Advertisement

ಅಧಿಕಾರಿಗಳ ಶಿಕ್ಷಿಸಲು ಇಲ್ಲ ಅವಕಾಶ!

07:39 AM Jul 12, 2019 | Suhan S |

ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ಅನಧಿಕೃತ ಕಟ್ಟಡಗಳು ಕುಸಿಯುತ್ತಲೇ ಇವೆ. ಇದನ್ನು ತಡೆಯುವುದಕ್ಕೆ ಸರ್ಕಾರ ವಿಫ‌ಲವಾಗಿರುವುದರ ಹಿಂದೆ ಕಾನೂನಿನ ಪರಿಧಿಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಯಾವುದೇ ಅವಕಾಶವಿಲ್ಲದಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಅನಧಿಕೃತ ಕಟ್ಟಡಗಳು ನಿರ್ಮಾಣವಾಗದಂತೆ ತಡೆಯುವಲ್ಲಿ ವಿಫ‌ಲವಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹೊರಡಿಸಿದ್ದ ಕರಡು ಅಧಿಸೂಚನೆ ಹೈಕೋರ್ಟ್‌ನಲ್ಲಿ ತಿರಸ್ಕೃತವಾಗಿತ್ತು. ಇದರಿಂದ ಕಟ್ಟಡ ನಿಯಮ ಉಲ್ಲಂಘನೆ ತಡೆಯುವ ಪ್ರಯತ್ನಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣವಾಗುವಲ್ಲಿ ಅಧಿಕಾರಿಗಳ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ಆದರೆ, ಬಹುಮುಖ್ಯ ಜವಾಬ್ದಾರಿಯನ್ನು ಹೊಂದಿರುವ ಅಧಿಕಾರಿಗಳಿಗೆ ಕೆಎಂಸಿ ಕಾಯ್ದೆಯಲ್ಲಿ ಯಾವುದೇ ಶಿಕ್ಷೆ ಇಲ್ಲ! ಹೀಗಾಗಿಯೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸು ತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ‘ಕೆಎಂಸಿ ಕಾಯ್ದೆಗೆ (ಬೈಲಾ) ತಿದ್ದುಪಡಿ ತರಬೇಕು. ಅಧಿಕಾರಿಗಳನ್ನು ತಪ್ಪಿಗೆ ಅಧಿಕಾರಿಗಳನ್ನೂ ಗುರಿಯಾಗಿ ಸಬೇಕು’ ಎಂದು ವಕೀಲ ಉಮಾಪತಿ ಎಸ್‌, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಇದಕ್ಕೆ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಮೂರು ತಿಂಗಳ ಕಾಲಾ ವಕಾಶ ನೀಡಿತ್ತು. ಇದಾದ ಮೇಲೆ ಸರ್ಕಾರ ಕರಡು ನಿಯಮಗಳನ್ನು ರೂಪಿಸಿ ಅಧಿಸೂಚನೆ ಪ್ರಕಟಿಸಿತ್ತು. ‘ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ನಿರ್ದಷ್ಟವಾಗಿ ಯಾವ ಕಾರಣಕ್ಕೆ ಅಧಿಕಾರಗಳಿಗೆ ಶಿಕ್ಷೆನೀಡಬೇಕು ಎನ್ನುವುದು ಸ್ಪಷ್ಟವಾಗಿಲ್ಲ ಮತ್ತು ಇದರಲ್ಲಿರುವ ದೋಷಗಳನ್ನು ಸರಿಪಡಿಸಿ ಮತ್ತೂಮ್ಮೆ ಕರಡು ಸಿದ್ಧಪಡಿ ಸುವಂತೆ ಹೈಕೋರ್ಟ್‌ ಆದೇಶಿಸಿದ್ದು, ಇದು ಆ.8 ರಂದು ವಿಚಾರಣೆಗೆ ಬರಲಿದೆ’ ಎಂದು ವಕೀಲ ಉಮಾಪತಿ ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣದಲ್ಲಿ ಎರಡು ರೀತಿಯ ಅನುಮತಿಗಳನ್ನು ನೀಡಲಾಗುತ್ತದೆ. 15 ಮೀಟರ್‌ ಅಥವಾ ಅದಕ್ಕಿಂತಲೂ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಕಚೇರಿಯಿಂದ ಮತ್ತು 15 ಮೀಟರ್‌ಗಿಂತಲೂ ಚಿಕ್ಕ ಕಟ್ಟಡಗಳಿಗೆ ವಲಯದ ಕಾರ್ಯಾಲಯದಲ್ಲಿ ನಗರ ಯೋಜನಾಧಿಕಾರಿ ಮತ್ತು ಜಂಟಿ ಆಯುಕ್ತರು ಅನುಮತಿ ನೀಡುತ್ತಾರೆ.

ಈ ಎರಡೂ ಅನುಮತಿ ಪ್ರಕ್ರಿಯೆಯಲ್ಲಿ ಕಟ್ಟಡ ಮಾಲೀಕ ಮತ್ತು ಸ್ಟ್ರಕ್ಚರಲ್ ವಿನ್ಯಾಸಕಾರರಿಂದ ಕಾನೂನು ಪ್ರಕಾರ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಬಗ್ಗೆ ಬಾಂಡ್‌ ಪಡೆದುಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ. ಈ ಹಂತದಲ್ಲಿ ನಿಯಮಾನುಸಾರ ಕಟ್ಟಡ ನಿರ್ಮಾಣವಾಗುತ್ತಿದೆಯೇ, ಇಲ್ಲವೇ ಎಂಬ ಬಗ್ಗೆ ಬಿಬಿಎಂಪಿ ಎಂಜಿನಿಯರ್‌ಗಳು ಪರಿಶೀಲಿಸಬೇಕು. ಆದರೆ, ಇದು ಸರ್ಮಪಕವಾಗಿ ಆಗುತ್ತಿದೆಯೇ ಎನ್ನುವ ಪ್ರಶ್ನೆ, ಪ್ರತಿ ಬಾರಿ ಕಟ್ಟಡ ದುರಂತ ಸಂಭವಿಸಿದಾಗಲೂ ಮುನ್ನಲೆಗೆ ಬರುತ್ತಿದೆ.

Advertisement

ತಿದ್ದುಪಡಿ ಕರಡಿನಲ್ಲಿ ಸ್ಪಷ್ಟತೆ ಕೊರತೆ: ತಪಿತಸ್ಥ ಅಧಿಕಾರಿಗಳ ವಿರುದ್ಧವೂ ಕಾನೂನಿನಡಿ ಕ್ರಮ ತೆಗೆದು ಕೊಳ್ಳುವ ಉದ್ದೇಶದಿಂದ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್‌ (ಕೆಎಂಸಿ) ಕಾಯ್ದೆ 1976ಕ್ಕೆ ತಿದ್ದು ಪಡಿ ತರಲು ಸರ್ಕಾರ ಮುಂದಾಗಿತ್ತು. 2 ಸಾವಿರ ರೂ. ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸುವಂತೆ ಕರಡು ನಿಯಮ ರೂಪಿಸಿ 2018ರ ನವೆಂಬರ್‌ನಲ್ಲಿ ಅಧಿಸೂಚನೆ ಪ್ರಕಟಿಸ ಲಾಗಿತ್ತು. ಇದರಲ್ಲಿ 52 ಬಗೆಯ ಉಲ್ಲಂಘನೆಗಳಿಗೆ ಶಿಕ್ಷೆ ವಿಧಿಸಲು ಕರಡಿನಲ್ಲಿ ಅವಕಾಶವನ್ನೂ ನೀಡಲಾಗಿತ್ತು. ಆದರೆ, ಇಂತಹ ಮಹತ್ವದ ನಿಯಮ ವನ್ನೇ ಸ್ಪಷ್ಟವಾಗಿ ರೂಪಿಸದೆ ಇರುವುದರ ಹಿಂದೆ ಅಧಿಕಾರಿಗಳ ಒತ್ತಡವಿದೆಯೇ ಎನ್ನುವ ಗುಮಾನಿ ಮೂಡುತ್ತಿದೆ.

ಆಯುಕ್ತರ ಆದೇಶವೇನಾಯ್ತು?: ನಿರ್ಮಾಣ ಹಂತದ ಕಟ್ಟಡಗಳು ನಿಯಮ ಬದ್ಧವಾಗಿವೆಯೇ, ಇಲ್ಲವೇ ಎಂಬ ಬಗ್ಗೆ ವರದಿ ನೀಡಬೇಕು ಎಂದು ಒಂದು ವರ್ಷದ ಹಿಂದೆಯೇ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಜಂಟಿ ಆಯುಕ್ತರಿಗೆ ಆದೇಶ ನೀಡಿದ್ದರು. ವಾರ್ಡ್‌ ಎಂಜಿನಿಯರ್‌ಗಳು ಜಂಟಿ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಆದರೆ, ಈ ವರದಿ ಸಲ್ಲಿಕೆಯೇ ಈಗ ಪ್ರಶ್ನೆಯಾಗಿ ಉಳಿದಿದೆ. ವರದಿ ನೀಡಿದ್ದರೆ ಲೋಪ ಆಗುತ್ತಿರುವುದೇಕೆ? ವರದಿಯನ್ನೇ ನೀಡದೆ, ಆಯುಕ್ತರ ಮಾತಿಗೂ ಬೆಲೆಕೊಡದೆ ಅಧಿಕಾರಿಗಳು ಅಗೌರವ ತೋರುವ ರೀತಿ ವರ್ತಿಸುತ್ತಿದ್ದಾರಾ, ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಾಕ್ಸ್‌ಟೌನ್‌ನ ಮಾರುತಿನಗರದಲ್ಲಿ ಎರಡು ಕಟ್ಟಡಗಳ ಕುಸಿತದಿಂದ ಐವರು ಮೃತಪಟ್ಟ ಪ್ರಕರಣದ ಆರೋಪಿಗಳ ಬಂಧನಕ್ಕೆ ಪುಲಕೇಶಿನಗರ ಠಾಣೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಘಟನೆ ನಡೆದ ದಿನದಿಂದ ನಿರ್ಮಾಣಹಂತದ ಕಟ್ಟಡ ಮಾಲೀಕರಾದ ಮೊಹಮದ್‌ ಶೋಯೆಬ್‌ ಎ ಹಮೀದ್‌ ಮತ್ತು ಮೊಹಮ್ಮದ್‌ ಇಮ್ತಿಯಾಜ್‌ ಎ ಹಮೀದ್‌, ಗುತ್ತಿಗೆದಾರ ಸೈಯದ್‌, ಕಟ್ಟಡದ ವಾಸ್ತುಶಿಲ್ಪಿ ಬಿ.ಎಂ.ಶ್ರೀಧರ ತಲೆಮರೆಸಿಕೊಂಡಿದ್ದಾರೆ. ಜತೆಗೆ ಪಕ್ಕದ ಕಟ್ಟಡ ಹಾಗೂ ಸಾಯಿ ಅದಿ ಅಮಲಾಲ್ ಕಟ್ಟಡದ ಮಾಲೀಕರಾದ ಸಿ.ಎ.ರುದ್ರಾಣಿ, ವಾಸ್ತುಶಿಲ್ಪಿ ಕೆ.ರವಿಕುಮಾರ್‌ ಕೂಡ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೂಂದೆಡೆ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ ಅದರ ಹಿಂಭಾಗದಲ್ಲಿದ್ದ ವಾಟರ್‌ ಟ್ಯಾಂಕ್‌ ಕೂಡ ಹಾನಿಗೊಳಗಾಗಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಗುರುವಾರ ವಾಟರ್‌ ಟ್ಯಾಂಕ್‌ ನೆಲಸಮ ಮಾಡಿದ್ದಾರೆ.

ಕುಸಿದಿರುವ ಎರಡೂ ಕಟ್ಟಡಗಳ ಕೆಡವಲು ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲನೆ ನಡೆಸಲಾಗಿದೆ. ಜತೆಗೆ, ಸಾಯಿ ಅಪಾರ್ಟ್‌ಮೆಂಟ್‌ನಲ್ಲಿನ ವಸ್ತುಗಳನ್ನು ನಿವಾಸಿಗಳು ಪಡೆದುಕೊಳ್ಳಲು ಅವಕಾಶ ನೀಡಿದ್ದು, ಶುಕ್ರವಾರ ಎರಡೂ ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಕೆಪಿಎಂಸಿ ಕಾಯ್ದೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದಿದೆ. ಆದರೆ, ಅಧಿಕಾರಿಗಳಿಗೆ ಯಾವ ರೀತಿಯ ಶಿಕ್ಷೆಯನ್ನು ನೀಡಬೇಕು ಎಂಬ ಸ್ಪಷ್ಟತೆ ಇಲ್ಲ. ಇದರಿಂದ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಹೀಗಾಗಿ, ಕಟ್ಟಡಗಳು ನಿಯಮ ಬದ್ಧವಾಗಿಲ್ಲದಿದ್ದರೂ, ಅಧಿಕಾರಿಗಳು ಗಮನ ನೀಡುತ್ತಿಲ್ಲ. ನ್ಯಾಯಾಲಯದ ಮೇಲೆ ಭರವಸೆ ಇದೆ. ತಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ● ಉಮಾಪತಿ ಎಸ್‌, ಅರ್ಜಿದಾರ ವಕೀಲ
● ಹಿತೇಶ್‌ ವೈ
Advertisement

Udayavani is now on Telegram. Click here to join our channel and stay updated with the latest news.

Next