Advertisement

ಕಾಲುವೆಗೆ ನೀರು ಶೀಘ್ರ ಬಿಡಿ

12:19 PM Aug 04, 2019 | Team Udayavani |

ಗಂಗಾವತಿ: ತುಂಗಭದ್ರಾ ಡ್ಯಾಂನಲ್ಲಿ ಸುಮಾರು 35ಕ್ಕೂ ಅಧಿಕ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ಸಹ ಉತ್ತಮವಾಗಿದ್ದು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಎಡದಂಡೆ ಮತ್ತು ವಿಜಯನಗರ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಅಕಾರಿಗಳು ಮತ್ತು ರಾಜಕಾರಣಿಗಳು ತುಂಗಭದ್ರಾ ಡ್ಯಾಂ ನೀರನ್ನು ಕಾರ್ಖಾನೆ ಮತ್ತು ಆಂಧ್ರಕ್ಕೆ ಮಾರಿಕೊಳ್ಳುತ್ತಿದ್ದಾರೆ. ರೈತರು ಒಂದೇ ಬೆಳೆ ಬೆಳೆಯುತ್ತಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಭಾರಿ ಮುಂಗಾರು ತಡವಾಗಿ ಆರಂಭವಾಗಿದ್ದು ಡ್ಯಾಂನಲ್ಲಿ ಸದ್ಯ 30 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇನ್ನೂ ನಾಲ್ಕೈದು ದಿನದಲ್ಲಿ 40 ಟಿಎಂಸಿ ಅಡಿಗೆ ಹೆಚ್ಚಾಗಲಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಕಾರಣ ಸರಕಾರ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು. ಸುಳ್ಳು ಹೇಳಿ ಕುಡಿಯಲು ಮತ್ತು ಕಾರ್ಖಾನೆಗಳಿಗೆ ನೀರು ಬಿಟ್ಟು ನೀರನ್ನು ಪೋಲು ಮಾಡಬಾರದು. ರೈತರು ಮತ್ತು ಕೃಷಿ ಕಾರ್ಮಿಕರು ಗುಳೆ ಹೋಗಿದ್ದು, ನೀರನ್ನು ಕಾಲುವೆಗಳಿಗೆ ಹರಿಸುವ ಮೂಲಕ ಅವರ ಹಿತ ಕಾಪಾಡಬೇಕಿದೆ. ಡಾ| ವಿಶ್ವನಾಥನ್‌ ವರದಿ ಅನುಷ್ಠಾನ ಮಾಡಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ ಖಾಸಗಿ ಸಾಲ ಮನ್ನಾ ಮಾಡಬೇಕು. ಹೊಸದಾಗಿ ಕೃಷಿ ಮಾಡಲು ಬಡ್ಡಿರಹಿತ ಸಾಲ ನೀಡಬೇಕು. ಋಣಮುಕ್ತ ಕಾಯ್ದೆಯನ್ನು ಕೇರಳ ಮಾದರಿಯಲ್ಲಿ ಕೂಡಲೇ ಅನುಷ್ಠಾನ ಮಾಡಬೇಕು. ನಗರ ಪ್ರದೇಶ ಸೇರಿದಂತೆ ಉದ್ಯೋಗಖಾತ್ರಿ ಕೂಲಿಕಾರರಿಗೆ ಕೂಲಿ 600 ರೂ. ಹೆಚ್ಚು ಮಾಡಿ ಕನಿಷ್ಟ 200 ದಿನ ಕೂಲಿ ಕೆಲಸ ಕಲ್ಪಿಸಬೇಕು. ಬಡ ಕೃಷಿ ಕೂಲಿಕಾರ್ಮಿಕರಿಗೆ ಕನಿಷ್ಟ 5000 ರೂ. ಪಿಂಚಣಿ ಯೋಜನೆ ಆರಂಭಿಸಬೇಕೆಂದು ಒತ್ತಾಯಿಸಿದರು.

ಶಿವಣ್ಣ ಬೆಣಕಲ್, ಜಿ. ನಾಗರಾಜ, ಕನಕರಾಯ, ಮಂಜುನಾಥ ಬೆಣಕಲ್, ಮರಿಯಪ್ಪ, ಶಿವಕುಮಾರ ಬೆಣಕಲ್, ನಾಗರಾಜ, ದುರುಗಪ್ಪ, ಎಚ್.ಎಂ. ವೀರಯ್ಯಸ್ವಾಮಿ, ಯಂಕಪ್ಪ ಬೆಣಕಲ್, ಹನುಮೇಶ, ಈರಪ್ಪ, ಮೂಕಪ್ಪ ಸೇರಿ ನೂರಾರು ಜನರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next