Advertisement

ಡೊಂಬಿವಲಿ ಶ್ರೀ ಆದ್ಯ ಶಂಕರಾಚಾರ್ಯ ಸೇವಾ ಸಮಿತಿ: ಶಂಕರಾಚಾರ್ಯ ಜಯಂತಿ

09:30 AM Apr 28, 2018 | |

ಮುಂಬಯಿ: ಅಂದು ವೇದಗಳ ಅಸ್ತಿತ್ವವನ್ನೆ ಅಲ್ಲಗಳೆಯುವ ಬೌದ್ಧ ಹಾಗೂ ಜೈನ ಧರ್ಮದ ಪ್ರಭಾವದಿಂದ ಅವನತಿಯ ಅಂಚಿನಲ್ಲಿದ್ದ ಹಿಂದೂ ಧರ್ಮಕ್ಕೆ ಪುನಃಶ್ಚೇತನವನ್ನು ನೀಡಿದವರು ಮಹಾನ್‌ ಸಾಧಕ ಜಗದ್ಗುರು ಆದಿ ಶ್ರಿ ಶಂಕರಾಚಾರ್ಯರು ಎಂದು ಕೂಡ್ಲಿ ಶೃಂಗೇರಿ ಪೀಠದ ಶ್ರೀ ವಿದ್ಯಾಭಿನವ ತೀರ್ಥ ಶಂಕರ ಭಾರತಿ ಸ್ವಾಮಿಗಳು ನುಡಿದರು.

Advertisement

ಶ್ರೀ ಆದ್ಯ ಶಂಕರಾಚಾರ್ಯ ಸೇವಾ ಸಮಿತಿ ಡೊಂಬಿವಲಿ ವತಿಯಿಂದ ಡೊಂಬಿವಲಿ ಪೂರ್ವದ ಅಗರ್‌ವಾಲ್‌ ಸಭಾಗೃಹದಲ್ಲಿ ಎ. 19ರಿಂದ ಎ. 21ರ ವರೆಗೆ ಆಯೋಜಿಸಿದ ಮೂರು ದಿನಗಳ ಶ್ರೀ ಶಂಕರಚಾರ್ಯ ಜಯಂತಿ ಉತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ತಮ್ಮ ಎಂಟನೆ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಪ್ರಚಾರಕ್ಕಾಗಿ ದೇಶದ ವಿವಿಧೆಡೆಗಳಲ್ಲಿ ನಾಲ್ಕು  ಮಠಗಳನ್ನು ಸ್ಥಾಪಿಸಿದ್ದಾರೆ. ವೇದಗಳ ಮೂಲಕ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂಬುವುದನ್ನು ಸಾಬೀತುಪಡಿಸಿದರಲ್ಲದೆ, ತಮ್ಮ 32 ವರ್ಷಗಳ ಜೀವಿತ  ಅವಧಿಯಲ್ಲಿ ಅನೇಕ ಮಹಾನ್‌ ಗ್ರಂಥಗಳನ್ನು ರಚಿಸಿರುವುದು ವಿಶೇಷವಾಗಿದೆ ಎಂದು ನುಡಿದು, ಆದ್ಯ ಶಂಕರಾಚಾರ್ಯರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಶಂಕರ ತತ್ವಗಳ ಪ್ರತಿಪಾದ‌ಕ ಅಶುತೋಷ್‌ ಪುರಾಣಿಕ ಅವರು ಮಾತನಾಡಿ, ಅದ್ವೈತ ಮತದ ಸ್ಥಾಪನೆಯ ಮೂಲಕ ದೇಶದಲ್ಲೇ ಹಿಂದುತ್ವದ ಬೇರುಗಳನ್ನು ಗಟ್ಟಿಗೊಳಿಸಿದ ಮಹಾನ್‌ ಚೇತನ ಆದಿ ಶ್ರೀ ಶಂಕರಾಚಾರ್ಯ ಎಂದು ಹೇಳಿದರಲ್ಲದೆ, ವೇದಗಳ ಅಧ್ಯಯನ ಹಾಗೂ ಭಕ್ತಿಯ ಬುನಾದಿಯ ಮೂಲಕ ಪರಮಾತ್ಮನನ್ನು ಕಾಣಲು ಸಾಧ್ಯ. ಶಂಕರಾಚಾರ್ಯರು ಒಬ್ಬ ವ್ಯಕ್ತಿ ಅಲ್ಲ, ಓರ್ವ ಶಕ್ತಿಯಾಗಿದ್ದು, ಶ್ರೀ ಶಂಕರಾಚಾರ್ಯರ ತತ್ವಗಳನ್ನು ಪರಿಚಯಿಸಿ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಹಿಂದೂ  ಧರ್ಮವನ್ನು ಬೆಳೆಸೋಣ ಎಂದು ನುಡಿದರು.

ಎ. 19ರಂದು ಸಂಜೆ ಡೊಂಬಿವಲಿ ಪೂರ್ವದ ಮಾನಾ³ಡಾ ರಸ್ತೆಯ ಗಾಂವೆªàವಿ ಮಂದಿರದಿಂದ ಅಗರ್‌ವಾಲ್‌ ಸಭಾಗೃಹದವರೆಗೆ ಆದ್ಯ ಶ್ರೀ ಶಂಕರಾಚಾರ್ಯರ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ವೇದಿಕೆಗೆ ತರಲಾಯಿತು. ಪಂಡಿತರ ವೇದಘೋಷ, ಮಹಿಳೆಯರ ಭಜನೆ, ವಿವಿಧ ವಾದ್ಯ ಮೇಳಗಳು, ಕಲಾತಂಡಗಳ ನೃತ್ಯಗಳು ಮೆರವಣಿಗೆಯಲ್ಲಿ ಆಕರ್ಷಣೀಯವಾಗಿದ್ದವು. ಜಯಂತ್ಯುತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮವಾಗಿ ರುದ್ರಾಭಿಷೇಕ, ಅಷ್ಟಾವಧಾನ, ಓಂ ನಮಃ ಶಿವಾಯ ಮಂತ್ರ ಪಾರಾಯಣ, ರುದ್ರ ಸ್ವಾಹಾಕಾರ ಯಜ್ಞ, ಭಗವದ್ಗೀತಾ ಪಠಣ, ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ಸಾಮೂಹಿಕ ಉಪನಯನ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು.

ಕಾರ್ಯಕಾರಿ ಸಮಿತಿಯ ಅಜಿತ್‌ ಉಮಾರಾಣಿ, ಎಸ್‌. ಪುರೋಹಿತ್‌, ಎಲ್‌. ಎಸ್‌. ಕುಲಕರ್ಣಿ, ಪಿ. ಎಸ್‌. ಜೋಶಿ, ಎಸ್‌. ಎಲ್‌. ಸಿಂದಣಿಕರ, ಮಹಿಳಾ ವಿಭಾಗದ ಅನುರಾಧಾ ಉಮಾರಾಣಿ, ವಿ. ವಿ. ಕುಲಕರ್ಣಿ, ಅನಂತ ಭಟ್‌ ಮೊದಲಾದವರು ಸಹಕರಿಸಿದರು. ನೂರಾರು ಭಕ್ತಾದಿಗಳು ಮೂರು ದಿನಗಳ ಈ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next