Advertisement

ಸಣ್ಣಪುಟ್ಟ ವಿಷಯಕ್ಕೂ ಪೊಲೀಸ್‌ ಠಾಣೆ ಮೆಟ್ಟಿಲೇರಬೇಡಿ

12:40 PM May 26, 2017 | Team Udayavani |

ಹುಣಸೂರು: ಸಣ್ಣಪುಟ್ಟ ವಿಷಯಕ್ಕೂ ಜನರು ಪೊಲೀಸ್‌ ಠಾಣೆ ಮೆಟ್ಟಿಲೇರುವ ಪ್ರವೃತ್ತಿ ತೊರೆದು ಗ್ರಾಮದಲ್ಲೇ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡಲ್ಲಿ ಸಾಮರಸ್ಯ ಉಳಿಯಲಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಹೇಳಿದರು.

Advertisement

ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಹನಗೋಡಿನಲ್ಲಿ ಆರಂಭಗೊಂಡ ಪೊಲೀಸ್‌ ಉಪಠಾಣೆ ಉದ್ಘಾಟಿಸಿ ಮಾತನಾಡಿ, ಈ ಭಾಗದ ಜನರ ಬಹುದಿನದ ಬೇಡಿಕೆಯಂತೆ  ಇಲ್ಲಿಗೆ ತಕ್ಷಣಕ್ಕೆ ಉಪ ಠಾಣೆ ಆರಂಭಿಸಿದ್ದು, ಶೀಘ್ರದಲ್ಲೇ ಸಂಪೂರ್ಣ ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಲಿದ್ದು, ಎಸ್‌.ಐ ದರ್ಜೆಯ ಅಧಿಕಾರಿ ನೇಮಕವಾಗಲಿದೆ ಎಂದರು.

ಹಳ್ಳಿಗೆ ಪೊಲೀಸ್‌ ಠಾಣೆಗಳು ಬೇಡವೆಂಬ ಮನೋಸ್ಥಿತಿ ತಮ್ಮದಾದರೂ, ಈ ಭಾಗದ್ದೇ ಹೆಚ್ಚು  ಪ್ರಕರಣಗಳು ದಾಖಲಾಗುತ್ತಿದ್ದು, ಜನರ ಅನುಕೂಲ ಕ್ಕೋಸ್ಕರ ಠಾಣೆ ಆರಂಭಿಸಲಾಗಿದೆ. ಜನರು ಇದೀಗ  ಸಣ್ಣ-ಪುಟ್ಟ ಘಟನೆ, ಗಲಾಟೆ ಹಾಗೂ ಕುಟುಂಬದ ಕಲಹಕ್ಕೂ ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಾರೆ.

ಆದರೆ ಇಂತಹ ಪ್ರಕರಣಗಳನ್ನು ಪೊಲೀಸರು ಮಾನವೀಯತೆಯಿಂದ ನೋಡಬೇಕು, ಪ್ರಕರಣ ದಾಖಲಿಸದೆ ಅವರಿಗೆ ತಿಳಿಹೇಳುವ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿ, ನೆಮ್ಮದಿ ಮೂಡುವಂತೆ ಮಾಡಬೇಕು. ಹಳ್ಳಿಗಳಲ್ಲಿ  ನಡೆಯುವ ಗಲಾಟೆಗಳನ್ನು ಗ್ರಾಮಸ್ಥರೇ ಮುಂದೆ ನಿಂತು ಬಗೆಹರಿಸಿ ಕೊಳ್ಳುವುದು ಒಳಿತು ಎಂದು ತಿಳಿಸಿದರು.

ಸುಳ್ಳು ಪ್ರಕರಣ ದಾಖಲಿಸಬೇಡಿ: ಪೊಲೀಸರು ರೌಡಿಸಂ, ಬ್ಲಾಕ್‌ವೆುàಲ್‌, ಅನಾಚಾರ ಹಾಗೂ ಗ್ರಾಮದ ನೆಮ್ಮದಿ ಹಾಳು ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ಸದೆ ಬಡೆಯಬೇಕು. ಮಧ್ಯವರ್ತಿಗಳಿಗೆ ಅವಕಾಶ ಕೊಡಬೇಡಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ, ಸುಳ್ಳು ಪ್ರಕರಣ ದಾಖಲಿಸಬೇಡಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರೆಂದು ಸಲಹೆ ನೀಡಿದರು.

Advertisement

ವರ್ಷìದಲ್ಲಿ 316 ಪ್ರಕರಣ: ಎ.ಎಸ್‌.ಪಿ ಹರೀಶ್‌ ಪಾಂಡೆ ಮಾತನಾಡಿ, ಹುಣಸೂರು ನಗರದಿಂದ ಬಹಳಷ್ಟು ದೂರವಿರುವ ಹನಗೋಡು  ಹೋಬಳಿ ನಾಗರಹೊಳೆ ಉದ್ಯಾನದಂಚಿನಲ್ಲಿದ್ದು, ಕಳೆದ ವರ್ಷ ಗ್ರಾಮಾಂತರದಲ್ಲಿ ದಾಖಲಾದ 600 ಪ್ರಕರಣದಲ್ಲಿ  ಈ ಭಾಗದಲ್ಲಿ 316 ಪ್ರಕರಣಗಳು ನಡೆದಿದ್ದು, ಈ ಭಾಗದಿಂದ ಬೆಳಗ್ಗೆ ಎದ್ದು ಹುಣಸೂರಿಗೆ ಬರಬೇಕಾದಲ್ಲಿ ತೀರ್ಥಯಾತ್ರೆ ನಡೆಸಿದಂತೆಯಾದ್ದರಿಂದ ಜನರ ಅನುಕೂಲ ದೃಷ್ಟಿಯಿಂದ ಇಲ್ಲಿ ಠಾಣೆ ತೆರೆಯ ಲಾಗಿದೆ.

ಎಲ್ಲ ಗ್ರಾಮಗಳಲ್ಲೂ ಬೀಟ್‌ ಪೊಲೀಸ್‌ನಿಂದ ಹಿಡಿದು ಎಸ್‌.ಪಿ ಅವರ ಮೊಬೈಲ್‌ ನಂಬರ್‌ಗಳ ಬೋರ್ಡ್‌ ಅಳವಡಿಸಲಾಗುವುದು, ನ್ಯಾಯ ಸಿಗದಿದ್ದಲ್ಲಿ  ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು, ಗುಪ್ತಮಾಹಿತಿ ನೀಡಬಹುದಾಗಿದ್ದು,  ಇನ್ನು ಮುಂದೆ ಎಲ್ಲ ಗ್ರಾಮಗಳಲ್ಲೂ ಹೊಸ ಬೀಟ್‌ ವ್ಯವಸ್ಥೆ ಕಲ್ಪಿ$ಸಲಾಗುವುದು ಎಂದರು.

ಜಿಪಂ ಸದಸ್ಯೆ ಡಾ.ಪುಷ್ಪಅಮರ್‌ನಾಥ್‌ ಹಾಗೂ  ತಾಪಂ ಸದಸ್ಯೆ ರೂಪಾನಂದೀಶ್‌, ದೇಶಕಾಯುವ ಸೈನಿಕರಂತೆ, ಸಾರ್ವಜನಿಕರ ಆಸ್ತಿ, ನೆಮ್ಮದಿಯ ಜೀವನ ನಡೆಸಲು ಪೊಲೀಸರು ರಕ್ಷಣೆಗಿರುತ್ತಾರೆ. ಠಾಣೆಯಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಆಸಕ್ತಿ ವಹಿಸಬೇಕೆಂದು ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಮಧು ಮಾತನಾಡಿ, ಉಪಠಾಣೆಗಾಗಿ ತಾತ್ಕಾಲಿಕವಾಗಿ ಗ್ರಾಪಂ ಸ್ಥಳ ನೀಡಲಾಗಿದ್ದು, ಬಿ.ಆರ್‌ ಕಾವಲ್‌ ರಸ್ತೆಯ ಬದಿಯಲ್ಲೇ ಠಾಣೆ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಅರ್ಧ ಎಕರೆ ಭೂಮಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಠಾಣಾ ಎಸ್‌.ಐ. ಪುಟ್ಟಸ್ವಾಮಿ ಈ ಠಾಣೆ ವ್ಯಾಪ್ತಿಗೆ 52 ಗ್ರಾಮಗಳು ಸೇರಿವೆ, ಎಎಸ್‌ಐ ಹಾಗೂ ಮೂರು ಮಂದಿ ಸಿಬ್ಬಂದಿ ಇರಲಿದ್ದಾರೆ, ಸಂಪೂರ್ಣ ಠಾಣೆಯನ್ನಾಗಿಸಲು ಶಾಸಕರ ಹಾಗೂ ಎಸ್‌ಪಿ ಸೂಚನೆಯಂತೆ ಈಗಾಗಲೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವೈದ್ಯ ಡಾ.ಜೋಗೇಂದ್ರನಾಥ್‌, ತಾಪಂ ಸದಸ್ಯರಾದ ಶ್ರೀನಿವಾಸ್‌, ಮಂಜುಳ, ಪುಷ್ಪಕಲಾ, ಪ್ರೇಮಾ, ಗ್ರಾಪಂ ಅಧ್ಯಕ್ಷರಾದ ಮಹದೇವಿ, ಚೆಲುವರಾಜು ಹಾಗೂ ಎಸ್‌.ಐ ಷಣ್ಮುಗಂ ಹಾಗೂ ಠಾಣಾ ಸಿಬ್ಬಂದಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next