Advertisement

ಮತ್ತೆ ಕಲ್ಯಾಣ ಅಭಿಯಾನಕ್ಕೆ ಚಾಲನೆ

01:11 AM Aug 02, 2019 | Sriram |

ತರೀಕೆರೆ: ಬಸವಾದಿ ಶರಣರ ಸಮ ಸಮಾಜದ ಪರಿಕಲ್ಪನೆಯ ಅರಿವು ಮತ್ತು ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದಾಶಯದೊಂದಿಗೆ ಒಂದು ತಿಂಗಳ ಕಾಲ ರಾಜ್ಯದ ಎಲ್ಲೆಡೆ ನಡೆಯಲಿರುವ ‘ಮತ್ತೆ ಕಲ್ಯಾಣ’ ಅಭಿಯಾನ ಗುರುವಾರದಿಂದ ಆರಂಭಗೊಂಡಿದೆ.

Advertisement

ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಅಭಿಯಾನಕ್ಕೆ, ತರೀಕೆರೆಯ ಅಕ್ಕ ನಾಗಲಾಂಬಿಕೆ ಗದ್ದುಗೆ ಬಳಿ ಚಾಲನೆ ನೀಡಲಾಯಿತು. ಅಭಿಯಾನದ ಅಂಗವಾಗಿ ಸಾಮರಸ್ಯ ನಡಿಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿಂತಕ ಗೊ.ರು.ಚೆನ್ನಬಸಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದವರು ದಾರ್ಶನಿಕ ಬಸವಣ್ಣನವರು. 850 ವರ್ಷಗಳ ನಂತರ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆರಂಭವಾಗಿರುವುದು ಶುಭ ಲಕ್ಷಣವಾಗಿದೆ.

‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಒಂದು ಚಳವಳಿಯಾಗಿ ರೂಪುಗೊಳ್ಳಬೇಕು. ಜೊತೆಗೆ ಆಂದೋಲನವಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಪ್ರಜಾಸತ್ತೆಯ ದೇಹದ ಮೇಲೆ ಗಾಯಗಳನ್ನು ಮಾಡಲಾಗುತ್ತಿದೆ. ಸಮಾಜದಲ್ಲಿ ಸಂಕಟವಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ನಮ್ಮ ಜನಪ್ರತಿನಿಧಿಗಳು ರೆಸಾರ್ಟ್‌ ರಾಜಕಾರಣ ಮಾಡುತ್ತ, ವೈಭೋಗದ ಜೀವನ ನಡೆಸುತ್ತಿದ್ದಾರೆ. ಮತದಾರರು ರಾಜಕಾರಣಿಗಳು ತೋರುವ ಕ್ಷುಲ್ಲಕ ಆಸೆ, ಆಮಿಷಗಳಿಗೆ ಬಲಿಯಾಗಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡುವುತ್ತಿದ್ದಾರೆ. ಇದು ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದಲ್ಲಿರುವ ಅನೇಕ ರೋಗಗಳಿಗೆ ಮದ್ದು ನೀಡಬೇಕಾಗಿದೆ. ರಾಜಕೀಯ, ಜಾತಿ, ಭ್ರಷ್ಟಾಚಾರ ಇವೆಲ್ಲ ಸಮಾಜವನ್ನು ರೋಗಪೀಡಿತವನ್ನಾಗಿ ಮಾಡಿವೆ ಮತ್ತು ಸಮಸ್ಯೆಗಳಾಗಿ ಮಾರ್ಪಟ್ಟಿವೆ. ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು. ಆಗ ಬದುಕು ನಿರಾತಂಕವಾಗಿ ಬದಲಾವಣೆ ಕಾಣುತ್ತದೆ ಎಂದರು.

Advertisement

ಇಂದು ನಾವು ಅನಾರೋಗ್ಯದ ವಾತಾವರಣಕ್ಕೆ ಸಿಲುಕಿದ್ದೇವೆ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಪರಿವರ್ತನೆ ಮಾಡುವುದು ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಶಯವಾಗಿದೆ ಎಂದರು.

ಸಮಾರಂಭದಲ್ಲಿ ಯಳನಾಡು ಮಠದ ಶ್ರೀ ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ನಂದಿಪುರದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಶಾಸಕರಾದ ಸಿ.ಟಿ.ರವಿ, ಡಿ.ಎಸ್‌. ಸುರೇಶ್‌, ಬೆಳ್ಳಿ ಪ್ರಕಾಶ್‌ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಐಕ್ಯಮಂಟಪ ಮಾದರಿ ವಾಹನ

‘ಮತ್ತೆ ಕಲ್ಯಾಣ’ ಅಭಿಯಾನಕ್ಕಾಗಿ ಬೆಂಗಳೂರಿನ ಖ್ಯಾತ ಕಲಾವಿದ ಶಶಿಧರ ಅಡಪ ನೇತೃತ್ವದ ತಂಡ ಕೂಡಲಸಂಗಮದ ಐಕ್ಯಮಂಟಪದ ಮಾದರಿಯಲ್ಲಿ ಶರಣರ ವಚನಗಳು ಹಾಗೂ ಪ್ರತಿಮೆಗಳನ್ನೊಳಗೊಂಡ ಪ್ರಚಾರ ವಾಹನವೊಂದನ್ನು ಸಿದ್ಧಪಡಿಸಿದೆ. ಗುರುವಾರ ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿ ಮಠದಿಂದ ಹೊರಟ ಈ ವಾಹನ ತರೀಕೆರೆಗೆ ಆಗಮಿಸಿದೆ. ಈ ವಾಹನ ಒಂದು ತಿಂಗಳವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಆ.30ರಂದು ಬೀದರ್‌ನ ಬಸವಕಲ್ಯಾಣದಲ್ಲಿ ಸಮಾರೋಪ ನಡೆಯಲಿದೆ.

ಕಲ್ಯಾಣ ರಾಜ್ಯ ಎನ್ನುವುದು ಒಂದು ಕನಸು.ಜಾತಿ-ಮತಗಳನ್ನು ಮೀರಿದ ಒಂದು ಸಂದೇಶ. ಕನಸಿಲ್ಲದ ದಾರಿಯಲ್ಲಿ ಹೋಗಬಾರದು.ಕರ್ನಾಟಕದಲ್ಲಿ ಆನೇಕ
ಪ್ರಯೋಗದ ತಾಣಗಳಿವೆ. ಕಲ್ಯಾಣಕೂಡ ಒಂದು ಪ್ರಯೋಗ ತಾಣ.ಕಲ್ಯಾಣವೆಂದರೆ ಚಳವಳಿಗಳ ತಾಣ.ಇದೊಂದು ವೈಚಾರಿಕ ಯಾತ್ರೆ.
– ಪ್ರೊ| ತರೀಕೆರೆ ರಹಮತ್‌

ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದ್ದು 12ನೇ ಶತಮಾನದಲ್ಲಿ. ಅನುಭವ ಮಂಟಪದಲ್ಲಿ ಹಲವಾರು ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ವಚನಗಳು
ಜ್ಞಾನದೀವಿಗೆಗಳು. ಕಲ್ಯಾಣವೆಂದರೆ ಒಳಿತು, ಲೇಸು ಮತ್ತು ಅಭ್ಯುದಯ.ಮನುಕುಲದ ಕಲ್ಯಾಣವೇ “ಮತ್ತೆ ಕಲ್ಯಾಣ’ವಾಗಿದೆ.
– ಗಂಗಾಂಬಿಕಾ ಬಸವರಾಜು,ಚಿಂತಕಿ

ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಹೆಸರಿನಲ್ಲಿಬ್ರಾಹ್ಮಣ್ಯವನ್ನು ಹೇರಲಾಗುತ್ತಿದೆ. ವ್ಯವಸ್ಥೆ, ಸರಕಾರ ಜಾತ್ಯತೀತ ಸಿದಾಟಛಿಂತಗಳನ್ನು ಹೇಳುತ್ತವೆಯೇ ಹೊರತು ಜಾರಿಗೆ ತರುವುದಿಲ್ಲ.ಶರಣರ ವಚನಗಳು ಜಾತಿಯನ್ನು ನಿರಾಕರಿಸುತ್ತವೆ. ಬಡವ-ಶ್ರೀಮಂತ ಎಂಬ ಭೇದಭಾವ ಹೋಗಬೇಕಾಗಿದೆ. ಶ್ರೀಮಂತರಲ್ಲಿನ ಶ್ರೀಮಂತಿಕೆಯನ್ನು ಬಡವರಿಗೆ ಹಂಚುವ ಅಗತ್ಯವಿದೆ.
– ಚೇತನ್‌, ಚಿಂತಕ ಹಾಗೂ ಚಿತ್ರ ನಟ

Advertisement

Udayavani is now on Telegram. Click here to join our channel and stay updated with the latest news.

Next