Advertisement

ವಾಣಿಜ್ಯ ವ್ಯವಹಾರಗಳ “ಬಂದರ್‌’ನಲ್ಲಿ ಒಳಚರಂಡಿಯದ್ದೇ ಸಮಸ್ಯೆ!

11:08 PM Oct 15, 2019 | mahesh |

ಮಹಾನಗರ: ಒಂದೆಡೆ ವಾಣಿಜ್ಯ ವ್ಯವಹಾರಗಳ ಪ್ರದೇಶ; ಇನ್ನೊಂದೆಡೆ ಜನವಸತಿ ಇರುವ ಜಾಗ; ಇದರ ಮಧ್ಯೆ ಇಕ್ಕಟ್ಟಿನ ರಸ್ತೆಯಲ್ಲಿ ಟ್ರಾಫಿಕ್‌ ಸಮಸ್ಯೆಯ ಸ್ಥಳ ಬಂದರು!
ಕರಾವಳಿ ಸಹಿತ ಬೇರೆ ಬೇರೆ ಭಾಗದಿಂದ ವಾಣಿಜ್ಯ ವ್ಯವಹಾರಗಳಿಗಾಗಿ ಮಂಗಳೂರನ್ನು ಬೆಸೆದುಕೊಂಡಿರುವ ಬಂದರು ಪ್ರದೇಶ ಸುದೀರ್ಘ‌ ವರ್ಷಗಳಿಂದಲೇ ಇಕ್ಕಟ್ಟಿನ ಜಾಗದಲ್ಲಿದೆ. ವ್ಯಾಪಾರ ವಹಿವಾಟಿನ ಮುಖೇನ ಧಾರ್ಮಿಕ ಸಹಬಾಳ್ವೆಯನ್ನು ಸಾರಿದ ಸ್ಥಳವಿದು. ಬೇರೆ ಬೇರೆ ರಾಜ್ಯದವರು ಉದ್ಯೋಗ ನಿಮಿತ್ತ ನೆಲೆಸಿರುವ ಪ್ರದೇಶವಿದು.

Advertisement

ಇತಿಹಾಸ ಪ್ರಸಿದ್ಧ ಜಿ.ಎಂ. ರಸ್ತೆಯಲ್ಲಿರುವ ಜುಮ್ಮಾ ಮಸೀದಿ ಹಾಗೂ ಇನ್ನೆರಡು ಮಸೀದಿಗಳು ಈ ವಾರ್ಡ್‌ ನಲ್ಲಿದೆ. ಶ್ರೀ ಕಾಳಿಕಾಂಬ ದೇವಸ್ಥಾನ, ಶ್ರೀ ಮುಖ್ಯಪ್ರಾಣ, ಶ್ರೀ ಗೋಪಾಲಕೃಷ್ಣ, ಗಾಯತ್ರಿ ದೇವ ಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳು, ಜೈನ ಮಂದಿರ, ಬಂದರು ಪೊಲೀಸ್‌ ಠಾಣೆ ಈ ವಾರ್ಡ್‌ ನಲ್ಲಿದೆ.

ಪಾಲಿಕೆಯಲ್ಲಿ ರಮೀಜ ಬಾನು ಸಹಿತ ಇಬ್ಬರು ಮಾತ್ರ ಜೆಡಿಎಸ್‌ ಸದಸ್ಯರಿರುವ ಕಾರಣದಿಂದ ಈ ವಾರ್ಡ್‌ಗೆ ಅನು ದಾನ ಬಂದಿದ್ದು ಕಡಿಮೆ; ಬಂದ ಅನುದಾನವನ್ನು ಅವರು ಸೂಕ್ತವಾಗಿ ವಿನಿಯೋಗಿಸಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾದರೆ, ಬಂದರಿನ ಒಳರಸ್ತೆಗಳು, ಪೊಲೀಸ್‌ ಠಾಣೆಯ ಸುತ್ತಮುತ್ತಲಿನ ಒಳರಸ್ತೆಗಳು ಡಾಮರು ಕಾಣದೆ ಅದೆಷ್ಟೋ ವರ್ಷಗಳಾಗಿವೆ ಎಂಬುದು ಕೆಲವರು ವಾದ.

ಇಲ್ಲಿನ ಬಹುತೇಕ ಒಳಚರಂಡಿ ವ್ಯವಸ್ಥೆ ಹಲವು ವರ್ಷಗಳ ಹಿಂದಿನ ಕಾಲದ್ದು. ಜನಸಂಖ್ಯೆ, ವಾಣಿಜ್ಯ ವಹಿವಾಟು ಅಧಿಕವಾಗುತ್ತಿದ್ದಂತೆ ಒಳಚರಂಡಿಯಲ್ಲಿ ಮಲೀನ ನೀರು ಉಕ್ಕಿ ಹರಿಯುತ್ತಿದೆ. ಹೀಗಾಗಿ ಒಳಚರಂಡಿಗಳನ್ನು ಹೊಸದಾಗಿ ನಿರ್ಮಿಸಬೇಕಾಗಿದೆ. ಈ ಕಾರಣದಿಂದಾಗಿಯೇ ಕೆಲವು ವರ್ಷಗಳ ಹಿಂದೆ ಘೋಷಣೆಯಾದ ಕೇಂದ್ರ-ರಾಜ್ಯ-ಮನಪಾ ಸಹಕಾರದ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಇಲ್ಲಿನ ಒಳಚರಂಡಿ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಇಲ್ಲಿನ ಬಹುತೇಕ ಒಳರಸ್ತೆಯನ್ನು ಅಗೆಯಲಾಗಿದೆ. ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಸದ್ಯಕ್ಕೆ ಇಲ್ಲಿ ಸಂಚಾರ ಸಮಸ್ಯೆ ಎದುರಾಗಿದೆ. ಆದರೂ ಕಾಮಗಾರಿ ಪೂರ್ಣವಾದ ಬಳಿಕ ಎಲ್ಲವೂ ಸುಧಾರಿಸಬಹುದು ಎಂಬ ಆಶಾಭಾವ ಇಲ್ಲಿನವ ರದ್ದು.ಕೆಲವು ವರ್ಷಗಳ ಹಿಂದೆ ಮುಚ್ಚಿದ್ದ ಸರಕಾರಿ ಯುನಾ ನಿ ಆಸ್ಪತ್ರೆ ಇತ್ತೀಚೆಗೆ ಆರಂಭಗೊಂಡಿರುವುದು ಹಲವರಿಗೆ ಖುಷಿ ನೀಡಿದೆ. ನಿತ್ಯ ಹಲವು ಜನರು ಈ ಆಸ್ಪತ್ರೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಬೃಹತ್‌ ಚರಂಡಿಗಳ ಸಮಸ್ಯೆ
ಈ ವಾರ್ಡ್‌ನಲ್ಲಿ ಬೃಹತ್‌ ಚರಂಡಿಗಳ ಸಮಸ್ಯೆಯೇ ಬಹುವಾಗಿ ಕಾಡುತ್ತಿದೆ. ನದಿ ಪಕ್ಕದಲ್ಲಿಯೇ ಈ ವಾರ್ಡ್‌ ಇರುವುದರಿಂದ ನಗರದ ಬಹುತೇಕ ಭಾಗದ ಚರಂಡಿ ನೀರು ಇದೇ ವಾರ್ಡ್‌ ಮೂಲಕವೇ ನದಿ ಸೇರುತ್ತಿದೆ. ಒಂದೆಡೆ ನದಿ ಕಲುಷಿತವಾದರೆ ಇನ್ನೊಂದೆಡೆ ಚರಂಡಿ ಸುತ್ತಮುತ್ತ ಗಲೀಜು ವಾತಾವರಣ ಇಲ್ಲಿನ ಬಹುದೊಡ್ಡ ಸಮಸ್ಯೆ. ನ್ಯೂಚಿತ್ರ ಭಾಗದಿಂದ ಬರುವ ಚರಂಡಿ, ಭಟ್ಕಳ ಬಝಾರ್‌ ಭಾಗದಿಂದ ಬರುವ ಚರಂಡಿ, ಅನ್ಸಾರ್‌ ಪಾರ್ಕ್‌ ಸಮೀಪದಿಂದ ಬರುವ ಬೃಹತ್‌ ಚರಂಡಿಗಳಿಗೆ ತಡೆಗೋಡೆ ಸಮರ್ಪಕವಾಗಿ ಆಗದೆ ಮಳೆ ಸಂದರ್ಭ ಇಲ್ಲಿ ದೊಡ್ಡ ಸಮಸ್ಯೆಯೇ ಎದುರಾಗುತ್ತಿದೆ.

Advertisement

ಪ್ರಮುಖ ಕಾಮಗಾರಿ
-ವಾರ್ಡ್‌ನ ಪ್ರಮುಖ ಭಾಗದಲ್ಲಿ ಡಾಮರು ರಸ್ತೆ ಅಭಿವೃದ್ಧಿ
– ವಾರ್ಡ್‌ನ ಬಹುತೇಕ ಭಾಗದ ಕಾಲುದಾರಿಗಳಿಗೆ ಇಂಟರ್‌ಲಾಕ್‌
– ಕಂಡತ್‌ಪಳ್ಳಿಯಿಂದ ಸೆಲೆಕ್ಟರ್‌ಹೌಸ್‌ವರೆಗೆ ಒಳಚರಂಡಿ ಕಾಮಗಾರಿ
– ಕಂಡತ್‌ಪಳ್ಳಿ-ಸಿಟಿ ಪ್ರಸ್‌ವರೆಗೆ ಡಾಮರು ಕಾಮಗಾರಿ
– ಅನ್ಸಾರ್‌ ಪಾರ್ಕ್‌ ಅಭಿವೃದ್ಧಿಗೆ ಸಹಕಾರ
– ಮಹಮ್ಮಾಯಿ ಕೆರೆಯ ಸುತ್ತ ಇಂಟರ್‌ಲಾಕ್‌
– ಸ್ಮಾರ್ಟ್‌ಸಿಟಿ-ಅಮೃತ್‌ ಯೋಜನೆ ಯಡಿ ಮಹತ್ವದ ಕಾಮಗಾರಿ
– ಕಾರ್‌ಸ್ಟ್ರೀಟ್‌ ಹೂವಿನ ಮಾರುಕಟ್ಟೆ ಸಮೀಪ ಕಾಂಕ್ರೀಟ್‌ ರಸ್ತೆ

ಬಂದರು ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕಾರ್‌ಸ್ಟ್ರೀಟ್‌ನ ಈ ಹಿಂದಿನ ನ್ಯೂಚಿತ್ರ ಟಾಕೀಸ್‌ನ ಮೂಲಕವಾಗಿ ಬಸವನ ಗುಡಿಯಾಗಿ ಕಂಡತ್‌ಪಳ್ಳಿ, ಬಂದರು ಗೇಟ್‌ನಿಂದಾಗಿ ಬಂದರು ಪೊಲೀಸ್‌ ಠಾಣೆಯ ಮುಂಭಾಗದಿಂದ ಸ್ವಲ್ಪದೂರದ ಎಡರಸ್ತೆಯಲ್ಲಿ ಮುಖ್ಯಪ್ರಾಣ ದೇವಸ್ಥಾನದಿಂದ ಮುಂಭಾಗದಲ್ಲಿ ಹಾದು ಕಾರ್‌ಸ್ಟ್ರೀಟ್‌ ಹೂವಿನ ಮಾರುಕಟ್ಟೆವರೆಗೆ ವ್ಯಾಪ್ತಿ ಇದೆ.
ಪಾಲಿಕೆ ಅನುದಾನ: 7 ಕೋಟಿ ರೂ.

ಒಟ್ಟು ಮತದಾರರು: 5000
ನಿಕಟಪೂರ್ವ ಕಾರ್ಪೊರೇಟರ್‌-ರಮೀಜ ಬಾನು (ಜೆಡಿಎಸ್‌)

“ಸಮಗ್ರ ಅಭಿವೃದ್ಧಿಗೆ ಆದ್ಯತೆ’
ಪಾಲಿಕೆಯಲ್ಲಿ ನಾನು ಜೆಡಿಎಸ್‌ ಪ್ರತಿನಿಧಿಯಾಗಿದ್ದ ಕಾರಣದಿಂದ ಅನುದಾನ ನನ್ನ ವಾರ್ಡ್‌ಗೆ ಕಡಿಮೆ ಬಂದಿದೆ. ಆದರೂ ಬಂದ ಅನುದಾನ, ಇತರ ಮೂಲಗಳಿಂದ ಹಣ ಹೊಂದಿಸಿ ವಾರ್ಡ್‌ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಸದ್ಯ ಬಂದರು ವಾರ್ಡ್‌ನಲ್ಲಿ ಸ್ಮಾರ್ಟ್‌ಸಿಟಿಯ ಒಳಚರಂಡಿ ಕಾಮಗಾರಿ, ಅಮೃತ್‌ ಯೋಜನೆ ಕಾಮಗಾರಿ ಕೂಡ ನಡೆಯುತ್ತಿದೆ. ಈ ಎಲ್ಲ ಕಾಮಗಾರಿ ಪೂರ್ಣವಾದ ಬಳಿಕ ವಾರ್ಡ್‌ ಪರಿಪೂರ್ಣವಾಗಿ ಅಭಿವೃದ್ಧಿಯಾಗಲಿದೆ.
-ರಮೀಜ ಬಾನು,

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next