Advertisement

ಮನೆಯ ವಾಸ್ತು ಶುದ್ದಿಗೆ ಇದನ್ನು ಮಾಡಿ….

01:01 PM Jan 22, 2018 | |

ಮಂಗಳಕಾರಕನಾದ ಗಣಪತಿಯು ಬದುಕಿನ ಸಂಪನ್ನತೆಗಳಿಗೆ, ಗೆಲುವಿಗೆ, ಅರಿಷ್ಟ ನಿವಾರಣೆಗಳಿಗೆ ಕಾರಣನಾಗಿದ್ದಾನೆ. ಮಂಗಳಮಯನಾದ ಗಣಪತಿಗೆ ನಿಮ್ಮ ಮನೆಗಳಲ್ಲಿನ ವಾಸ್ತು ದೋಷಗಳನ್ನು ನಿವಾರಿಸುವ ಶಕ್ತಿ ಇದೆ. ವಾಸ್ತು ಪುರುಷನಾದ ಶ್ರೀ ಹರಿಯೇ ಶ್ವೇತ ವಸ್ತ್ರಧಾರಿಯಾದ, ಚತುರ್ಭಜನಾದ ಗಣಪತಿಯಾಗಿದ್ದಾನೆ. ಶಶಿ ಅಂದರೆ ತಿಂಗಳನಾದ ಚಂದ್ರನ ಕೆನೆ ಬಣ್ಣವು ಗಣಪತಿಯ ಬಣ್ಣವೂ ಆಗಿದೆ. ರುದ್ರ ಸ್ವರೂಪಿಯಾದಾಗ ಗಣಪನು ಕುಂಕುಮದ ಕೆಂಪಲ್ಲಿ, ರಕ್ತ ಚಂದನದ ಹೊಳಪಲ್ಲಿ ಮೆರಗು ಪಡೆಯುತ್ತಾನೆ.

Advertisement

ಗಣೇಶನೇ ವಾಸ್ತವದಲ್ಲಿ ವಾಸ್ತು ಪುರುಷನಾಗಿದ್ದಾನೆ. ಮನೆಯಲ್ಲಿ ಗಣೇಶ ಚತುರ್ಥಿಯ ದಿನ ಒಂದು ಮೇಲ್ಮಟ್ಟದಲ್ಲಿ ಅಡ್ಡವಾಗಿರಿಸಿದ ತೆಂಗಿನ ಒಂಟ ಗರಿಗೆ, ಉದ್ದನೆಯ ಇನ್ನೊಂದು ಒಂಟಿಗರಿಯನ್ನು ಮಧ್ಯ ಭಾಗದಲ್ಲಿ ಅಂಟಿಸಿ ಸರಳವಾಗಿ ಈ ಗರಿಗಳನ್ನೇ ಗಣಪತಿಯನ್ನಾಗಿ ಆರಾಧಿಸಿದರೆ ಮನೆಯ ವಾಸ್ತು ದೋಷಗಳಿಗೆ ಪರಿಹಾರ ಎಂಬುದನ್ನು ವಾಸ್ತು ತಜ್ಞನಾದ ಮಯನು ಸಾರಿದ್ದಾನೆ. ಆರಾಧನೆ ಎಂದರೆ ಧೂಪ, ದೀಪ, ಮಂಗಳಾರತಿ, ನೈವೇದ್ಯಗಳ ಅವಶ್ಯಕತೆ ಇರಬೇಕಾಗಿಲ್ಲ.

ಗಣಪತಿಯನ್ನು ತೆಂಗಿನ ಗರಿಗಳಲ್ಲಿ ಒಡಮೂಡಿಸಿದ ಆಕೃತಿಯಲ್ಲಿ ಕಲ್ಪಿಸಿಕೊಂಡು ಗಕಾರಪೂರ್ವಕವಾದ ಗಣಪತಿ ಸಹಸ್ರನಾಮವಳಿಯನ್ನು ಓದಿ, ನಮಸ್ಕರಿಸಿ. ನಂತರ ಪ್ರತಿದಿನವೂ ಗಕಾರ ಪೂರ್ವಕ ಅಷ್ಟೋತ್ತರ ನಾಮಾವಳಿಯನ್ನು ಪೂರ್ವಕ್ಕೆ ಮುಖ ಮಾಡಿ ಓದಬೇಕು. ಇದನ್ನು ಪ್ರತಿ ದಿನವೂ ಮುಂದುವರಿಸಿ. ಪ್ರತಿ ಪಕ್ಷದ (ಶುಕ್ಲಪಕ್ಷ, ಕೃಷ್ಣ ಪಕ್ಷ) ಚತುರ್ಥಿಯ ದಿನ ಗಕಾರಪೂರ್ವಕ ಗಣಪತಿ ಸಹಸ್ರ ನಾಮಾವಳಿ ಪಠಿಸಿ. ತೆಂಗಿನ ಗರಿಗಳ ಪೂರಕವಾದ ಗಣೇಶನನ್ನು ಆರಾಧಿಸಬೇಕು.

ಹಸಿರು ಮಯವಾದ ತೆಂಗಿನ ಗರಿಯ ಪ್ರಾಕೃತ ಗಣೇಶ ನಿಮ್ಮ ಮನೆಯ ನಕಾರಾತ್ಮಕ ವಾಸ್ತು ವಲಯಗಳನ್ನು ಕರಗಿಸಿ ಸಕಾರಾತ್ಮಕ ಸ್ಪಂದನೆಗಳಿಗೆ ಕಾರಣನಾಗುತ್ತಾನೆ. ಒಂದು ಪುಟ್ಟ ಶಂಖದಲ್ಲಿ ಗೋವಿನ ಕ್ಷೀರ ಸಂಗ್ರಹಿಸಿ ಮನೆಯ ಅಂಗಳದ ನಡು ಮಧ್ಯ , ಹೊರ ಬಾಗಿಲಿನ ಎದುರು ಒಂದು ಬೆಳ್ಳಿ ನಾಣ್ಯದ ಮೇಲೆ ನಾಲ್ಕೈದು ಹನಿ ಹಾಲನ್ನು ಬಿಂದು ರೂಪಗಳಲ್ಲಿ ಸೋಕಿಸಬೇಕು. ಮುಖ್ಯವಾಗಿ ಇದನ್ನು ಹುಣ್ಣಿಮೆಯ ದಿನ ರಾತ್ರಿ ಹೊತ್ತು ಸ್ನಾನ ನಂತರ ನೆರವೇರಿಸಬೇಕು.

ಹಾಲು ಸೋಕಿದ ನಾಣ್ಯವನ್ನು ಒಳ್ಳೆಯ ನೀರಲ್ಲಿ ತೊಳೆದು, ಕೊನೆಯ ನೀರ ಹನಿಗಳನ್ನು ತೀರ್ಥರೂಪದಲ್ಲಿ ಸೇವಿಸಿ. ಈ ಸೇವನೆಯ ನಂತರದ ಗಕಾರ ಪೂರ್ವಕ ಗಣಪತಿ ಅಷ್ಟೋತ್ತರ ಅಥವಾ ಸಹಸ್ರ ನಾಮಾವಳಿ ಕೂಡ ಮನೆಯ ವಾಸ್ತು ದೋಷಗಳನ್ನು, ವಿಶೇಷವಾಗಿ ದಕ್ಷಿಣ, ಆಗ್ನೇಯ, ನೈಋತ್ಯ ದಿಕ್ಕಿನ ದೋಷಗಳನ್ನು ನಿವಾರಿಸುತ್ತದೆ. ಹಾಗೆಯೇ, ಗೋವು ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ. ಗೋವನ್ನು ಭಾರತೀಯರು ತಾಯಿ ಸ್ವರೂಪದಲ್ಲಿ ಗುರುತಿಸುತ್ತಾರೆ.

Advertisement

ಈ ನಿಟ್ಟಿನಲ್ಲಿ ಭಾರತೀಯರ ವಾಸ್ತು ಶಾಸ್ತ್ರ ಕಲ್ಪನೆಯು ಮನೆಯ ಭದ್ರತೆಯನ್ನು ಆರೋಗ್ಯದ ನೆಲೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಪೂರಕವಾಗಿ ಹಸುವಿನ ಸಗಣಿ ಹಾಗೂ ಮೂತ್ರದ ಅಂಶಗಳನ್ನು ಮನೆಯ ಪವಿತ್ರತೆಗೆ ಆಧಾರವಾದ ಘಟಕಗಳನ್ನಾಗಿ ಗುರುತಿಸಿದೆ. ಹಸುವಿನ ಸಗಣಿ ಹಾಗೂ ಮೂತ್ರ ಅಂಶಗಳನ್ನು ಮನೆಯ ಪವಿತ್ರತೆಗೆ ಆಧಾರವಾದ ಘಟಕಗಳನ್ನಾಗಿ ಗುರುತಿಸಿದೆ. ಹಸುವಿನ ಸಗಣಿ ಹಾಗೂ ಮೂತ್ರದಲ್ಲಿ ಇರಬಹುದಾದ ಕ್ರಿಕೀಟಗಳನ್ನು ಕೊಲ್ಲುವ ಶಕ್ತಿಯನ್ನು ಆಧುನಿಕ ವಿಜ್ಞಾನವೂ ದೃಢಪಡಿಸಿದೆ. 

 ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ, ನಮ್ಮ ಸಂಪ್ರದಾಯ ಬೆಳ್ಳಂಬೆಳಗಿನ ಹೊತ್ತು ಗೋವಿನ ಮೂತ್ರ ಮತ್ತು ಸೆಗಣಿಯ ಒಂದು ಚಿಕ್ಕ ಭಾಗವನ್ನು ನೀರಿನಲ್ಲಿ ಮಿಶ್ರಣಗೊಳಿಸಿ ಮನೆಯ ಎಲ್ಲೆಡೆ ಸೂಕ್ಷ್ಮವಾಗಿ ಸಿಂಪಡಿಸುವ ಕೆಲಸವನ್ನು ನಡೆಸಿಕೊಂಡು ಬರುವುದು ವಾಡಿಕೆಯಾಗಿತ್ತು. ಈಗ ಈ ಸಂಪ್ರದಾಯ ಭಾರತದಲ್ಲಿ ಎಲ್ಲಿಯೂ ಕಾಣಸಿಗದು. ದೇಹದ ಸೌಖ್ಯಕ್ಕಾಗಿಯೂ ಗೋಮುತ್ರವನ್ನು ಪ್ರತಿ ಶುಭ ಕಾರ್ಯದ ಪೂರ್ವದಲ್ಲಿ ಅಂತರ್‌ ಶುದ್ಧಿಗಾಗಿ ಸ್ವಲ್ಪ ಮಟ್ಟಿಗೆ ಕುಡಿಸುವುದು ಧಾರ್ಮಿಕ  ಕಾರ್ಯಕ್ರಮಗಳ ಪೂರ್ವ ವಿಧಿಯಾಗಿ ನಡೆಯುತ್ತಿತ್ತು.

ಏನೇ ಇರಲಿ ಮನೆಯಲ್ಲಿ ವಾಸ್ತು ಸಂಬಂಧೀ ಏರುಪೇರುಗಳಿಂದ ಸ್ವತ್ಛತೆಯ ವಿಚಾರದಲ್ಲಿನ ಅಸಮತೋಲನ ನಿವಾರಣೆಗೆ ಪ್ರತಿ ದಿನ ಗೋಮಯ, ಮೂತ್ರ ಸಿಂಪಡಣೆ ಒಂದು ಉತ್ತಮವಾದ ಶುದ್ಧೀಕರಣಕ್ಕೆ ಅನುಕೂಲಕರವಾಗಿದೆ ಎಂಬುದನ್ನು ನಮ್ಮ ಭಾರತೀಯ ವಾಸ್ತುಶಾಸ್ತ್ರ ದೃಢಪಡಿಸಿದೆ. ಒಟ್ಟಿನಲ್ಲಿ ಜನರಿಗೇ ಇದು ಸಂಬಂಧಿಸಿದ ವಿಚಾರ. ಈ ನೆಲೆಯಲ್ಲಿ ಹಸಿರು ಎಲೆ ಗಣಪನನ್ನು ಪೂಜಿಸುವ, ಹಸುವಿನ ಸಂಬಂಧೀ ಘಟಕಗಳ ಮೂಲಕ ಶುದ್ಧಕ್ರಿಯೆ ನಡೆಸಿ, ಆರೋಗ್ಯ ಪೂರ್ಣ ಚೈತನ್ಯಕ್ಕೆ ಧಾತುಗಳನ್ನು ಮನೆಯಲ್ಲಿ ಹರಳುಗಟ್ಟಿಸುವ ಅಂಶಗಳನ್ನು ಹೊಸದೇ ಗ್ರಹಿಕೆಯೊಂದಿಗೆ ವಿಶ್ಲೇಷಿಸಬಹುದಾಗಿದೆ. 

* ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next