Advertisement

ಐತಿಹಾಸಿಕ ಹೋಳಿ ಹಬ್ಬಕ್ಕೆ ಚಾಲನೆ

01:37 PM Mar 17, 2022 | Team Udayavani |

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಹೋಳಿ ಸಂಭ್ರಮಕ್ಕೆ ಬುಧವಾರ ತಡರಾತ್ರಿ ಇಲ್ಲಿನ ವಲ್ಲಭಬಾಯಿ ವೃತ್ತದ ಬಯಲು ವೇದಿಕೆಯಲ್ಲಿ ಚಾಲನೆ ದೊರೆಯಿತು. ಹೋಳಿ ಆಚರಣೆ ಸಮಿತಿ, ಬಾಬುದಾರರು ಸಹಿತ ಹಲವು ಗಣ್ಯರು ತುರಾಯಿ ಹಲಗೆ ನುಡಿಸುವ ಮೂಲಕ ಚಾಲನೆ ನೀಡಿದರು.

Advertisement

ದೇಶದಲ್ಲೇ ಬಾಗಲಕೋಟೆ ಹೋಳಿ ಹಬ್ಬ ಆಚರಣೆಗೆ ಐತಿಹಾಸಿಕ ಹಿನ್ನೆಲೆಯಲ್ಲಿ ಒಂದು ದಿನ ಕಾಮ ದಹನ, ಮರುದಿನ ತುರಾಯಿ ಹಲಗೆ ಮೆರವಣಿಗೆ ನಡೆದರೆ, ಮೂರು ದಿನಗಳ ಕಾಲ ಬಣ್ಣದ ಯುದ್ಧವೇ ನಡೆಯುತ್ತದೆ. ಇಡೀ ಬಾಗಲಕೋಟೆ ನಗರದ ಜನ, ಕುಟುಂಬ ಸಮೇತ ಬಣ್ಣದಲ್ಲಿ ಮಿಂದೆದ್ದು, ಸಂಭ್ರಮಿಸುತ್ತಾರೆ. ವಿಶೇಷವಾಗಿ ದೇಶದ ಹಲವೆಡೆ ಹಾಗೂ ವಿದೇಶಗಳಲ್ಲಿ ಉದ್ಯೋಗ ಅರಿಸಿ ಹೋದವರೆಲ್ಲ ಇಲ್ಲಿನ ಹೋಳಿ ಹಬ್ಬಕ್ಕಾಗಿಯೇ ಮರಳಿ ಬಂದು ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ.

ಹೋಳಿಗೆ ವಿಶೇಷ ಸ್ಥಾನ: ಪಾಲ್ಗುಣ ಮಾಸ ಬಂತೆಂದರೆ ಸಾಕು ಬಾಗಲಕೋಟೆಯಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ ವಿಶೇಷವಾಗಿ ನಡೆಯುತ್ತದೆ. ಹೋಳಿ ಭಾರತೀಯ ಸಂಸ್ಕೃತಿ ಹಾಗೂ ಹಬ್ಬಗಳಲ್ಲಿ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬವಾಗಿದೆ. ಜಗತ್ತನ್ನೇ ಆಕರ್ಷಿಸಿರುವ ಭಾರತೀಯ ಹೋಳಿ ಹಬ್ಬದ ಸಂಭ್ರಮ ಇಂದು ಗಡಿದಾಟಿ ಅಮೆರಿಕಾ ಇಂಗ್ಲೆಂಡ್‌ ದೇಶಗಳಲ್ಲಿ ತನ್ನ ರಂಗು ಬೀರಿದೆ. ರಾಮಾಯಣ-ಮಹಾಭಾರತದಲ್ಲಿಯೂ ಹೋಳಿ ಹಬ್ಬದ ಉಲ್ಲೇಖವಿದೆ. ಮಥುರಾದಲ್ಲಿ ಕೃಷ್ಣ ಪರಮಾತ್ಮನು ಗೋಪಿಕಾ ಸ್ತ್ರೀಯರ ಜೊತೆ ಬಣ್ಣ ಆಡಿದ್ದುಂಟು.

ನೂರಾರು ಜನಪದ ಕಲೆ-ಸಂಸ್ಕೃತಿಗಳ ತವರೂರಾದ ಬಾಗಲಕೋಟೆಯಲ್ಲಿ ಹೋಳಿಹಬ್ಬ 5 ದಿನಗಳ ಕಾಲ ವಿಶೆಷವಾಗಿ ಆಚರಿಸುವ ಪರಂಪರೆ ಕಳೆದ ಅನೇಕ ವರ್ಷಗಳಿಂದ ಸಾಗಿ ಬಂದಿದೆ. ಮಾ.17ರಿಂದ ಮಾ.21ರವರೆಗೆ ನಡೆಯಲಿದೆ.

ಸಕಲ ಸಮಾಜ ಭಾಗಿ: ನೂರಾರು ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಹೋಳಿ ಹಬ್ಬ ಎಲ್ಲ ಸಮಾಜದವರು ಕೂಡಿಕೊಂಡು ಭಾವೈಕ್ಯತೆ ಸಂಕೇತವಾಗಿ ಆಚರಿಸುತ್ತ ಬಂದಿದ್ದಾರೆ. ಜಾತಿ, ಮತ, ಕುಲ ಹಾಗೂ ಸಮಾಜದ ಅಂತಸ್ತುಗಳು ಈ ಹಬ್ಬದಲ್ಲಿ ಇಲ್ಲವಾಗಿ ಎಲ್ಲರೂ ಹಲವು ಬಣ್ಣಗಳಲ್ಲಿ ಲೀನವಾಗಿ ನಿಜವಾದ ಮನುಷ್ಯ ಸಂಬಂಧದ ಹಲವು ಪ್ರೀತಿಯ ಸೆಳೆತ ಇಲ್ಲಿ ಕಾಣಬಹುದು.

Advertisement

ಬಾಗಲಕೋಟೆಯಲ್ಲಿ ಕಿಲ್ಲಾ, ಹೊಸಪೇಟ, ಹಳಪೇಟ, ಜೈನಪೇಟ ಹಾಗೂ ವೆಂಕಟಪೇಟ ಎಂಬ ಪ್ರಸಿದ್ಧ ಐದು ಮನೆತನ ಬಡಾವಣೆಗಳಿವೆ. ಈ ಐದು ಬಡಾವಣೆಗಳಲ್ಲಿ ಪ್ರತಿವರ್ಷ ಹೋಳಿ ಹಬ್ಬವನ್ನು ಮೂರು ದಿನಗಳವರೆಗೆ ಆಚರಿಸುವ ವಾಡಿಕೆ ಇದೆ. ಮುಖ್ಯವಾಗಿ ಹಲಗೆ ಬಾರಿಸುವ ವಾಡಿಕೆ ಇದೆ. ಈ ಹಲಗೆ ಬಾರಿಸುವ ಗತ್ತು ನಗರದಲ್ಲಿಯ ನಿವಾಸಿಗಳಿಗೆ ಮಾತ್ರ ಬರುತ್ತದೆ. ಇನ್ನುಳಿದವರಿಗೆ ಹಲಗೆ ಬಾರಿಸುವ ಗತ್ತು ಬರಲು ಸಾಧ್ಯವಿಲ್ಲ ಎನ್ನಬಹುದು. ಪ್ರತಿ ಬಡಾವಣೆಗಳಲ್ಲಿಯೂ ಕೆಲವು ಆಯ್ದ ಹಿರಿಯರ ಮನೆಗಳಲ್ಲಿ ಈ ನಿಶಾನೆ ಹಾಗೂ ತುರಾಯಿ ಹಲಗೆಗಳಿವೆ. ಅವುಗಳನ್ನು ಹೋಳಿ ಹಬ್ಬದಲ್ಲಿ ಮಾತ್ರ ಹೊರಗೆ ತೆಗೆಯುತ್ತಾರೆ. ಪ್ರತಿ ವರ್ಷ ಹುಬ್ಟಾ ನಕ್ಷತ್ರದಂದು ಕಿಲ್ಲಾ ಬಡಾವಣೆಯಲ್ಲಿ ಸುಪ್ರಸಿದ್ಧ ಶ್ರೀಮಂತ ಬಸವಪ್ರಭು ಸರನಾಡಗೌಡ ಮನೆಯಿಂದ ಹಲಗೆ ಹಾಗೂ ನಿಶಾನೆ ತೆಗೆದುಕೊಂಡು ಕುಲಕರ್ಣಿ ಮನೆತನದವರನ್ನು (ಗುರುರಾಜ, ಮಧ್ವರಾವ್‌, ನಾರಾಯಣರಾವ್‌) ಕರೆದುಕೊಂಡು ಅಂಬೇಡ್ಕರ್‌ ಗಲ್ಲಿಯಲ್ಲಿರುವ ಕಿರಣ ಖಾತೇದಾರ ಮನೆಯಿಂದ ಬೆಂಕಿ ತಂದು ತಮ್ಮ ಬಡಾವಣೆಯಲ್ಲಿ ಮೊದಲು ಕಾಮನದಹನ ಮಾಡುವ ವಾಡಿಕೆ ಇದೆ. ನಂತರ ವಿವಿಧ ಬಡಾವಣೆಯಲ್ಲಿ ಕಾಮದಹನ ಮಾಡುವುದು ಇಲ್ಲಿನ ಸಂಪ್ರದಾಯ.

ಸೋಗುಗಳ (ಸ್ತಬ್ಧಚಿತ್ರ) ಪ್ರದರ್ಶನ-ಬಣ್ಣದ ಆಟ: ಹೋಳಿ ಹಬ್ಬದಲ್ಲಿ ಸುಮಾರು ಎರಡು ಲಕ್ಷಕ್ಕಿಂತಲೂ ಹೆಚ್ಚು ಹಣ ಬಣ್ಣಕ್ಕೆ ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ಕಾಮ ದಹನವಾದ ನಂತರ ರಾತ್ರಿ ಒಂದು ಬಡಾವಣೆಯವರು ಮೊದಲು ಸೋಗಿನ ಗಾಡಿಯನ್ನು ಎಲ್ಲ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿಸುತ್ತಾರೆ. ಸುಮಾರು 10 ರಂದು 20 ಚಕ್ಕಡಿಗಳಲ್ಲಿ ವಿವಿಧ ವೇಷಭೂಷಣ ಪ್ರದರ್ಶನ ನಡೆಯುತ್ತದೆ. ಆದರೆ ಒಂದೊಂದು ಸೋಗಿನ ಗಾಡಿಗೆ ಸುಮಾರು 15-20 ಸಾವಿರ ರೂ. ವೆಚ್ಚ ತಗಲುತ್ತದೆ. ಇತ್ತೀಚೆಗೆ ಕಡಿಮೆ ಪ್ರಮಾಣದಲ್ಲಿ ಸೋಗಿನ ಗಾಡಿಗಳನ್ನು ಪ್ರದರ್ಶಿಸುತ್ತಾರೆ. ರಾತ್ರಿ ಸೋಗಿನ ಗಾಡಿಗಳ ಪ್ರದರ್ಶನ ನಡೆದ ನಂತರ ಬೆಳಗ್ಗೆ ಅದೇ ಬಡಾವಣೆಯವರು ಚಕ್ಕಡಿ (ಬಂಡಿ), ಟ್ರಾಕ್ಟರ್, ಟ್ರಕ್‌ಗಳಲ್ಲಿ ಬಣ್ಣ ತುಂಬಿದ ಬ್ಯಾರಲ್‌ಗ‌ಳನ್ನಿಟ್ಟು ವಿವಿಧ ಬಡಾವಣೆಗಳಲ್ಲಿ ಬಣ್ಣದ ಆಟ ಆಡುತ್ತಾರೆ. ಬಣ್ಣದ ಗಾಡಿಗಳು ಬಡಾವಣೆಗಳಲ್ಲಿ ಬರುತ್ತಿರುವ ಬಗ್ಗೆ ಅಲ್ಲಿಯ ನಾಗರಿಕರು ತಮ್ಮ ಮನೆ ಮಾಳಿಗೆ ಮೇಲೆ ಮೊದಲೇ ಸಂಗ್ರಹಿಸಿದ ಬಣ್ಣಗಾಡಿಯವರ ಮೇಲೆ ಮುಖಾಮುಖೀ ಬಣ್ಣ ಎರಚುವ ದೃಶ್ಯ ಮನೋಹರವಾಗಿ ಕಾಣಿಸುತ್ತದೆ. ಮಾ.19ರ ಬಣ್ಣದಾಟ ಒಂದು ಹಳೇಪೇಟ ಓಣಿ ಕಡೆಯಿಂದ ಬಂದರೆ ವಿರುದ್ಧ ದಿಕ್ಕಿನಿಂದ ಜೈನಪೇಟ ವೆಂಕಟಪೇಟ ಓಣಿಯವರ ಮಧ್ಯೆ ಬಣ್ಣದ ಯುದ್ಧವೇ ನಡೆಯುವ ದೃಶ್ಯ ನೋಡಲು ಬೇರೆ ಬೇರೆ ಊರುಗಳಿಂದ ಸಾವಿರಾರು ಜನರು ಬಂದು ಕಣ್ತುಂಬಿಕೊಳ್ಳುವರು. ಬೇರೆ ಕೆಲವೊಂದು ಬಡಾವಣೆಗಳಲ್ಲಿ ನೀರಿನ ಬಾವಿಗೆ ಬಣ್ಣ ಹಾಕಿ ಪೈಪುಗಳ ಮೂಲಕ ಬಣ್ಣ ಎರಚುತ್ತಾರೆ.

ಭಾವೈಕ್ಯದ ಸಂಕೇತವಾದ ಬಾಗಲಕೋಟೆ ಹೋಳಿ ಹಬ್ಬವು ಸಂಸ್ಕೃತಿಯ ಪರಂಪರೆ ಪ್ರತೀಕವಾಗಿರುವುದರಿಂದ ಜನಪ್ರತಿನಿಧಿ ಗಳು, ಊರ ಹಿರಿಯರು, ಯುವಕರನ್ನು ಒಟ್ಟಾಗಿ ಕೂಡಿಕೊಂಡು ಆಚರಿಸಿದಾಗ ಬಾಗಲಕೋಟೆ ಹೋಳಿ ಹಬ್ಬಕ್ಕೆ ವಿಶಿಷ್ಟ ಸ್ಥಾನ ಕಲ್ಪಿತವಾಗಲಿದೆ.

 

ನೂರಾರು ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಹೋಳಿ ಹಬ್ಬ ಎಲ್ಲ ಸಮಾಜದವರು ಕೂಡಿಕೊಂಡು ಭಾವೈಕ್ಯದ ಸಂಕೇತವಾಗಿ ಆಚರಿಸುತ್ತ ಬರುತ್ತಿದ್ದಾರೆ. ಈ ವರ್ಷವೂ ಪ್ರತಿಯೊಬ್ಬರೂ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಕೆಲವರು ಹೋಳಿ ಬಂದರೆ ಪ್ರವಾಸದ ನೆಪದಲ್ಲಿ ಊರು ಬಿಡುವ ಪದ್ಧತಿ ಬಿಡಬೇಕು. ಊರಿನ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.

ಮಹಾಬಲೇಶ್ವರ ಗುಡಗುಂಟಿ, ಪ್ರಧಾನ ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next