Advertisement

ತಮ್ಮಾ…ಕರಿಬಸಮ್ಮ ಬೇಕಾ?

10:52 AM Oct 31, 2017 | |

ದಶಕಗಳ ಹಿಂದೆಲ್ಲಾ ತರಗತಿಗೆ ಮೇಸ್ಟ್ರೆ ಬಂದಾಗ ಅವರೊಂದಿಗೇ ಬೆತ್ತವೂ ಬರುತ್ತಿತ್ತು. ಯಾರಿಗೂ ಹೆದರುವುದಿಲ್ಲ ಅನ್ನುವ ಹುಡುಗರು ಬೆತ್ತಕ್ಕೆ ಹೆದರುತ್ತಿದ್ದರು. ಎಷ್ಟೋ ಕಡೆಗಳಲ್ಲಿ ಬೆತ್ತ ತಂದು ಕೊಟ್ಟವರಿಗೇ ಮೊದಲ ಏಟು ಹೊಡೆದು ಅದು ಗಟ್ಟಿ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಶಿಕ್ಷಕರೂ ಇದ್ದರು. ಇಂಥವೇ ಹಲವು ನೆನಪುಗಳ ಝಲಕ್‌…

Advertisement

ಬಾಲ್ಯದಲ್ಲಿನ ಹತ್ತು ಹಲವು ನೆನಪುಗಳಲ್ಲಿ ಶಾಲಾ ದಿನಗಳಲ್ಲಿ ಕಳೆದ ನೆನಪುಗಳನ್ನು ಎಂದಿಗೂ ಮರೆಯೆವು. ಹಿಂದೆಲ್ಲಾ ಶಿಕ್ಷಕರು ಬೆತ್ತ ಹಿಡಿದೇ ಪಾಠ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. “ಜಾಣಂಗೆ ಮಾತಿನ ಪೆಟ್ಟು, ಕೋಣಂಗೆ ಲತ್ತೆಯ ಪೆಟ್ಟು’ ಎಂಬ ಗಾದೆಯಂತೆ ಓದಿನಲ್ಲಿ ಕೊಂಚ ಮುಂದಿದ್ದ ನಾನು ಮಾತಿನ ಪೆಟ್ಟನ್ನು ತಿಂದವನೇ ಹೊರತು, ಮಾಸ್ತರರಿಂದ ಲತ್ತೆಯ ಪೆಟ್ಟನ್ನು ತಿಂದಿರಲಿಲ್ಲ.

8ನೇ ತರಗತಿಯಲ್ಲಿ ಓದುತ್ತಿದ್ದಾಗ ನಮಗೆ ಸಾಮಾಜಿಕ ಅಭ್ಯಾಸ ವಿಷಯದ ಪಾಠ ಮಾಡಲು ಹನುಮಂತರಾವ್‌ ಸರ್‌ ಬರುತ್ತಿದ್ದರು. ಅವರು ಒಳ್ಳೆಯ ಶಿಕ್ಷಕರು. ಎಂದೂ ಬೆತ್ತ ಮುಟ್ಟಿದವರಲ್ಲ. ತಪ್ಪು ಉತ್ತರ ಹೇಳಿದರೆ, ಶಾಂತ ಮುದ್ರೆಯಿಂದಲೇ ತಮ್ಮ ದಪ್ಪ ಗಾಜಿನ ಕನ್ನಡಕವನ್ನು ಮೇಲೇರಿಸಿ “ಬೆಂಚ್‌ ಮೇಲೆ ನಿಂತ್ಕೊ, ಯೂಸ್‌ಲೆಸ್‌ ಫೆಲೋ’ ಎಂದು ನಾವು ಕೂರುವ ಬೆಂಚ್‌ನ ಮೇಲೆ ನಿಲ್ಲಿಸುತ್ತಿದ್ದರು. ಆ ಪೀರಿಯಡ್‌ ಮುಗಿಯುವವರೆಗೂ ಅವನು ನಿಂತಿರಬೇಕು, ಅದೇ ಅವನಿಗೆ ಶಿಕ್ಷೆ!

ಇನ್ನೊಬ್ಬರಿದ್ದರು, ಹನುಮಂತಪ್ಪ ಮಾಸ್ತರ್‌… ಅವರದು ಯಾವಾಗಲೂ ಗಂಟು ಮುಖ, ಕೆಂಡಗಣ್ಣು, ಗಿರಿಜಾ ಮೀಸೆ, ದೂರ್ವಾಸನ ಕೋಪ. ಆದರೆ ಕೆಲವೊಮ್ಮೆ ಅಷ್ಟೇ ಮೃದು ಹೃದಯ. ನೂರು ರೂ. ಕೊಟ್ಟರೂ ನಗರು. ನಮಗೆ ಅವರ ಪಾಠಕ್ಕಿಂತ ಅವರ ರಾಜಾಹುಲಿ ಮೀಸೆ, ಪಾಠ ಮಾಡುವಾಗ ಲೆಫ್ಟ್- ರೈಟ್‌ ಎಂದು ಅತ್ತಿಂದಿತ್ತ ಮಾರ್ಚ್‌ಫಾಸ್ಟ್‌ ಮಾಡುವುದನ್ನು ನೋಡುವುದೇ ಖುಷಿಯ ವಿಷಯವಾಗಿತ್ತು. ಅವರೆಂದೂ ಬೆತ್ತ ಹಿಡಿದವರಲ್ಲ.

ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಶಿಕ್ಷಕರೆಂದರೆ ಹೇಮಪ್ಪ ಮಾಸ್ತರರು. ಮನದಟ್ಟಾಗುವಂತೆ ಪಾಠ ಹೇಳುವುದು, ವಿದ್ಯಾರ್ಥಿಗಳೊಂದಿಗೆ ಆಪ್ತತೆ, ಅಪರಿಮಿತ ಉತ್ಸಾಹ, ಶ್ರದ್ಧೆ, ಮೈಗೂಡಿಸಿಕೊಂಡ ಅಪರೂಪದ ಶಿಕ್ಷಕರವರು. ಅದೇನೋ, ನಾನೆಂದರೆ ಅಚ್ಚುಮೆಚ್ಚು ಅವರಿಗೆ, ಆದರೂ ಅವರಿಗೆ ಬೆತ್ತದ ಮೇಲೇ ನಂಬಿಕೆ.

Advertisement

ಪಾಠ ಆರಂಭಿಸುವಾಗ ಟೇಬಲ್‌ ಮೇಲೆ ಒಂದು ರೂಲ್‌ ದೊಣ್ಣೆ ಇಟ್ಟು “ತಮ್ಮಾ, ಯಾರೂ ಈ ಕರಿಬಸಮ್ಮನ ಹತ್ರ ಹೊಡಸ್ಕೋಬೇಡಿ’ ಎನ್ನುತ್ತಿದ್ದರು. ಬೆತ್ತ ಕಳೆದುಹೋದರೆ ಹೊಸ ಕರಿಬಸಮ್ಮನನ್ನು ಸಪ್ಲೆ„ ಮಾಡುವ ಕಾಂಟ್ರಾಕ್ಟ್ ನಮ್ಮ ತರಗತಿಯ ಉಗಮ್‌ರಾಜ್‌ನದು! ಅವರಪ್ಪನದು ಬಟ್ಟೆ ಅಂಗಡಿಯಿತ್ತು. ಬಟ್ಟೆಯ ಥಾನುಗಳ ಮಧ್ಯೆ ಇಡುವ ಉದ್ದನೆ ಕೋಲುಗಳು ನಮಗೆ ಕರಿಬಸಮ್ಮನಾಗುತ್ತಿದ್ದವು. ಆದರೆ ಆ ಕರಿಬಸಮ್ಮನಿಂದ ಯಾರಿಗೂ ಪ್ರಸಾದ ಸಿಗುತ್ತಿರಲಿಲ.É ಅಪರೂಪಕ್ಕೊಮ್ಮೆ ದೊಡ್ಡ ತಪ್ಪು ಮಾಡಿದ ಪ್ರಭೃತಿಗಳಿಗೆ ಮಾತ್ರ ಸಿಗುತ್ತಿತ್ತಷ್ಟೇ!

ಬೋರಾಗಿ ಪಾಠ ಮಾಡುತ್ತಿದ್ದ ಇನ್ನೊಬ್ಬ ಮಾಸ್ತರರೆಂದರೆ ತಿಪ್ಪೇಸ್ವಾಮಿ ಸರ್‌. ಒಮ್ಮೆ ಪಾಠ ಮಾಡುವಾಗ “ಇನ್‌ಸ್ಟ್ರೆಮೆಂಟ್ಸ್‌’ ಪದದ ಸ್ಪೆಲಿಂಗ್‌ ಕೇಳಿದರು. ನನ್ನ ಸರದಿ ಬಂತು.   instruments ಎಂದು ನಾನು ಸರಿಯಾಗಿಯೇ ಹೇಳಿದೆ. ಮಾಸ್ತರರು ಯಾವ ಲಹರಿಯಲ್ಲಿದ್ದರೋ “ತಪ್ಪು, ನೆಕ್ಸ್ಟ್’ ಎಂದು ಪಕ್ಕದವನನ್ನು ಕೇಳಿದರು. ನನಗೆ ಕಸಿವಿಸಿ. ನನ್ನ ಉತ್ತರದ ಬಗ್ಗೆ ಪೂರ್ಣ ವಿಶ್ವಾಸವಿತ್ತು. ಅಲ್ಲಿಯೇ ನನ್ನೆದುರಿದ್ದ ಕಂಪಾಸ್‌ಬಾಕ್ಸ್‌ ಸ್ಪೆಲಿಂಗ್‌ ತೋರಿಸಿ ಹೇಳಿದೆ- “ಸಾರ್‌ ಇಲ್ಲಿ ನೋಡಿ ಸಾರ್‌, ನನ್ನ ಉತ್ತರ ಸರಿ’. ಮಾಸ್ತರರಿಗೆ ಅಸಾಧ್ಯ ಕೋಪ ಬಂದಿತ್ತು. “ನನಗೇ ಎದುರು ಹೇಳ್ತಿಯಾ?’ ಎಂದವರೇ ತಾವು ತಂದಿದ್ದ ಬೆತ್ತದಿಂದ ನನ್ನ ಪೃಷ್ಠಕ್ಕೆ ಒಂದು ಕಾಣಿಕೆ ಕೊಟ್ಟೇಬಿಟ್ಟರು.

ನನಗೋ ಅವಮಾನವಾಗಿತ್ತು. ಆಕಾಶವೇ ತಲೆಯ ಮೇಲೆ ಬಿದ್ದಂತೆ ಧರಾಶಾಹಿಯಾಗಿದ್ದೆ. ಕಣ್ಣಂಚಿನಲ್ಲಿ ಅಶ್ರುಗಳು ಇಣುಕಿ ನೋಡುತ್ತಿದ್ದವು. ಅವರಿಗೆ ಏನನ್ನಿಸಿತೋ ಏನೋ, “ಕೂತ್ಕೊ’ ಎಂದರು. ನಂತರ ಸ್ಟಾಫ್ರೂಮ್‌ಗೆ ಕರೆಸಿ ನನಗೆ ಸಮಾಧಾನ ಹೇಳಿದರೆನ್ನಿ!

ಜೀವಮಾನದಲ್ಲಿ ತಿಂದ ಬೆತ್ತದೇಟುಗಳು ನನಗೆ ತುಂಬಾ ವಿಚಾರಗಳನ್ನು ಕಲಿಸಿವೆ. ಜೊತೆಗೆ ತಪ್ಪೋ ಒಪ್ಪೋ ಅವಸರಿಸದೇ ಮಾಸ್ತರರಿಗೆ, ಹಿರಿಯರಿಗೆ ವಿಧೇಯತೆ ಸಲ್ಲಿಸಬೇಕೆಂಬ ಅರಿವನ್ನೂ ಮೂಡಿಸಿವೆ.
ಇತಿ ಬೆತ್ತ ಪುರಾಣ ಸಮಾಪ್ತಂ!

ಕೆ. ಶ್ರೀನಿವಾಸರಾವ್‌

Advertisement

Udayavani is now on Telegram. Click here to join our channel and stay updated with the latest news.

Next