Advertisement

ಹೋಳಿಯಲ್ಲಿ ಬೇಡ ಹಾವಳಿ: ನಾಗರಾಜ

09:17 AM Mar 19, 2019 | Team Udayavani |

ಹುಬ್ಬಳ್ಳಿ: ಸಮಾಜದಲ್ಲಿ ಶೇ. 99.5 ಜನರು  ತ್ತಮರಾಗಿದ್ದಾರೆ. ಆದರೆ ಶೇ. 0.5 ಜನರು ಸಮಾಜದಲ್ಲಿನ ಸ್ವಾಸ್ಥ ಹಾಳು ಮಾಡುತ್ತಿದ್ದಾರೆ. ಅಂತಹ ದುಷ್ಟರಿಗೆ ಧರ್ಮ, ಜಾತಿ, ಭಾಷೆ ಎಂಬುದಿಲ್ಲ. ಅಂಥವರಿಗೆ ನಾವೆಲ್ಲ ಒಂದುಗೂಡಿ ಎಚ್ಚರಿಕೆ ನೀಡಬೇಕಿದೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ ಹೇಳಿದರು.

Advertisement

ಕಾರವಾರ ರಸ್ತೆಯ ಹಳೆಯ ಸಿಎಆರ್‌ ಮೈದಾನದ ಆವರಣದಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೋಳಿ ಹಬ್ಬ ಆಚರಣೆಗೆ ಸ್ವಾತಂತ್ರ್ಯಾವಿದೆ. ಆದರೆ ಸ್ವೇಚ್ಛಾಚಾರವಿಲ್ಲ. ಹುಬ್ಬಳ್ಳಿಯಲ್ಲಿ 2587 ರೌಡಿಶೀಟರ್‌ಗಳಿದ್ದಾರೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ಇಲಾಖೆಯಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಅಧಿಕ ಕೆಎಸ್‌ಆರ್‌ಪಿ ತುಕಡಿ ಹಾಗೂ ಅರೆ ಸೇನಾ ಪಡೆ ಬಳಸಲಾಗುತ್ತಿದೆ. ಹೊರಗಿನಿಂದ 1500ಕ್ಕೂ ಅಧಿಕ ಅಧಿಕಾರಿಗಳು, ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ ಎಂದರು.

ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡದೆ ಹಬ್ಬ ಆಚರಿಸಿ. ರಾಸಾಯನಿಕ ಬಣ್ಣ ಬಳಸಬೇಡಿ. ಒತ್ತಾಯ ಪೂರ್ವಕವಾಗಿ ಯಾರ ಮೇಲೂ ಬಣ್ಣ ಎರಚಬೇಡಿ. ಹಬ್ಬ ಆಚರಣೆ ಸಲುವಾಗಿ 30 ಸಮಿತಿ ರಚಿಸಲಾಗಿದೆ. ಏನಾದರೂ ಅಹಿತಕರ ಘಟನೆ ನಡೆದರೆ ಸಮಿತಿ ಸದಸ್ಯರನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣಾ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲ ಧರ್ಮದ ಗುರುಗಳನ್ನು ಈ ಬಾರಿಯ ಸೌಹಾರ್ದ ಸಭೆಗೆ ಆಹ್ವಾನಿಸಿಲ್ಲ. ಆದರೆ ನೀತಿ ಸಂಹಿತೆಯಲ್ಲಿ ಹಬ್ಬಗಳ ಆಚರಣೆಗೆ ನಿರ್ಬಂಧವಿಲ್ಲ ಎಂದರು.

Advertisement

ಮುಖಂಡರಾದ ಪಿತಾಂಬರಪ್ಪ ಬಿಳಾರ, ಮಹೇಶ ಟೆಂಗಿನಕಾಯಿ, ಅಹ್ಮದ ಬಾಗೇವಾಡಿ, ಸಿಕಂದರ, ಪಾಂಡುರಂಗ ಪಮ್ಮಾರ, ಶೇಖರಯ್ಯ ಮಠಪತಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಗುರುನಾಥ ಉಳ್ಳಿಕಾಶಿ ಮಾತನಾಡಿ, ಎಲ್ಲ ಸಮಾಜದವರು ಒಗ್ಗೂಡಿ ಶಾಂತಿಯುತವಾಗಿ ಹೋಳಿ ಹಬ್ಬ ಆಚರಿಸಲಾಗುವುದು. 

ಅನವಶ್ಯಕ ಸ್ಥಳಗಳಲ್ಲಿ ಬ್ಯಾರಿಕೇಡ್‌ ಹಾಕಬಾರದು. ರಾತ್ರಿ ಹೊತ್ತು ಹಲಗೆ ಬಾರಿಸದಂತೆ ಕ್ರಮ ಕೈಗೊಳ್ಳಬೇಕು. ಮಂಟಪಗಳಲ್ಲಿ ಜೂಜಾಟ ಆಡಲು ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಎಸ್‌ಎಸ್‌ಕೆ ಸಮಾಜದ ವಿಠ್ಠಲ ಲದವಾ ಮಾತನಾಡಿ, ಮುಂದಿನ ವರ್ಷದಿಂದ ಎಲ್ಲ ಸಮಾಜದವರು ಒಗ್ಗೂಡಿಕೊಂಡು ಸೌಹಾರ್ದ ಸಭೆ ಆಯೋಜಿಸಿ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದರು.

ಡಿಸಿಪಿ ಡಾ| ಶಿವಕುಮಾರ ಗುನಾರೆ, ಎಸಿಪಿಗಳಾದ ಎಸ್‌.ಎಂ. ಸಂದಿಗವಾಡ, ಕಟ್ಟಿಮನಿ, ಅಪರ ತಹಶೀಲ್ದಾರ್‌ ಪ್ರಕಾಶ ನಾಶಿ ಮೊದಲಾದವರಿದ್ದರು. ಇನ್ಸ್‌ಪೆಕ್ಟರ್‌ ಗಿರೀಶ ಬೋಜನ್ನವರ ಪ್ರಾರ್ಥಿಸಿದರು. ಎಸಿಪಿ ಎ.ಎಸ್‌. ಭೂಮರಡ್ಡಿ ಸ್ವಾಗತಿಸಿದರು. ಇನ್‌ಸ್ಪೆಕ್ಟರ್‌ ಸಂತೋಷಕುಮಾರ ಡಿ. ನಿರೂಪಿಸಿದರು.
 
ಕಮರಿಪೇಟೆ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ 
ಹುಬ್ಬಳ್ಳಿ: ಹೋಳಿ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಕಮರಿಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶಗಳಲ್ಲಿ ಮಾ. 24ರ ನಡುರಾತ್ರಿಯಿಂದ 26ರ ಬೆಳಗಿನ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಾಳಮ್ಮನ ಅಗಸಿಯಿಂದ ಡಾಕಪ್ಪ ವೃತ್ತ ವರೆಗೆ, ಡಾಕಪ್ಪ ವೃತ್ತದಿಂದ ಕೌಲಪೇಟೆ ಕ್ರಾಸ್‌ ವರೆಗೆ ಹಾಗೂ ಡಾಕಪ್ಪ ವೃತ್ತದಿಂದ ಹಳೇ ಕೆಇಬಿ ಕಚೇರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಈ ಅವಧಿಯಲ್ಲಿ ವಾಹನಗಳಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಬ್ಯಾನರ್‌-ಬಂಟಿಂಗ್‌ ಉಪಯೋಗಿಸುವಂತಿಲ್ಲ. ಸಭೆ, ಸಮಾರಂಭ, ಮೆರವಣೆಗೆ ಅಥವಾ 5ಕ್ಕಿಂತ ಅಧಿಕ ಜನರು ಗುಂಪು ಸೇರುವಂತಿಲ್ಲ. ಮಾರಕಾಸ್ತ್ರ ಹೊಂದುವಂತಿಲ್ಲ. ಸ್ಫೋಟಕ ವಸ್ತುಗಳನ್ನು ಒಯ್ಯುವಂತಿಲ್ಲ, ಶೇಖರಿಸುವಂತಿಲ್ಲ. ಮನುಷ್ಯ ಶವದ ಪ್ರತಿಕೃತಿ/ಪ್ರತಿಮೆಗಳನ್ನು ಪ್ರದರ್ಶಿಸುವಂತಿಲ್ಲ.

ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ
ಅಥವಾ ನಕಲಿ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದನಾತ್ಮಕ, ಉದ್ದೇಶಕಾರಿ ಹಾಡುಗಳು, ಕೂಗಾಟ ಮಾಡುವುದು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವದಾಗಲಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವಂತಿಲ್ಲ. ಇಷ್ಟವಿಲ್ಲದವರ ಮೇಲೆ ಬಣ್ಣ ಹಾಕುವಂತಿಲ್ಲ. ಪುಡಿ ಬಣ್ಣ ಬಳಸಬೇಕು. ಇದನ್ನು ಉಲ್ಲಂಘಿ ಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಆಜ್ಞೆಯು ಅಂತ್ಯಕ್ರಿಯೆ ಮೆರವಣಿಗೆ ಹಾಗೂ ಇತರೆ ಕಾರಣಗಳಿಗಾಗಿ ಅನುಮತಿ ಪಡೆದು ಆಯೋಜಿಸುವ ಕಾರ್ಯಕ್ರಮ, ಮೆರವಣಿಗೆ ಅನ್ವಯಿಸುವದಿಲ್ಲ ಎಂದು ಪೊಲೀಸ್‌ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯದಂಗಡಿಗಳು ಬಂದ್‌ 
ಹುಬ್ಬಳ್ಳಿ: ಹೋಳಿ ಹಬ್ಬದ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಧಾರವಾಡದಲ್ಲಿ ಮಾ. 22ರಂದು ಹಾಗೂ ಹುಬ್ಬಳ್ಳಿಯಲ್ಲಿ ಮಾ.
25ರಂದು ಮದ್ಯದ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವಂತಿಲ್ಲ. ಅವಳಿ ನಗರದಲ್ಲಿ ಮಾ. 21ರಿಂದ 25ರ ವರೆಗೆ ಹೋಳಿ ಹಬ್ಬ ಆಚರಿಸಲಾಗುತ್ತದೆ. ರಂಗ ಪಂಚಮಿಯನ್ನು ಧಾರವಾಡದಲ್ಲಿ ಮಾ. 22ರಂದು ಹಾಗೂ ಹುಬ್ಬಳ್ಳಿಯಲ್ಲಿ 25ರಂದು ಆಚರಿಸಲಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಧಾರವಾಡದಲ್ಲಿ ಮಾ. 22ರ ಬೆಳಗ್ಗೆ 6ರಿಂದ 23ರ ಬೆಳಗ್ಗೆ 6 ಗಂಟೆ ವರೆಗೆ ಹಾಗೂ ಹುಬ್ಬಳ್ಳಿಯಲ್ಲಿ ಮಾ. 25ರ ಬೆಳಗ್ಗೆ 6ರಿಂದ 26ರ ಬೆಳಗ್ಗೆ 6 ಗಂಟೆ ವರೆಗೆ ಎಲ್ಲ ಮದ್ಯದ ಅಂಗಡಿ ಹಾಗೂ ಬಾರ್‌ಗಳನ್ನು ಬಂದ್‌ ಮಾಡಲು ಆದೇಶಿಸಲಾಗಿದೆ. ಅಲ್ಲದೆ ಮದ್ಯ ಮಾರಾಟ, ಸಾಗಾಟ, ಸೇವನೆ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮಕೈ 21ರಂದು ಕಾಮಣ್ಣನ ಪ್ರತಿಷ್ಠಾಪನೆ ಡಿಸಿಪಿ ಡಿ.ಎಲ್‌. ನಾಗೇಶ ಮಾತನಾಡಿ, ಹೋಳಿ ಹಬ್ಬದ ಆಚರಣೆ ನಿಮಿತ್ತ ಮಾ. 21ರಂದು ಕಾಮನ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತವೆ. 23ರಂದು ಹಲಗಿ ಹಬ್ಬ, 25ರಂದು ರಂಗ ಪಂಚಮಿ ಇದೆ. ಹಬ್ಬವು ಶಾಂತಿಯುತವಾಗಿ ನಡೆಯಬೇಕು. ಸಂಘಟಕರು ಕಾರ್ಯಕ್ರಮಗಳನ್ನು ಆಯೋಜಿಸುವಾಗ ಜಿಲ್ಲಾಡಳಿತದ ಪರವಾನಗಿ ಪಡೆಯಬೇಕು. ಹಬ್ಬದ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗುವುದು. ಪಂಚಮಿ ವೇಳೆ ನೀರಿನ ಸಮಸ್ಯೆ ಆಗದಂತೆ ಪಾಲಿಕೆಯೊಂದಿಗೆ ಈಗಾಗಲೇ ಮಾತುಕತೆ ಮಾಡಲಾಗಿದೆ. ಸುರಕ್ಷಿತ ಸ್ಥಳದಲ್ಲಿ ಕಾಮದಹನ ಮಾಡಬೇಕು. ಹಲಗಿ ಹಬ್ಬವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಕಾಮನ ಪ್ರತಿಷ್ಠಾಪಿಸಿದ ಮಂಟಪದಲ್ಲಿ ಜೂಜಾಟಕ್ಕೆ ಅವಕಾಶ ಕೊಡಲ್ಲ. ಅದು ಸಾಮಾಜಿಕ ಅನಿಷ್ಟ. ಪ್ರತಿ ಗಲ್ಲಿಯಲ್ಲೂ
ಪೊಲೀಸ್‌ ಗಸ್ತು ಹೆಚ್ಚಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಹೋಳಿ ಹಬ್ಬದ ವೇಳೆ ತೊಂದರೆ ಆಗದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಕರ್ಕಶ ಶಬ್ದ ಮಾಡುವಂತಹ ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳನ್ನು ಜಫ್ತು ಮಾಡಲಾಗುವುದು.
ಎಂ.ಎನ್‌. ನಾಗರಾಜ, ಹು-ಧಾ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next