Advertisement

ಮತ ಮಾರಿಕೊಳ್ಳಬೇಡಿ 

12:30 AM Mar 18, 2019 | |

ಮತವನ್ನು ಹಣಕೊಟ್ಟು ಖರೀದಿಸುವುದು ಚುನಾವಣೆಯ ಸಮ್ಮತ ವಿಧಾನವೇ ಆಗಿರುವುದು ದುರದೃಷ್ಟಕರ ಬೆಳವಣಿಗೆ. ಚುನಾವಣಾ ಆಯೋಗ ಚುನಾವಣೆಯಲ್ಲಿ ಹಣದ ಹರಿವನ್ನು ನಿಯಂತ್ರಿಸಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ರಾಜಕೀಯ ಪಕ್ಷಗಳು ಅಧಿಕಾರಿಗಳ ಕಣ್ಣುತಪ್ಪಿಸಿ ಮತದಾರರಿಗೆ ಲಂಚ ನೀಡುವುದರಲ್ಲಿ ನಿಷ್ಣಾತವಾಗಿವೆ. ರಹಸ್ಯವಾಗಿ ಹಣ ಕೊಟ್ಟು ಮತವನ್ನು ಖರೀದಿಸುವುದು ಒಂದು ರೀತಿಯಾದರೆ ಮಿಕ್ಸಿ, ಟಿವಿ, ಮೊಬೈಲ್‌, ಸೀರೆ, ಧೋತಿ ಇತ್ಯಾದಿ ವಸ್ತುಗಳನ್ನು ಹಂಚಿ ಮತ ಗಳಿಸುವುದು ಇನ್ನೊಂದು ರೀತಿ‌. ಕೆಲವು ಪಕ್ಷಗಳು ಗೆದ್ದು ಬಂದರೆ ವಿವಿಧ ವಸ್ತುಗಳನ್ನು ಹಂಚುವುದಾಗಿ ಪ್ರಣಾಳಿಕೆಯಲ್ಲೇ ಘೋಷಿಸುತ್ತವೆ. ಇದು ಬಹಿರಂಗವಾಗಿ ಮತದಾರರಿಗೆ ಆಮಿಷವೊಡ್ಡುವ ಇನ್ನೊಂದು ವಿಧಾನವಷ್ಟೇ. ರಹಸ್ಯವಾಗಿ ಹಣ ಮತ್ತು ವಸ್ತುಗಳನ್ನು ಹಂಚುವುದಕ್ಕೂ ಹೀಗೆ ಪ್ರಣಾಳಿಕೆಯಲ್ಲಿ ಆಮಿಷಗಳನ್ನು ಒಡ್ಡುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. 

Advertisement

ಆದಾಯ ಕರ ಅಧಿಕಾರಿಗಳು ಕಳೆದ ಶುಕ್ರವಾರ ಬೆಂಗಳೂರಿನ ಹೊಟೇಲೊಂದಕ್ಕೆ ದಾಳಿ ಮಾಡಿದಾಗ ಸುಮಾರು 2 ಕೋ. ರೂ.ಯಷ್ಟು ಅಕ್ರಮ ಹಣ ಪತ್ತೆಯಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯೊಂದರ ಅಧಿಕಾರಿಯೇ ಸಚಿವರ ಪರವಾಗಿ ಈ ಹಣವನ್ನು ಸಂಗ್ರಹಿಸಿ ತಂದಿದ್ದರು ಎನ್ನಲಾಗಿದ್ದು, ಇದು ಚುನಾವಣೆ ಖರ್ಚಿಗಾಗಿ ಸಂಗ್ರಹಿಸಿರುವ ಹಣ ಎನ್ನುವುದು ಸ್ಪಷ್ಟ. ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ಆಗ್ರಹಿಸಿದ್ದರು ಸಚಿವರು ಮಾತ್ರ ತನಿಖೆಯಾಗಲಿ. ಆರೋಪ ಸಾಬೀತಾದರೆ ಮತ್ತೆ ನೋಡುವ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ. ಬೆಂಗಳೂರು ಎಂದಲ್ಲ ಚುನಾವಣೆ ಸಂದರ್ಭದಲ್ಲಿ ಹೀಗೆ ಮೂಟೆಗಟ್ಟಲೆ ಹಣ ವಶವಾಗುವುದು ಮಾಮೂಲು ವಿಷಯ. ವಶವಾಗಿರುವುದಕ್ಕಿಂತಲೂ ಅಧಿಕ ಪ್ರಮಾಣದ ಹಣ ಅಧಿಕಾರಿಗಳ ಕಣ್ಣುತಪ್ಪಿಸಿ ಬಟವಾಡೆಯಾಗಿ ರುತ್ತದೆ.ಪ್ರತಿ ರಾಜ್ಯದಲ್ಲಿ ಪ್ರತಿ ರಾಜಕೀಯ ಪಕ್ಷಗಳು ಮತವನ್ನು ಖರೀದಿಸು ವುದು ಚುನಾವಣೆಯ ಒಂದು ಮಾಮೂಲು ಪ್ರಕ್ರಿಯೆಯಾಗಿದೆ. 

ಎಲ್ಲಿಯವರೆಗೆ ಮತವನ್ನು ಮಾರಿಕೊಳ್ಳಲು ಜನರು ತಯಾರಿರುತ್ತಾರೋ ಅಲ್ಲಿಯ ತನಕ ಖರೀದಿಸಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿರುತ್ತವೆ. ಮುಂಜಾನೆ ಹೊತ್ತಿಗೆ ಮೂಟೆಗಳಲ್ಲಿ ಹಣ ಕಟ್ಟಿಕೊಂಡು ಹಂಚುವುದೆಲ್ಲ ಹಳೇ ವಿಧಾನಗಳು. ತಮಿಳುನಾಡಿನಲ್ಲಿ ಕಳೆದ ಚುನಾವಣೆಯ ಸಂದರ್ಭದಲ್ಲಿ ಬೆಳಗ್ಗೆ ಪತ್ರಿಕೆಯ ಜತೆಗೆ ಹಣವಿದ್ದ ಕವರ್‌ ಅಂಟಿಸಿ ಹಂಚಲಾಗಿತ್ತು. ಕರ್ನಾಟಕದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಓರ್ವ ಅಭ್ಯರ್ಥಿ ಒಂದಷ್ಟು ಹಣವನ್ನು ಮತದಾರರ ಜನಧನ ಖಾತೆಗೂ ಇನ್ನೊಂದಷ್ಟು ಹಣವನ್ನು ನಗದಾಗಿಯೂ ಹಂಚಿದ್ದು ವರದಿಯಾಗಿತ್ತು. ಆನ್‌ಲೈನ್‌ನಲ್ಲಿರುವ ವಿವಿಧ ಮಾಧ್ಯಮಗಳ ಮೂಲಕ ನೇರವಾಗಿ ಮತದಾರರ ಖಾತೆಗೆ ಹಣ ರವಾನಿಸಿದ ಭೂಪರೂ ಇದ್ದಾರೆ. 

ಮುಖ್ಯವಾಗಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರೇ ರಾಜಕೀಯ ಪಕ್ಷಗಳ ಈ ಅಗ್ಗದ ತಂತ್ರಗಳಿಗೆ ಮರುಳಾಗುವವರು. ಅನೇಕರಿಗೆ ಅಭ್ಯರ್ಥಿಗಳ ಪರವಾಗಿ ನೀಡುವ ಹಣ ಅಥವಾ ಉಡುಗೊರೆಯನ್ನು ಸ್ವೀಕರಿಸುವುದು ತಪ್ಪು ಎಂಬುದು ಕೂಡಾ ಗೊತ್ತಿಲ್ಲ ಎನ್ನುವುದು ಸಮೀಕ್ಷೆಯೊಂದನ್ನು ನಡೆಸಿದಾಗ ಪತ್ತೆಯಾಗಿತ್ತು. ಬಹುತೇಕ ಜನರು ಬಡತನದ ಕಾರಣಕ್ಕಾಗಿಯೇ ಸುಲಭವಾಗಿ ಆಮಿಷಗಳಿಗೆ ಬಲಿಯಾ ಗುತ್ತಾರೆ. ಕರ್ನಾಟಕದಂಥ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಒಂದು ಮತಕ್ಕೆ ಕಡಿಮೆ ಎಂದರೂ 2000 ರೂ. ಬೆಲೆ ನಿಗದಿಯಾಗಿರುತ್ತದೆ. ಒಂದು ಕ್ಷೇತ್ರದಲ್ಲಿ ಕನಿಷ್ಠ ಮೂವರು ಪ್ರಬಲ ಅಭ್ಯರ್ಥಿಗಳಿದ್ದರೆ ಒಬ್ಬೊಬ್ಬರು 2,000ದಂತೆ ನೀಡಿದರೂ 6,000 ರೂ. ಸಂಗ್ರಹವಾಗುತ್ತದೆ. ಒಂದು ಮನೆಯಲ್ಲಿ ನಾಲ್ಕು ಅಥವಾ ಐದು ಮತಗಳಿದ್ದರೆ ಹೀಗೆ ಸಿಗುವ ಹಣ ಅವರ ಮಾಸಿಕ ಆದಾಯಕ್ಕಿಂತ ಹೆಚ್ಚಿರುತ್ತದೆ. ಹೀಗೆ ಸುಲಭವಾಗಿ ಸಿಗುವ ಹಣವನ್ನು ಅವರು ಬೇಡ ಎನ್ನುವುದಕ್ಕೆ ಕಾರಣಗಳೇ ಇಲ್ಲ. 

ಬಹುತೇಕ ಹಣ ಅಥವಾ ಉಡುಗೊರೆಗಳು ಬಟವಾಡೆಯಾಗುವುದು ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಎರಡು ದಿನ ನಡೆಯುವ ಮನೆ ಮನೆ ಪ್ರಚಾರ ಕಾರ್ಯದ ಸಂದರ್ಭದಲ್ಲಿ. ಮತಯಾಚಿಸುವ ನೆಪದಲ್ಲಿ ನೇರವಾಗಿ ಹಣ ಹಂಚಿ ದೇವರ ಮೇಲೆ ಆಣೆ ಹಾಕಿಸಿ ಮತ ನೀಡುವ ಭರವಸೆ ಪಡೆದುಕೊಳ್ಳುವುದೆಲ್ಲ ನಡೆಯುವುದು ಈ ಸಂದರ್ಭದಲ್ಲಿ.ಚುನಾವಣೆಗೆ 48 ತಾಸು ಇರುವಾಗ ನೀಡಿದ ಕೊಡುಗೆಯನ್ನು ಜನರು ನೆನಪಿನಲ್ಲಿಟ್ಟುಕೊಂಡು ಮತ ಹಾಕುತ್ತಾರೆ ಎನ್ನುವ ಭರವಸೆ ಅಭ್ಯರ್ಥಿಗಳದ್ದು. ಮತದಾನಕ್ಕೆ 48 ತಾಸುಗಳಿರುವಾಗ ಯಾವ ರೀತಿಯ ಪ್ರಚಾರವನ್ನೂ ಮಾಡ  ಬಾರದು ಎಂಬ ನಿಯಮವನ್ನು ಜಾರಿಗೆ ತಂದರೆ ತುಸು ಮಟ್ಟಿಗಾ ದರೂ ಈ ಲಂಚದ ಕೊಡುಗೆಗಳನ್ನು ತಡೆಗಟ್ಟಬಹುದು. ಆದರೆ ಇದಕ್ಕೂ ಮಿಗಿಲಾಗಿ ತಮ್ಮ ಮತ ಮಾರಾಟಕ್ಕಿರುವುದಲ್ಲ ಎಂಬ ಅರಿವು ಜನರಲ್ಲಿ ಮೂಡಿಸ ಬೇಕಾಗಿದೆ. ಇಂಥ ಅರಿವು ಹೊಂದಿರುವ ವಿವೇಚನಾಶೀಲ ಮತದಾರರು ಇದ್ದರೆ ಮಾತ್ರ ಪ್ರಜಾತಂತ್ರ ಮೌಲ್ಯಯುತವಾಗಿರುತ್ತದೆ. ಈ ಅರಿವನ್ನು ಮೂಡಿಸಲು ಚುನಾವಣ ಆಯೋಗ ಇನ್ನಷ್ಟು ಶ್ರಮಿಸುವ ಅಗತ್ಯವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next