Advertisement

ಸೋರುತಿಹುದು ಸರ್ಕಾರಿ ಶಾಲೆ 

05:25 PM Jul 08, 2018 | Team Udayavani |

ಅಂಕೋಲಾ: ಮಳೆ ಬಂತೆಂದರೆ ಸೋರುವ ಮೇಲ್ಛಾವಣಿ. ನೀರಿನ ತೇವಾಂಶಕ್ಕೆ ವಿದ್ಯುತ್‌ ಪ್ರವಹಿಸುವ ಗೋಡೆಗಳು. ನೀರಿನಲ್ಲೇ ಕುಳಿತು ಪಾಠ ಕೇಳುವ ಮಕ್ಕಳು. ಇದು ಪುರಲಕ್ಕಿಬೇಣ ಸರಕಾರಿ ಶಾಲೆ ದುಸ್ಥಿತಿ. ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಸುಮಾರು 43 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಭಾಗದ ಶೇ. 90ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ
ಸೇರಿದವರಾಗಿದ್ದು, ಪಾಲಕರು ದಿನಗೂಲಿ ಮಾಡಿ ಮಕ್ಕಳನ್ನು ಓದಿಸುತಿದ್ದಾರೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆ ಮೇಲ್ಛಾವಣಿ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದೆ. ನೀರು ಕೊಠಡಿಯೊಳಗೆ ನುಗ್ಗುತ್ತಿದ್ದು, ಗೋಡೆಗಳು ನೀರಿನಿಂದ ತೋಯ್ದು ವಿದ್ಯುತ್‌ ಪ್ರವಹಿಸುತ್ತಿವೆ. ಹೀಗಾಗಿ ಕೆಲವೊಮ್ಮೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿ ಪಾಠ ಮಾಡಲಾಗುತ್ತಿದೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಾಣ ಭಯದಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ.

ಈ ಕೊಠಡಿ ದುರವಸ್ಥೆ ಕುರಿತು ಮೇಲಾಧಿಕಾರಿಗಳಿಗೂ ಮತ್ತು ಜನಪ್ರತಿನಿಧಿಗಳಿಗೂ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂತೆಂದರೆ ಈ ಕಟ್ಟಡದ ಕೊಠಡಿಯಲ್ಲಿ ನೀರು ತುಂಬುತ್ತದೆ. ನೀರಿನಲ್ಲಿಯೇ ಮಕ್ಕಳಿಗೆ ಪಾಠ ಮಾಡುವ ಅನಿವಾರ್ಯತೆ
ಇಲ್ಲಿದೆ. 

ಕೊಠಡಿ ದುಸ್ಥಿತಿ ಬಗ್ಗೆ ಮೇಲಾಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೆ
ಯಾರೊಬ್ಬರೂ ಶಾಲೆ ಕೊಠಡಿ ದುರಸ್ತಿ ಮಾಡಲು ಮುತುವರ್ಜಿವಹಿಸಿಲ್ಲ. ಇಂತಹ ಕೊಠಡಿಯಲ್ಲಿಯೇ 6 ಮತ್ತು 7ನೇ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
ರಫೀಕ್ ಶೇಖ್‌, ಶಾಲಾ ಮುಖ್ಯಾಧ್ಯಾಪಕ

ಈ ಶಾಲೆಗೆ ಬರುವ ಎಲ್ಲ ವಿದ್ಯಾರ್ಥಿಗಳ ಪಾಲಕ, ಪೋಷಕರು ದಿನಗೂಲಿ ಮಾಡುತ್ತಿದ್ದಾರೆ. ಸಂಬಂಧಿಸಿದವರು ಶಾಲೆ ದುಸ್ಥಿತಿ ಕುರಿತು ನಿರ್ಲಕ್ಷ್ಯ  ವಹಿಸಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಶಾಲಾ ಮಕ್ಕಳ ಸೌಲಭ್ಯ
ಒದಗಿಸಬೇಕು.
ಪ್ರಭಾಕರ ಆಗೇರ, ಎಸ್‌ಡಿಎಂಸಿ ಅಧ್ಯಕ್ಷ 

Advertisement
Advertisement

Udayavani is now on Telegram. Click here to join our channel and stay updated with the latest news.

Next