Advertisement

ಸುಳ್ಳು ವದಂತಿ ನಂಬಬೇಡಿ

11:28 AM Jun 29, 2019 | Suhan S |

ಧಾರವಾಡ: ಸೊಳ್ಳೆವಾಹಕ ರೋಗಗಳಾದ ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳ ಕುರಿತು ಖಾಸಗಿ ಹಾಗೂ ಸ್ಥಾನಿಕ ವೈದ್ಯರ ಅಭಿಪ್ರಾಯಗಳು, ಸುಳ್ಳು ವದಂತಿ ನಂಬಿ ಸಾರ್ವಜನಿಕರು ಭಯ, ಗೊಂದಲಗೊಳಗಾಗಿದ್ದು, ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಇತರೆ ಇಲಾಖೆಗಳೊಂದಿಗೆ ಅಂತರ್‌ ಸಮನ್ವಯ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಡಿಸಿ ಕಚೇರಿಯಲ್ಲಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೊಳ್ಳೆವಾಹಕ ರೋಗಗಳಾದ ಡೆಂಘೀ, ಚಿಕೂನ್‌ ಗುನ್ಯಾ ಮತ್ತು ಮಲೇರಿಯಾ ರೋಗಗಳ ನಿಯಂತ್ರಣಕ್ಕಾಗಿ ಜಿಲ್ಲಾಮಟ್ಟದ ಅಂತರ ಇಲಾಖೆ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳನ್ನು ಪತ್ತೆ ಹಚ್ಚಲು ಖಾಸಗಿ ವ್ಯೆದ್ಯರು ಮತ್ತು ಗ್ರಾಮಗಳಲ್ಲಿರುವ ಸ್ಥಾನಿಕ ವ್ಯೆದ್ಯರು ರಕ್ತ ತಪಾಸಣೆಗಾಗಿ ಟೆಸ್ಟ್‌ ಕಾರ್ಡ್‌ಗಳನ್ನು ಬಳಸುತ್ತಾರೆ. ಇದು ರೋಗ ಕುರಿತು ಖಚಿತ ಫಲಿತಾಂಶ ನೀಡಲ್ಲ. ಇಂತಹ ಸಂದರ್ಭದಲ್ಲಿ ಬಾಧಿತ ವ್ಯಕ್ತಿಗಳ ರಕ್ತವನ್ನು ಆಯ್‌ಜಿಎಮ್‌ ಎಲಿಸಾ ಎಂಬ ಯಂತ್ರದ ಮೂಲಕ ಮಾಡಬೇಕಾಗುತ್ತದೆ. ಈ ಸೌಲಭ್ಯ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ, ಜಿಲ್ಲಾಸ್ಪತ್ರೆ ಹಾಗೂ ಎಸ್‌ಡಿಎಂ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.

ಸಾರ್ವಜನಿಕರು ಜ್ವರ ಬಂದಾಗ ಇತರೆ ವೈದ್ಯರ ಬಳಿ ಟೆಸ್ಟ್‌ ಕಾರ್ಡ್‌ ಮೂಲಕ ರಕ್ತ ತಪಾಸಣೆ ಮಾಡಿಸಿಕೊಂಡು ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ಇದೆ ಎಂದು ಭಯ ಪಡಬಾರದು. ತಕ್ಷಣ ಜಿಲ್ಲಾಸ್ಪತ್ರೆಗೆ ಬಂದು ಪರಿಕ್ಷಿಸಿಕೊಂಡು ಖಚಿತ ಪಡಿಸಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ವೈದ್ಯರು ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ ತಕ್ಷಣ ಕಿಮ್ಸ್‌ ಅಥವಾ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಬೇಕು. ಈ ಕುರಿತು ಎಲ್ಲ ವೈದ್ಯರಿಗೆ ನಿರ್ದೇಶನ ನೀಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ, ನಗರ ಸ್ಥಳಿಯ ಸಂಸ್ಥೆಗಳು, ಶಿಕ್ಷಣ, ಗ್ರಾಪಂ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ಸಮನ್ವಯದಿಂದ ಕಾರ್ಯಕ್ರಮ ಯೋಜಿಸಿ, ಅನುಷ್ಠಾನಗೊಳಿಸಬೇಕು ಎಂದರು.

Advertisement

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಶಿವಕುಮಾರ ಮಾನಕರ ಮಾತನಾಡಿ, ಜನವರಿಯಿಂದ ಜೂನ್‌ ತಿಂಗಳವರೆಗೆ ಧಾರವಾಡ ಜಿಲ್ಲೆಯಲ್ಲಿ 8 ಡೆಂಘೀ, 14 ಚಿಕೂನ್‌ಗುನ್ಯಾ ಮತ್ತು 3 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದರು.

ಜನವರಿ 2019ರಿಂದ ಜೂನ್‌ ಅಂತ್ಯದವರೆಗೆ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ 7,12,698 ಮನೆಗಳಿಗೆ ಭೇಟಿ ನೀಡಿ 24,55,748 ನೀರಿನ ತೊಟ್ಟಿಗಳನ್ನು ಪರೀಕ್ಷಿಸಿದ್ದಾರೆ. 28,193 ನೀರಿನ ತೊಟ್ಟಿಗಳಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾ ರೋಗಗಳಿಗೆ ಕಾರಣವಾಗುವ ಲಾರ್ವಾ ಸೊಳ್ಳಿಯ ಮರಿಗಳು ಕಂಡು ಬಂದಿವೆ ಎಂದರು.

ನಗರ ಪ್ರದೇಶದ 1,99,721 ಮನೆಗಳಿಗೆ ಭೇಟಿ ನೀಡಿದ್ದು, 63,355 ಮನಗಳಲ್ಲಿ ಲಾರ್ವಾ ಸೊಳ್ಳಿಯ ಮರಿ ಕಂಡು ಬಂದಿವೆ. ಮತ್ತು 7,73,626 ನೀರಿನ ತೊಟ್ಟಿಗಳನ್ನು ಪರೀಕ್ಷಿಸಿದ್ದು, 13,789 ನೀರಿನ ತೊಟ್ಟಿಗಳಲ್ಲಿ ಲಾರ್ವಾ ಕಾಣಿಸಿದೆ. ಇವುಗಳ ನಿರ್ಮೂಲನೆಗೆ ಕ್ರಮ ಕೈಗೊಂಡು ಮನೆ ಮನೆಗಳಲ್ಲಿ ರೋಗ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಆರ್‌.ಸಿ.ಎಚ್.ಅಧಿಕಾರಿ ಡಾ|ಎಚ್.ಆರ್‌.ಪುಷ್ಪಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಗಿರಿಧರ ಕುಕನೂರ, ಡಾ|ಸುಜಾತಾ ಹಸವಿಮಠ, ಡಾ|ಶಶಿ ಪಾಟೀಲ, ಡಾ| ಪ್ರಭು ಬಿರಾದಾರ, ಡಾ|ನಿಂಬೆನ್ನವರ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ಜಲಮಂಡಳಿ, ಮಹಾನಗರ ಪಾಲಿಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು, ಪಂಚಾಯತ ರಾಜ್‌, ಎನ್‌ಡಬ್ಯೂಕೆಎಸ್‌ಆರ್‌ಟಿಸಿ, ಬಿಆರ್‌ಟಿಎಸ್‌, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next