Advertisement

ರಷ್ಯಾದಲ್ಲಿ ವೈದ್ಯರು, ವೈದ್ಯಕೀಯ ಸಿಬಂದಿ ಪಾಡು ದಯನೀಯ

03:20 PM May 29, 2020 | mahesh |

ಕೋವಿಡ್‌ ವೈರಸ್‌ ರಷ್ಯಾ ತಲುಪಿದ್ದು ತಡವಾಗಿಯೇ. ಆದರೆ ನಮ್ಮ ಬಳಿ ಯಾವುದೇ ರಕ್ಷಣಾ ಸಾಧನಗಳು ಇರಲಿಲ್ಲ. ಪಿಪಿಇ, ಮಾಸ್ಕ್, ವೆಂಟಿಲೇಟರ್‌ ಕೊರತೆಯಿತ್ತು ಎನ್ನುತ್ತಾರೆ ಅರ್ಖಿಪೋವಾ.

Advertisement

ಮಾಸ್ಕೊ : ಭಾರತ, ಅಮೆರಿಕ, ಬ್ರಿಟನ್‌, ಬ್ರಜಿಲ್‌ ಹೀಗೆ ನಾನಾ ದೇಶಗಳಲ್ಲಿ ಕೋವಿಡ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳು ತಮ್ಮ ಪ್ರಾಣಗಳನ್ನೇ ಅಪಾಯಕ್ಕೊಡ್ಡಿಕೊಂಡಿದ್ದಾರೆ. ದೇಶ ಕಾಯುವ ಯೋಧರ ಸಮಾನವಾಗಿ ಅವರನ್ನು ಕಾಣಲಾಗುತ್ತದೆ. ರ್ವಜನಿಕವಾಗಿ ಅವರಿಗೆ ಭಾರೀ ಗೌರವ, ಮನ್ನಣೆಯಿದೆ.ದೇಶದ ರಕ್ಷಣಾ ಪಡೆಗಳೇ ಈ ಯೋಧರನ್ನು ವಿಶಿಷ್ಟವಾಗಿ ಗೌರವಿಸಿದ ಪರಂಪರೆಗೆ ಭಾರತ, ಅಮೆರಿಕ ಮತ್ತಿತರ ಸೇರಿವೆ. ಜನರಂತೂ ಅವರನ್ನು ಪ್ರಾಣ ಉಳಿಸಲು ಬಂದ ದೇವರೆಂದೇ ಭಾವಿಸಿದ್ದಾರೆ. ಇದು ಜಗತ್ತಿನ ಇತರೆಡೆಗಳ ಕತೆಯಾದರೆ ರಷ್ಯಾದ ಕತೆ ಮಾತ್ರ ಬೇರೆಯೇ ಇದೆ. ಅಲ್ಲಿನ ವೈದ್ಯರು ರಷ್ಯಾದಲ್ಲಿ ತಾವು ವೈದ್ಯರಾಗಿ ಹುಟ್ಟಿದ್ದಕ್ಕೆ ವಿಷಾದಿಸುವಂಥ ಪರಿಸ್ಥಿತಿ ಉಂಟಾಗಿದೆ.

ಕವಡೆ ಕಿಮ್ಮತ್ತಿಲ್ಲ
ರಷ್ಯಾದಲ್ಲಿ ಕೋವಿಡ್‌ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬಂದಿಳಿಗೆ ಜನರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಅವರನ್ನು ವಿಲನ್‌ಗಳಂತೆ ಕಾಣಲಾಗುತ್ತಿದೆ. ಸರಕಾರವೂ ಈ ವೈದ್ಯರಿಗೆ ವಿಶೇಷವಾದ ಸೌಲಭ್ಯಗಳನ್ನಾಗಲಿ, ಅನುಕೂಲತೆಗಳನ್ನಾಗಲಿ ಮಾಡಿಕೊಟ್ಟಿಲ್ಲ. ಈ ಕಾರಣಕ್ಕೆ ರಷ್ಯಾದಲ್ಲಿ ಭಾರೀ ಸಂಖ್ಯೆಯಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ.

ವದಂತಿಗಳಲ್ಲಿಯೇ ನಂಬಿಕೆ
ಜನರಿಗೆ ಕೋವಿಡ್‌ ಕುರಿತಾಗಿ ವೈದ್ಯರು ಹೇಳುವ ಮಾತಿಗಿಂತಲೂ ವದಂತಿಗಳ ಮೇಲೆಯೇ ಹೆಚ್ಚು ನಂಬಿಕೆ. ವೈದ್ಯರೇ ಸಮಾಜವನ್ನು ಅಂಕೆಯಲ್ಲಿಟ್ಟುಕೊಳ್ಳಲು ಈ ವೈರಸ್‌ ಸೃಷ್ಟಿಸಿ ಬಿಟ್ಟಿದ್ದಾರೆ, ವೈದ್ಯಕೀಯ ಸಿಬಂದಿಗಳು ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದ್ದಾರೆ, ಸರಕಾರದಿಂದ ಸಿಗುವ ಹೆಚ್ಚುವರಿ ಸಣದಾಸೆಗಾಗಿ ವೈದ್ಯರು ಯಾವುದೇ ಕಾಯಿಲೆಯ ಚಿಕಿತ್ಸೆಗೆ ಬಂದರೂ ಕೋವಿಡ್‌ ಸೋಂಕಿತರೆಂದು ಘೋಷಿಸುತ್ತಿದ್ದಾರೆ ಎಂಬಿತ್ಯಾದಿ ವದಂತಿಗಳು ರಷ್ಯಾದಲ್ಲಿ ಹರಡಿವೆ ಹಾಗೂ ಜನರು ಇವುಗಳನ್ನೇ ನಿಜವೆಂದು ನಂಬಿದ್ದಾರೆ. ಇದರಿಂದಾಗಿ ವೈದ್ಯರನ್ನು ಅಪನಂಬಿಕೆಯಿಂದ ಕಾಣಲಾಗುತ್ತಿದೆ. ಅವರ ಮೇಲೆ ಹಲ್ಲೆ ಮಾಡಿದ ಘಟನೆಗಳೂ ಸಂಭವಿಸಿವೆ. ಕೋವಿಡ್‌ ವಿರುದ್ಧ ಮಾತ್ರವಲ್ಲದೆ ಈ ವದಂತಿಗಳ ವಿರುದ್ಧವೂ ಹೋರಾಡಬೇಕಾದ ದಯನೀಯ ಸ್ಥಿತಿ ಇಲ್ಲಿನ ವೈದ್ಯರದ್ದು.
ರಷ್ಯಾದ ಟಿವಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಇಂಥ ವದಂತಿಗಳನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ವೈದ್ಯಕೀಯ ಕ್ಷೇತ್ರದಲ್ಲಿರುವವ ಮೇಲೆ ಜನರ ನಂಬಿಕೆ ಕುಸಿಯಲು ಈ ಮಾಧ್ಯಮಗಳೇ ಮುಖ್ಯ ಕಾರಣ ಎಂದು ಮಾಧ್ಯಮ ತಜ್ಞರೂ ಒಪ್ಪಿಕೊಂಡಿದ್ದಾರೆ.
ವೈದ್ಯರ ಮೇಲಿನ

ಈ ಅಪನಂಬಿಕೆ ಪರೋಕ್ಷವಾಗಿ ಆಡ
ಳಿತ ವ್ಯವಸ್ಥೆಯ ಮೇಲಿರುವ ಅಪನಂಬಿಕೆ. ಎಲ್ಲ ದೇಶಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗಳು ಹೀರೊಗಳಾದರೆ ನಮ್ಮ ದೇಶದಲ್ಲಿ ದೇಶದ್ರೋಹಿಗಳು ಮತ್ತು ವಿಲನ್‌ಗಳ ಸ್ಥಾನ ಗಳಿಸಿರುವುದು ದುರದೃಷ್ಟಕರ ಎನ್ನುತ್ತಾರೆ ಸಮಾಜ ಸೇವಕಿ ಅಲೆಕ್ಸಾಂಡ್ರಾ ಅರ್ಖಿಪೋವಾ.

Advertisement

ಸರಕಾರಿ ಔಷಧಿ ಬೇಡ
ಹೆಚ್ಚಿನ ಜನರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಮತ್ತು ಸರಕಾರಿ ಔಷಧಿಗಳ ಮೇಲೆ ನಂಬಿಕೆಯಿಲ್ಲ. ಅವರು ತಮಗೆ ವೈಯಕ್ತಿಕವಾಗಿ ಗೊತ್ತಿರುವ ವೈದ್ಯರನ್ನು ಮಾತ್ರ ನಂಬುತ್ತಾರೆ. ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳು ಲಗಾಮಿಲ್ಲದೆ ಹೆಚ್ಚಾಗಲು ಇದೂ ಒಂದು ಕಾರಣ. ಕೋವಿಡ್‌ ಲಕ್ಷಣ ಕಾಣಿಸಿದರೂ ಜನರು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋಗುತ್ತಿಲ್ಲ.

ವೈದ್ಯರ ಹತಾಶೆ
ಈ ಪರಿಸ್ಥಿತಿ ವೈದ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹಲವು ವೈದ್ಯರು ಹತಾಶೆಯ ಮನಸ್ಥಿತಿಗೆ ತಲುಪಿದ್ದಾರೆ. ಇದು ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ವಿಪರೀತ ಕಾರ್ಯದೊತ್ತಡದಿಂದ ಅವರು ಬಳಲುತ್ತಿದ್ದಾರೆ. ಆ್ಯಂಬುಲೆನ್ಸ್‌ ಡಾಕ್ಟರ್‌ ಅಲೆಕ್ಸಾಂಡರ್‌ ಶುಲೆಪೋವ್‌ ಎಂಬವರು ಕೆಲದಿನಗಳ ಹಿಂದೆ ಮಹಡಿಯಿಂದ ಕಿಟಿಕಿ ಮೂಲಕ ಬಿದ್ದ ತಲೆಗೆ ಗಂಭೀರವಾಗಿ ಗಾಯವಾಗಿದೆ. ಕಾರ್ಯದೊತ್ತಡದಿಂದಾಗಿ ಹೀಗಾಗಿದೆ. ಇನ್ನಿಬ್ಬರು ವೈದ್ಯರು ಹೀಗೆ ಕರ್ತವ್ಯದ ವೇಳೆ ಅವಘಡ ಸಂಭವಿಸಿ ಸಾವನ್ನಪ್ಪಿದ್ದಾರೆ.

ಕೋವಿಡ್‌ ಕೊಲ್ಲುತ್ತಿದೆ
ಇಷ್ಟು ಮಾತ್ರವಲ್ಲ ಕೋವಿಡ್‌ ವೈರಸ್‌ ರಷ್ಯಾದಲ್ಲಿ ನೂರಾರು ವೈದ್ಯರನ್ನು ಸಾಯಿಸುತ್ತಿದೆ. ಸಮರ್ಪಕವಾದ ರಕ್ಷಣಾ ಉಡುಗೆಯಿಲ್ಲದೆ ವೈದ್ಯರು ಕಾರ್ಯ ನಿರ್ವಹಿಸುತ್ತಿರುವುದರಿಂದ ಸುಲಭವಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸರಕಾರ ಇಷ್ಟರ ತನಕ ನೂರರಷ್ಟು ವೈದ್ಯರು ಮಾತ್ರ ಬಲಿಯಾಗಿದ್ದಾರೆ ಎಂದು ಹೇಳುತ್ತಿದ್ದರೂ ವಾಸ್ತವ ಅಂಕಿಅಂಶ ಬೇರೆಯೇ ಇದೆ. ಆರೋಗ್ಯ ಕಾರ್ಯಕರ್ತರ ಪ್ರಕಾರ ಕನಿಷ್ಠ 300 ವೈದ್ಯರು ಬಲಿಯಾಗಿದ್ದಾರೆ ಹಾಗೂ ಈ ಪೈಕಿ ಹೆಚ್ಚಿನ ಸಾವು ಮಾಸ್ಕೊದಲ್ಲೇ ಸಂಭವಿಸಿದೆ. ಸಾವಿರಾರು ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next