Advertisement

ಸಂಭ್ರಮದ ಚೆರಗ ಚಲ್ಲುವ ಹಬ್ಬ

05:25 PM Dec 26, 2019 | Naveen |

ದೋಟಿಹಾಳ: ಈ ವರ್ಷ ಹಿಂಗಾರು ಮಳೆ ಉತ್ತಮವಾದ ಕಾರಣ ರೈತರು ಸಂಭ್ರಮ ಮತ್ತು ಸಂತಸದಿಂದ “ಚೆರಗ ಚಲ್ಲುವ ಹಬ್ಬ’ ಆಚರಿಸಿದರು. ಗುರುವಾರ ಸೂರ್ಯ ಗ್ರಹಣ ಇರುವುದರಿಂದ ಕೆಲವರು ಬುಧವಾರ ಹಬ್ಬ ಆಚರಣೆ ಮಾಡಿದರೆ ಮತ್ತು ಇನ್ನೂ  ಲವರು ನಾಳೆ ಗ್ರಹಣ ಮುಗಿದ ನಂತರ ಅಥವಾ ಶುಕ್ರವಾರ ಹಬ್ಬ ಆಚರಣೆ ಮಾಡುತ್ತಿದ್ದಾರೆ ಎಂದು ಈ ಭಾಗದ ರೈತರು ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಎಳ್ಳ ಅಮವಾಸ್ಯೆಯೂ ಪ್ರಮುಖ ಹಬ್ಬವಾಗಿದೆ. ರೈತರು ತಾವೂ ನಂಬಿರುವ ಮಣ್ಣನ್ನು ದೈವಭಾವದಿಂದ ಪೂಜಿಸುವ ಆಚರಣೆ ಇದಾಗಿದೆ. ತಮ್ಮ ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲು ಕೊಡುವ ಭೂಮಿತಾಯಿಯನ್ನು ಪೂಜಿಸುತ್ತಾರೆ. ರೈತರು ತಮ್ಮ ತಮ್ಮ ಹೊಲಗಳಲ್ಲಿ ಎಳ್ಳ ಅಮವಾಸ್ಯೆ ಆಚರಿಸುತ್ತಿರುವುದು ಗ್ರಾಮ ಮತ್ತು ಸುತ್ತಮುತಲು ಗ್ರಾಮಗಳ ಹೊಲಗಳಲ್ಲಿ ಬುಧವಾರ ಕಂಡುಬಂತು. ಮಾರ್ಗಶಿರ ಮಾಸದಲ್ಲಿ ಬರುವ ಎಳ್ಳ ಅಮಾವಾಸ್ಯೆ ಅಪ್ಪಟ ರೈತರ ಹಬ್ಬ. ಹೊಲಗಳಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿ ಮರಗಳಿಗೆ ಸೀರೆ ಉಡಿಸಿ, ಐದು ಕಲ್ಲುಗಳನ್ನು ಇಟ್ಟು ಭೂ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ “ಹುಲ್‌ ಹುಲ್‌ಗೋ ಚಲಾಂಬರಗೋ’ ಎಂದು ಕೂಗುತ್ತ ಮನೆಯಿಂದ ತಂದ ನೈವೇದ್ಯವನ್ನು ಹೊಲದಲ್ಲಿ ಚೆಲುತ್ತಾರೆ. ಇದನೇ ಚರಗ ಚೆಲ್ಲುವುದು ಎಂದು ಕರೆಯುತ್ತಾರೆ. ಬೆಳಗ್ಗೆ ಎದ್ದವರೇ ರೈತರು ಬಂಡಿ ಸಿದ್ಧಗೊಳಿಸಿದರು. ಮನೆಯಲ್ಲಿ ಮಾಡಿದ್ದ ಬಗೆ ಬಗೆಯ ಸಿಹಿಯನ್ನು ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿದರು. ನಂತರ ಸಹ ಪರಿವಾರದೊಂದಿಗೆ ತರಹೇವಾರಿ ಖಾದ್ಯಗಳನ್ನು ಸವಿದು ಹಬ್ಬ ಆಚರಿಸಿದರು. ಶಿರಗುಂಪಿ ಮತ್ತು ಬಳೂಟಗಿ ಗ್ರಾಮದಲ್ಲಿ ಶುಕ್ರವಾರ ಹಬ್ಬ ಆಚರಣೆ ಮಾಡುತ್ತಾರೆ ಎಂದು ರೈತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next