Advertisement

ಎಡ-ಬಲ ಹೆಸರಲ್ಲಿ ಬರಹಗಾರರ ದಾರಿ ತಪ್ಪಿಸೋ ಕೆಲ್ಸ: ಭೈರಪ್ಪ ಕಳವಳ

06:05 AM Jan 13, 2018 | |

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿಯೂ ಯುವ ಬರಹಗಾರರನ್ನು ಎಡ-ಬಲ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸವಾಗುತ್ತಿದ್ದು, ಪುಸ್ತಕ ಬರೆದ ಕೂಡಲೇ ಅದು ಇಂತವರು ಬರೆದ ಪುಸ್ತಕ ಓದಬೇಡಿ, ಇದು ಓದಿ ಎಂದು ಪ್ರಚಾರ ಮಾಡುವ ಪ್ರವೃತ್ತಿ ಆರಂಭವಾಗಿದೆ ಎಂದು ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಕಳವಳ ವ್ಯಕ್ತಪಡಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಗುರುವಾರ ನಗರ ಟೌನ್‌ಹಾಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ನೃಪತುಂಗ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾಲಯದಲ್ಲಿ ಪದ್ಯ ಬರೆಯಲು ಬಳಸಬೇಕಾದ ಭಾಷೆ, ಛಂದಸ್ಸು, ವ್ಯಾಕರಣ ಹೇಳಿಕೊಡುವ ಬದಲು ಎಡ – ಬಲ ಕುರಿತು ಯುವ ಬರಹಗಾರರಿಗೆ ತಿಳಿಸುವುದರಿಂದ ಭವಿಷ್ಯದಲ್ಲಿ ದೊಡ್ಡ ಸಾಹಿತಿಗಳಾಗಬೇಕಾದರು ದಾರಿ ತಪ್ಪುತ್ತಿದ್ದಾರೆ ಎಂದರು.

ಸಾಹಿತ್ಯ ಸಮ್ಮೇಳನಗಳಲ್ಲಿಯೂ ಯುವಬರಹಗಾರರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದ್ದು, ರಷ್ಯಾದಲ್ಲಿ ಪ್ರತಿಯೊಬ್ಬ ಕೆಲಸಗಾರನೂ ಕೆಲಸದೊಂದಿಗೆ ಸಿದ್ಧಾಂತರ ಪ್ರಚಾರ ಮಾಡುವ ಕೆಲಸ ಮಾಡಬೇಕು ಎಂಬುದು ಕಮ್ಯುನಿಸ್ಟ್‌ ಸಿದ್ದಾಂತವಾಗಿತ್ತು. ಅದರಂತೆ ಸಾಹಿತ್ಯದ ಮೂಲಕ ಸಮಾಜ ಉದ್ಧಾರ ಮಾಡಬೇಕು, ಕ್ರಾಂತಿ ತರಬೇಕು. ಸಾಹಿತ್ಯದ ಮೂಲಕ ಸಮಾಜ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಅವರು ಸಾಹಿತಿಗಳೇ ಅಲ್ಲ ಎಂಬ ಪ್ರವೃತ್ತಿ ಭಾರತಕ್ಕೂ ಆಮದಾಗಿದೆ ಎಂದರು.

ಅದರೆ, ಆರೋಗ್ಯ ಸರಿಯಿಲ್ಲದಿದ್ದರೆ ವೈದ್ಯರ್ಯ ಚಿಕಿತ್ಸೆ ನೀಡುತ್ತಾರೆ, ನೀರಿನ ಸಮಸ್ಯೆಯನ್ನು ಎಂಜಿನಿಯರ್‌ಗಳು ಪರಿಹರಿಸುತ್ತಾರೆ, ಉದ್ಯೋಗ ಸಮಸ್ಯೆಗೆ ಸರ್ಕಾರಗಳು ಕ್ರಮಕೈಗೊಳ್ಳುತ್ತವೆಯೇ ಹೊರತು, ಇವೆಲ್ಲದರ ಕುರಿತು ಕಾದಂಬರಿ ಬರೆಯುವುದರಿಂದ ಸಮಾಜ ಬದಲಾಗುವುದಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.

ಸಮ್ಮೇಳನಗಳಲ್ಲಿಯೂ ಎಡ-ಬಲ
ಇಂದು ಸಾಹಿತ್ಯ ಸಮ್ಮೇಳನ ಎಂದರೂ ಎಡ-ಬಲ ಎಂತಾಗಿದ್ದು, ಒಂದು ಪಕ್ಷವನ್ನು ಬೆಂಬಲಿಸುವ ಮತ್ತು ಮತ್ತೂಂದನ್ನು ವಿರೋಧಿಸುವ ಕಾರ್ಯಕ್ರಮದಂತಾಗಿದೆ.  ಈ ಎಲ್ಲ ಗೌಜು-ಗದ್ದಲಗಳ ನಡುವೆಯೂ ತನ್ನ ದಾರಿ ಯಾವುದು, ಏನು ಮಾಡಬೇಕು ಎಂದು ಆರಂಭದ ದೆಸೆಯಲ್ಲಿರುವ ಯುವ ಬರಹಗಾರರಿಗೆ ಗೊಂದಲವಾಗುತ್ತದೆ ಎಂದರು.

Advertisement

1999ರಲ್ಲಿ ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅತ್ಯಂತ ಉತ್ಕೃಷ್ಟವಾದ ನನ್ನ 28 ಪುಟಗಳ ಶುದ್ಧ ಸಾಹಿತ್ಯದ ಗುಣಲಕ್ಷಗಳ ಕುರಿತ ಅಧ್ಯಕ್ಷೀಯ ಭಾಷಣವನ್ನು ಮೊದಲು ಮೆಚ್ಚಿಕೊಂಡು, ನಂತರದಲ್ಲಿ ಅದನ್ನು ಸುಟ್ಟು ಪ್ರಚಾರ ಪಡೆದುಕೊಂಡಿದ್ದರು. ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಅದಕ್ಕೆ “ಬೆಂಕಿ ಹಾಕುವುದು ಅವರ ಮಾಧ್ಯಮ, ಬರೆಯುವುದು ನನ್ನ ಮಾಧ್ಯಮ’ ಎಂದು ಉತ್ತರ ನೀಡಿದ್ದೆ ಎಂದು ಸ್ಮರಿಸಿದರು.

ನಾನು ಶುದ್ಧ ಸಾಹಿತ್ಯದಲ್ಲಿ ನಂಬಿಕೆ ಇರಿಸಿದ್ದು, ಎಲ್ಲ ಕಲಾ ಪ್ರಕಾರಗಳ ಪೈಕಿ ಸಂಗೀತದಲ್ಲಿ ಅದರಲ್ಲಿಯೂ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಇಂದಿಗೂ ಶುದ್ಧ ಭಾವನೆ ಜೀವಂತವಾಗಿದೆ. ಅದೇ ಶುದ್ಧತೆಯ ರಸ ಸಾಹಿತ್ಯದಲ್ಲಿ ಬರುವಾಗ ಜೀವನದ ಬೇರೆ ಬೇರೆ ಸಮಸ್ಯೆಗಳು ಸೇರಿ ಪರಿಶುದ್ಧವಾಗುವುದಿಲ್ಲ. ಯುವಕರು ಆ ಪರಿಶುದ್ಧತೆ ಮಟ್ಟವನ್ನು ತಲುಪಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಲೇಖಕರನ್ನು ಉತ್ತೇಜಿಸಲು ಸಾಹಿತ್ಯ ಸಮಾವೇಶಕ್ಕೆ 25 ಲಕ್ಷ ರೂ. ಹಾಗೂ ಕನ್ನಡ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಯುವ ಸಾಹಿತಿಗಳಾದ ಎಸ್‌.ರಾಮಲಿಂಗೇಶ್ವರ, ಡಾ.ಸಿ.ನಂದಿನಿ, ಶಾಂತಿ ಕೆ.ಅಪಣ್ಣ, ಗುರಪ್ಪ ಗಾಣಿಗೇರ ಅವರಿಗೆ ತಲಾ 25 ಸಾವಿರ ರೂ. ನಗದು ಸಹಿತ “ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನೃಪತುಂಗ ಸಾಹಿತ್ಯ ಪ್ರಶಸ್ತಿಯು 7 ಲಕ್ಷದ ಒಂದು ರೂಪಾಯಿ ನಗದು ಒಳಗೊಂಡಿದೆ.

ಈ ವೇಳೆ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌, ಸಾಹಿತಿ ಪ್ರಧಾನ ಗುರುದತ್‌, ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌, ಉಪಾಧ್ಯಕ್ಷ ಗೋವಿಂದರಾಜು, ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next