Advertisement

ಕುಟುಂಬ, ಕಚೇರಿಗಳಲ್ಲಿ ಮಾನವ ಸಂಬಂಧ ಬಿರುಕು ಬಿಡದಿರಲಿ

11:41 PM Jan 12, 2020 | Sriram |

ಮನುಷ್ಯನ ಸಂಬಂಧಗಳೆಲ್ಲವೂ ಬಿರುಕು ಬಿಡುತ್ತಲೇ ಸಾಗುತ್ತಲಿದೆ. ಇಂತಹ ಜೀವನ ನಮ್ಮನ್ನು ಅಧಃಪತನದತ್ತ ಒಯ್ಯುತ್ತದೆ ಎಂದು ನಾವ್ಯಾರೂ ಭಾವಿಸುವುದಿಲ್ಲ.
ಕುಟುಂಬ ಸೇರಿದಂತೆ ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಇಂದು ಮಾನವ ಸಂಬಂಧಗಳು ಹದಗೆಟ್ಟಿವೆ. ಈ ಸಂಬಂಧಗಳು ಬಿರುಕು ಬಿಡದೆ ಗಟ್ಟಿಗೊಳಿಸುವಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಪಾತ್ರವೇನು ಎನ್ನುವುದರ ಅರಿವು ನಮಗಿರಲೇಬೇಕಿದೆ.

Advertisement

ಆಧುನಿಕ ಯಾಂತ್ರೀಕೃತ ಜೀವನ ಶೈಲಿಗೆ ಅನಿವಾರ್ಯವೆನ್ನುವಂತೆ ಒಗ್ಗಿಕೊಂಡಿರುವ ನಾವು ಇಂದು ಮೊಬೈಲ್‌, ಇಂಟರ್ನೆಟ್‌ನಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದೇವೆ. ಇದರಿಂದಾಗಿ ಒತ್ತಡಗಳು ತನ್ನಿಂದ ತಾನಾಗಿಯೇ ಮನುಷ್ಯನನ್ನು ಆವರಿಸಿಕೊಂಡು ಬಿಟ್ಟಿವೆೆ. ಮನುಷ್ಯನ ಸಂಬಂಧಗಳೆಲ್ಲವೂ ಬಿರುಕು ಬಿಡುತ್ತಲೇ ಸಾಗುತ್ತಲಿದೆ. ಇಂತಹ ಜೀವನ ನಮ್ಮನ್ನು ಅಧಃಪತನದತ್ತ ಒಯ್ಯುತ್ತದೆ ಎಂದು ನಾವ್ಯಾರೂ ಭಾವಿಸುವುದಿಲ್ಲ.
ಕುಟುಂಬ ಸೇರಿದಂತೆ ನಾವು ಕೆಲಸ ಮಾಡುವ ಕಚೇರಿಗಳಲ್ಲಿ ಇಂದು ಮಾನವ ಸಂಬಂಧಗಳು ಹದಗೆಟ್ಟಿವೆ. ಈ ಸಂಬಂಧಗಳು ಬಿರುಕು ಬಿಡದೆ ಗಟ್ಟಿಗೊಳಿಸುವಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಪಾತ್ರವೇನು ಎನ್ನುವುದರ ಅರಿವು ನಮಗಿರಲೇಬೇಕಿದೆ. ಅದಕ್ಕಾಗಿ ಕೆಲವೊಂದು ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗುತ್ತಿದೆ.

ಅಹಂ ತೊರೆದುಬಿಡಿ
ಆಸ್ತಿ, ಅಂತಸ್ತು, ಆರೋಗ್ಯ ಇತ್ಯಾದಿ ಎಲ್ಲವೂ ನನ್ನಲ್ಲಿ ಇದೆ. ನಾನೇ ದೊಡ್ಡವನು, ನಾನೇ ಉತ್ತಮನಾದವನು ಎನ್ನುವ ಅಹಂಕಾರದ (ಈಗೋ) ಭಾವನೆ ಮನುಷ್ಯರಲ್ಲಿ ಅಂಟಿಕೊಂಡು ಬಿಡುತ್ತದೆ. ಇಂತಹ ದುರ್ಗುಣ ನಿಮ್ಮಲ್ಲಿದ್ದರೆ ಅದನ್ನು ಇಂದೇ ತೊರೆದುಬಿಡಿ. ಆಸ್ತಿ, ಅಂತಸ್ತು ಕರಗಿದಾಗ, ಆರೋಗ್ಯ ಕೈಕೊಟ್ಟಾಗಲಾದರೂ ಕೆಲವರ ಅಹಂ ಇಳಿದು ಬಿಡುತ್ತದೆ. ಇಂತಹ ಸಂದರ್ಭದಲ್ಲೂ ನಮ್ಮ ಅಹಂ ಅನ್ನು ನಾವು ಬಿಡದೇ ಇದ್ದಲ್ಲಿ ಅವರು ಎಂದಿಗೂ ಬದಲಾಗಲಾರರು.

“ಲೂಸ್‌ ಟಾಕ್‌’ ಬಿಟ್ಟುಬಿಡಿ
ಕಚೇರಿ ಕೆಲಸದಲ್ಲಿರುವಾಗ, ಬಿಡುವಿನ ಸಂದರ್ಭ ಒಟ್ಟಾಗಿ ಚಹಾ ಕುಡಿಯುವ ವೇಳೆಯಲ್ಲಿ ನಮಗೆ ಅನ್ನ ನೀಡುವ ಕಂಪೆನಿ, ಇತರ ವ್ಯಕ್ತಿಗಳು, ನಮಗಾಗದವರ ಬಗ್ಗೆ ಅರ್ಥವಿಲ್ಲದೆ ಮಾತನಾಡುವುದನ್ನು (ಲೂಸ್‌ ಟಾಕ್‌) ಬಿಟ್ಟು ಬಿಡಬೇಕು. ನಮಗೆ ಯಾರಿಂದಲೂ ತೊಂದರೆಯಾಗಿರಬಹುದು. ಅದು ಅವರಿಗೆ ಸರಿ ಎನಿಸಿರಲೂಬಹುದು. ಅಂತಹ ಸನ್ನಿವೇಶದಿಂದ ನಮ್ಮ ಮನಸ್ಸಿಗೆ ಘಾಸಿಯಾಗಿರಲೂಬಹುದು. ಆದರೂ ಲೂಸ್‌ ಟಾಕ್‌ ಬೇಡವೇ ಬೇಡ. ಅರ್ಥವಿಲ್ಲದೆ ಮುಂದೆ ಬರುವ ಪರಿಣಾಮವನ್ನು ಅರಿಯದೆ ಮಾತನಾಡುವುದನ್ನು ನಾವು ಸಂಪೂರ್ಣವಾಗಿ ನಿಲ್ಲಿಸೋಣ. ಇದರಿಂದ ನಮಗೇ ಲಾಭಗಳು ಜಾಸ್ತಿಯಾಗುತ್ತವೆ. ಮನಸ್ಸೇ ತಡೆಯುತ್ತಿಲ್ಲ ಎಂದಾದರೆ ಲೂಸ್‌ ಟಾಕ್‌ ಬದಲು ಆ ಪರಿಸರದಿಂದಲೇ ದೂರವಾಗುವುದೇ ಒಳಿತೆನ್ನಬಹುದು.

ಸಮಸ್ಯೆ ಯಾರಿಗೆ ಬರೋಲ್ಲ?
ಯಾವುದೇ ವಿಷಯವನ್ನು, ಸಮಸ್ಯೆಗಳನ್ನು ನಾಜೂಕಾಗಿ ಎದುರಿಸುವುದನ್ನು ಅರಿತುಕೊಂಡರೆ ಉತ್ತಮ. ಸಮಸ್ಯೆಗಳನ್ನು ತಲೆಯಲ್ಲಿಟ್ಟುಕೊಂಡು ತೊಳಲಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ನಾವೇ ಎಳೆದುಕೊಂಡಂತಾಗುತ್ತದೆ. ಕೆಲವು ಸಮಯಗಳಲ್ಲಿ ಕೆಲವು ಸಂಕಟಗಳನ್ನು ನಾವು ಅನುಭವಿಸಲೇಬೇಕು ಎನ್ನುವುದನ್ನು ಮನದಟ್ಟುಮಾಡಿಕೊಳ್ಳಬೇಕು.

Advertisement

ನಮ್ಮ ವಾದವೇ ಏಕೆ ಸರಿಯಾಗಬೇಕು?
ಎಲ್ಲ ಸಂದರ್ಭಗಳಲ್ಲಿ ನಾವು ಹೇಳಿದ್ದೇ, ಮಾಡಿದ್ದೇ ಸರಿ. ಇನ್ನೊಬ್ಬ ಮಾಡಿದ್ದು ತಪ್ಪು ಎನ್ನುವ ವಾದ ಮಾಡಬೇಡಿ. ಅವನ ವಿಷಯದಲ್ಲೂ ಸರಿ ಇರಬಹುದು. ಮತ್ತೆ ನೀವು ಹೇಳಿದ್ದೇ ಸರಿ. ಮಾಡಿದ್ದೇ ಸರಿ ಎನ್ನುವ ವಾದವೂ ಬೇಡ. ಸಂಕುಚಿತ ಮನೋಭಾವವನ್ನು ಬಿಟ್ಟು ಹೊರಬನ್ನಿ.

ಮಿಥ್ಯವೇ ಸತ್ಯವಾಗದಿರಲಿ
ಸತ್ಯ ಯಾವುದು, ಮಿಥ್ಯ ಯಾವುದೆನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಸತ್ಯ, ಮಿಥ್ಯ ಯಾವುದೆಂದು ತಿಳಿದುಕೊಳ್ಳಲೂ ನಮಗಾಗದಿರಬಹುದು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಏನೆಂದೂ ವಿಚಾರವನ್ನೂ ತಿಳಿದುಕೊಳ್ಳದೆ ಇಲ್ಲಿ ಕೇಳಿದ್ದನ್ನು ಅಲ್ಲಿ ಹೇಳುವುದು, ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳುವುದನ್ನು ಬಿಟ್ಟು ಬಿಡಿ. ಮೌನದಿಂದಲೇ ಇಲ್ಲಿ ದೊಡ್ಡವರಾಗಿ. ಮೊತ್ತೂಬ್ಬರಿಗಿಂತ ನಮ್ಮನ್ನು ನಾವೇ ದೊಡ್ಡವರೆಂದು ತಿಳಿದು ದಡ್ಡರಾಗಬೇಡಿ.

ಅತಿಯಾದ ಆಸೆ ಬೇಡವೇ ಬೇಡ
ಮಿತಿಗಿಂತ ಅಧಿಕವಾಗಿ, ಅವಶ್ಯಕ್ಕಿಂತ ಅಧಿಕವಾಗಿ ಆಸೆ ಪಡುವುದೇ ಬೇಡ. ಕಚೇರಿಯಲ್ಲಿ ಅದೆಷ್ಟೋ ಸಂಖ್ಯೆಯ ಕೆಲಸಗಾರರಿರುತ್ತಾರೆ. ನನ್ನ ಸಹೋದ್ಯೋಗಿ ನನ್ನಷ್ಟೇ ಸಂಬಳದಲ್ಲಿ ಕೆಲಸಕ್ಕೆ ಸೇರಿ ಕಾರು ಖರೀದಿಸಿರಬಹುದು. ಜಾಗ ಖರೀದಿಸಿ ಮನೆ ಕಟ್ಟಿರಬಹುದು. ಅದೇ ಕೆಲಸದಲ್ಲಿರುವ ನನಗೆ ಅದನ್ನೆಲ್ಲ ಮಾಡಲಾಗಿಲ್ಲ ಎನ್ನುವ ಕೊರಗು ಬೇಡವೇ ಬೇಡ. ಅವರವರ ಹಿನ್ನೆಲೆ, ಮುನ್ನೆಲೆ, ಖರ್ಚು ಇನ್ನಿತರ ಕಾರ್ಯಗಳು ನಮಗಿಂತ ಭಿನ್ನವಾಗಿರಬಹುದು.

ಕಿರಿಯರನ್ನೂ ಗೌರವಿಸಿ
ಮತ್ತೂಬ್ಬರಿಗೆ ಮರ್ಯಾದೆ ಕೊಡುವುದು, ಸಿಹಿಯಾದ, ಹಿತವಾದ ಪದಗಳನ್ನು ಬಳಸಬೇಕು. ಹಿರಿಯರು, ಕಿರಿಯರನ್ನು ಗೌರವಿಸಿ. ನಾನು ಸೀನಿಯರ್‌ ಎನ್ನುವ ಸಣ್ಣತನ ಬೇಡ. ಕಿರಿಯರಿಂದಲೂ ಕಲಿಯಲು ಸಾಕಷ್ಟಿರುತ್ತದೆ. ಕಿರಿಯ ಮನಸ್ಸು ನೋಯುವಂತೆ ಮಾಡಬಾರದು. ಮಾತಿನಲ್ಲೂ, ನಡತೆಯಲ್ಲೂ ಸಭ್ಯತೆ ಇಲ್ಲದ ಕೀಳು ಪದಗಳ ಬಳಕೆ ಬೇಡವೇ ಬೇಡ.

 -ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next