Advertisement

ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸದಿರಿ

05:26 PM Dec 01, 2018 | Team Udayavani |

ಚಿತ್ರದುರ್ಗ: ಅಂಬೇಡ್ಕರ್‌ ಸಂವಿಧಾನ ನೀಡಿ ಶೋಷಿತರ ಬಾಳಿಗೆ ಬೆಳಕಾದರೆ, ಕನಕದಾಸರು ಸಮಾಜದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಸೆಟೆದು ನಿಂತರು. ವಾಲ್ಮೀಕಿಯವರು ರಾಮಾಯಣದ ಮೂಲಕ ಸಮಾಜಕ್ಕೆ ಬಹು ದೊಡ್ಡ ಮೌಲ್ಯಗಳನ್ನು ಕಟ್ಟಿ ಕೊಟ್ಟರು ಎಂದು ಪ್ರಾಧ್ಯಾಪಕ ಡಾ| ಗುಡದೇಶಪ್ಪ ಹೇಳಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗ, ಎಸ್ಸಿ-ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್‌, ವಾಲ್ಮೀಕಿ ಹಾಗೂ ಕನಕ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಈ ಮೂವರು ಮಹನೀಯರು ಹಲವಾರು ಸವಾಲುಗಳನ್ನು ಜೀವನದಲ್ಲಿ ಎದುರಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜನಪರ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಸಮಾಜಕ್ಕೆ ಆದರ್ಶಗಳನ್ನು ನೀಡಿದ ವಾಲ್ಮೀಕಿ, ಭಕ್ತಿ ಮತ್ತು ಸೇವೆಯನ್ನು ಕೊಡುಗೆ ನೀಡಿದ ಕನಕದಾಸರು, ಅಸ್ಪೃಶ್ಯತೆ ನಿರ್ಮೂಲನೆ ಮಾಡಿ ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಅಂಬೇಡ್ಕರ್‌
ಅವರನ್ನು ಸದಾ ಸ್ಮರಣೀಯರು ಎಂದರು. 

ಮಹಾನ್‌ ಸಾಧಕರನ್ನು ಕೇವಲ ಅವರವರ ಜಾತಿ, ಧರ್ಮಗಳಿಗೆ ಸೀಮಿತಗೊಳಿಸುವುದು ಬೇಡ. ಏಕೆಂದರೆ ಅವರು ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಎಲ್ಲ ಜಾತಿ, ಧರ್ಮದವರ ಮಹಾನ್‌ ಸಾಧಕರ ಜಯಂತಿಗಳನ್ನು ಒಟ್ಟಿಗೆ ಆಚರಿಸುವುರಿಂದ ಸೌಹಾರ್ದತೆ ಸಾಧ್ಯ ಎಂದು ಪ್ರತಿಪಾದಿಸಿದರು.
 
ಶೋಷಿತ ಸಮುದಾಯಗಳಲ್ಲಿ ಒಗ್ಗಟ್ಟು ಮೂಡಬೇಕು. ಅದಕ್ಕಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಚಿಂತಕ ಡಾ| ಕರಿಯಪ್ಪ ಮಾಳಿಗೆ ಮಾತನಾಡಿ, ವಚನಕಾರರು, ದಾಸರು, ಕೀರ್ತನಾಕಾರರು, ತತ್ವಪದಕಾರರು, ಸಾಧು ಸಂತರು ಸೇರಿದಂತೆ ಮತ್ತಿತರ ಸಾಂಸ್ಕೃತಿಕ ವೀರರಿಗೆ ಮಹತ್ವದ ಸ್ಥಾನವಿದೆ. ಕನಕದಾಸರಿಗೆ ಸಾಕಷ್ಟು ಹಣ, ಅಧಿಕಾರ, ಸಂಪತ್ತು ಇದ್ದರೂ ಅವೆಲ್ಲವನ್ನೂ ದೂರ ತಳ್ಳಿದರು. ಕನಕಪ್ಪ ನಾಯಕರಾಗಿದ್ದವರು ಕೀರ್ತನೆಗಳ ಮೂಲಕ ಕನಕದಾಸರಾದರು. ಕನಕದಾಸರು ಹಣ ಮತ್ತು ಅಧಿಕಾರದ ಮೇಲೆ ಜಿಗುಪ್ಸೆ ಹೊಂದಿ ಊರೂರು ಅಲೆದು ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು ಎಂದರು.
 
ವಾಲ್ಮೀಕಿ ಬದುಕಿನಲ್ಲಿ ನಡೆದ ಸಂಘರ್ಷವೇ ಅವರನ್ನು ಮಹರ್ಷಿಯನ್ನಾಗಿ ಮಾಡಿತು. ಅದು ಅವರ ಮನಃಪರಿವರ್ತನೆಗೆ ಕಾರಣವಾಯಿತು. ತಳ, ಶೋಷಿತ ಸಮುದಾಯಗಳು ಮತ್ತು ಮೀಸಲಾತಿ ಪಡೆಯುತ್ತಿರುವ ಎಲ್ಲ ವರ್ಗಗಳು ಅಂಬೇಡ್ಕರ್‌ ಇಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ರವರ ಚಿಂತನೆಗಳು ಕೇವಲ ಆಚರಣೆಗೆ ಸೀಮಿತವಾಗದೆ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕಿದೆ. ದೇಶ ಕಂಡ ಅಪರೂಪದ ಮಹಾನ್‌ ಮಾನವತಾವಾದಿಯಾಗಿದ್ದಾರೆ. ಸಂಕಷ್ಟ, ದಾಸ್ಯದಲ್ಲಿ ಬದುಕುತ್ತಿದ್ದ ಜನರಲ್ಲಿ ಸ್ವಾಭಿಮಾನದ ಕಿಚ್ಚು ಮೂಡಿಸಿದರು ಎಂದು ಸ್ಮರಿಸಿದರು. 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗದ ಎಸ್ಸಿ-ಎಸ್ಟಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಾಬುರಾಜ್‌ಮಾತನಾಡಿ, ಹೋರಾಟಗಾರರು, ಮಾಧ್ಯಮಗಳು ಸೇರಿದಂತೆ ಜಿಲ್ಲೆಯ ಜನತೆಯ ಅವಿರತ ಹೋರಾಟದ ಫಲವಾಗಿ ವಿಭಾಗೀಯ ಕಚೇರಿ ಹಿಂದುಳಿದ ಜಿಲ್ಲೆಗೆ ಬಂದಿದೆ.

ಆದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ ಎನ್ನುವ ನೋವಿದೆ. ಸಮಗ್ರ ಅಭಿವೃದ್ಧಿ ಮತ್ತು ಕುಗ್ರಾಮಗಳಿಗೆ ಸಾರಿಗೆ ಸೇವೆ ನೀಡುವ ಮೂಲಕ ಜಿಲ್ಲೆಯ ಜನರ ಋಣ ತೀರಿಸಬೇಕಿದೆ ಎಂದು ಹೇಳಿದರು. 

ಚಿತ್ರದುರ್ಗ ವಿಭಾಗ ಲಾಭದಲ್ಲಿ ನಡೆಯುತ್ತಿದೆ. ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಎಂಟು ತಾಲೂಕುಗಳು ಈ ವಿಭಾಗಕ್ಕೆ ಸೇರ್ಪಡೆಯಾಗಿದ್ದು, ಐದು ಸಾರಿಗೆ ಘಟಕಗಳನ್ನು ಒಳಗೊಂಡು ವಿಭಾಗವಾಗಿದೆ ಎಂದರು.

ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್‌ ಕೆ. ಬಾಲನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಕಾರ್ಯಕ್ರಮಾಧಿಕಾರಿ ಅರಕಲಗೂಡು ಮಧುಸೂದನ್‌, ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್‌, ರೈತ ಮುಖಂಡ ಕೆ.ಪಿ. ಭೂತಯ್ಯ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಸಿ.ನಿರಂಜನಮೂರ್ತಿ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌. ರಾಜಣ್ಣ, ರಾಮಾಂಜನಿ, ಗುರುಮೂರ್ತಿ, ಹೇಮಲತಾ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next