Advertisement

ಯಾರನ್ನೂ ಅವಗಣಿಸದಿರಿ

01:56 AM Feb 17, 2020 | Sriram |

ನಾವು ಕಾಲ ಕಸಮಾಡಿ ಬಿಸಾಡುವ ಹಾಳೆಯೇ ಮುಂದೊಂದು ದಿನ ಗಾಳಿಪಟವಾಗಿ ಮೇಲೆ ಹಾರಬಹುದು. ಯಾರ ಶಕ್ತಿಯನ್ನೂ ಅವಗಣನೆ ಮಾಡುವುದು ಸರಿಯಲ್ಲ. ಜೀವನದಲ್ಲಿ ನಾವಂದುಕೊಂಡದ್ದು ನಡೆಯುವುದು ತೀರಾ ವಿರಳ. ಕೆಲವೊಮ್ಮೆ ನಾವು ಕನಸು ಮನಸ್ಸಿನಲ್ಲೂ ಊಹಿಸದೇ ಇರುವಂಥ ಘಟನೆಗಳು ನಡೆದು ನಮ್ಮ, ನಂಬಿಕೆ, ನಿರೀಕ್ಷೆ, ಅಳತೆ ಕೋಲುಗಳನ್ನು ಮುರಿದು ಹಾಕುವಂಥ ಘಟನೆಗಳು ನಡೆದುಬಿಡುತ್ತವೆ. ಕೆಲವೊಮ್ಮೆ ನಾವು ಈ ವ್ಯಕ್ತಿಯಿಂದ ಎನೂ ಸಾಧ್ಯವೇ ಇಲ್ಲ ಎಂದು ಹಿಯಾಳಿಸಿ ನಗುತ್ತೇವೆ ಮುಂದೋದು ದಿನ ಅವರು ತಮ್ಮ ಸಾಧನೆ ಮೂಲಕ ನಮ್ಮ ಕುಹಕ ಮಾತಿಗೆ ಉತ್ತರ ನೀಡುತ್ತಾರೆ ಎನ್ನುವುದನ್ನು ನಾವು ಆ ಕ್ಷಣಕ್ಕೆ ಮರೆತಿರುತ್ತೇವೆ.

Advertisement

ಜೀವನದಲ್ಲಿ ಎಲ್ಲರಿಗೂ ಅವರದೇ ಆದ ಸಾಮರ್ಥ್ಯ, ಕೌಶಲ, ವೈಶಿಷ್ಟé ಇರುತ್ತದೆ. ಅದನ್ನು ಗೌರವಿಸುವ ಉದಾರ ಗುಣ ಪ್ರತಿಯೊಬ್ಬರಲ್ಲಿಯೂ ಇರಬೇಕಾದ ಮುಖ್ಯ ಅಂಶ. ನಾನು ಹತ್ತನೇ ತರಗತಿ ಓದುವಾಗ ನನ್ನ ಸಹಪಾಠಿ ಮಂಜ ಇದಕ್ಕೆ ಒಂದು ಉದಾಹರಣೆ. ಆತ ವಿಜ್ಞಾನ ವಿಷಯದಲ್ಲಿ ಯಾವಾಗಲೂ ಹಿಂದೆ ಬೀಳುತ್ತಿದ್ದ. ತರಗತಿಯಲ್ಲಿ ನಡೆಯುವ ಕಿರು ಪರೀಕ್ಷೆಗಳಲ್ಲಿ ಸದಾ ಅನುತ್ತೀರ್ಣನಾಗುತ್ತಿದ್ದ. ಅದಕ್ಕೆ ಕಾರಣ ವಿಜ್ಞಾನ ವಿಷಯದಲ್ಲಿರುತ್ತಿದ್ದ ರಸಾಯನಿಕ ಸೂತ್ರಗಳು, ಕ್ಲಿಷ್ಟಕರವಾದ ವಿಜ್ಞಾನಿಗಳ ಹೆಸರು. ಶಾಲೆಯಿಂದ ಇಬ್ಬರು ಮನೆ ದಾರಿ ಹಿಡಿದಾಗ ದಿನವೂ ಈ ವಿಜ್ಞಾನಿಗಳು ಮತ್ತವರ ಸಂಶೋಧನೆಯ ಬಗ್ಗೆ ಸುಸಂಸ್ಕೃತದಲ್ಲಿ ಗುಣಗಾನ ಮಾಡುತ್ತಿದ್ದ. ಹೀಗೇ ದಿನ ಕಳೆದು ಪೂರ್ವಭಾವಿ ಪರೀಕ್ಷೆ ಬಂದೆ ಬಿಟ್ಟಿತು. ಮಂಜನ ದುರದೃಷ್ಟವೋ, ಸತ್ವ ಪರೀಕ್ಷೆಯೋ ಮೊದಲ ದಿನವೇ ವಿಜ್ಞಾನ ಪರೀಕ್ಷೆ ಬರಬೇಕೆ. ಪರೀಕ್ಷೆ ಮುಗಿದು ಅದರ ಮೌಲ್ಯ ಮಾಪನವೂ ಆಗಿ ನಮ್ಮ ಚಿದಾನಂದ ಮೇಷ್ಟ್ರು ಎಂದಿನಂದೆ ಉತ್ತರ ಪತ್ರಿಕೆಗಳ ಬಂಡಲ್‌ ಹಿಡಿದು ಗಂಭೀರವಾಗಿ ತರಗತಿಯ ಒಳಬಂದು ಒಬ್ಬೊಬ್ಬರದ್ದಾಗಿ ಅಂಕಗಳನ್ನು ಹೇಳಲು ಪ್ರಾರಂಭಿಸಿದರು. ಪ್ರಶ್ನೆಪತ್ರಿಕೆ ತುಂಬಾ ಕಷ್ಟಕರವಾಗಿದ್ದ ಕಾರಣ ತರಗತಿಯಲ್ಲಿ ಎಲ್ಲರಲ್ಲೂ ಭಯವಿತ್ತು. ಆದರೇ ಮಂಜ ಮಾತ್ರ ಅವತ್ತು ಯಾವುದೇ ಭಯವಿಲ್ಲದೇ ಪ್ರಸನ್ನನಾಗಿಯೇ ಇದ್ದ. ತರಗತಿಯ ಒಟ್ಟು 52 ವಿದ್ಯಾರ್ಥಿಗಳಲ್ಲಿ ಪಾಸಾಗಿದ್ದು ಕೇವಲ 5 ಜನ ಅದರಲ್ಲಿ ಮಂಜ ಕೂಡ ಇದ್ದ ಸಾಲದಕ್ಕೆ ಎರಡನೇ ಸ್ಥಾನಕೂಡ ಪಡೆದಿದ್ದ. ಅವತ್ತು ಅವನನ್ನು ಕಂಡು ಗಹಗಹಿಸಿ ನಗುತ್ತಿದ್ದ ಎಲ್ಲರೂ ತಮ್ಮ ತಪ್ಪಿನ ಅರಿವಾಗಿ ತಲೆತಗ್ಗಿಸಿ ಚಪ್ಪಾಳೆ ತಟ್ಟಿದ್ದರು. ಅವತ್ತು ನಾನು ಕಂಡುಕೊಂಡ ಸಾರ್ವಕಾಲಿಕ ಸತ್ಯ ಯಾರನ್ನೂ ಅವಗಣಿಸ ಬಾರದು. ಯಾರು ಅವಮಾನ, ಅಪಹಾಸ್ಯಕ್ಕೆ ಒಳಗಾಗುತ್ತಾರೋ ಅವರೇ ಮುಂದೊಂದು ದಿನ ಸಾಧನೆಯ ರಂಗ ಪ್ರವೇಶ ಮಾಡಿರುತ್ತಾರೆ.

- ಶಿವಾನಂದ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next