Advertisement

ನಾಟಕ ಜನರನ್ನು ತಲುಪಬಲ್ಲ ಮಾಧ್ಯಮ

05:53 PM Jan 25, 2018 | Team Udayavani |

ತುಮಕೂರು: ನಾಟಕ ಬಹುಬೇಗ ಜನರನ್ನು ತಲುಪಬಲ್ಲ ಮಾಧ್ಯಮವಾಗಿದ್ದು, ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯಲು ಸೂಕ್ತ ಮಾಧ್ಯಮ ಎಂದು ಕನ್ನಡ ಸಾಹಿತ್ಯ ಪರಿಷತ್‌ ತುಮಕೂರು ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ತಿಳಿಸಿದರು.

Advertisement

 ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ಯೋಗದಲ್ಲಿ ಆಯೋಜಿಸಿದ್ದ ಸಿದ್ದಮಾದೇಶ ಮತ್ತು ಪಿ.ಲಂಕೇಶರ ತೆರೆಗಳು ನಾಟಕಗಳ ಪ್ರದರ್ಶನಕ್ಕೆ
ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾಟಕಗಳು ಹೆಚ್ಚು ಪರಿಣಾಮಕಾರಿ ಎಂದರು.

ಕಲಾವಿದರನ್ನು ಪ್ರೋತ್ಸಾಹಿಸಿ: ಅನೇಕ ಸವಾಲುಗಳ ನಡುವೆಯೂ ಕಲಾವಿದರು ಒಂದು ವಸ್ತು ವಿಷಯವನ್ನು ರಂಗಕ್ಕೆ ಅಳವಡಿಸಿದಾಗ ಅದನ್ನು ನೋಡಿ, ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸುವ ಮನಸ್ಸುಗಳ ಅಗತ್ಯ.ಸಾಂಸ್ಕೃತಿಕ ಮನಸ್ಸುಗಳ ಸಂಖ್ಯೆ ಕುಗ್ಗುತಿದ್ದು, ಸಮಾಜದಲ್ಲಿ ನಡೆಯುತ್ತಿರುವ ಎಷ್ಟೋ ಆನಾಹುತಗಳಿಗೆ ಇದೇ ಕಾರಣವಾಗಿದೆ ಎಂದು ನುಡಿದರು.

ಚಿಂತನೆಗೆ ಹಚ್ಚುವ ನಾಟಕಗಳು: ಡಾ.ಕೆ.ಎಸ್‌. ಕುಮಾರ್‌ ಮಾತನಾಡಿ, ನಾಟಕಗಳು ಜನರಲ್ಲಿ ಚಿಂತನೆ ಹೆಚ್ಚುವ ಕೆಲಸ ಮಾಡುತ್ತವೆ. ಇದನ್ನೇ ಅರಿತೇ ನಮ್ಮ ಪೂರ್ವಜರು ನಾಟಕ, ಗಣೇಶ ಉತ್ಸವಗಳ ಮೂಲಕ ಜನರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದು, ಇಂದಿನ ಬದಲಾವಣೆಗೆ ತಕ್ಕಂತೆ, ರಂಗಭೂಮಿಯಲ್ಲಿಯೂ ಬದಲಾವಣೆಗಳನ್ನು ತಂದುಕೊಂಡರೂ ಪ್ರೇಕ್ಷಕರ ಸ್ಪಂದನೆ ಇಲ್ಲದಿರುವುದು ನೋವಿನ ಸಂಗತಿ ಎಂದರು. 

ಸಂಸ್ಕಾರ ಮತ್ತು ಸಂಸ್ಕೃತಿ ಸಂಗಮ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಹಲವು ನಾಟಕಗಳನ್ನು ನೋಡಿದ್ದು, ಹೊಸ ವಿಚಾರಗಳ ಜೊತೆಗೆ, ನಾಡಿನ ಪ್ರಸ್ತುತ ಸಮಸ್ಯೆಗಳನ್ನು ಜನರ ಮುಂದಿಡಲು ನಾಟಕವನ್ನು ಯುವ ಜನರು ಬಳಸಿಕೊಳ್ಳುತ್ತಿದ್ದಾರೆ.

Advertisement

ಈ ಹಿಂದೆ ಸ್ವಾತಂತ್ಯ ಹೋರಾಟಗಳ ಸಂದರ್ಭದಲ್ಲಿಯೂ ಜನರಿಗೆ ನಾಟಕಗಳ ಮೂಲಕವೇ ಸಂದೇಶಗಳನ್ನು ತಲುಪಿಸುವ ಕೆಲಸ ಮಾಡಿರುವುದನ್ನು ನಾವು ಇತಿಹಾಸದಲ್ಲಿ ಕಾಣುತ್ತವೆ. ಸಂಸ್ಕಾರ ಮತ್ತು ಸಂಸ್ಕೃತಿ ಎರಡು ನಾಟಕಗಳಿಂದ ಪಡೆಯುಬಹುದು ಎಂದು ಅವರು ಹೇಳಿದರು. 

ಕವಿ ಡಾ.ಜಿ.ಹನುಮಂತರಾಯ ಪಾಲಸಂದ್ರ ಮಾತನಾಡಿ, ಪಿ.ಲಂಕೇಶ್‌ ತಮ್ಮ ನಾಟಕಗಳ ಮೂಲಕ ಪ್ರಸ್ತುತ ವಿದ್ಯಮಾನಗಳಿಗೆ ಜನರನ್ನು ಮುಖಾ ಮುಖೀಯಾಗಿಸುವ ಕೆಲಸ ಮಾಡುತ್ತಿದ್ದರೂ, ಅವರ ತೆರೆಗಳು ನಾಟಕ 70ರ ದಶಕದಲ್ಲಿ ರಚನೆಯಾದರೂ ಇಂದಿಗೂ ಪ್ರಸ್ತುತವೆನಿಸುತ್ತದೆ. ಸಾರ್ವಜನಿಕ ಸಮಸ್ಯೆಗಳಿಗೆ ಕನ್ನಡಿಯಾಗುವ ನಾಟಕಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದರು.

ರಂಗಾಸಕ್ತರನ್ನು ಸಂಘಟಿಸಿ: ಸಾಹಿತಿ ಶೈಲಾ ನಾಗರಾಜು ಮಾತನಾಡಿ, ನಾಟಕಗಳನ್ನು ಜನಮುಖೀಯಾಗಿಸುವ ಕೆಲಸ ಮಾಡಿದ ರೀತಿಯಲ್ಲಿ ರಂಗಾಸಕ್ತರನ್ನು ಸಂಘಟಿಸುವ ಅನಿವಾರ್ಯ ಪರಿಸ್ಥಿತಿ ಇಂದು ಕಲಾವಿದರಿಗೆ ಬಂದೊದಗಿದೆ. ರಂಗದ ಮೇಲೆ ಮತ್ತು ರಂಗದ ಹಿಂದೆ ಕೆಲಸ ಮಾಡುವುದರ ಜೊತೆಗೆ, ಸಾಮಾಜಿಕ ಜಾಲತಾಣ, ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಹೆಚ್ಚು  ಜನರನ್ನು ತಲುಪಿದರೆ ನಾಟಕದ ಆಶಯಗಳು ಸಫ‌ಲವಾಗುತ್ತವೆ ಎಂದು ಹೇಳಿದರು.

ವೇದಿಕೆಯಲ್ಲಿ ಬೆಳಗುಂಬ ಜಿಪಂಸದಸ್ಯ ನರಸಿಂಹಮೂರ್ತಿ, ರಂಗನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ, ಗ್ರಾಮೀಣ ಕ್ರಿಯಾತ್ಮಕ ರಂಗತಂಡದ ಸಂಚಾಲಕ ಶಿವಕುಮಾರ್‌ ತಿಮ್ಮಲಾಪುರ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಹೊರೆಯಾಲ ದೊರೆಸ್ವಾಮಿ ಅವರು ರಚಿಸಿರುವ ಸಿದ್ದಮಾದೇಶ ಮತ್ತು ಪಿ.ಲಂಕೇಶರ ತೆರೆಗಳು ನಾಟಕಗಳು ಪ್ರದರ್ಶನಗೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next