Advertisement

ಕರ ವಸೂಲಿ ನಿರ್ಲಕ್ಷಿಸಬೇಡಿ

01:42 PM Nov 26, 2019 | Suhan S |

ಲಿಂಗಸುಗೂರು: ಗ್ರಾಮೀಣ ಭಾಗದ ಅಭಿವೃದ್ಧಿಗೆ ಕರ ವಸೂಲಿ ಅಗತ್ಯವಾಗಿದೆ. ಹೀಗಾಗಿ ಕರ ವಸೂಲಿಯಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ ಎಂದು ಶಾಸಕ ಡಿ.ಎಸ್‌.ಹೂಲಗೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಪಂಚಾಯಿತಿಗೆ ಕರ ವಸೂಲಿಗಾಗಿ ಗುರಿ ನೀಡಲಾಗಿದೆ. ಆದರೆ ಕರ ವಸೂಲಿಗೆ ಪಿಡಿಒಗಳು ಆಸಕ್ತಿ ತೋರುತ್ತಿಲ್ಲ, ಕರ ವಸೂಲಿಯಾಗದಿದ್ದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ. ಗ್ರಾಮದ ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡಬಾರದು. ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡಬೇಕು. ನಿಮ್ಮ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ತಪ್ಪುಗಳನ್ನು ಸರಿಪಡಿಸಿಕೊಂಡು ಕರ್ತವ್ಯ ನಿಭಾಯಿಸಿ ಎಂದು ಆನ್ವರಿ ಪಿಡಿಒಗೆ ಸೂಚನೆ ನೀಡಿದರು.

ತೆರಿಗೆ ಸಂಗ್ರಹ ನಿರೀಕ್ಷೆಗಿಂತ ಕಡಿಮೆಯಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ್ಯ ತೋರಿದರೆ ನಿಮ್ಮ ವಿರುದ್ಧ ಕ್ರಮ ಅನಿವಾರ್ಯವಾಗುತ್ತದೆ. ಯಾವುದೇ ಕಾಮಗಾರಿ ಬಗ್ಗೆ ಕೇಳಿದರೆ ಮಾಡಬೇಕು ಅಂತ ಹೇಳ್ತಿರಿ ಹಾಗಾದರೆ ಎಷ್ಟು ಕಾಮಗಾರಿ ಮುಗಿದಿವೆ. ನೀವು ಹೇಳಿದ್ದನ್ನು ಕೇಳಿಕೊಂಡು ಹೋಗಲು ನಾವು ಇಲ್ಲಿಗೆ ಬಂದಿಲ್ಲ, ಪ್ರಗತಿ ವರದಿ ಬೇಕು. ಸಭೆಗೆ ಬರುವಾಗ ಸಮಗ್ರ ಮಾಹಿತಿ ತರಬೇಕೆಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪಿಡಿಒಗಳಿಗೆ ಸೂಚಿಸಿದರು.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 2018ರ ಅನುದಾನ ಇನ್ನೂ ಖರ್ಚು ಮಾಡಿಲ್ಲ, ತಾತ್ಸಾರ ಮಾಡುವುದು ಸರಿಯಲ್ಲ ಡಿಸೆಂಬರ್‌ ಅಂತ್ಯದೊಳಗೆ ಹಳೆಯ ಅನುದಾನ ಖರ್ಚು ಮಾಡಿ ವರದಿ ಸಲ್ಲಿಸಬೇಕು. 2019-20ನೇ ಸಾಲಿನ ಅನುದಾನವನ್ನು ಮಾರ್ಚ್‌ ಅಂತ್ಯದೊಳಗೆ ಖರ್ಚು ಮಾಡುವಂತೆ ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ಜಿಪಂ ಸದಸ್ಯರಾದ ಬಸನಗೌಡ ಕಂಬಳಿ, ಸಂಗಣ್ಣ ದೇಸಾಯಿ, ರೇವತಿ ಚಂದ್ರಶೇಖರ, ತಾಪಂ ಇಒ ಪವನಕುಮಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next