Advertisement

ಸಮಾಜ ಪರಿವರ್ತನೆಗೆ ಡಾ|ಹೆಗ್ಗಡೆ ಹೊಸ ಭಾಷ್ಯ

09:56 AM Oct 25, 2019 | Hari Prasad |

ಬೆಳ್ತಂಗಡಿ: ಬುದ್ಧ, ಬಸವಣ್ಣರಂತಹ ದಾರ್ಶನಿಕರು ಜಗತ್ತು ಬದಲಾಯಿಸುವ ಏಕಗುರಿ ಹೊಂದಿ ಕೆಲಸ ಮಾಡಿದ್ದರು. ಅಂತೆಯೇ ಡಾ| ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜ ಬದಲಾವಣೆಯ ಹೊಸ ಭಾಷ್ಯ ಬರೆದಿದ್ದಾರೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು. ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಗುರುವಾರ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 52ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶಕ್ಕೆ ದೊಡ್ಡ ಚರಿತ್ರೆಯಿದ್ದರೂ ಜನರಲ್ಲಿ ವಿಸ್ಮತಿ ಆವರಿಸಿದೆ. ಸಂಘ ರ್ಷವಿದೆ, ಸಮನ್ವಯ ಇಲ್ಲ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿದ್ದ ಏಕಾಗ್ರತೆ ಮತ್ತು ಒಗ್ಗಟ್ಟನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಸಂಧಿಕಾಲದಲ್ಲಿ ಹತ್ತು ಹಲವು ಯೋಜನೆಗಳ ಮೂಲಕ ಡಾ| ಹೆಗ್ಗಡೆ ಬದುಕು ಕಟ್ಟಿಕೊಟ್ಟಿದ್ದಾರೆ. ಅದನ್ನು ಮುನ್ನಡೆಸುವಲ್ಲಿ ಸರಕಾರ ಕೈಜೋಡಿಸಲಿದೆ ಎಂದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಸಣ್ಣ ಗ್ರಾಮದಿಂದ ದೊಡ್ಡ ಪರಿವರ್ತನೆ ಉಂಟುಮಾಡಬಹುದು ಎಂಬುದಕ್ಕೆ ಧ.ಗ್ರಾ. ಯೋಜನೆಯನ್ನು ಜಗತ್ತು ಒಪ್ಪಿಕೊಂಡಿರುವುದೇ ಸಾಕ್ಷಿ ಎಂದರು.

ಸುವರ್ಣ ಸಂಚಯದ ಒಂಬತ್ತು ಅಭಿನಂದನ ಗ್ರಂಥಗಳನ್ನು ಬಿಡುಗಡೆ ಮಾಡಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಹೆಗ್ಗಡೆಯವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ದಾಖಲೆಯೇ ಅಭಿನಂದನ ಗ್ರಂಥಗಳಾಗಿವೆ ಎಂದರು. ಹಂಪಿ ಕನ್ನಡ ವಿ.ವಿ.ಯ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಮಾತನಾಡಿ, ಡಾ| ಹೆಗ್ಗಡೆ ಅವರ ಕಾರ್ಯಯೋಜನೆಯೇ ಮಹಾಗ್ರಂಥ. ಅವುಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪುಸ್ತಕವಾಗಿ ದಾಖಲಿಸಲಾಗಿದೆ ಎಂದರು.

ಸಾಹಿತಿಗಳ, ಬರಹಗಾರರ ಅವಿರತ ಶ್ರಮದಿಂದ ಈ ಮಾಲಿಕೆ ಉತ್ತಮ ರೀತಿಯಲ್ಲಿ ಹೊರ ಬಂದಿದೆ ಎಂದು ಪ್ರಧಾನ ಸಂಪಾದಕ ಡಿ. ಹರ್ಷೇಂದ್ರ ಕುಮಾರ್‌ ಹೇಳಿದರು.

Advertisement

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಎಂಎಲ್‌ಸಿ ಹರೀಶ್‌ ಕುಮಾರ್‌, ಮಾಜಿ ಸಚಿವ ಅಭಯ ಚಂದ್ರ ಜೈನ್‌, ಡಾ| ಮೋಹನ ಆಳ್ವ, ಪ್ರೊ| ಎಸ್‌. ಪ್ರಭಾಕರ್‌, ಡಾ| ಬಿ. ಯಶೋವರ್ಮ, ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಎಸ್‌ಪಿ ಲಕ್ಷ್ಮೀಪ್ರಸಾದ್‌, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಡಿ. ರಾಜೇಂದ್ರ ಕುಮಾರ್‌, ನೀತಾ ರಾಜೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಹೊಸ ಬದುಕಿನತ್ತ ಮುನ್ನಡೆಯಬೇಕು: ಡಾ| ಹೆಗ್ಗಡೆ ಕರೆ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ಕಳೆದು ಹೋದುದರ ಬಗ್ಗೆ ಮರುಗದೆ ಹೊಸ ಬದುಕು ಕಟ್ಟುವತ್ತ ಮುನ್ನಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಜೀವನ ಮರು ರೂಪಿಸುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಈ ಮಳೆಗಾಲ ನಮಗೆ ಪ್ರಕೃತಿ ಮತ್ತು ಜಲ ಸಂರಕ್ಷಣೆಯ ಕರ್ತವ್ಯ ವನ್ನು ನೆನಪಿಸಿಕೊಟ್ಟಿದೆ. ಇದನ್ನು ಅರ್ಥೈಸಿಕೊಂಡು ಜಲ-ಪ್ರಕೃತಿ ಸಾಕ್ಷರರಾಗೋಣ ಎಂದು ಅವರು ಕರೆ ನೀಡಿದರು.

ವಿನೂತನ ಯೋಜನೆಗಳು
ಮೈಸೂರಿನಲ್ಲಿ ಗ್ರಾ. ಯೋಜನೆಯ ಕಚೇರಿ ಕಟ್ಟಡ ಪ್ರಗತಿಯಲ್ಲಿದ್ದು, ಮೈಸೂರಿನಲ್ಲಿ ಧರ್ಮಸ್ಥಳದ ವತಿಯಿಂದ ಹೊಸ ವಸ್ತುಸಂಗ್ರಹಾಲಯ ಪ್ರಾರಂಭಿಸಲಾಗುವುದು. ಉಡುಪಿ, ಹಾಸನ ಆಯುರ್ವೇದ ಕಾಲೇಜುಗಳಿಗೆ 600 ಹಾಸಿಗೆಗಳ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ, ಬೆಂಗಳೂರಿನ ನೆಲಮಂಗಲದಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣ ನಡೆಸಲಾಗುವುದು.

ಅ. 30ರಿಂದ ಗ್ರಾಮಾಭಿವೃದ್ಧಿ ಯೋಜನೆ ವಿಚಾರವಾಗಿ ಬೆಂಗಳೂರಿನಲ್ಲಿ ಜಾಗತಿಕ ಸಮ್ಮೇಳನ ನಡೆಯಲಿದ್ದು 30 ದೇಶಗಳಿಂದ 100 ಪ್ರತಿನಿಧಿಗಳು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಆರ್‌.ಬಿ.ಐ. ಮಾಜಿ ಗವರ್ನರ್‌ ರಂಗರಾಜನ್‌ ಭಾಗವಹಿಸುವರು. ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್‌ ನಿರ್ಮಾಣ ಕಾರ್ಯಕ್ಕೆ ಇದೇ ವರ್ಷ ಚಾಲನೆ ನೀಡಲಾಗುವುದು. ರೈತರಿಗೆ ಭತ್ತ ಮತ್ತು ಧಾನ್ಯ ಕಟಾವು ಮಾಡುವ 50 ಯಂತ್ರಗಳನ್ನು ಖರೀದಿಸಲಾಗುವುದು ಎಂದು ಹೆಗ್ಗಡೆ ತಿಳಿಸಿದರು.

– ಧರ್ಮಸ್ಥಳ ಕ್ಷೇತ್ರದ ನೌಕರರು ನೆರೆ ಪರಿಹಾರ ನಿಧಿಗೆ 2.51 ಲಕ್ಷ ರೂ.ಗಳನ್ನು ಶಾಸಕರಿಗೆ ಹಸ್ತಾಂತರಿಸಿದರು.

– ಸುವರ್ಣ ಸಂಚಯ ಪುಸ್ತಕ ಮಾಲಿಕೆಯ 9 ಪುಸ್ತಕ ಗಳನ್ನು ಬಿಡುಗಡೆಗೊಳಿಸಲಾಯಿತು. ಈ ಕೃತಿಗಳನ್ನು ಪಲ್ಲಕಿಯಲ್ಲಿರಿಸಿ ವೇದಿಕೆಗೆ ತರಲಾಯಿತು.

– ಹೆಗ್ಗಡೆಯವರ ಬೀಡಿನಿಂದ ಗಣ್ಯರನ್ನು ಮೆರವಣಿಗೆಯಲ್ಲಿ ಮಹೋತ್ಸವ ಸಭಾಭವನಕ್ಕೆ ಕರೆತರಲಾಯಿತು.

– ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಡಾ| ಹೆಗ್ಗಡೆ ಅವರಿಗೆ ದೂರವಾಣಿ ಮೂಲಕ ಶುಭಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next