Advertisement

ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ

02:34 PM Nov 25, 2019 | Suhan S |

ಕುಷ್ಟಗಿ: ಪಟ್ಟಣದ ಹೊರವಲಯದ ಜಮೀನುಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಜಮೀನುಗಳಿಗೆ ಸಂಪರ್ಕದ ದಾರಿಯೇ ಇಲ್ಲದಂತಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಪಟ್ಟಣದ ಹೊರವಲಯದ ಹೆದ್ದಾರಿಯಿಂದ ಲಾಡ್‌ಸಾಬ್‌ ಕಟ್ಟಿ, ಭೀಮಣ್ಣ ಬಾವಿಯ ಮೂಲಕ ಗುಮಗೇರಾ ಸಂಪರ್ಕಿಸುವ 16 ಅಡಿ ಅಗಲದ ರಸ್ತೆ ಕಂದಾಯ ಇಲಾಖೆಯ ಗ್ರಾಮ ನಕ್ಷೆಯಲ್ಲಿ ಜಮೀನು ವಹಿವಾಟು ರಸ್ತೆ ಎಂದು ದಾಖಲೆಯಲ್ಲಿದೆ. ಒಂದೂವರೆ ದಶಕದ ಹಿಂದೆ ಎನ್‌ಎಚ್‌-13 ಸಿಂಗಲ್‌ ಹೆದ್ದಾರಿ ಇದ್ದ ಸಂದರ್ಭದಲ್ಲಿ ಪಟ್ಟಣದ ಚರಂಡಿ ನೀರು, ಟೆಂಗುಂಟಿ ಕ್ರಾಸ್‌ ಮೂಲಕ ಸರ್ಕಾರಿ ಪಾಲಿಟೆಕ್ನಿಕ್‌ ಬಳಿ ಇರುವ ಹಳ್ಳ ಸೇರುತ್ತಿತ್ತು. ಹೆದ್ದಾರಿ ಅಗಲೀಕರಣ ನಂತರ ಚತುಷ್ಪಥ ಹೆದ್ದಾರಿ-50 ಆಗಿ ಅಭಿವೃದ್ಧಿ ನಂತರ ಮೂಲ ಜಮೀನು ವಹಿವಾಟು ರಸ್ತೆ ಸಂಪರ್ಕ ಕಡಿದುಕೊಂಡಿತು. ನಾಲೆಯ ಮೂಲಕ ಹರಿಯುವ ಚರಂಡಿ ನೀರು, ವಹಿವಾಟು ರಸ್ತೆಯನ್ನು ಅತಿಕ್ರಮಿಸಿದಾಗ ಈ ರಸ್ತೆಯ ಬಗ್ಗೆ ಒಕ್ಕೊರಲಿನ ರೈತರ ಧ್ವನಿಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ. ಈಗ ಸುಮಾರು ಅರ್ಧ ಕಿ.ಮೀ. ವಹಿವಾಟು ರಸ್ತೆಯಲ್ಲಿ ಚರಂಡಿ ನೀರು ಕಾಲುವೆಯಂತೆ ಹರಿದು ಹಳ್ಳ ಸೇರುತ್ತಿದೆ. ಪಟ್ಟಣದ ಚರಂಡಿಯಲ್ಲಿ ನೀರು ಸದಾ ಹರಿಯುತ್ತಿರುವ ಪರಿಣಾಮ ಮುಳ್ಳುಕಂಟಿಗಳು ಬೆಳೆದಿವೆ. ಘನತ್ಯಾಜ್ಯಗಳಿಂದ ಹೂಳು ತುಂಬಿದೆ.

ಬಹು ದಿನಗಳ ಬೇಡಿಕೆ ಮೂಲ ದಾರಿಯ ಅಭಿವೃದ್ಧಿ ರೈತರಿಗೆ ಮರೀಚಿಕೆಯಾಗುತ್ತಿದೆ. ಈ ಕುರಿತಾಗಿ ಶಾಸಕರ ಗಮನಕ್ಕೂ ತರಲಾಗಿದ್ದು, ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ರೈತರಿಗೆ ನಿರಾಸೆಯಾಗಿದೆ. ಈ ಜಮೀನುಗಳಿಗೆ ದಾರಿ ಬಂದ್‌ ಆಗಿರುವ ಹಿನ್ನೆಲೆಯಲ್ಲಿ ರೈತರು ಸುತ್ತು ಹಾಕಿ ಇತರೇ ರೈತರ ಜಮೀನುಗಳ ಮೂಲಕ ತಮ್ಮ ಜಮೀನುಗಳಿಗೆ ಹೋಗಬೇಕಿದೆ. ಸದ್ಯ ಹಿಂಗಾರು ಬೆಳೆಯ ಸಂದರ್ಭದಲ್ಲಿ ಎತ್ತಿನ ಬಂಡಿ ಹೊರತು ಪಡಿಸಿದರೆ ಬೇರೆ ವಾಹನಗಳು ಹೋಗುವ ಹಾಗಿಲ್ಲ. ಹೇಗಾದರೂ ಈ ಜಮೀನುಗಳಿಗೆ ಮೂಲ ದಾರಿ ಅಭಿವೃದ್ಧಿ ಪಡಿಸಿ ಎಂದು ರೈತರ ಬೇಡಿಕೆ ಮುಂದಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next