Advertisement

ತರಕಾರಿ ಬೆಳೆ- ಬೆಲೆಗೂ ತಟ್ಟಿದ ‘ಬರ’

05:55 AM Jan 14, 2019 | |

ಬೆಂಗಳೂರು: ಈ ಮೊದಲು ಕೇವಲ ಬಯಲುಸೀಮೆ ರೈತರಿಗೆ ಸೀಮಿತವಾಗಿದ್ದ ಬರದ ಬಿಸಿ, ಈಗ ಸಾಮಾನ್ಯ ಜನರಿಗೂ ತಟ್ಟಲು ಶುರುವಾಗಿದೆ. ಇದರ ಮೊದಲ ಮುನ್ಸೂಚನೆಯೇ ತರಕಾರಿ ಬೆಲೆ ಗಗನಕ್ಕೆ ಏರಿಕೆ!

Advertisement

ರಾಜ್ಯದಲ್ಲಿ ಬರದ ತೀವ್ರತೆ ಪರಮಾವಧಿ ತಲುಪಿದ್ದು, ಬಯಲುಸೀಮೆಯ ರೈತರನ್ನು ದಾಟಿ ನೀರಾವರಿ ಬೆಳೆಗಳಿಗೂ ವಿಸ್ತರಿಸಿದೆ. ಈ ಬಾರಿ ಮುಂಗಾರು ಮತ್ತು ಹಿಂಗಾರು ಒಟ್ಟೊಟ್ಟಿಗೆ ಕೈಕೊಟ್ಟಿದ್ದರಿಂದ ಅಂತರ್ಜಲಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಕೊಳವೆಬಾವಿಗಳನ್ನು ಅವಲಂಬಿಸಿದ ಟೊಮೆಟೊ ಸೇರಿ ತರಕಾರಿ ಬೆಳೆಯುವ ಪ್ರದೇಶ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪರಿಣಾಮ ಬೆಲೆ ಏರಿಕೆ ನೆಪದಲ್ಲಿ ಅದರ ಬಿಸಿ ಸಾಮಾನ್ಯ ಜನರಿಗೂ ತಟ್ಟುವಂತಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ, ಬೇಸಿಗೆಯಲ್ಲೂ ತರಕಾರಿ ಬೆಲೆ ಜನರ ಜೇಬು ಸುಡಲಿದೆ. ಯಾಕೆಂದರೆ, ಬೇಸಿಗೆಯಲ್ಲಿ ಮದುವೆ ಸೀಜನ್‌ ಇರುವುದರಿಂದ ತರಕಾರಿಗೆ ಹೆಚ್ಚು ಬೇಡಿಕೆ ಇದ್ದು, ಪೂರೈಕೆ ಕಡಿಮೆ ಆಗುವ ಸಾಧ್ಯತೆಯಿದೆ. ಹಾಗಾಗಿ, ಬೆಲೆ ಏರಿಕೆ ಮರುಕಳಿಸಿದರೂ ಅಚ್ಚರಿಯಿಲ್ಲ ಎಂದು ತೋಟಗಾರಿಕೆ ತಜ್ಞರು ಅಭಿಪ್ರಾಯಪಡುತ್ತಾರೆ.

ಶೇ. 20 ಉತ್ಪಾದನಾ ಪ್ರದೇಶ ಇಳಿಕೆ: ರಾಜ್ಯದಲ್ಲಿ ಸುಮಾರು 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತಿದ್ದು, ವಾರ್ಷಿಕ 250-300 ಲಕ್ಷ ಟನ್‌ ಉತ್ಪಾದನೆ ಮಾಡಲಾಗುತ್ತದೆ. ಆದರೆ, ನೀರಿನ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಈ ಬಾರಿ ತರಕಾರಿ ಬೆಳೆಯುವ ಪ್ರದೇಶ ಅಂದಾಜು ಒಂದು ಲಕ್ಷ ಹೆಕ್ಟೇರ್‌ ಕಡಿಮೆಯಾಗಿದ್ದು, ಪರಿಣಾಮ ಉತ್ಪಾದನೆಯಲ್ಲಿ ಶೇ.20ರಷ್ಟು ಖೋತಾ ಆಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ದರ ಏರಿಕೆ ರೂಪದಲ್ಲಿ ಪರಿಣಮಿಸಿದೆ ಎಂದು ಹೆಸರು ಹೇಳಲಿಚ್ಚಿಸದ ತೋಟಗಾರಿಕೆ ಇಲಾಖೆಯ ತರಕಾರಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ತಿಳಿಸಿದ್ದಾರೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಅಂತರ್ಜಲಮಟ್ಟ ಕುಸಿದಿರುತ್ತದೆ. ಅದರ ಜತೆಗೆ ನೆರೆ ರಾಜ್ಯಗಳಲ್ಲಿ ತರಕಾರಿ ಉತ್ಪಾದನೆ ಮತ್ತು ಪೂರೈಕೆ ಪ್ರಮಾಣ ಹೆಚ್ಚಿರುತ್ತದೆ. ನೀರು ಖರೀದಿಸಿ ಬೆಳೆದರೂ ಬೆಲೆ ಸಿಗುವುದು ಅನುಮಾನ. ಆದ್ದರಿಂದ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಾರೆ. ತರಕಾರಿ ಬೆಳೆಯುವ ಪ್ರದೇಶ ಸುಮಾರು 10ರಿಂದ 15ರಷ್ಟು ಇಳಿಕೆ ಆಗಿರುವ ಸಾಧ್ಯತೆಯಿದೆ ಎಂದು ರಾಷ್ಟೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್‌) ತರಕಾರಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಧಾನ ವಿಜ್ಞಾನಿ ಡಾ.ಎ.ಟಿ. ಸದಾಶಿವ ತಿಳಿಸಿದ್ದಾರೆ.

Advertisement

ಅದೇ ರೀತಿ, ಸಾಮಾನ್ಯವಾಗಿ ಟೊಮೆಟೊಗೆ ಬೆಲೆ ಬರುವುದು ಮೇನಲ್ಲಿ. ಮಳೆಗಾಲದಲ್ಲಿ ಎಲೆಚುಕ್ಕೆ ಮತ್ತು ಕಾಯಿಕೊಳೆ ರೋಗಕ್ಕೆ ಬೆಳೆ ತುತ್ತಾಗುತ್ತದೆ. ಚಳಿಗಾಲದಲ್ಲಿ ಎಲ್ಲೆಡೆ ಹೇರಳವಾಗಿ ಪೂರೈಕೆ ಆಗುವುದರಿಂದ ಸೌಲಭ್ಯಗಳಿದ್ದರೂ ರೈತರು ಬೆಳೆಯುವುದಿಲ್ಲ. ಆದರೆ, ಬೇಸಿಗೆಯಲ್ಲಿ ನೀರಿನ ಲಭ್ಯತೆ ಕೊರತೆ ಹಾಗೂ ಇಳುವರಿಯೂ ಕಡಿಮೆ ಇರುತ್ತದೆ. ಸಹಜವಾಗಿ ಬೇಡಿಕೆ ಬರುತ್ತದೆ. ಹೆಚ್ಚು ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಅಧಿಕವಾಗಿ ಬೆಳೆಯುತ್ತಾರೆ. ಆದರೆ, ಈ ಬಾರಿ ಬರದಿಂದ ಎಂದಿಗಿಂತ ಬೆಳೆಗಳ ವಿಸ್ತೀರ್ಣ ಕಡಿಮೆ ಆಗಿದ್ದು ಮಾತ್ರವಲ್ಲ, ಚಳಿ ಹೆಚ್ಚಿರುವುದರಿಂದ ಇಳುವರಿಯೂ ವಿಳಂಬವಾಗಿದೆ ಎಂದು ಡಾ.ಸದಾಶಿವ ಮಾಹಿತಿ ನೀಡಿದ್ದಾರೆ.

ಶೇ.70 ಪ್ರದೇಶದಲ್ಲಿ ಕುಸಿತ!; ರಾಜ್ಯದಲ್ಲಿ ಅಂತರ್ಜಲ ಮಟ್ಟ ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ, ಸುಮಾರು ಶೇ. 60ರಿಂದ ಶೇ.70ರಷ್ಟು ಪ್ರದೇಶದಲ್ಲಿ ಕುಸಿತ ಕಂಡುಬಂದಿದೆ. ಅಂತರ್ಜಲದ ಮೂಲ ಕೂಡ ಮಳೆಯೇ ಆಗಿದೆ. ಹಾಗಾಗಿ, ಮರುಪೂರಣವಾಗಬೇಕಾದರೆ ಮಳೆ ಬೇಕಾಗುತ್ತದೆ. ಆದರೆ, ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿರುವುದರಿಂದ ಬರದ ತೀವ್ರತೆ ಹೆಚ್ಚಾಗಿದೆ. ಈ ಮಧ್ಯೆ ಲಭ್ಯತೆಗಿಂತ ಹೆಚ್ಚು ಅಂತರ್ಜಲ ಬಳಕೆ ಆಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ಹೇಳುತ್ತಾರೆ.

ಆದರೆ, ನೀರಿನ ಲಭ್ಯತೆ ಕೊರತೆ ಮಾತ್ರ ಇದಕ್ಕೆ ಕಾರಣ ಎಂದೂ ಹೇಳಲಾಗದು. ಬೆಳೆಯ ವಿಸ್ತೀರ್ಣ ಕಡಿಮೆಯಾಗುವುದರ ಜತೆಗೆ ಉತ್ಪಾದಕತೆಯೂ ಕುಂಠಿತವಾಗಿರುತ್ತದೆ. ಇನ್ನು ಈಶಾನ್ಯ ಮಾರುತಗಳು ಉತ್ತಮ ಮಳೆ ಸುರಿಸಿದ್ದರೆ ಬೇರೆ ಬೇರೆ ಕಡೆಗಳಲ್ಲೂ ಟೊಮೆಟೊ ಸೇರಿ ತರಕಾರಿ ಲಭ್ಯತೆ ಹೆಚ್ಚಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಟೊಮೆಟೊ ಬೆಲೆ ಒಂದೇ ರೀತಿಯಾಗಿತ್ತು. ಹೀಗಾಗಿ ರೈತರು ಹಿಂದೇಟು ಹಾಕಿರಬಹುದು. ಇಂತಹ ಹಲವು ಅಂಶಗಳು ಬೇಡಿಕೆ ಮತ್ತು ಪೂರೈಕೆಯ ಅಂತರ ಹೆಚ್ಚಲು ಕಾರಣವಾಗಿರಬಹುದು ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಬೆಂ.ಗ್ರಾಮಾಂತರ, ಬೆಳಗಾವಿಯಿಂದ ಪೂರೈಕೆ
ಬೆಂಗಳೂರು ಗ್ರಾಮಾಂತರ, ಆನೇಕಲ್‌, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಳಗಾವಿ, ಮೈಸೂರು, ಮಂಡ್ಯ, ಹಾಸನ ಸೇರಿ ರಾಜ್ಯದ ಮತ್ತಿತರ ಕಡೆಗಳಲ್ಲಿ ತರಕಾರಿ ಬೆಳೆಯಲಾಗುತ್ತದೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿಯಿಂದ ಅತಿ ಹೆಚ್ಚು ಪೂರೈಕೆ ಆಗುತ್ತದೆ.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next