Advertisement

ಮಂಡ್ಯದಲ್ಲಿ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ

06:40 AM Oct 14, 2018 | |

ಮಂಡ್ಯ: ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಗೆ ಶನಿವಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

Advertisement

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ಕೊಡಗು, ರಾಮನಗರ, ಕೋಲಾರ, ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸೇರಿದ ಅರ್ಹ ಪುರುಷ ಅಭ್ಯರ್ಥಿಗಳಿಗೆ ಈ ರ್ಯಾಲಿ ಏರ್ಪಡಿಸಲಾಗಿದೆ. ಶನಿವಾರದಿಂದ ಆರಂಭವಾದ ಈ ರ್ಯಾಲಿ ಅ.19ರವರೆಗೆ ನಡೆಯಲಿದೆ. ರ್ಯಾಲಿಯಲ್ಲಿ ಭಾಗವಹಿಸಲು 11 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಸೈನಿಕ ಸಾಮಾನ್ಯ, ಸೈನಿಕ ತಾಂತ್ರಿಕ, ಸೈನಿಕ ತಾಂತ್ರಿಕ (ಏವಿಯೇಷನ್‌ ಅಮ್ಯೂನಿಷನ್‌ ಎಕ್ಸಾಮಿನರ್‌), ಸೈನಿಕ ಶುಶ್ರೂಷಕ ಸಹಾಯಕ/ಸೈನಿಕ ತಾಂತ್ರಿಕ ಡ್ರೆಸ್ಸರ್‌, ಸೈನಿಕ ಟ್ರೇಡ್‌ಮನ್‌, ಚೆಫ್ ಮೆಸ್‌ ಕೀಪರ್‌, ಹೌಸ್‌ ಕೀಪರ್‌, ಟೈಲರ್‌, ಡ್ರೆಸ್ಸರ್‌, ಸಹಾಯಕ ಸಿಬ್ಬಂದಿ, ಸೈನಿಕ ಲಿಪಿಕ ಉಗ್ರಾಣ ಪಾಲಕ ತಾಂತ್ರಿಕ/ ದಾಸ್ತಾನು ನಿರ್ವಹಣೆ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮೊದಲ ದಿನ 1770 ಮಂದಿಗೆ ದೇಹದಾಡ್ಯìಪರೀಕ್ಷೆ ನಡೆಸಲಾಯಿತು. 1.6 ಕಿ.ಮೀ. ಓಟ, ಬೀಮ್‌ (ಫ‌ುಲ್‌ಅಪ್ಸ್‌), 9 ಅಡಿ ಕಂದಕದೊಳಗೆ ನುಸುಳುವುದು, ಜಿಗ್‌ಜಾಗ್‌ ಬ್ಯಾಲೆನ್ಸ್‌ ಪರೀಕ್ಷೆಗಳನ್ನು ನಡೆಸಲಾಯಿತು. ರ‍್ಯಾಲಿ ಸ್ಥಳದಲ್ಲಿ ನಿಗದಿಪಡಿಸಿದ ವೈದ್ಯಕೀಯ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಒಳಪಡಿಸಲಾಯಿತು.

ವೈದ್ಯಕೀಯವಾಗಿ ಸದೃಢವಾಗಿರುವ ಅಭ್ಯರ್ಥಿಗಳಿಗೆ ನಿಗದಿತ ಸ್ಥಳದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಲಿಖೀತ ಪರೀಕ್ಷೆ ನಡೆಸುವ ಸ್ಥಳ, ದಿನಾಂಕ ಮತ್ತು ವೇಳೆಯನ್ನು ರ‍್ಯಾಲಿ ಸ್ಥಳದಲ್ಲಿ ಪ್ರವೇಶಪತ್ರದ ಮೂಲಕ ತಿಳಿಸಲಾಗುತ್ತದೆ. ರ‍್ಯಾಲಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಿಇಇ ಪ್ರವೇಶ ಪತ್ರವನ್ನು ರ್ಯಾಲಿಯ ಸ್ಥಳದಲ್ಲೇ ನೀಡಲಾಗುವುದು. ಪುನರ್‌ ಪರಿಶೀಲನಾ ಸಂದರ್ಭದಲ್ಲಿ ಸಂಬಂಧಪಟ್ಟ ತಜ್ಞರು ಎಂಎಚ್‌/ಸಿಎಚ್‌/ಬಿಎಚ್‌ನಲ್ಲಿ ತಜ್ಞರಾದವರಿಂದ ವೈದ್ಯಕೀಯವಾಗಿ ತೇರ್ಗಡೆ ಹೊಂದಿದ ಪ್ರಮಾಣಪತ್ರ ನೀಡಿದ ನಂತರವೇ ಪ್ರವೇಶಪತ್ರ ನೀಡಲಾಗುವುದು.

ಅರ್ಹತೆ ಹೊಂದಿರದ ಅಭ್ಯರ್ಥಿಗಳನ್ನು ಎಂಎಚ್‌/ಸಿಎಚ್‌/ಬಿಎಚ್‌ ತಜ್ಞರ ಬಳಿ ಪುನರ್‌ ಪರಿಶೀಲನೆಗೆ ಕಳುಹಿಸಲಾಗುತ್ತದೆ. ತಜ್ಞರ ಬಳಿ ಪುನರ್‌ ಪರಿಶೀಲನೆಗಾಗಿ ಶಿಫಾರಸು ಮಾಡಿದ ಅಭ್ಯರ್ಥಿಗಳು ನೇಮಕ ಮಾಡಿದ ತಜ್ಞರ ಬಳಿ 14 ದಿನಗಳೊಳಗೆ ಖುದ್ದು ಹಾಜರಾಗಿ ಮತ್ತೆ ನೇಮಕಾತಿ ಕಚೇರಿ, ಬೆಂಗಳೂರು ಅವರಿಗೆ ವರದಿ ಮಾಡಿಕೊಂಡು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣ ರಾದಲ್ಲಿ ಸಿಇಇಗೆ ಪ್ರವೇಶ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಸೈನಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಫ‌ುಟ್‌ಪಾತ್‌ನಲ್ಲೇ ಮಲಗಿದ ಅಭ್ಯರ್ಥಿಗಳು: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ನಗರಕ್ಕೆ ಆಗಮಿಸಿದ್ದು, ಅಭ್ಯರ್ಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆ ಸಿಗದೆ ಫ‌ುಟ್‌ ಪಾತ್‌ ಹಾಗೂ ಉದ್ಯಾನವನದಲ್ಲೇ ಮಲಗುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರಿಗೆ ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆವರಣದಲ್ಲಿ ವ್ಯವಸ್ಥೆ ಮಾಡಿಕೊಡಲಾಯಿತು. ಉಳಿದವರು ಗುರುಭವನ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಫ‌ುಟ್‌ಪಾತ್‌ ಮೇಲೆ ರಟ್ಟಿನ ಸಹಾಯದೊಂದಿಗೆ ಫ‌ುಟ್‌ಪಾತ್‌ನ ಪಡಸಾಲೆಗಳ ಮೇಲೆ ಆಶ್ರಯ ಪಡೆದು, ನಿದ್ರೆಗೆ ಜಾರಿದರು.

ಸೇನಾ ನೇಮಕಾತಿಗೆ ಬಂದಿರುವ ನಮಗೆ ರಾತ್ರಿ ಕಳೆಯಲು ವಸತಿ ಸೌಲಭ್ಯವಿಲ್ಲ. ಸೊಳ್ಳೆಗಳ ಕಾಟ ಹೆಚ್ಚಿದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ಬೆಳಗಿನ ವ್ಯಾಯಾಮ ಮಾಡುವುದಾದರೂ ಹೇಗೆ?
– ಹರೀಶ್‌ ಬಳ್ಳಾರಿ

ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಮಗೆ ಯಾವುದೇ
ಅನುದಾನದ ವ್ಯವಸ್ಥೆಯಿಲ್ಲ. ಅವರು ಓನ್‌ ರಿಸ್ಕ್ನಲ್ಲಿ ಬರಬೇಕು. ಕುಡಿಯುವ ನೀರು,ಶೌಚಾಲಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.ಇದರ ನಡುವೆಯೂ ಹಲವರಿಗೆ ಭಾರತ್‌ ಮತ್ತು ಸ್ಕೌಟ್ಸ್‌, ಬಿಆರ್‌ಸಿ ಕೇಂದ್ರದ ಆವರಣದಲ್ಲಿ ಆಶ್ರಯ ಒದಗಿಸಿದೆ.
ನಂದೀಶ್‌ 
ಸಹಾಯಕ ನಿರ್ದೇಶಕರು ಯುವಜನಸೇವಾ ಮತ್ತು ಕ್ರೀಡಾ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next