Advertisement

ಹೊಂಗೆ ಮರದಡಿಯ ರಂಗೋಲಿಯ ಚುಕ್ಕಿಗಳು

10:01 AM Nov 18, 2019 | mahesh |

ಯಾಂತ್ರಿಕ ಜೀವನ’, “ಕಾಂಕ್ರೀಟ್‌ ಕಾಡು’ ಎಂಬ ಹುರುಳಿಲ್ಲದ ಅಪವಾದಗಳನ್ನು ಹೊತ್ತಿರುವ ಮುಂಬಯಿಯಲ್ಲಿ ಪಾರ್ಕುಗಳಿಗೇನೂ ಕೊರತೆ ಯಿಲ್ಲ. ನಮ್ಮ ಬಾಂದ್ರಾ ಪರಿಸರದಲ್ಲೇ- ಗುರು ನಾನಕ್‌ ಪಾರ್ಕು, ಆಲ್ಮೀಡಾ ಪಾರ್ಕು, ನೀಲಗಿರಿ ಪಾರ್ಕು, ಪಟವರ್ಧನ ಪಾರ್ಕು, ಜೋಗರ್ಸ್‌ ಪಾರ್ಕು… ಹೀಗೆ ಹಲವು ಪಾರ್ಕುಗಳಿವೆ.

Advertisement

ಪಟವರ್ಧನ ಪಾರ್ಕಿನ ಮೂಲೆಯಲ್ಲಿರುವ ಆಲದಮರದ ಅಗಲ ಮತ್ತು ಅದು ಹೊರಸೂಸುವ ಶಕ್ತಿ ಹೋಲಿಕೆಯಿಲ್ಲದ್ದು. ಅದರ ಕಾಂಡಕ್ಕೆ ಬೆನ್ನೊರಗಿಸಿ, ಸ್ಟೂಲಿನಂತೆ ಬಾಗಿದ ಅದರ ದಪ್ಪ ಬೇರಿನ ಮೇಲೆ ಕುಳಿತಿರೆಂದರೆ ಆಳವಾದ ಶಾಂತತೆಯು ಒಳಗನ್ನೆಲ್ಲ ತುಂಬಿಬಿಡುತ್ತದೆ. ತಮಾಷೆಯೆಂದರೆ ಅಲ್ಲಿ ಕುಳಿತವರಿಗೆ ಪ್ರತಿಸಲವೂ ಏನಾದರೊಂದು ಸಾಕ್ಷಾತ್ಕಾರವಾಗಿಯೇ ಆಗುತ್ತದೆ. ಗಿಡುಗವೊಂದು ಎಲ್ಲಿಂದಲೋ ಹಾರಿಬಂದು ರೆಕ್ಕೆ ಫ‌ಡಫ‌ಡಿಸಿ, ಸಾಮ್ರಾಟನೊಬ್ಬ ಸಿಂಹಾಸನವನ್ನೇರಿ ಕುಳಿತ ಗತ್ತಿನಲ್ಲಿ ಗೆಲ್ಲಿನ ಮೇಲೆ ಆಸೀನವಾಗಬಹುದು. ಚಿಟ್ಟೆಗಳ ಹಿಂಡೊಂದು ಒಂದಕ್ಕೊಂದು ಹೊಲಿದುಕೊಂಡಂತೆ, ಅಲೆಯ ಲಯದಲ್ಲಿ ಹಾರಿ ಬಂದು, ಹೂಗಳ ಮಕರಂದವನ್ನು ಹೀರಿ, ಮತ್ತೆ ಅದೇ ಲಯದಲ್ಲಿ ಹಾರಿ ಮಾಯವಾಗಬಹುದು. ಕೆಲವೊಮ್ಮೆ ಮರದಡಿಯಲ್ಲಿ ನಮಗಾಗಿಯೇ ಕಾಯುತ್ತಿರುವಂತೆ ಬೆಡಗಿನ ಹಕ್ಕಿಗರಿಗಳು ಕಾಣಸಿಗಬಹುದು.

ದಾರಿ ಸಾಗುತ್ತ, ಹೊಂಗೆಮರಗಳ ಕೆಳಗೆ ರಂಗೋಲಿಯ ಚುಕ್ಕಿಗಳಂತೆ ಹರಡಿರುವ ಪುಟ್ಟ ಬಿಳಿ ಹೂಗಳೊಡನೆ ಮಾತುಕತೆಯಾಗುತ್ತದೆ. ಗುಲ್‌ಮೊಹರ್‌ ಹೂಗಳ ಮನಮೋಹಕ ಪ್ರಜ್ವಲತೆಗೆ ತಲೆಬಾಗುತ್ತದೆ. ನೆಟ್ಟನಿಲುವಿನ ಅಶೋಕ ವೃಕ್ಷದ ಕಿರೀಟವನ್ನು ಕಂಡು ಕಣ್ಣರಳುತ್ತವೆ.ರಥದಂತೆ ಹರಡಿ ನಿಂತ ಭವ್ಯ ಬಾದಾಮಿಯ ಮರ, ನಾಗಲಿಂಗ ಪುಷ್ಪಗಳ ಮತ್ತುಬರಿಸುವ ಪರಿಮಳ, ಬೀಸುವ ಗಾಳಿಗೆ ಸುಯ್ಲಿಡುವ ಗಾಳಿಮರಗಳ ಸದ್ದು, ಬೆಳ್ಳಗಿನ ಬೆಟ್ಟದಂತೆ ಕಂಗೊಳಿಸುವ ಕಣಗಿಲ- ಮುಂಬಯಿಯನ್ನು ಕಾಂಕ್ರೀಟು ಕಾಡು ಎಂದವರ್ಯಾರು ಎಂದು ಅಚ್ಚರಿಪಡುವಂತಾಗುತ್ತದೆ.

ನೀಲಗಿರಿ ಪಾರ್ಕಿನ ಪುಟ್ಟ ತೋಟದೊ ಳಗೆ ಕಾಲಿಡುವಾಗ ಅಲ್ಲಿನ ಮಂದ ಕಂಪುಮೂಗು-ಮುಖವನ್ನೆಲ್ಲ ಆವರಿಸಿ, ಕಂಬಗಳಿದ ಸುತ್ತುವರಿಯಲ್ಪಟ್ಟಂತಾಗಿ, ಕನಸೊಂದರಲ್ಲಿ ಸಿಕ್ಕಿಬಿದ್ದ ವಿಲಕ್ಷಣ ಅನುಭವ. ನಡೆಯುವವರಿಗೆ, ಓಡುವವರಿಗೆ, ಬೀಸುಗಾಲು ಹಾಕಿ ಧಾವಿಸುವವರಿಗೆ ಬೇರೆ ಬೇರೆ ಹಾದಿಗಳಿರುವ ಜೋಗರ್ಸ್‌ ಪಾರ್ಕು ಸಮುದ್ರದ ದಂಡೆಯ ಮೇಲೇ ಇರುವುದು ಅದರ ದೊಡ್ಡ ಆಕರ್ಷಣೆ. ಭರತವಿದ್ದರೆ ನೀರು ಪಾರ್ಕಿನ ಪಾಗಾರದವರೆಗೂ ಬಂದೀತು. ಇಳಿತವಿದ್ದರೆ ಜವುಗುಮಣ್ಣಿನ ಕಲ್ಲುಚಪ್ಪಡಿಯ ಎಡೆಎಡೆಗಳಲ್ಲಿ ಬೇರು ಹೆಣೆದುಕೊಂಡಿರುವ ಕಾಂಡ್ಲಾಗಿಡಗಳ ಗೊಂಚಲುಗಳು ಕಂಡಾವು. ನಡಿಗೆಯ ಯಾವುದಾದರೊದು ಸುತ್ತಿನಲ್ಲಿ ದಂಡೆಯ ಬಳಿ ಐದು ನಿಮಿಷಗಳಾದರೂ ನಿಂತು ಸಮುದ್ರವನ್ನೊಮ್ಮೆ ನಿಟ್ಟಿಸಿ ನೋಡುವ ಚಪಲ ಪ್ರತಿಯೊಬ್ಬರಿಗೂ. ಮೇಲೆ ಆಗಸದಲ್ಲಿನ ಮೋಡದ ನಕ್ಷೆ, ಸೂರ್ಯನ ಬೆಳಕಿನಾಟಗಳಿಗೆ ಸರಿಯಾಗಿ ಕಡಲಬಣ್ಣವು ಬದಲಾಗುವ ವಿಸ್ಮಯ- ನಸು ನೀಲಿಬಣ್ಣದಿಂದ ಮರಕತದವರೆಗೆ, ಮತ್ತೆ ಪಚ್ಚೆಪಾಚಿಯ ಬಣ್ಣ, ಅಲ್ಲಿಂದ ದಟ್ಟಕಾಡಿನ ಆನಂದವರ್ಣಕ್ಕೆ, ಕೊನೆಗೆ ಹೊಳೆಯುವ ಕಡುನೀಲಿಗೆ. ಸೂರ್ಯನು ಕೆಲವೇ ಕೆಲವು ನಿಮಿಷಗಳ ಮಟ್ಟಿಗೆ ಮರೆಯಾದನೇ, ಇಡೀ ನೀರ ವಿಸ್ತಾರವೆಂಬುದು, ಇದು ಬೇರೆ ಕಡಲೋ ಎಂಬ ಅನುಮಾನ ಹುಟ್ಟಿಸುವಷ್ಟು, ಸಿಮೆಂಟಿನ ನೀರಸ ಬೂದುಬಣ್ಣಕ್ಕೆ ತಿರುಗಿಯಾಯಿತು. ನೊರೆಗಳ ಟೊಪ್ಪಿ ಮಾತ್ರ ಬೆಳ್ಳಗೆ ಹೊಳೆಯುತ್ತ ಭರವಸೆ ಮೂಡಿಸುತ್ತಿರುತ್ತದೆ.

ನಡಿಗೆ ಮುಗಿಸಿ ಹಿಂದಿರುಗುವಾಗ, ಗರಿಗರಿಯಾದ ನೇಸರ ಬೆಳಕು ಮೇಲೇರಿ ಮರಗಳ ಮೇಲಿಂದ ಹಾಯ್ದು ಬರುವಾಗ, ಸೂರ್ಯನ ಒಂದೊಂದು ಕಿರಣವೂ “ಇವತ್ತಿ’ಗೆ ಜೀವತುಂಬುವ ಮಾಯಾಕೋಲಿನಂತೆ, ಹೊಸದಿನಕ್ಕೆ ಪವಿತ್ರತೆಯನ್ನು ತರುತ್ತಿರುತ್ತದೆ. ಬೀದಿಯ ಮರಗಳ ಚೈತನ್ಯವು ಮುಂದಕ್ಕೆ ನಡೆಸುತ್ತಿದ್ದಂತೆ, ಪ್ರತಿಯೊಂದು ಹೆಜ್ಜೆಯನ್ನೂ ದಿವ್ಯ ಪೆಪ್ಪರಮೆಂಟಿನಂತೆ ಸವಿಯುವಂತಾಗುತ್ತದೆ. ಮರಗಳನ್ನು ಜೀವಸೆಲೆಯ ಪ್ರತೀಕವಾಗಿ ಬಳಸುವುದು ಅದೆಷ್ಟು ಅರ್ಥಗರ್ಭಿತ !

Advertisement

ಮುಂಬಯಿಯ ಹಸಿರು-ಸಮೃದ್ಧಿಯ ಕಥನವು- ಒಂದೆಡೆ ವಿಕಾಸದ ಹಾದಿಯಲ್ಲಿ ಮರಗಳನ್ನು ಕಳಕೊಳ್ಳುತ್ತಲೂ, ಇನ್ನೊಂದೆಡೆ “ಮರಳಿ-ಪ್ರಕೃತಿ’ಗೆ ಎಂದು ಹೊಸಗಿಡಗಳು ನೆಡಲ್ಪಡುತ್ತಲೂ, ಮತ್ತೂಂದೆಡೆ ಪರಿಸರವಾದವೆಂದು ಕಡಿಯುವ ಮರಗಳನ್ನು ಉಳಿಸಿಕೊಳ್ಳುತ್ತಲೂ ಸಾಗಿದೆ. 1998ರ ಗಣತಿಯಂತೆ ಮುಂಬಯಿಯಲ್ಲಿ ಐದು ಲಕ್ಷಕ್ಕೂ ಮಿಕ್ಕಿ ಮರಗಳಿದ್ದುವಂತೆ. ಮೆಟ್ರೊ ರೈಲು, ಪಂಪಿಂಗ್‌ ಸ್ಟೇಷನ್‌, ಮೀತೀ ನದಿಯೋಜನೆ ಎಂದು ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜನರ ಒತ್ತಡ, ವಿರೋಧಗಳಿಗೆ ಮಣಿದು ಮರಗಳನ್ನು ಉಳಿಸಿಕೊಂಡ ಕತೆಗಳೂ ಇವೆ. ಇತ್ತೀಚೆಗೆ ಅರೆಕಾಲನಿಯ ಎರಡು ಸಾವಿರದಷ್ಟು ಮರಗಳು ಬಿಡುಗಡೆಗೊಂಡುದು ಹೀಗೇ. ಕಡಿದ ಪ್ರತೀ ಮರಕ್ಕೂ ಅದರ ಮೂರರಷ್ಟು ಮರಗಳನ್ನು ನೆಡುವ ನಗರಸಭೆಯ “ಟ್ರೀ ಅಥೊರಿಟಿ’ ಯವರ ಯೋಜನೆಯೂ ಇದೆ. ಇನ್ನು, ಖಾಸಗಿಮನೆ/ಕಟ್ಟಡದ ರಚನೆಯಾಗುವಾಗ ಆಹುತಿಯಾಗುವ ಮರಗಳದು ಬೇರೆಯೇ ಕತೆ !

ನಾವಿರುವ ಕಟ್ಟಡವು ಎದ್ದು ನಿಲ್ಲುವ ಮುನ್ನ, ಅಂದರೆ ಈಗ ಮೂರು ದಶಕಗಳ ಹಿಂದೆ ಇಲ್ಲಿನ ಅಂಗಳದಲ್ಲಿ ಮೂವತ್ತಕ್ಕೂ ಮಿಕ್ಕಿಮರಗಳಿದ್ದುವಂತೆ. ಈಗ ಇಲ್ಲಿರುವುದು ಆರೇ ಮರ. ಅದಕ್ಕೂ ಹಿಂದೆ ಅರವತ್ತರ ದಶಕದಲ್ಲಿ ಪುಷ್ಪಾ ಮೌಸಿ ಮದುವೆಯಾಗಿ ಬಂದಾಗಿನ ಕತೆ ಕೇಳಿದರೆ- ನಮ್ಮ ಮನೆಯಿಂದ ಖಾರ್‌ ನಿಲ್ದಾಣದವರೆಗೂ ಭತ್ತದ ಗದ್ದೆ, ತರಕಾರಿ ತೋಟ, ಮರಗಳ ಹಾಡಿಗಳು ಹಬ್ಬಿದ್ದುವಂತೆ! 50-60 ವರ್ಷಗಳ ಹಿಂದಿನ ಆ ದೃಶ್ಯವನ್ನು ಊಹಿಸಿಕೊಳ್ಳುವುದೂ ಇಂದು ಕಷ್ಟ. “ತುc… ತುc…’ ಹೇಗಿದ್ದುದು ಹೇಗಾಯ್ತು ಎಂದು ಎಷ್ಟೇ ಹಳಹಳಿಸಬಹುದಾದರೂ, ಬದಲಾವಣೆ ಎಂಬುದು ಬದುಕಿನ ಸ್ವಾಭಾವಿಕ ಗುಣವಾಗಿರುವಾಗ, ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಗಳಿಗೆ ಅನುಗುಣವಾಗಿ ಇಂತಹ ಬದಲಾವಣೆಗಳ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳಬೇಕಷ್ಟೆ.

ಬೆಳ್ಳಿರೇಖೆಯಂತೆ ಮನಸ್ಸಿಗೆ ಮುದಕೊಡುವ ಬದಲಾವಣೆಗಳೂ ಇಲ್ಲದಿಲ್ಲ. ನಮ್ಮ ರಸ್ತೆಯ ಹಿಂದೆ ಮರಗಿಡಗಳಿಲ್ಲದ ಕೊಂಪೆಯಂತಿದ್ದ ಸ್ಥಳದಲ್ಲಿ ಶಾಲಾ ಶಿಕ್ಷಕನೊಬ್ಬನ ಉಮೇದಿನಲ್ಲಿ ಮೇಲೆದ್ದ ಹಚ್ಚಹಸುರಿನ ನಳನಳಿಸುವ (ಮುಂಬಯಿಯ ಮೊದಲ) ಜಾಗರ್ಸ್‌ ಪಾರ್ಕಿಗಿಂತ ಉತ್ತಮ ಉದಾಹರಣೆ ಬೇರೆ ಯಾವುದು? ಇದಲ್ಲದೆ, 2002ರ ವರೆಗೂ ದುರ್ನಾತದ ಕಸದ ಹೊಲಸು ರಾಶಿ ಎನಿಸಿದ್ದ ಕಾರ್ಟರ್‌ ರಸ್ತೆಯ ಕಡಲತಟದಲ್ಲಿ ಅಲ್ಲಿನ ನಿವಾಸಿಗಳ ಪ್ರಯತ್ನದಿಂದಲೇ ರಚಿತವಾದ ಒಂದೂಕಾಲು ಕಿಲೊಮೀಟರ್‌ ಉದ್ದದ ಕಾಲುದಾರಿ ಹಾಗೂ ಅದರ ಇಕ್ಕೆಲಗಳಲ್ಲೂ ಬೆಳೆಸಿದ ಎತ್ತರೆತ್ತರದ ಮರಗಳು! ಭವಿಷ್ಯದ ಬಗ್ಗೆ ಆಶಾವಾದಿಗಳನ್ನಾಗಿ ಮಾಡಲು ಇವಕ್ಕಿಂತ ಇನ್ನೇನು ಬೇಕು?

ಮಿತ್ರಾ ವೆಂಕಟ್ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next