Advertisement

ಸಾರ್ಥಕ ಸೇವೆಯ ಸಂಘಜೀವಿ ಡಾ|ವಿಎಸ್‌ವಿ ಪ್ರಸಾದ

01:06 AM Apr 29, 2020 | Hari Prasad |

ಹುಬ್ಬಳ್ಳಿ: ಸಾಮಾಜಿಕ ಸೇವೆ ಎಂಬುದು ಎಲ್ಲರ ಮನದಲ್ಲೂ ಇರುವುದಿಲ್ಲ. ಮಾನವೀಯತೆ ಹೃದಯಗಳಲ್ಲಿ ಮಾತ್ರ ಇಂತಹ ಚಿಂತನೆ ಮನೆ ಮಾಡಿಕೊಂಡಿರುತ್ತೆ. ಬಡವರು, ನಿರ್ಗತಿಕರು, ಸಂಕಷ್ಟದಲ್ಲಿದ್ದವರಿಗೆ ನೆರವಾಗಬೇಕೆಂದು ಸದಾ ಮಿಡಿಯುತ್ತಿರುತ್ತದೆ. ಅಂತಹ ಮಾನವೀಯ ಗುಣವುಳ್ಳವರ ಪಟ್ಟಿಯಲ್ಲಿ ಕ್ಲಾಸ್‌-1 ಗುತ್ತಿಗೆದಾರ, ಸ್ವರ್ಣ ಗ್ರುಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ| ವಿ.ಎಸ್‌.ವಿ. ಪ್ರಸಾದ ತಮ್ಮದೇ ಸ್ಥಾನ ಪಡೆದಿದ್ದಾರೆ.

Advertisement

ನಿರ್ಮಾಣ, ಹೋಟೆಲ್‌ ಹೀಗೆ ವಿವಿಧ ಉದ್ಯಮ ಹೊಂದಿರುವ ಡಾ| ವಿಎಸ್‌ವಿ ಪ್ರಸಾದ ಅವರು, ತಾವಾಯಿತು, ತಮ್ಮ ಉದ್ಯಮ, ಲಾಭ ಎಂಬುದಕ್ಕಷ್ಟೇ ಸೀಮಿತವಾಗದೆ, ದುಡಿಮೆಯಿಂದ ಬಂದ ಆದಾಯದ ಒಂದಿಷ್ಟು ಭಾಗವನ್ನು ನಿರ್ಗತಿಕರು, ಬಡವರು ಹಾಗೂ ಸಮಾಜಮುಖಿ ಕಾರ್ಯಗಳಿಗಾಗಿ ಬಳಸುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಹೆಮ್ಮಾರಿಯ ಸಂಕಷ್ಟದ ಸಂದರ್ಭದಲ್ಲಿ ನೋವುಂಡವರು, ಸಂಕಷ್ಟಕ್ಕೆ ಸಿಲುಕಿದವರು, ನಿರ್ಗತಿಕರಿಗೆ ತಮ್ಮ ಕೈಲಾದ ನೆರವು ನೀಡುವ ನಿಟ್ಟಿನಲ್ಲಿ ನಿತ್ಯವೂ ತೊಡಗಿದ್ದಾರೆ.

ಕೋವಿಡ್ ಹೊಡೆತಕ್ಕೆ ಸಿಲುಕಿ ಅದೆಷ್ಟೋ ಕ್ಷೇತ್ರದವರು ನಲುಗುತ್ತಿದ್ದಾರೆ. ವಿವಿಧ ವೃತ್ತಿ, ಕೆಲಸ ನಂಬಿ ಅಂದಿನ ದುಡಿಮೆ, ಅಂದಿನ ಆದಾಯ ಹಾಗೂ ಕುಟುಂಬ ನಿರ್ವಹಣೆ ಎಂಬುದನ್ನು ನಂಬಿ ಬದುಕಿದ್ದ ಅನೇಕ ಕುಟುಂಬಗಳು ಇಂದು ಅಕ್ಷರಶಃ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಂತಹ ಕಷ್ಟಗಳನ್ನು ಕಂಡ-ಕೇಳಿದ ಡಾ| ವಿಎಸ್‌ವಿ ಪ್ರಸಾದ ಅವರು, ತಮ್ಮ ವೈಯಕ್ತಿಯ ನೆರವು ಅಲ್ಲದೆ ಹಲವು ಸ್ನೇಹಿತರು, ಸಂಸ್ಥೆಗಳ ನೆರವನ್ನು ಒಟ್ಟುಗೂಡಿಸಿ, ನೊಂದವರ ನೋವಿಗೆ ಸ್ಪಂದಿಸಲು ಮುಂದಾಗಿ, ಹಲವು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ ಇನ್ನಿತರ ನೆರವು ನೀಡಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಪ್ರೇರಣೆ ನೀಡಿತು ಫೋನ್‌ ಕರೆ:
ಲಾಕ್‌ಡೌನ್‌ ಘೋಷಣೆಯಾಗಿ ಎರಡ್ಮೂರು ದಿನಗಳ ನಂತರ ಸ್ನೇಹ ಚಾರಿಟೇಬಲ್‌ನವರು ಡಾ| ವಿಎಸ್‌ವಿ ಪ್ರಸಾದ ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿ, ಅಗತ್ಯ ವಸ್ತುಗಳ ನೆರವು ನೀಡುವಂತೆ ಮನವಿ ಮಾಡಿದ್ದರು. ಲಾಕ್‌ ಡೌನ್‌ ಪರಿಣಾಮ ಸಾಕಷ್ಟು ಜನರು ಬದುಕು ದೂಡುವುದು ಕಷ್ಟವಾಗುತ್ತಿದೆ. ಕಾಯಿಲೆಯಿಂದ ಬಳಲುತ್ತಿರುವ, ದಿನಗೂಲಿ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ಅದರಲ್ಲೂ ಎಚ್‌ಐವಿ ಪೀಡಿತರು, ವೃದ್ಧರು, ಅನಾಥ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಏನಾದರೂ ಸಹಾಯ ಮಾಡುವಂತೆ ಕೇಳಿದ್ದರು.

ಡಾ| ವಿಎಸ್‌ವಿ ಪ್ರಸಾದ ಅವರ ಮನದೊಳಗೆ ಮೊದಲೇ ತುಡಿಯುತ್ತಿದ್ದ ಸಾಮಾಜಿಕ ಕಳಕಳಿ ಹಾಗೂ ಮಾನವೀಯತೆಗೆ ಈ ಫೋನ್‌ ಕರೆ ಇನ್ನಷ್ಟು ಇಂಬು ನೀಡಿತ್ತು. ನೊಂದವರಿಗೆ ನೆರವು ನೀಡಿಕೆಗೆ ಮುಂದಾಗಲು ಮತ್ತಷ್ಟು ಪ್ರೇರಣೆ ನೀಡಿತ್ತು. ನವೀನ ಪಾರ್ಕ್‌ ಸಂಘದಿಂದ 60 ಸಾವಿರ ರೂ. ಸಂಗ್ರಹಿಸಿ ಅದಕ್ಕೆ 40 ಸಾವಿರ ರೂ. ಸೇರಿಸಿ ಒಂದು ಲಕ್ಷ ರೂ. ವೆಚ್ಚದಲ್ಲಿ ಆಹಾರ ಪೊಟ್ಟಣ ಸಿದ್ಧಪಡಿಸಿ ಹಂಚಿಕೆ ಮಾಡಿದ್ದರು. ನವೀನ ಪಾರ್ಕ್‌ ಸಂಘದ ಅಧ್ಯಕ್ಷರು ಆಗಿರುವ ಡಾ| ವಿಎಸ್‌ವಿ ಪ್ರಸಾದ ಅವರು ಆರಂಭದಲ್ಲಿ ಸಂಘದ ಹೆಸರಿನಲ್ಲಿಯೇ ನೆರವು ಕಾರ್ಯಕ್ಕೆ ಮುಂದಾಗಿದ್ದರು.

Advertisement


ಪ್ರಧಾನಮಂತ್ರಿ – ಮುಖ್ಯಮಂತ್ರಿ ನಿಧಿಗೆ 10 ಲಕ್ಷ ರೂ. ದೇಣಿಗೆ

ಕೋವಿಡ್ ವಿರುದ್ಧ ಹೋರಾಟ, ಪರಿಹಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುವಾಗುವಂತೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸ್ವರ್ಣ ಗ್ರುಪ್‌ನಿಂದ ಡಾ| ವಿಎಸ್‌ವಿ ಪ್ರಸಾದ ಅವರು 10 ಲಕ್ಷ ರೂ. ನೀಡಿದ್ದಾರೆ.

ಪ್ರಧಾನಿಯವರ ಪರಿಹಾರ ನಿಧಿಗೆ 5 ಲಕ್ಷ ರೂ. ಚೆಕ್‌ ಅನ್ನು ಕೇಂದ್ರ ಸಚಿವ ಸುರೇಶ ಅಂಗಡಿ ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5ಲಕ್ಷ ರೂ. ಚೆಕ್‌ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರ ಮೂಲಕ ನೀಡಲಾಗಿದೆ. ಇದಲ್ಲದೆ ರೈಲ್ವೆ ಗುತ್ತಿಗೆದಾರರ ಅಸೋಸಿಯೇಶನ್‌ನಿಂದ 2.5 ಲಕ್ಷ ರೂ. ಚೆಕ್‌ ಅನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ.


ಕಲಾವಿದರ ಕುಟುಂಬಗಳಿಗೆ ಆಸರೆ

ಡಾ| ವಿಎಸ್‌ವಿ ಪ್ರಸಾದ ಅವರು ಸಂಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮಾನವೀಯತೆಯನ್ನು ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತಗೊಳಿಸದೆ, ಧಾರವಾಡ, ಕುಂದಗೋಳ, ಸಂಶಿ, ಕಲಘಟಗಿ ಸೇರಿದಂತೆ ಮಹಾನಗರದ ಸುತ್ತಮುತ್ತಲಿನ ಗ್ರಾಮಗಳಿಗೂ ವಿಸ್ತರಿಸಿದ್ದಾರೆ.

ಲಾಕ್‌ ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ನಗರದ ಫೋಟೋಗ್ರಾಫರ್‌ಗಳಿಗೆ ಅಗತ್ಯ
ಸಾಮಾಗ್ರಿಗಳನ್ನು ಹಂಚಿಕೆ ಮಾಡಿದ್ದಾರೆ. ಕಲೆಯನ್ನೇ ನಂಬಿ ಬದುಕುತ್ತಿದ್ದ 100ಕ್ಕೂ ಹೆಚ್ಚು ಕಲಾವಿದರ ಕುಟುಂಬಗಳನ್ನು ಗುರುತಿಸಿ ಅವರ ಬದುಕಿಗೆ ಆಸರೆಯಾಗಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವ ಕಾರ್ಯ ಗಮನಿಸಿದ್ದ ಕಲಘಟಗಿ ತಹಶೀಲ್ದಾರ್‌ ಸೇರಿದಂತೆ ಕೆಲ ಅಧಿಕಾರಿಗಳು ವಿವಿಧ ಪ್ರದೇಶದಲ್ಲಿನ ಜನರಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಡಾ| ಪ್ರಸಾದ ಅವರು ಕಲಘಟಗಿ ತಾಲೂಕಿನ ವಿವಿಧ ಗ್ರಾಮಕ್ಕೆ 500ಕ್ಕೂ ಹೆಚ್ಚು ಕಿಟ್‌ ವಿತರಣೆ ಮಾಡಿದ್ದಾರೆ.


1,500ಕ್ಕೂ ಹೆಚ್ಚು ಮಾಸ್ಕ್ ವಿತರಣೆ

ಕೋವಿಡ್ ತಡೆ ನಿಟ್ಟಿನಲ್ಲಿ ಜಾಗೃತಿ ಕಾರ್ಯಗಳಲ್ಲಿ ತೊಡಗಿದ್ದ ಸ್ವರ್ಣ ಗ್ರುಪ್‌ನ ವ್ಯವಸ್ಥಾಪಕ ನಿರ್ದೇಶಕ ಡಾ| ವಿಎಸ್‌ವಿ ಪ್ರಸಾದ ಹಾಗೂ ನಿರ್ದೇಶಕಿ ಅನುಶಾ ಪ್ರಸಾದ ಅವರು ಬಡ ಕುಟುಂಬಗಳಿಗೆ 1,500ಕ್ಕೂ ಅಧಿಕ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ.

ನಗರದ ವಿವಿಧ ಕೊಳಗೇರಿಯಲ್ಲಿನ ಜನರಿಗೆ ಮಹತ್ವದ ನೆರವು ನೀಡಿದ್ದು, ಸಾಗರ ಕಾಲೋನಿ, ಜನತಾ ಕ್ವಾರ್ಟರ್ಸ್‌, ಚೇತನಾ ಕಾಲೋನಿ, ಗಾಂಧಿವಾಡ, ಕನ್ಯಾನಗರ, ಅರಳಿಕಟ್ಟಿ ಓಣಿ, ಸಿಮೆಂಟ್‌ ಚಾಳ, ರಾಮನಗರ ಇನ್ನಿತರ ಕಡೆಗಳಲ್ಲಿ ವಿವಿಧ ಆಹಾರ ಧಾನ್ಯಗಳುಳ್ಳ 5,000ಕ್ಕೂ ಅಧಿಕ ಕಿಟ್‌ಗಳನ್ನು ವಿತರಿಸಲಾಗಿದೆ.

10 ದಿನಗಳ ಹಸಿವು ನೀಗಿಸುವಂತಿತ್ತು ಜನರಿಗಿತ್ತ ನೆರವು
ಲಾಕ್ ‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರ ಹಸಿವು ನೀಗಿಸುವುದು ಮೊದಲ ಆದ್ಯತೆ ಎಂಬುದರಿತ ಡಾ| ವಿಎಸ್‌ವಿ ಪ್ರಸಾದ ಅವರು ಆಹಾರ ಧಾನ್ಯಗಳ ಕಿಟ್‌ ವಿತರಣೆಗೆ ಮುಂದಾಗಿದ್ದರು. ಕಿಟ್‌ ಕೇವಲ ನಾಮಕಾವಾಸ್ತೆ ಇರದೆ ಒಂದು ಕುಟುಂಬಕ್ಕೆ ಕನಿಷ್ಠ 8-10 ದಿನಗಳ ಹಸಿವು ನೀಗಿಸುವಂತಿರಬೇಕೆಂಬ ನಿಟ್ಟಿನಲ್ಲಿ ಕಿಟ್‌ ತಯಾರಿಸಿದ್ದರು. ಒಂದು ಕಿಟ್‌ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಅಡುಗೆ ಎಣ್ಣೆ, 1 ಕೆಜಿ ಆಲೂಗಡ್ಡೆ, 250 ಗ್ರಾಂ ಖಾರದ ಪುಡಿ, 1 ಕೆಜಿ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿಗಳಿದ್ದವು.

ಒಂದು ಕಿಟ್‌ ನೀಡಿ ಅಲ್ಲಿಗೆ ಸುಮ್ಮನಾಗದೆ ಅದು ಮುಗಿದಿದೆ ಎಂದು ತಿಳಿಯುತ್ತಿದ್ದಂತೆಯೇ ತಮಗೆ ಕರೆ ಮಾಡಿದರೆ ಮತ್ತೂಂದು ಕಿಟ್‌ ನೀಡುವುದಾಗಿ ಹೇಳಿದ್ದಲ್ಲದೆ, ಸ್ವತಃ ತಮ್ಮ ಮೊಬೈಲ್‌ ಸಂಖ್ಯೆಯನ್ನು ಜನರಿಗೆ ನೀಡಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮಗಳಲ್ಲಿ ಪ್ರಕಟಗೊಂಡ ನೋವಿನ ಸುದ್ದಿಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಕಷ್ಟದಲ್ಲಿದ್ದವರನ್ನು ಹುಡುಕಿಕೊಂಡು ಹೋಗಿ ನೆರವು ನೀಡಿ ಬಂದಿದ್ದಾರೆ.


ನವೀನ ಪಾರ್ಕ್‌, ಗಾಂಧಿವಾಡ, ಚೇತನಾ ಕಾಲೋನಿ, ಮಂಟೂರ ರಸ್ತೆ, ಅರಳಿಕಟ್ಟಿ ಓಣಿ, ಚಂದ್ರಕಲಾ ಟಾಕೀಸ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ದಿನಸಿ ಪೊಟ್ಟಣ ವಿತರಿಸಿದ್ದಾರೆ. ಬೇಡಿಕೆ ಹೆಚ್ಚಾದಂತೆಲ್ಲಾ ಜನರಿಗೆ ತೊಂದರೆಯಾಗಬಾರದು, ಸಾಮಾಜಿಕ ಅಂತರ ಕಾಪಾಡುವುದು ಅಗತ್ಯ ಎನ್ನುವ ಕಾರಣಕ್ಕೆ ಕೂಪನ್‌ಗಳನ್ನು ನೀಡಿ ಕಿಟ್‌ ವಿತರಣೆ ಮಾಡಿದ್ದಾರೆ. ಜನತಾ ಕ್ವಾರ್ಟರ್ಸ್‌ ಸಮುದಾಯ ಭವನದಲ್ಲಿ 500, ನವೀನ ಪಾರ್ಕ್‌ ಸಮುದಾಯ ಭವನ 1 ಸಾವಿರ, ದಿನಪತ್ರಿಕೆ ಹಂಚುವವರಿಗೆ 350 ಪೊಟ್ಟಣಗಳನ್ನು ಹಂಚಿದ್ದಾರೆ.

ಕೋವಿಡ್ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಹಲವು ಕುಟುಂಬಗಳು ಸಮಸ್ಯೆಗೀಡಾಗಿವೆ. ದಿನಗೂಲಿ ನಂಬಿ ಬದುಕುತ್ತಿದ್ದ ಕುಟುಂಬಗಳಿಗೆ ನೆರವಾಗಬೇಕು ಎನ್ನುವ ಕಾರಣಕ್ಕೆ ಅಗತ್ಯ ವಸ್ತುಗಳ ಸಾಮಗ್ರಿಗಳನ್ನು ಹೊಂದಿದ ಕಿಟ್‌ ವಿತರಣೆ ಕಾರ್ಯವನ್ನು ಸ್ವರ್ಣ ಗ್ರೂಪ್‌ ವತಿಯಿಂದ ಕೈಗೊಳ್ಳಲಾಗುತ್ತಿದೆ. ಅಗತ್ಯ ಸಾಮಗ್ರಿಗಳನ್ನು ಕಲ್ಪಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಕಾಳಜಿ ನನ್ನದು.
– ಡಾ| ವಿ.ಎಸ್‌.ವಿ. ಪ್ರಸಾದ, ಎಂಡಿ, ಸ್ವರ್ಣ ಗ್ರುಪ್‌



Advertisement

Udayavani is now on Telegram. Click here to join our channel and stay updated with the latest news.

Next