Advertisement

ಡಾ.ರಾಜೀವ ತಾರಾನಾಥರಿಗೆ ನಾಡೋಜ ಗೌರವ

02:45 PM May 25, 2018 | Team Udayavani |

ಮೈಸೂರು: ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ಈ ಸಾಲಿನ ಗೌರವ ನಾಡೋಜ ಪದವಿಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಖ್ಯಾತ ಸರೋದ್‌ ವಾದಕ ಪಂಡಿತ ಡಾ.ರಾಜೀವ ತಾರಾನಾಥ ಅವರಿಗೆ ಮಂಗಳವಾರ ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು. ಅಂದು ಬೆಳಗ್ಗೆ 11ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ನಿವಾಸದಲ್ಲಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಎಸ್‌. ಘಂಟಿ ಗೌರವ ಪ್ರದಾನ ಮಾಡುವರು.

Advertisement

ರಾಜೀವ ತಾರಾನಾಥರ ಪರಿಚಯ: 1932ರ ಅಕ್ಟೋಬರ್‌ 17ರಂದು ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿ ಜನಿಸಿದ ರಾಜೀವ, ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ನಿಂದ ಬಿ.ಎ (ಆನರ್ಸ್‌) ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್‍ಯಾಂಕ್‌ನಲ್ಲಿ ಪಡೆದಿದ್ದಾರೆ.

ಪೊಯೆಟ್ರಿ ಆಫ್ ಈಲಿಯೆಟ್‌ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿರುವ ರಾಜೀವ ತಾರಾನಾಥರು ಕೆಲ ಕಾಲ ಇಂಗ್ಲಿಷ್‌ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತಾಗೆ ತೆರಳಿ, ಉಸ್ತಾದ್‌ ಅಲಿ ಅಕಬರ್‌ಖಾನ್‌ರ ಶಿಷ್ಯರಾದರು. ನಂತರದಲ್ಲಿ ಪಂಡಿತ್‌ ರವಿಶಂಕರ್‌, ಅನ್ನಪೂರ್ಣಾದೇವಿ, ಪಂಡಿತ್‌ ನಿಖೀಲ್‌ ಬ್ಯಾನರ್ಜಿ ಮತ್ತು ಉಸ್ತಾದ್‌ ಆಶಿಸ್‌ಖಾನ್‌ರ ಮಾರ್ಗದರ್ಶನವನ್ನೂ ಪಡೆದಿದ್ದಾರೆ.

ಸಂಗೀತ ನಿರ್ದೇಶನ: ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಯುರೋಪ್‌, ಯೆಮೆನ್‌, ಅಮೆರಿಕಾ, ಕೆನಡಾ ಮುಂತಾದ ವಿದೇಶಗಳಲ್ಲಿಯೂ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಅಪಾರ ಅಭಿಮಾನಿ ಬಳಗ ಗಳಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರಮಾಸ, ಪೇಪರ್‌ ಬೋಟ್‌ ಹಾಗೂ ಮಲಯಾಳಂನ ಕಾಂಚನಸೀತಾ ಮತ್ತು ಕಡಾವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

1995 ರಿಂದ 2005ರವರೆಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1999-2000 ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ಅಲ್ಲದೇ ಅಖೀಲ ಭಾರತ ಸಂಗೀತ ನಾಟಕ ಅಕಾಡೆಮಿ ಗೌರವ, ಟಿ.ಚೌಡಯ್ಯ ಪ್ರಶಸ್ತಿ ಸೇರಿದಂತೆ ರಾಜ್ಯದ ಹಲವಾರು ಗೌರವ ಪ್ರಶಸ್ತಿಗಳು ಪಂ.ರಾಜೀವ ತಾರಾನಾಥರಿಗೆ ಸಂದಿವೆ.

Advertisement

ಪ್ರಕಟಗೊಂಡಿರುವ ಕೃತಿಗಳು: ರಾಜೀವ ತಾರಾನಾಥರು ಸಂಗೀತದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಮನನ ಮೆಡಿಟೆಷನ್‌, ಬಿಹಾಗ್‌ ಮತ್ತು ಭೈರವಿ ರಾಗಗಳು, ಹಾರ್ಮೋನಿ, ಸಿಂಧುಭೈರವಿ ರಾಗಮಾಲಿಕೆ, ಕಾಫಿರಾಗ್‌ದ ಹಲವು ಮುಖಗಳು, ರಸರಂಗ್‌, ರಿಪ್ಲೆಕ್ಷನ್‌ ಅರೌಂಡ್‌ ನೂನ್‌, ತೋಡಿ ಮತ್ತು ಕಾಫಿರಾಗ್‌ಗಳು, ಡೇ ಬ್ರೇಕ್‌ ಅಂಡ್‌ ಎ ಕ್ಯಾಂಡಲ್‌ ಎಂಡ್‌, ಭಾರತೀಯ ಶಾಸ್ತ್ರೀಯ ಸಂಗೀತ, ರಾಗ ನಟಭೈರೊ, ರಾಗ ಕೌಶಿಭೈರವಿ, ರಾಗ ಚಂದ್ರನಂದನ,

ರಾಗ ಅಹಿರ್‌ಭೈರವ್‌, ರಾಗ ಚಾರುಕೇಸಿ, ದಿ ಮೆಗ್ನಿಫಿಸನ್ಸ್‌ ಆಫ್ ಯಮನ ಕಲ್ಯಾಣ, ಇನ್‌ ದಿ ಮಾಸ್ಟರ್ಸ್‌ ಟ್ರೆಡಿಶನ್‌, ರಾಗ ಬಸಂತ್‌ ಮುಖಾರಿ, ರಾಗ ಕಿರ್ವಾಣಿ, ರಾಗ ಕೋಮಲ್‌ ದುರ್ಗಾ, ರಾಗ ಪುರಿಯಾ ಧನಶ್ರೀ ಮುಂತಾದ ಪ್ರಕಟಣೆಗಳು ಪ್ರಮುಖವಾಗಿವೆ. ಇದಲ್ಲದೇ 1989 ರಿಂದ 1992ರ ಅವಧಿಯಲ್ಲಿ ಫೋರ್ಡ್‌ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್‌-ಅಲ್ಲಾವುದ್ದೀನ್‌ ಘರಾಣಾದ ಸಂಗೀತ ಪ¨œ‌ತಿಗಳ ಕುರಿತು ಸಂಶೋಧನೆ ನಡೆಸಿ ಆ ಘರಾಣಾದ ಬೋಧನೆಗಳ ಕುರಿತಾದ ವಿದ್ವತ್‌ ಪೂರ್ಣ ಗ್ರಂಥವನ್ನು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next