಆರ್‌ ಡ್ಯಾಂನ ಎತ್ತ ರ 12.5 ಮೀಟರ್‌
ನೀರು ಸಂಗ್ರಹ ಸಾಮರ್ಥ್ಯ 7 ಮೀಟರ್‌
ದಿನವೊಂದಕ್ಕೆ ನೀರು ಸರಬರಾಜು 160 ಎಂಎಲ್‌ಡಿ
ನೀರಿನ ಬೇಡಿಕೆ 137 ಎಂಎಲ್‌ಡಿ
ಸರಾಸರಿ ವ್ಯಕ್ತಿಯ ನೀರಿನ ಬಳಕೆ 138 ಲೀ.

ಮಾಹಿತಿ ನೀಡಿ
ಮಹಾನಗರ ವ್ಯಾಪ್ತಿಯಲ್ಲಿ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ಉದಯವಾಣಿ ಸುದಿನ ವಾಟ್ಸಪ್‌ ನಂಬರ್‌ 9900567000 ಬರೆದು ಕಳುಹಿಸಿ. ಅದನ್ನು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು.

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next