Advertisement

ಡೊಂಬಿವಲಿ ಶ್ರೀ ಶನೀಶ್ವರ ಪೂಜಾ ಸಮಿತಿಯ ರಜತೋತ್ಸವ ಸಮಾರೋಪ

04:26 PM Jan 30, 2018 | Team Udayavani |

ಡೊಂಬಿವಲಿ: ನಾವು ಇವತ್ತು ಎಷ್ಟು ಎತ್ತರಕ್ಕೆ ಬೆಳೆದರೂ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳದ ಮುಂಬಯಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ನಮ್ಮ ಹೆತ್ತವರು ನಮಗೆ ನೀಡಿದ ಸಂಸ್ಕಾರದ ಕೊಡುಗೆಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಪರಿವಾರ ಸಮೇತ ಭಾಗವಹಿಸುವುದರಿಂದ ನಮ್ಮ ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯ ಪರಿಚಯವಾಗುತ್ತದೆ ಎಂದು ಭವಾನಿ ಫೌಂಡೇಷನ್‌ ಮುಂಬಯಿ ಸಂಸ್ಥಾಪಕಾಧ್ಯಕ್ಷ, ಉದ್ಯಮಿ   ಕೆ. ಡಿ. ಶೆಟ್ಟಿ  ಅವರು ನುಡಿದರು.

Advertisement

ಜ. 26 ರಂದು ಸಂಜೆ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ  ಮಂಡಳದ ಶ್ರೀ ಶನೀಶ್ವರ ಪೂಜಾ ಸಮಿತಿಯ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ನಿಮ್ಮ ಕಾರ್ಯಕ್ರಮವನ್ನು ಕಂಡು ಬಹಳ ಸಂತೋಷವಾಯಿತು. ಮಂಡಳಿಯ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದು ಇತರರಿಗೆ ಸಹಕಾರಿಯಾಗಿ ಬೆಳೆಯಬೇಕು. ಸಮಿತಿಯ ಧಾರ್ಮಿಕ ಕಾರ್ಯ ಕ್ರಮಗಳು ಇತರರಿಗೆ ಮಾದರಿಯಾಗಿದೆ ಎಂದರು.

ಇನ್ನೋರ್ವ ಅತಿಥಿ ತೋನ್ಸೆ ನವೀನ್‌ ಶೆಟ್ಟಿ ಅವರು ಮಾತನಾಡಿ, ಮಂಡಳದ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ಪ್ರಶಂಸಿಸಿ ಸಮಿತಿಯು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಸಂಘಟಕ ಶಶಿಧರ ಶೆಟ್ಟಿ ಅವರು ಮಾತನಾಡಿ, ಜನ್ಮಭೂಮಿಯ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ-ಬೆಳೆಸಿಕೊಂಡು ಬರುತ್ತಿರುವ ಹೊರನಾಡ ತುಳು-ಕನ್ನಡಿಗರ ಕಾರ್ಯ ಅಭಿನಂದನೀಯವಾಗಿದೆ. ತಾಯಿ ಪರಮೇಶ್ವರಿ ಹಾಗೂ ಶ್ರೀ ಶನೀಶ್ವರ ದೇವರು ಸರ್ವರಿಗೂ ಶಾಂತಿ, ಸಮೃದ್ಧಿಯನ್ನು, ಆರೋಗ್ಯವನ್ನು  ಕರುಣಿಸಲಿ ಎಂದು ಆಶಿಸಿದರು.

ರಂಗಕರ್ಮಿ, ಉದ್ಯಮಿ ಅರವಿಂದ ಕೊಜಕ್ಕೊಳಿ ಅವರು ಮಾತನಾಡಿ, ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ-ಬೆಳೆಸುತ್ತಿರುವ ಡೊಂಬಿವಲಿಯ ತುಳು-ಕನ್ನಡಿಗರು ಇತರರಿಗೆ ಮಾದರಿಯಾಗಿದ್ದು, ಶ್ರದ್ಧಾ, ಭಕ್ತಿಯಿಂದ ಪರಮಾತ್ಮನನ್ನು ನೆನೆದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ನಾನು ಇವತ್ತು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಅದು ದೇವರ ಶ್ರೀರಕ್ಷೆಯಿಂದಾಗಿದೆ ಎಂದು ನುಡಿದರು. ಮತ್ತೋರ್ವೆ ಅತಿಥಿ ಲತಾ ಪಿ. ಶೆಟ್ಟಿ ಅವರು ಮಾತನಾಡಿ, ಮಂಡಳದ ಸೇವಾ ಮನೋಭಾವ ಇತರರಿಗೆ ಮಾದರಿಯಾಗಲಿ. ಮಂಡಳದ ಅಭಿವೃದ್ಧಿಗೆ ಸಹಕರಿಸಲು ಸದಾ ಬದ್ಧಳಾಗಿದ್ದೇನೆ ಎಂದರು.

Advertisement

ಸಮಾರಂಭದಲ್ಲಿ ಶ್ರೀ ಶನೀಶ್ವರ ಪೂಜಾ ಸಮಿತಿಯ ಸಂಸ್ಥಾಪಕ ಸಮಿತಿ ಹಾಗೂ ಪರಿವಾರದವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಅವರ ಶನೀಶ್ವರ ಮಹಾತೆ¾ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಮಂಡಳದ ಪ್ರಮುಖರಾದ ಗೋಪಾಲ್‌ ಶೆಟ್ಟಿ ಹಾಗೂ ದಾಕ್ಷಾಯಿಣಿ ಶೆಟ್ಟಿ, ಅಶೋಕ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಹಾಗೂ ವಿಲಾಸಿನಿ ಶೆಟ್ಟಿ ದಂಪತಿಗಳನ್ನು  ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಸುನಂದಾ ಶೆಟ್ಟಿ, ಸುನೀತಾ ಶೆಟ್ಟಿ, ಗೀತಾ ಶೆಟ್ಟಿ, ಗೀತಾ ಶೆಟ್ಟಿಗಾರ್‌ ಅವರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಅಶೋಕ್‌ ಶೆಟ್ಟಿ ಸ್ವಾಗತಿಸಿದರು. ನಾಗೇಶ್‌ ಸುವರ್ಣ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿದರು. ರಘುವೀರ ಭಟ್‌, ಮೋಹನ್‌ ಸಾಲ್ಯಾನ್‌, ತಾರಾನಾಥ ಅಮೀನ್‌, ನಿತ್ಯಾನಂದ ಜತ್ತನ್‌ ಅವರು ಅತಿಥಿಗಳನ್ನು ಪರಿಚಯಿಸಿದರು.

ಮಕ್ಕಳಿಂದ ವಿವಿಧ ನೃತ್ಯ ರೂಪಕ, ಕಲಾವಿದ ಪುತ್ತೂರು ಚಂದ್ರಹಾಸ ರೈ ಅವರಿಂದ ಸ್ವರಸಿಂಚನ ಸಂಗೀತ ರಸಮಂಜರಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿ ಸಾಕಿನಾಕಾ ಹಾಗೂ ಊರಿನ ಕಲಾವಿದರ ಕೂಡುವಿಕೆ ಯಲ್ಲಿ ಶ್ರೀ ಶನೀಶ್ವರ ಮಹಾತೆ¾ ಯಕ್ಷಗಾನ ಪ್ರದರ್ಶನ ಗೊಂಡಿತು.   

ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ ಶ್ರೇಷ್ಠವಾಗಿದ್ದು, ಇಂತಹ ಜನ್ಮ ಪಡೆದ ನಾವು ದಾನ, ಧರ್ಮ ಹಾಗೂ ಪರಮಾತ್ಮನ ನಾಮಸ್ಮರಣೆಯಿಂದ ನಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಶ್ರೀ ಶನೀಶ್ವರನ ಆರಾಧನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನದ ಜತೆಗೆ ಯಶಸ್ವಿ ಜೀವನ‌ ಲಭಿಸುವುದರಲ್ಲಿ ಎರಡು ಮಾತಿಲ್ಲ.  ಮಂಡಳದ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಅವರ ಶನೀಶ್ವರ ಮಹಾತ್ಮಾ ಸರಳಾನುವಾದ ಗ್ರಂಥವು ಇಂದು ಬಿಡುಗಡೆಗೊಂಡಿದ್ದು, ಸಮಸ್ತ ತುಳು-ಕನ್ನಡಿಗರ ಮನೆ-ಮನಗಳನ್ನು ಇದು ತಲುಪುವಂತಾಗಲಿ. ಅವರಿಗೆ ಹಾಗೂ ಸಮಿತಿಗೆ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿಯನ್ನು ದೇವರು ಕರುಣಿಸಲಿ 
– ಕಲ್ಲಡ್ಕ ಕರುಣಾಕರ ಶೆಟ್ಟಿ (ಕಾರ್ಯಾಧ್ಯಕ್ಷರು : ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ).

ಇಂತಹ ಕಾರ್ಯಕ್ರಮಗಳಲ್ಲಿ ಪರಿವಾರ ಸಮೇತ ಭಾಗವಹಿಸಿದರೆ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ. ಸಮಿತಿಗೆ ಎಲ್ಲಾ ರೀತಿಯಲ್ಲಿ ಸಹಕರಿಸಲು ತಾನು ಸಿದ್ಧನಿದ್ದೇನೆ 
– ಪ್ರವೀಣ್‌ ಶೆಟ್ಟಿ  (ಉದ್ಯಮಿ, ಸಮಾಜ ಸೇವಕ).

ಚಿತ್ರ-ವರದಿ:ಗುರುರಾಜ ಪೋತನೀಸ್‌ 

Advertisement

Udayavani is now on Telegram. Click here to join our channel and stay updated with the latest news.

Next