Advertisement

SCDCC: ಡಾ| ರಾಜೇಂದ್ರ ಕುಮಾರ್‌ ಮಾದರಿ ಕಾರ್ಯ: ತಿಮ್ಮಾಪುರ

12:08 AM Dec 01, 2023 | Team Udayavani |

ಪುತ್ತೂರು: ಸರಕಾರಗಳು ಮಾಡಬೇಕಾದ ಕಾರ್ಯವನ್ನು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾಡುತ್ತಿದ್ದಾರೆ. ಶಾಸಕ, ಸಂಸದ ಆಗದೆ, ರಾಜಕಾರಣ ಇಲ್ಲದೆ ಅವರು ಮಾಡಿರುವ ಸೇವೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದು. ಅವರ ಕಾರ್ಯಗಳು ಇಡೀ ರಾಷ್ಟ್ರಕ್ಕೆ ಮಾದರಿ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌, ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ದ.ಕ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಬೆಳಗಿ ಅವರು ಮಾತನಾಡಿದರು.
ನವೋದಯ ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಗಟ್ಟಿಗೊಳಿಸುವ ಕಾರ್ಯವಿಲ್ಲಿ ನಡೆದಿದೆ. ವಯಸ್ಸಿನ ಪರಿಮಿತಿ ಇಲ್ಲದೆ ತಾಯಂದಿರು ಕ್ರೀಡಾಕೂಟದಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ನೀಡಲಾಗಿದೆ ಎಂದು ಪ್ರಶಂಸಿಸಿದರು.

ಪಥಸಂಚಲನ ಉದ್ಘಾಟಿಸಿದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಗ್ರಾಮೀಣ ಮಹಿಳೆಯ ರಿಗೆ ಸ್ವಾವಲಂಬಿ ಬದುಕು ನೀಡಿರುವ ನವೋದಯ ಸ್ವಸಹಾಯ ಸಂಘವು ಜನರಲ್ಲಿ ಆರ್ಥಿಕ ಶಿಸ್ತು ಮೂಡಿಸಿ ನೆಮ್ಮದಿಯ ಬದುಕಿಗೆ ಪೂರಕವಾಗಿ ಹೆಜ್ಜೆ ಹಾಕುತ್ತಿದೆ ಎಂದರು.

ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ, ಗೃಹಲಕ್ಷ್ಮಿಯಡಿ ಮಹಿಳೆಯರಿಗೆ ಬರುತ್ತಿರುವ 2 ಸಾವಿರ ರೂ.ಗಳನ್ನು ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್‌ ಖಾತೆಗೂ ಜಮೆ ಆಗುವಂತೆ ಬೇಡಿಕೆ ಇಡಲಾಗುವುದು ಎಂದರು.

ಈಡೇರಿದ ಆಶಯ
ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಪುರುಷರಿಗೆ ಸರಿಸಮನಾಗಿ ಮಹಿಳೆಯರು ಇರಬೇಕು ಅನ್ನುವ ದೃಷ್ಟಿಯಿಂದ ಸ್ಥಾಪನೆಗೊಂಡ ನವೋದಯ ಸ್ವ ಸಹಾಯ ಸಂಘ ಆ ಆಶಯಕ್ಕೆ ತಕ್ಕಂತೆ ಬೆಳೆದು ನಿಂತಿರುವುದಕ್ಕೆ ಸಂತಸ ತಂದಿದೆ ಎಂದರು.

Advertisement

ಸಮ್ಮಾನ 
ಆರ್‌.ಬಿ. ತಿಮ್ಮಾಪುರ, ಅಶೋಕ್‌ ಕುಮಾರ್‌ ರೈ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ ಕಾವು ಅವರನ್ನು ಸಮ್ಮಾನಿಸಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಆದರ್ಶ ವಿವಿಧೋ ದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ, ದ.ಕ. ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ಎಸಿ ಗಿರೀಶ್‌ ನಂದನ್‌, ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ ಜೈನ್‌, ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿ ಅಧ್ಯಕ್ಷ ಕೆ. ಜೈರಾಜ್‌ ಬಿ. ರೈ, ಡಿಸಿಸಿ ಬ್ಯಾಂಕ್‌ನ ನಿದೇರ್ಶಕರು ವೇದಿಕೆಯಲ್ಲಿದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು ಸ್ವಾಗತಿಸಿ, ಸಿಇಒ ಗೋಪಾಲಕೃಷ್ಣ ಭಟ್‌ ಕೆ. ವಂದಿಸಿದರು. ಶಿಕ್ಷಕ ಬಾಲಕೃಷ್ಣ ನಿರೂಪಿಸಿದರು.

ಆಕರ್ಷಕ ಪಥಸಂಚಲನ

ಹಗ್ಗಜಗ್ಗಾಟ, 100 ಮೀ. ಓಟ ಹಾಗೂ ಗುಂಡು ಎಸೆತ ಸ್ಪರ್ಧೆ ನಡೆಯಿತು. ದ.ಕ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ 15 ಸಾವಿರಕ್ಕೂ ಅಧಿಕ ಮಂದಿಯಿಂದ ಪಥಸಂಚಲನ ನಡೆಯಿತು.

ಕಾಂಗ್ರೆಸ್‌ಗೆ ಆಹ್ವಾನ; ಎಂಎನ್‌ಆರ್‌ ನಿರಾಕರಣೆ
ಸಚಿವ ತಿಮ್ಮಾಪುರ ಮತ್ತು ಶಾಸಕ ಅಶೋಕ್‌ ಕುಮಾರ್‌ ರೈ ಭಾಷಣದಲ್ಲಿ ರಾಜೇಂದ್ರ ಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, “ನೀವು ರಾಜಕೀಯಕ್ಕೆ ಬರುವುದು ಬೇಡ, ಸಹಕಾರ ಕ್ಷೇತ್ರದಲ್ಲೇ ಇರಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ| ರಾಜೇಂದ್ರ ಕುಮಾರ್‌, “ನನಗೆ ಎಲ್ಲ ಪಕ್ಷಗಳಲ್ಲೂ ಆತ್ಮೀಯರಿದ್ದಾರೆ. ಸಹಕಾರ ಕ್ಷೇತ್ರದಲ್ಲೇ ಇದ್ದುಕೊಂಡು ಜನಸೇವೆ ಮಾಡುವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next