Advertisement

ಆಡಳಿತ ವ್ಯವಸ್ಥೆಯಲ್ಲಿ ಡ್ರೋಣ್‌ ಬಳಕೆ​​​​​​​

06:30 AM Aug 03, 2018 | Team Udayavani |

ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಾನವರಹಿತ ವೈಮಾನಿಕ ಸಮೀಕ್ಷೆ “ಡ್ರೋಣ್‌’ ಬಳಕೆಗೆ ಚಾಲನೆ ದೊರಕಿದೆ. ಕೃಷಿ, ನಗರ ಯೋಜನೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಡ್ರೋಣ್‌ಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಹಾವೇರಿಯ ಕಸಬಾ ಹೋಬಳಿ, ಬಂಟ್ವಾಳ ಪಟ್ಟಣ ಮತ್ತು ಬೆಂಗಳೂರು ನಗರ ಸಂಚಾರ ನಿರ್ವಹಣೆಯಲ್ಲಿ ಮೊದಲ ಬಾರಿಗೆ ಡ್ರೋಣ್‌ ಬಳಕೆ ಪರಿಚಯಿಸಲಾಗುತ್ತಿದೆ. 

Advertisement

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಚಿವರಾದ ಕೆ.ಜೆ. ಜಾರ್ಜ್‌ ಮತ್ತು ಶಿವಶಂಕರ ರೆಡ್ಡಿ ಗುರುವಾರ ಈ ಪ್ರಯೋಗಕ್ಕೆ ಚಾಲನೆ ನೀಡಿದರು.

ಹಾವೇರಿಯ ಕಸಬಾ ಹೋಬಳಿಯಲ್ಲಿ 200 ಚದರ ಕಿ.ಮೀ. (1 ಚದರ ಕಿ.ಮೀ. 10 ಸಾವಿರ ಎಕರೆ ಭೂಮಿಗೆ ಸಮ) ಕೃಷಿ ಭೂಮಿಯಲ್ಲಿ ಆರು ಡ್ರೋಣ್‌ಗಳ ಮೂಲಕ ಬೆಳೆಯ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಡ್ರೋಣ್‌ಗಳು ನಿತ್ಯ ಬೆಳಿಗ್ಗೆ 9.30ರಿಂದ 11.30 ಹಾಗೂ ಮಧ್ಯಾಹ್ನ 1.30ರಿಂದ 2.30ರವರೆಗೆ ಭೂಮಿ ಸಮೀಕ್ಷೆ ನಡೆಸಿ, ಚಿತ್ರಗಳನ್ನು ಸೆರೆಹಿಡಿಯಲಿವೆ. ಅವುಗಳನ್ನು ವಿಶ್ಲೇಷಿಸಿ, ಕೃಷಿ ಬೆಳವಣಿಗೆಗೆ ರೈತರಿಗೆ ಮಾರ್ಗದರ್ಶನ ಮಾಡಲಾಗುವುದು.

ಉತ್ಪಾದನೆ ಲೆಕ್ಕವೂ ಸಿಗಲಿದೆ; ಅಧಿಕಾರಿ
ಉದ್ದೇಶಿತ ವಿಸ್ತೀರ್ಣದಲ್ಲಿ ಯಾವ್ಯಾವ ಪ್ರಕಾರದ ಬೆಳೆ ಬೆಳೆಯಲಾಗಿದೆ, ಎಷ್ಟು ಪ್ರಮಾಣದಲ್ಲಿ ಬೆಳೆಯಲಾಗಿದೆ, ಅವುಗಳ ಸ್ಥಿತಿಗತಿ, ರೋಗಬಾಧೆ ಪತ್ತೆ ಮಾಡುವುದು ಸೇರಿದಂತೆ ಹಲವು ಮಾಹಿತಿಗಳನ್ನು ಈ ಡ್ರೋಣ್‌ಗಳು ಕಲೆಹಾಕಲಿವೆ. ಇದರಿಂದ ಬೆಳೆಗಳ ಸ್ಪಷ್ಟಚಿತ್ರಣ ದೊರೆಯುವುದರ ಜತೆಗೆ ಮುಂಚಿತವಾಗಿ ಕ್ರಮ ಕೈಗೊಳ್ಳಲು ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ, ಪರೋಕ್ಷವಾಗಿ ಉತ್ಪಾದನೆ ಪ್ರಮಾಣ ಕೂಡ ತಿಳಿಯಬಹುದು. ಎರಡು ವಾರಗಳಲ್ಲಿ ಪ್ರಾಯೋಗಿಕ ಹಂತ ಪೂರ್ಣಗೊಳ್ಳಲಿದೆ ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ (ತಾಂತ್ರಿಕ) ಡಾ.ಎಚ್‌. ಹೊನ್ನೇಗೌಡ ತಿಳಿಸಿದರು.

ಅದೇ ರೀತಿ, ಬಂಟ್ವಾಳ ನಗರ ಯೋಜನೆಗೆ ಡ್ರೋಣ್‌ ಬಳಸಲಾಗುತ್ತಿದೆ. ಇದರಿಂದ ನಗರದ ಮಾಸ್ಟರ್‌ ಪ್ಲಾನ್‌, ನಿರ್ಮಾಣ ಪ್ರದೇಶ, ಜಲ ಮೂಲಗಳು, ಕೆರೆ-ಕುಂಟೆಗಳು, ರಸ್ತೆಗಳು, ಖರಾಬು ಜಮೀನು, ಕೃಷಿ ಜಮೀನು, ಜೌಗುಪ್ರದೇಶಗಳನ್ನು ಗುರುತಿಸಲಾಗುವುದು. ಅದನ್ನು ಆಧರಿಸಿ ನಗರ ನಿರ್ಮಾಣಕ್ಕೆ ಯೋಜನೆಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

Advertisement

ರಾಜ್ಯಾದ್ಯಂತ ಸಮೀಕ್ಷೆ; ಸಚಿವ
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಶಿವಶಂಕರ ರೆಡ್ಡಿ, ಇಡೀ ರಾಜ್ಯದಲ್ಲಿ ಭೂಹಿಡುವಳಿ ಎಷ್ಟಿದೆ? ಯಾವ್ಯಾವ ಸಂದರ್ಭದಲ್ಲಿ ಯಾವ ಬೆಳೆ ಬೆಳೆಯಲಾಗುತ್ತಿದೆ? ಮತ್ತಿತರ ಮಾಹಿತಿಗಳು ಅಂದಾಜಿನ ಮೇಲೆ ಪ್ರಮಾಣೀಕರಿಸುವ ವ್ಯವಸ್ಥೆ ಈಗಿದೆ. ಡ್ರೋಣ್‌ ಸಹಾಯದಿಂದ ನಿಖರ ಮಾಹಿತಿ ಲಭ್ಯವಾಗಲಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಬೆಳೆ ಮತ್ತು ಭೂಮಿಯನ್ನು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಸಕಾದಲ್ಲಿ ಕಾರ್ಮಿಕರು ಸಿಗುವುದು ಕಷ್ಟ. ಇದರಿಂದ ಬೆಳೆಗಳು ರೋಗಕ್ಕೆ ತುತ್ತಾಗಿ ರೈತರಿಗೆ ನಷ್ಟ ಉಂಟಾಗುವ ಸ್ಥಿತಿ ಹಲವು ಬಾರಿ ಬಂದಿದೆ. ಈ ನಿಟ್ಟಿನಲ್ಲಿ ಡ್ರೋಣ್‌ ಹೆಚ್ಚು ಸಹಕಾರಿ ಆಗಿದೆ ಎಂದು ತಿಳಿಸಿದರು.

ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಎಸ್‌. ನಟರಾಜ ಮತ್ತಿತರರು ಉಪಸ್ಥಿತರಿದ್ದರು.

ಸ್ಯಾಟಲೈಟ್‌ಗಿಂತ ನಿಖರ!
ಸ್ಯಾಟಲೈಟ್‌ಗಳು ಅಬ್ಬಬ್ಟಾ ಎಂದರೆ 30 ಸೆಂ.ಮೀ. ಅಂತರದಿಂದ ಚಿತ್ರಗಳನ್ನು ಸೆರೆಹಿಡಿದು ಕಳುಹಿಸುತ್ತವೆ. ಮೋಡಕವಿದ ವಾತಾವರಣದಲ್ಲಿ ಚಿತ್ರಗಳು ಅಸ್ಪಷ್ಟವಾಗಿರುತ್ತವೆ. ಆದರೆ, ಡ್ರೋಣ್‌ಗಳು ಕೇವಲ 2-4 ಸೆಂ.ಮೀ. ಅಂತರದಿಂದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಅಷ್ಟೇ ಅಲ್ಲ, “3ಡಿ’ಯಲ್ಲಿ ಅತ್ಯಧಿಕ ರೆಸೊಲ್ಯುಷನ್‌ನಲ್ಲಿ ನೋಡಬಹುದು. ಹಾಗಾಗಿ, ಡ್ರೋಣ್‌ ಹೆಚ್ಚು ನಿಖರ ಮಾಹಿತಿ ನೀಡುತ್ತದೆ ಎಂಬುದು ತಜ್ಞರ ವಾದ.

Advertisement

Udayavani is now on Telegram. Click here to join our channel and stay updated with the latest news.

Next