Advertisement

“ನಾನು ಈಗಲೇ ನಿವೃತ್ತಿಯಾಗಬೇಕೆಂದು ಹಲವರು ಕಾಯುತ್ತಿದ್ದಾರೆ’

12:58 PM Jul 07, 2019 | Team Udayavani |

ಲಂಡನ್‌: ವಿಶ್ವಕಪ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ನಿವೃತ್ತಿಯಾಗುತ್ತಾರೆನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೊದಲ ಬಾರಿ ಸ್ವತಃ ಧೋನಿ ಮೌನ ಮುರಿದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮುನ್ನವೇ ನಿವೃತ್ತಿಯಾಗಬೇಕೆಂದು ಬೇಕಾದಷ್ಟು ಮಂದಿ ಹಾರೈಸುತ್ತಿದ್ದಾರೆ. ಆದರೆ ಯಾವಾಗ ನಿವೃತ್ತಿಯಾಗುತ್ತೇನೆಂದು ನನಗೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

ಈ ಹೇಳಿಕೆ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಧೋನಿ ಕಳಪೆ ಬ್ಯಾಟಿಂಗ್‌ ಮಾಡಿದ್ದಾರೆಂದು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ ಸಹಿತ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಅನಾಮಿಕ ಬಿಸಿಸಿಐ ಅಧಿಕಾರಿಯೊಬ್ಬರು, ಧೋನಿಗೆ ವಿಶ್ವಕಪ್ಪೇ ಕೊನೆ ಎಂದು ಹೇಳಿದ್ದರು. ಇದರ ಬಳಿಕ ಧೋನಿ ನಿವೃತ್ತಿಯ ಕುರಿತು ಸತತವಾಗಿ ಚರ್ಚೆ ಆರಂಭವಾಗಿದೆ. ಆದರೆ ಧೋನಿ ಮಾತ್ರ ತಮ್ಮ ಅಚ್ಚರಿಯ ಹೇಳಿಕೆ ಮೂಲಕ ಎಲ್ಲರನ್ನೂ ಸ್ಟಂಪ್‌ಔಟ್‌ ಮಾಡಿದ್ದಾರೆ. ಈ ಹೇಳಿಕೆ ಯಾರನ್ನು ಕುರಿತಾಗಿ ನೀಡಿದ್ದು ಎಂಬುದೇ ಗೊಂದಲ ಮೂಡಿಸಿದೆ.

ಅಲ್ಲದೇ ತಂಡದೊಳಗೆ ಯಾರನ್ನಾದರೂ ಉದ್ದೇಶಿಸಿದ್ದೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಹಾಗೇನು ಇಲ್ಲ ಎಂದು ಧೋನಿಯೇ ಸ್ಪಷ್ಟೀಕರಿಸಿದ್ದಾರೆ. ಇದಕ್ಕಿಂತ ಕುತೂಹಲ ಮೂಡಿಸಿರುವುದು ಧೋನಿ ತಾನು ಯಾವಾಗ ನಿವೃತ್ತಿಯಾಗುತ್ತೇನೆಂದು ತನಗೇ ಗೊತ್ತಿಲ್ಲ ಎಂದಿರುವುದು. ಹಿಂದಿನ
ಲೆಕ್ಕಾಚಾರಗಳ ಪ್ರಕಾರ, ವಿಶ್ವಕಪ್‌ಗೆ ಧೋನಿ ಆಟ ಅಂತ್ಯ ಎಂದು ಹೇಳಲಾಗಿತ್ತು. ಈಗ ಧೋನಿ ಇನ್ನೂ ಒಂದಷ್ಟು ಕಾಲ ಆಡುವ ಬಯಕೆ
ಹೊಂದಿರುವಂತಹ ಸುಳಿವನ್ನು ತಮ್ಮ ಹೇಳಿಕೆ ಮೂಲಕ ನೀಡಿದ್ದಾರೆ.

ಅಲ್ಲಿಗೆ ಅವರ ಸ್ಥಾನ ತುಂಬಲು ಕಾಯುತ್ತಿರುವ ರಿಷಭ್‌ ಪಂತ್‌ರಂತಹ ವಿಕೆಟ್‌ ಕೀಪರ್‌ಗಳು ಇನ್ನೂಕಾಯುವ ಪರಿಸ್ಥಿತಿ ಬರಬಹುದು. ಈ ಹಿಂದೆ ಧೋನಿ ಟೆಸ್ಟ್‌, ಸೀಮಿತ ಓವರ್‌ಗಳ ನಾಯಕತ್ವವನ್ನು ತ್ಯಜಿಸಿದಾಗ, ಅದನ್ನು ಹಠಾತ್ತನೆ ಪ್ರಕಟಿಸಿದ್ದರು. ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಿರಲಿಲ್ಲ. ಈಗಲೂ ಅಂತಹ ಹಠಾತ್‌ ಘೋಷಣೆಯೊಂದನ್ನು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

ಧೋನಿ ಒಂದು ಹೆಸರಲ್ಲ, ಅದ್ಭುತ ಪರಂಪರೆ
ಭಾನುವಾರ ಧೋನಿ ಹುಟ್ಟುಹಬ್ಬವಿದೆ. ಎಲ್ಲ ಕಡೆಯಿಂದ ಅಭಿಮಾನದ ಮಹಾಪೂರವೇ ಹರಿದುಬರುತ್ತಿದೆ. ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ವಿಶೇಷವಾಗಿ ಅಭಿನಂದಿಸಿದೆ. “ಧೋನಿಯೆಂದರೆ ಕೇವಲ ಒಂದು ಹೆಸರಲ್ಲ, ಅವರೊಂದು ಮರೆಯಲಾಗದ ಪರಂಪರೆ. ಅವರು ಭಾರತೀಯ ಕ್ರಿಕೆಟ್‌ನ ಚಹರೆಯನ್ನೇ ಬದಲಿಸಿದರು. ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಪ್ರಭಾವಿಸಿದ ವ್ಯಕ್ತಿ ಅವರು ಎಂದು ಐಸಿಸಿ ಹೇಳಿದೆ. ಧೋನಿ ನಾಯಕನಾಗಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡ ಮೂರೂ ಮಾದರಿಯಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವ ನಂ.1 ಎನಿಸಿತ್ತು. ನಾಯಕನಾಗಿ ಅವರು ಒಂದು ಟಿ20, ಒಂದು ಏಕದಿನ ವಿಶ್ವಕಪ್‌ ಗೆದ್ದಿದ್ದಾರೆ. ಹಾಗೆಯೇ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಯನ್ನು ಗೆದ್ದಿದ್ದಾರೆ. ವಿಶ್ವದ ಬೇರಾವುದೇ ನಾಯಕ ಈ ಮೂರು ಕಿರೀಟಗಳನ್ನು ಗೆದ್ದಿಲ್ಲ. ಇದು ವಿಶ್ವದಾಖಲೆಯಾಗಿದೆ. ಮೇಲು ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ, ಕಡೆಯ ಕಡೆಯ ಹಂತದ ಬ್ಯಾಟ್ಸ್‌ಮನ್‌ ಆಗಿ ಅವರು ಜಾಗತಿಕ ಖ್ಯಾತಿ ಗಳಿಸಿದ್ದಾರೆ. ಈಗಲೂ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಅವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next