Advertisement

ಒಳಚರಂಡಿ ಕಾಮಗಾರಿ: ಹೆಚ್ಚಿದ ಕಿರಿಕಿರಿ

11:24 AM May 26, 2019 | Team Udayavani |

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯಿಂದಾಗಿ ಪಟ್ಟಣದ ಬಹುತೇಕ ರಸ್ತೆಗಳ ಸ್ಥಿತಿ ಅಯೋಮಯವಾಗಿದ್ದು ನಿತ್ಯವೂ ಒಂದಿಲ್ಲೊಂದು ಅವಘಡಗಳಿಗೆ ಕಾರಣವಾಗುತ್ತಿವೆ.

Advertisement

ಪಟ್ಟಣದ ಮುಖ್ಯ ಬಜಾರ್‌ ರಸ್ತೆಯಲ್ಲಿ 2 ದಿನಗಳ ಹಿಂದೆಯಷ್ಟೇ ಕಾಮಗಾರಿಗಾಗಿ ಅಗೆದಿದ್ದ ರಸ್ತೆಯ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೆ ಶನಿವಾರ ಬೆಳ್ಳಂಬೆಳಗ್ಗೆ ಈ ರಸ್ತೆಯ ಬಹುತೇಕ ಕಡೆ ಕುಸಿದು ಬಿದ್ದು ಪುರಸಭೆಯ ಟ್ರ್ಯಾಕ್ಟರ್‌ ಸಿಲುಕಿಕೊಂಡಿತ್ತು. ಇದನ್ನು ಮೇಲೆತ್ತಲು ಬಂದ ಜೆಸಿಬಿಯೂ ಸಿಲುಕಿಕೊಂಡು ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದು ಸಂಚಾರಕ್ಕೆ ಅಡಚಣೆಯುಂಟಾಯಿತು. ಅಲ್ಲದೇ ಪಟ್ಟಣಕ್ಕೆ ನಿತ್ಯ ಸಿಮೆಂಟ್, ಗೊಬ್ಬರ, ದಿನಸಿ, ತರಕಾರಿ ಇನ್ನಿತರ ಸರಕು ವಾಹನಗಳು ರಸ್ತೆಯಲ್ಲಿ ಸಿಲುಕಿ ಪರದಾಡುವ ಸ್ಥಿತಿ ಸಾಮಾನ್ಯವಾಗಿದೆ.

ನಿನ್ನೆಯಷ್ಟೇ ಪಟ್ಟಣದ ಮಾನ್ವಿಯರ ಪೆಟ್ರೋಲ್ ಬಂಕ್‌ ಹತ್ತಿರ ಟ್ರಕ್‌ವೊಂದು ಸಿಲುಕಿ ಇದನ್ನು ಹೊರ ತೆಗೆಯಲು ಜೆಸಿಬಿ, ಕ್ರೇನ್‌ ಬಳಸಲಾಯಿತು. ಒಟ್ಟಿನಲ್ಲಿ ಒಳಚರಂಡಿ ಕಾಮಗಾರಿಯಿಂದ ಸಾಕಷ್ಟು ಆವಾಂತರ,ಅಧ್ವಾನ ನಡೆಯುತ್ತಲೇ ಇವೆ. ಇದರಿಂದ ರೋಸಿ ಹೋಗಿರುವ ಪಟ್ಟಣದ ವ್ಯಾಪಾರಸ್ಥರ ಸಂಘದವರು ಶನಿವಾರ ತುರ್ತು ಪತ್ರಿಕಾಗೋಷ್ಠಿ ಕರೆದು ಒಳಚರಂಡಿಯ ಕಳಪೆ ಕಾಮಗಾರಿ ಅಧಿಕಾರಿಗಳ ಬೇಜವಾಬ್ದಾರಿ, ಪುರಸಭೆ ಮತ್ತು ಜನಪ್ರತಿಧಿನಿಗಳ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಆರ್‌.ಆರ್‌. ಬಾಳೇಹಳ್ಳಿಮಠ, ಉಪಾಧ್ಯಕ್ಷ ಅಶೋಕ ಬಟಗುರ್ಕಿ ಮಾತನಾಡಿ, ಕಳೆದ 3 ವರ್ಷಗಳಿಂದ ಪಟ್ಟಣದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿಯಿಂದ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ಜನರಿಗೆ ಸಾಕಷ್ಟು ತೊಂದರೆಯಾಗಿದ್ದರೂ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದಾರೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಅಧಿಕಾರಿಗಳು ಜನತೆಯ ಸಹನೆಯನ್ನು ಕೆಣಕುತ್ತಿದ್ದಾರೆ. ಗುತ್ತಿಗೆದಾರರು ಅಗೆದ ರಸ್ತೆಗಳನ್ನು ಬೇಕಾಬಿಟ್ಟಿ ಮಾಡಿದ್ದಾರೆ ಮತ್ತು ಮಾಡಿರುವ ಕಾಮಗಾರಿಯೂ ಕಳಪೆಯಾಗಿದ್ದು ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದರೆ ಪುರಸಭೆಯವರು ಇದು ತಮಗೆ ಸಂಬಂಧಿಸಿದ್ದೇ ಅಲ್ಲ ಎಂಬ ಮನೋಭಾವನೆಯಲ್ಲಿ ತಾತ್ಸಾರ ಮಾಡುತ್ತಿದ್ದಾರೆ.

ಜನರ ಸೈರಣೆಗೂ ಒಂದು ಮಿತಿಯಿದ್ದು ಇದುವರೆಗೂ ಮೂಕವೇದನೆ ಅನುಭವಿಸಿರುವ ಎಲ್ಲರೂ ಇನ್ನೂ ಸುಮ್ಮನ್ನಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸಿ ಕೈ ತೊಳೆದುಕೊಳ್ಳಲಿದ್ದಾರೆ. ನಂತರ ನಾವು ಯಾರನ್ನು ಪ್ರಶ್ನಿಸಬೇಕು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ವಾರದೊಳಗಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಒಳಚರಂಡಿ ಯೋಜನೆಯ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲಿಸಿ ಮುಂದಾಗುವ ತೊಂದರೆಗಳ ಗಮನ ಹರಿಸದಿದ್ದರೆ ಪಕ್ಷಾತೀತವಾಗಿ ಸಾರ್ವಜನಿಕರು ಮತ್ತು ಸಂಘಟನೆಗಳೊಡಗೂಡಿ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ. ಮಾಲತೇಶ ಅಗಡಿ, ಶಕ್ತಿ ಕತ್ತಿ, ಮಹೇಶ ಹುಲಬಜಾರ್‌, ಗುರು ಬಾಳೇಹಳ್ಳಿಮಠ, ಮಾಣಿಕ ಶೇಟ, ಮಂಜಣ್ಣ ಸವಣೂರ, ಬಸಣ್ಣ ಮಹಾಂತಶೆಟ್ಟರ, ಭರತಣ್ಣ ಬರಿಗಾಲಿ, ವಿ.ಎಸ್‌. ಬಾಳೇಹಳ್ಳಿಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next