Advertisement

ಸಾಂವಿಧಾನಿಕ ಶಿಥಿಲತೆ ಒದಗಿ ಬಾರದಿರಲಿ

09:30 AM Feb 28, 2020 | mahesh |

ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ, ಈ ತೆರನಾದ ಹೋರಾಟದಲ್ಲಿ ರಾಷ್ಟ್ರ ಪ್ರೇಮ ಎಂಬುದು ಮುದುಡಿ ಹೋಗಲಾರಂಭಿಸುತ್ತದೆ. ಸಾಂವಿಧಾನಿಕ ತತ್ವ, ಸತ್ವ ಕುಸಿಯುತ್ತದೆ. ಕೇಂದ್ರ-ರಾಜ್ಯಗಳ ಉತ್ತಮ ಸಂಬಂಧ ಕಲುಷಿತಗೊಳ್ಳುತ್ತದೆ.

Advertisement

ಪ್ರಚಲಿತ ಪೌರತ್ವ ಕಾಯಿದೆ ತಿದ್ದುಪಡಿಯ ಬಗೆಗಿನ ಸಂಘರ್ಷದ ವಿದ್ಯಮಾನ ಭಾರತ ಸಂವಿಧಾನದ ತಳಪಾಯವನ್ನೇ ಅಪಾಯಕಾರಿ ರೀತಿಯಲ್ಲಿ ಕಂಪನಗೊಳ್ಳುವಂತೆ ಮಾಡುತ್ತಿದೆ. ಸ್ವತಂತ್ರ ಭಾರತದ ರಾಜ್ಯಾಂಗ ಘಟನೆಯ ಮೂಲ ಚಿಂತನೆ ಕೇಂದ್ರ-ರಾಜ್ಯಗಳ ಸೌಹಾರ್ದಯುತ ಸಹಕಾರಿ ಸಂಯುಕ್ತ ರಾಜ್ಯ ಪದ್ಧತಿ (Cooperative Federalism) ಅಥವಾ ಪ್ರಗತಿಯ ಚಕ್ರ ಪರಿಭ್ರಮಣೆಯ ಬಗೆಗಿನ ಸ್ಪರ್ಧಾತ್ಮಕ ಸಂಯುಕ್ತ ರಾಜ್ಯಪದ್ಧತಿ (Competitive Federalism) ಆದರೆ ನಾವು ನೋಡನೋಡುತ್ತಿದ್ದಂತೆಯೇ, ರಾಷ್ಟ್ರಮಟ್ಟದಲ್ಲಿ ಗಂಭೀರ ಘಟನಾವಳಿಗಳು ತೆರೆದುಕೊಳ್ಳುತ್ತಿವೆ. ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಅತಿರೇಕದಲ್ಲಿ ಸಂಘರ್ಷದ ಸಂಯುಕ್ತ ರಾಜ್ಯ ಪದ್ಧತಿಯ (Conflicting Federalism) ಪ್ರಪಾತದೆಡೆಗೆ ನಡಿಗೆ ಆರಂಭವಾಗಿದೆ. ನಮ್ಮ ಸಂವಿಧಾನ ತನ್ನ ಪ್ರಥಮ ವಿಧಿಯಲ್ಲೇ ವಿಧಿಸುವ ಸುಂದರ ರಾಷ್ಟ್ರೀಯ ಹಂದರ ವ್ಯಾಖ್ಯೆಯಿದು  ಇಂಡಿಯಾ ಅಂದರೆ ಭಾರತ ರಾಜ್ಯಗಳ ಒಕ್ಕೂಟವಾಗಿರುತ್ತದೆ. ((India that is Bharath Shall be Union of States).

ಪ್ರತಿಯೊಂದು ರಾಷ್ಟ್ರದಂತೆ ನಮ್ಮಲ್ಲಿನ ಸಾಂವಿಧಾನಿಕತೆ ಕೂಡಾ ಶಾಂತಿಯುತ ಸಹಬಾಳ್ವೆಗೆ ಪೂರಕ, ಪ್ರೇರಕವಾಗಿರಬೇಕು ಎಂಬುದೇ ಮೂಲ ಆಶಯ. ಆ ನಿಟ್ಟಿನಲ್ಲೇ 1950 ಜನವರಿ 26ರಂದು ಉದ್ಘೋಷಿತ ವಿಶ್ವದ ಅತೀ ಸುಧೀರ್ಘ‌ ಎಂಬ ಹೆಗ್ಗಳಿಕೆಯ ನಮ್ಮ ಸಂವಿಧಾನ ಯಾವುದೇ ಕೇಂದ್ರ ರಾಜ್ಯ ಭಿನ್ನಾಭಿಪ್ರಾಯ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರದಂತೆ ಎಚ್ಚರವಹಿಸಿದೆ. ಯಾವುದೇ ಕಾರಣಕ್ಕೆ ನಮ್ಮಿ ಒಕ್ಕೂಟವನ್ನು ಬಿಟ್ಟುಹೋಗಲು ನಿರ್ಗಮನದ ಹಾದಿಯೇ ನಮ್ಮಲ್ಲಿಲ್ಲ. ಏಕದ್ವಾರದ ಕೇವಲ ನಮ್ಮ ಭೂಪಠದೊಳಗೆ ಸೇರಲು ಮಾತ್ರ, ನಮ್ಮಲ್ಲಿ ಇರುವ ಅವಕಾಶ ಗಮನಾರ್ಹ. ಅದರೊಂದಿಗೆ ಸಂಯುಕ್ತ ರಾಜ್ಯ (Federal State) ಎಂಬ ಪದವನ್ನು ಆಸ್ಟ್ರೇಲಿಯ, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಂವಿಧಾನಗಳಂತೆ ಉಲ್ಲೇಖೀಸದೆ ರಾಜ್ಯಗಳ ಒಕ್ಕೂಟ (Union of States) ಎಂಬ ಶಬ್ದವನ್ನು ಉದ್ದೇಶ ಪೂರ್ವಕವಾಗಿ ಟಂಕಿಸಿ, ಅಳವಡಿಸಿದುದು ನಮ್ಮ ಸಾಂವಿಧಾನಿಕ ವೈಶಿಷ್ಟ್ಯ. ಮೇಲಾಗಿ, ಕೇಂದ್ರ-ರಾಜ್ಯಗಳ ಸಂಬಂಧದ ಬಗೆಗೂ ಮೂಡಿನಿಂತ ವಿಸ್ತೃತ ವಿವರಣೆಯ ಪೈಕಿ, 256, 257ರ ವಿಧಿಗಳು ನೀಡುವ ಸ್ಪಷ್ಟ ನಿರ್ದೇಶನದಂತೆ ರಾಜ್ಯ ಸರಕಾರಗಳು ಕೇಂದ್ರದ ಕಾನೂನಿಗೆ ಹಾಗೂ ಅದರ ಕಾರ್ಯಾಚರಣೆಗೆ ತಡೆ ಒಡ್ಡುವಂತಿಲ್ಲ; ಒಂದು ವೇಳೆ ಕೇಂದ್ರದ ಸಂಸತ್ತು ಅನುಮೋದಿಸಿ, ರಾಷ್ಟ್ರಪತಿಯವರ ಅಂಕಿತ ಹೊಂದಿದ ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಸಾಂವಿಧಾನಿಕ ಲೋಪ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ಬಾಧಕ ಅಥವಾ ತಮ್ಮ ರಾಜ್ಯ ಸರಕಾರದ ಅಧಿಕಾರ ಪರಿಧಿಗೆ ಧಕ್ಕೆ ಇದೆ ಎಂದಾದಲ್ಲಿ ಸರ್ವೋನ್ನತ ನ್ಯಾಯಾಲಯದ ಅಂಗಳದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ರಾಜ್ಯಗಳಿಗೆ ಇದೆ. ಈಗಾಗಲೇ ಈ ವಿಚಾರದ ನಿಷ್ಕರ್ಷೆಗೆ ಸುಪ್ರೀಂಕೋರ್ಟಿನ ಮುಂದೆ ಈ ವಿಷಯ ಪ್ರಸ್ತಾಪಿತಗೊಂಡಿದೆ.

ನಮ್ಮ ಸಂವಿಧಾನದ ಪುಟಗಳಲ್ಲಿ ರಾರಾಜಿಸುವ ವಿಧಿಗಳ ಸಂಗಾತಿಯಾಗಿ, ಹಲವಾರು ಸಾಂವಿಧಾನಿಕ ವೈಚಿತ್ರ್ಯಗಳು (Constitutional Paradoxes), ಸಾಂವಿಧಾನಿಕ ಸಂಪ್ರದಾಯಗಳು (Constitutional Conventions) ಸಹಜವಾಗಿ ಬೆಳೆಯುತ್ತದೆ. ಆದರೆ ಅವೆಲ್ಲವೂ ಸಮಗ್ರ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾದ ಅರೋಗ್ಯಕರ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಹವಾ ಮಾನ ಒದಗಿಸುವಂತಿರಬೇಕು. ಕೇರಳ ರಾಜ್ಯ ವಿಧಾನಸಭೆ, ಪೌರತ್ವ ಕಾಯಿದೆ ತಿದ್ದು ಪಡಿಯನ್ನು ವಿರೋಧಿಸಿ ಠರಾವು ಮಾಡಿ ಇಂತಹ ಸಾಂವಿಧಾನಿಕ ಅಪಾಯ ಕಾರಿ ಪದ್ಧತಿಗೆ ಅಡಿಗಲ್ಲು ಹಾಕಿದೆ. ಅಷ್ಟು ಮಾತ್ರವಲ್ಲ, ರಾಜ್ಯಪಾಲರ ಗಮನಕ್ಕೂ ತಾರದೆ ಕೇರಳ ಸರಕಾರ ಕೇಂದ್ರ ಸರಕಾರದ ಕಾಯಿದೆಯ ತಗಾದೆಯನ್ನು ನ್ಯಾಯಾ ಲಯಕ್ಕೆ ಕೊಂಡೊಯ್ದಿದೆ. ನಮ್ಮ ರಾಜ್ಯದೊಳಗೆ ಈ ಕಾಯಿದೆ ತಿದ್ದುಪಡಿಗೆ ಪ್ರವೇಶ ವಿಲ್ಲ ಎಂಬ ಕೆಂಪು ಸಂಕೇತವನ್ನು ತೋರಿ, ಪಶ್ಚಿಮ ಬಂಗಾಳ, ರಾಜಸ್ಥಾನಾದಿಯಾಗಿ ಸುಮಾರು 13 ರಾಜ್ಯಗಳು ಬಂಡಾಯದ ಬಾವುಟ ಎತ್ತಿವೆ. ತನ್ಮೂಲಕ ಪಕ್ಷಗಳ ತೀವ್ರ ಸಂಘರ್ಷದ ಧಗೆಯನ್ನು ಸೃಜಿಸಿ, ಭಾರತೀಯ ಸಾಂವಿಧಾನಿಕತೆಯ ತಿರುಳನ್ನೇ ದಹಿಸುತ್ತಿದೆ. “ಒಂದೆಡೆ ಸಂವಿಧಾನ ರಕ್ಷಿಸಿ’ ಎಂದು ಬೊಬ್ಬಿರಿಯುತ್ತಾ, ಇನ್ನೂಂದೆಡೆ ರಾಜ್ಯಾಂಗ ಘಟನೆಯ ತಳಪಾಯವನ್ನೇ ಶಿಥಿಲಗೊಳಿಸುವಿಕೆಯ ಬಗೆಗೆ ಪ್ರಜ್ಞಾವಂತ ಪೌರರು ಯೋಚಿಸುವ ಕಾಲಘಟ್ಟ ಒದಗಿ ಬಂದಿದೆ.

“ನಮ್ಮ ದೇಶ ಒಂದು ವಿಶಾಲ ಮನೆಯಂತೆ’ ಎಂಬ ಮನೋಭೂಮಿಕೆಯೊಂದಿಗೆ ನಮ್ಮ ರಾಷ್ಟ್ರದ ಏಕತೆ, ಅದರೊಂದಿಗೆ ಭದ್ರತೆಯ ಬಗೆಗೆ ಗರಿಷ್ಠ ಚಿಂತನೆ ನಮ್ಮದಾ ಗಬೇಕಾಗಿದೆ. ಏಕೆಂದರೆ ಕಳೆದ ನಿನ್ನೆಗಳ ರಾಜಕೀಯ ಇಂದಿನ ಇತಿಹಾಸ. ಇಂದಿನ ರಾಜಕೀಯದ ತಿರುವು, ಏರುಪೇರುಗಳೇ ಭವಿಷ್ಯದ ಇತಿಹಾಸ; ಮಾತ್ರವಲ್ಲ ಸಶಕ್ತ ಭಾರತದ ಅಡಿಗಲ್ಲು ಕೂಡಾ. ಇದೀಗ ರಾಷ್ಟ್ರವ್ಯಾಪಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರೋಧದ ಒಳಮರ್ಮವಾದರೂ ಏನು? ಅಕ್ರಮ ನುಸುಳು ಕೋರತನ ಹಾಗೂ ಧಾರ್ಮಿಕ ಕಾರಣಕ್ಕೆ ಶಿಕ್ಷೆ ಹಾಗೂ ದಾರುಣತೆಗೆ ಸಿಲುಕಿ ನಿರಾಶ್ರಿತರಾಗಿ ಬರುವಿಕೆಗೆ ನಿಖರವಾದ ವ್ಯತ್ಯಾಸ ಕಂಡು ಹುಡುಕಬೇಕಾಗಿದೆ. ರಾಷ್ಟ್ರ ವಿಭಜನೆಯ ದಿನಗಳಲ್ಲಿ ಗಾಂಧಿ, ನೆಹರು, ಪಟೇಲ್‌ ಮುಂದೆ. ಗುಲ್ಜಾರಿಲಾಲ್‌ ನಂದಾ, ಕಮ್ಯೂನಿಸ್ಟ್‌ ನೇತಾರ ಭೂಪೇಶ ಗುಪ್ತಾ, ಬಸುದೇವ ಆಚಾರ್ಯರಿಂದ ಹಿಡಿದು ಕಾಂಗ್ರೆಸ್‌ ನೇತಾರ ಮನಮೋಹನ ಸಿಂಗ್‌ರ ವರೆಗೂ ಬಲವಾಗಿ ಪ್ರತಿಪಾದಿಸಿದ ವಿಚಾರವನ್ನೇ ಒಳಗೊಂಡು ಈ ತಿದ್ದುಪಡಿ ಜಾರಿಗೆ ಬಂದಿದೆ.ನೆರೆಯ ಮುಸ್ಲಿಂ ರಾಷ್ಟ್ರಗಳಲ್ಲಿ ನರಕಯಾತನೆಗೆ ಸಿಲುಕಿ, ಬದುಕುವ ಏಕೈಕ ನೆಲೆಯಾಗಿ, ನಮ್ಮ ನೆಲಕ್ಕೆ ಕಾಲಿರಿಸಿದ ಅಲ್ಪಸಂಖ್ಯಾಕರ ಬಗೆಗೆ ಮಾನವೀಯತೆಯ ಸೆಲೆಯೂ ಬತ್ತಿ ಹೋಗುವಂತೆ ಈ ಹೋರಾಟವೇ? ಅದೂ 2014 ದಶಂಬರ 31ಕ್ಕೆ ಗಡುಮೀರಿ ಬಂದವರಿಗೆ ಈ ನೆಲದಲ್ಲಿ ನೆಲೆಯಿಲ್ಲ; “ಮುಸ್ಲಿಂ ರಾಷ್ಟ್ರ’ ಎಂದು ಘೋಷಿಸಿದ ಪಾಕಿ ಸ್ಥಾನ, ಬಾಂಗ್ಲಾ ಹಾಗೂ ಅಫ‌ಘಾನಿಸ್ಥಾನದಿಂದ ಧಾರ್ಮಿಕ ಕಿರುಕುಳ ಅಲ್ಲಿನ ಮುಸ್ಲಿಂ ಬಹುಸಂಖ್ಯಾಕರಿಗೆ ಒದಗಿಬಂದಿದೆ ಎನ್ನುವುದಕ್ಕೆ ಅರ್ಥವಿದೆಯೇ? ಅಂತಹ ಬಹುಸಂಖ್ಯಾಕ ಅಕ್ರಮ ನುಸುಳಿಗರಿಗೆ ಈ ನೆಲದಲ್ಲಿ ನೆಲೆ ಕಲ್ಪಿಸಬೇಕು ಎಂಬ ಈ ಹೋರಾಟದ ನೇರ ಆಶಯವೇ? “ಭಾರತ ದೊಳಗೆ ಪಾಕಿಸ್ಥಾನಿ , ಬಾಂಗ್ಲಾ ಮುಸ್ಲಿಮರಿಗೆ ಮಣೆಹಾಕಿ ಎಂದೇ?’ ಭಾರತೀಯ ಪೌರತ್ವದೊಂದಿಗೇ ನಮ್ಮಿ ಮಾತೃಭೂಮಿಯ ಕರ್ತವ್ಯವೂ ಇದೆ ತಾನೇ? ರಾಷ್ಟ್ರನಿಷ್ಠೆಯೂ ಇದರೊಂದಿಗೆ ಸಮ್ಮಿಳಿತಗೊಳ್ಳಬೇಡವೆ? ಅಕ್ರಮ ನುಸುಳುಕೋರರಿಗೂ ಈ ರಾಷ್ಟ್ರದ ಬಗೆಗೆ ಮಾತೃಭೂಮಿ ಎಂಬ ರಾಷ್ಟ್ರಪ್ರೇಮ ಅಪಾರವಾಗಿದೆ ಎಂಬುದನ್ನು ಈ ಹೋರಾಟಗಾರರು ಸಾಬೀತುಗೊಳಿಸಿ ಸಾಕ್ಷಿದಾರರಾಗಬಲ್ಲರೇ? ಈ ದೇಶದ ಯಾವುದೇ ಒಬ್ಬ ಪ್ರಜೆಯ ಕೂದಲೂ ಸೋಂಕದ ಈ ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧದ ಹೋರಾಟದ ನೇರ ಫ‌ಲಶ್ರುತಿ, ನೆರೆ ರಾಷ್ಟ್ರದ ಅದೂ ವೈರತ್ವದ ಕತ್ತಿ ಮಸೆಯುವ ಪಾಕಿಸ್ಥಾನ, ಬಾಂಗ್ಲಾ ದೇಶಗಳ ಬಹುಸಂಖ್ಯಾಕರಿಗಾಗಿಯೇ? ಇದೆಲ್ಲವನ್ನು ಪ್ರಜ್ಞಾವಂತ ಪ್ರಜೆಗಳು ರಾಷ್ಟ್ರದ ಮುಂದಿನ ಪೀಳಿಗೆಯ ಬದುಕಿನ, ರಾಷ್ಟ್ರದ ಪ್ರಗತಿ, ಸುಭದ್ರತೆಯ ಬೆಳಕಿನಲ್ಲಿ ಅರಿಯುವ ಕಾಲಘಟ್ಟವಿದು.

Advertisement

ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ, ಈ ತೆರನಾದ ಹೋರಾಟದಲ್ಲಿ ರಾಷ್ಟ್ರ ಪ್ರೇಮ ಎಂಬುದು ಮುದುಡಿ ಹೋಗಲಾರಂಭಿಸುತ್ತದೆ. ಸಾಂವಿಧಾನಿಕ ತತ್ವ, ಸತ್ವ ಕುಸಿ ಯುತ್ತದೆ. ಕೇಂದ್ರ-ರಾಜ್ಯಗಳ ಉತ್ತಮ ಸಂಬಂಧ ಕಲುಷಿತಗೊಳ್ಳುತ್ತದೆ. ಸಹ ಕಾರೀ ಮನೋಭೂಮಿಕೆಯ ಸಂಯುಕ್ತ ರಾಜ್ಯಪದ್ಧತಿಯ ತಳಹದಿಯೇ ಕಂಪಿ ಸು ತ್ತದೆ; ನೆರೆಯ ವೈರಿ ರಾಷ್ಟ್ರಕ್ಕೂ ಪೂರಕ ಟಾನಿಕ್‌ ದೊರಕಿದಂತಾಗುತ್ತದೆ. ಸಾಮಾಜಿಕ ಶಾಂತಿ, ಏಕತಾ ಮನೋಭೂಮಿಕೆಯೇ ತಲ್ಲಣಗೊಳ್ಳುತ್ತದೆ. ಈ ಬಗೆಗೆ ಉತ್ತಮ ತಿಳುವಳಿಕೆ ಮೂಡಿಬರಲಿ; ತಿಳಿಗಾಳಿ ಬೀಸಿ ಬರಲಿ ಎಂದು ಶುಭಹಾರೈಸೋಣ.

ಡಾ| ಪಿ.ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next