ಧಾರವಾಡ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪ್ರಕೃತಿ ಪ್ರೇಮ ಹಾಗೂ ಪರಿಸರ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಮಹಾಪೌರ ಡಿ.ಕೆ. ಚವ್ಹಾಣ ಹೇಳಿದರು. ನಗರದ ವನಿತಾ ಸೇವಾ ಸಮಾಜದ ಶಾಲೆಯಲ್ಲಿ ಜಿಲ್ಲಾಮಟ್ಟದ ಬೃಹತ್ ವನ ಸಂವರ್ಧನೆ ಅಭಿಯಾನಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿದರು.
ಡಾ| ಡಿ. ವೀರೇಂದ್ರ ಹೆಗ್ಗಡೆ ಅವರುವನ ಸಂವರ್ಧನೆಗೆ ವಿಶೇಷ ಆದ್ಯತೆ ನೀಡಿ, ಈಗ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ಅರಣ್ಯ ರಕ್ಷಣೆ ಮತ್ತು ಸಂವರ್ಧನೆ ಬೃಹತ್ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಕಾರ್ಯ ಮಾದರಿ ಆಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾರ್ಯಕ್ರಮ ಮಾಡಿದ್ದರಿಂದ ಪ್ರಸ್ತುತ ಮಳೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಪೂಜ್ಯರ ಆಶಯಗಳನ್ನು ಪೂರೈಸಲು ನಾವೆಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ ಎಂ. ಮಾತನಾಡಿ, ರಾಜ್ಯದಲ್ಲಿ 6500 ಕಾರ್ಯಕ್ರಮಗಳ ಮೂಲಕ 29 ಲಕ್ಷ ಬೀಜದುಂಡೆ ಬಿತ್ತನೆ, ಸಸಿ ನೆಡುವ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ 5 ಲಕ್ಷ ಗೇರು ಗಿಡಗಳನ್ನುನೆಡುವ ಕಾರ್ಯಕ್ರಮಕ್ಕೆ ಪೂಜ್ಯರು ಚಾಲನೆ ನೀಡಿದ್ದಾರೆ.
ಈ ಪೈಕಿ ಧಾರವಾಡ ಜಿಲ್ಲೆಯಲ್ಲಿ 224 ಕಾರ್ಯಕ್ರಮಗಳ ಮೂಲಕ 30 ಸಾವಿರ ಬೀಜ ದುಂಡೆ, 14700 ಸಸಿಗಳ ನಾಟಿಯನ್ನು ಅರಣ್ಯ ಇಲಾಖೆ ಮತ್ತು ತಪೋವನ ಸಹಕಾರದಲ್ಲಿ ಶಾಲೆಗಳಲ್ಲಿ, ಮಠಗಳಲ್ಲಿ, ಅರಣ್ಯ ಪ್ರದೇಶದಲ್ಲಿ, ವಿವಿಧ ಸ್ಥಳಗಳಲ್ಲಿ ನಡೆಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಬಂದ ಸದಸ್ಯರಿಗೆ ಸಸಿಗಳು ಮತ್ತು ಬೀಜದುಂಡೆ ನೀಡಲಾಯಿತು.
ಪಾಲಿಕೆ ಸದಸ್ಯರಾದ ಕೆ.ವಿ. ರಾಜೇಂದ್ರಕುಮಾರ, ಯಲ್ಲಪ್ಪ ಆರವಳದ, ವನಿತಾ ಸೇವಾ ಸಮಾಜ ಅಧ್ಯಕ್ಷ ಟಿ.ಎಸ್. ಪಾಟೀಲ, ಮೋಹನ ರಾಮದುರ್ಗ, ಸುನಂದಾ ಹೆಗ್ಡೆ, ಲಕ್ಷ್ಮಣ ಹೂಗಾರ, ಉಲ್ಲಾಸ್ ಮೇಸ್ತ, ತನ್ವೀರ ಹುಸೇನ, ಭಾರತಿ, ದೀಪಾ, ಕವಿತಾ ಇತರರಿದ್ದರು.