Advertisement

ದ.ಕ., ಉಡುಪಿ: ಮೊದಲ ದಿನದ ಸಿಇಟಿ ನಿರಾತಂಕ

01:52 AM Apr 30, 2019 | sudhir |

ಮಂಗಳೂರು/ಉಡುಪಿ: ಮೆಡಿಕಲ್‌, ಎಂಜಿನಿಯರಿಂಗ್‌ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಸಿಇಟಿ ಪರೀಕ್ಷೆ ಸೋಮವಾರದಿಂದ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 26 ಕೇಂದ್ರಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಒಟ್ಟು 11 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡ 13,293 ಮಂದಿ ವಿದ್ಯಾರ್ಥಿಗಳ ಪೈಕಿ 9,586 ಮಂದಿ ಹಾಜರಾಗಿ, 3,707 ಮಂದಿ ಗೈರುಹಾಜರಾಗಿದ್ದಾರೆ. ಅಪರಾಹ್ನ ನಡೆದ ಗಣಿತಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡ 13,293 ವಿದ್ಯಾರ್ಥಿಗಳ ಪೈಕಿ 12,601 ಮಂದಿ ಹಾಜರಾಗಿ 692 ಮಂದಿ ಗೈರುಹಾಜರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆ ನೋಂದಾಯಿಸಿದ 4,769 ವಿದ್ಯಾರ್ಥಿಗಳಲ್ಲಿ 1,908 ವಿದ್ಯಾರ್ಥಿಗಳು ಗೈರುಹಾಜರಾಗಿ 2,861 ವಿದ್ಯಾರ್ಥಿಗಳು ಹಾಜರಾಗಿದ್ದರು. ಗಣಿತಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿದ 4,769 ವಿದ್ಯಾರ್ಥಿಗಳಲ್ಲಿ 260 ಮಂದಿ ಗೈರು ಹಾಜರಾಗಿ 4,509 ವಿದ್ಯಾರ್ಥಿಗಳು ಹಾಜರಾಗಿದ್ದರು.

37 ಕೇಂದ್ರಗಳಲ್ಲಿ ಪರೀಕ್ಷೆ
ಉಭಯ ಜಿಲ್ಲೆಗಳ ಒಟ್ಟು 37 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಿಇಟಿ ಬರೆದಿದ್ದಾರೆ. ಮಂಗಳೂರಿನ 13, ಮೂಡುಬಿದಿರೆಯ 8, ಪುತ್ತೂರಿನ 3, ಬೆಳ್ತಂಗಡಿಯ 2, ಉಡುಪಿಯ 6, ಕುಂದಾಪುರದ 3 ಮತ್ತು ಕಾರ್ಕಳ-2 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ಬರೆದಿದ್ದಾರೆ. ಮಂಗಳವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ ಎಂದು ಸಿಇಟಿ ಪರೀಕ್ಷಾ ಮುಖ್ಯಸ್ಥರು ತಿಳಿಸಿದ್ದಾರೆ.

ಕಡಿಮೆಯಾದ ಮಕ್ಕಳ ಸಂಖ್ಯೆ
ಸಿಇಟಿಗಿಂತ ಮೊದಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಂದಿರುವುದರಿಂದ ಸಿಇಟಿ ಬರೆಯುವ ಮಕ್ಕಳ ಸಂಖ್ಯೆ ಕುಸಿಯುವ ಸಾಧ್ಯತೆ ಇದೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಈ ಬಾರಿ ಸಿಇಟಿ ಬರೆದ ಮಕ್ಕಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ದ.ಕ. ಜಿಲ್ಲೆಯಲ್ಲಿ 2018ರಲ್ಲಿ ಜೀವಶಾಸ್ತ್ರ ಪರೀಕ್ಷೆಗೆ 14,419 ಮಂದಿ ನೋಂದಣಿ ಮಾಡಿಕೊಂಡಿದ್ದು, 9,751 ಮಂದಿ ಪರೀಕ್ಷೆ ಎದುರಿಸಿದ್ದರು. ಆದರೆ ಈ ಬಾರಿ 13,293 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಅವರಲ್ಲಿ 9,586 ಮಂದಿಯಷ್ಟೇ ಪರೀಕ್ಷೆ ಬರೆದಿದ್ದಾರೆ. ಗಣಿತ ಶಾಸ್ತ್ರ ಪರೀಕ್ಷೆಗೆ ಕಳೆದ ವರ್ಷ 14,419 ಮಂದಿ ನೋಂದಾಯಿಸಿಕೊಂಡಿದ್ದು 13,984 ಮಂದಿ ಪರೀಕ್ಷೆ ಬರೆದಿದ್ದರು. ಈ ಬಾರಿ 13,293ರಲ್ಲಿ 12,601 ಮಂದಿ ಪರೀಕ್ಷೆ ಬರೆದಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಜೀವಶಾಸ್ತ್ರ ಪರೀಕ್ಷೆಗೆ ನೋಂದಣಿ ಮಾಡಿದ 5,160 ವಿದ್ಯಾರ್ಥಿಗಳಲ್ಲಿ 2,949 ಮಂದಿ ಹಾಜರಾಗಿ 2,211 ಮಂದಿ ಗೈರು
ಹಾಜರಾಗಿದ್ದರು. ಗಣಿತ ಪರೀಕ್ಷೆಗೆ ನೋಂದಾಯಿಸಿದ 5,160 ವಿದ್ಯಾರ್ಥಿಗಳಲ್ಲಿ 5,042 ಮಂದಿ ಹಾಜರಾಗಿ, 118 ಮಂದಿ ಗೈರುಹಾಜರಾಗಿದ್ದರು.

ತಪ್ಪು ಕಲ್ಪನೆ
ಪಿಯುಸಿ ಫಲಿತಾಂಶ ಮೊದಲೇ ಪ್ರಕಟವಾಗಿರುವುದರಿಂದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಾರೆ ಎಂಬುದು ತಪ್ಪು ಕಲ್ಪನೆ. ಫಲಿತಾಂಶದಿಂದ ಅವರಿಗೆ ಇನ್ನಷ್ಟು ಹೆಚ್ಚು ಶ್ರಮ ಹಾಕಿ ಓದಲು ಸಾಧ್ಯವಾಗುತ್ತದೆ. ಥಿಯರಿಯಲ್ಲಿ ಕಡಿಮೆ ಅಂಕ ಬಂದರೂ ಸಿಇಟಿಯಲ್ಲಿ ಹೆಚ್ಚಿನ ಅಂಕ ಸಿಗಬೇಕೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳು ಸಿಇಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
-ವಾಸುದೇವ ಕಾಮತ್‌, ದ.ಕ. ಜಿಲ್ಲಾ 2019ರ ಸಿಇಟಿ ಮುಖ್ಯಸ್ಥ

ಮೊದಲ ಪರೀಕ್ಷೆ ಸುಲಭ
ಮೊದಲ ದಿನ ನಡೆದ ಜೀವಶಾಸ್ತ್ರ ಮತ್ತು ಗಣಿತದ ಸಿಇಟಿ ಪರೀಕ್ಷೆಗಳು ಸುಲಭವಾಗಿದ್ದವು ಎಂಬ ಅಭಿಪ್ರಾಯ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ವೈದ್ಯಕೀಯ, ದಂತ ವಿಜ್ಞಾನ ಪದವಿಗೆ ಹೋಗುವ ವಿದ್ಯಾರ್ಥಿಗಳು ಮಾತ್ರ ಜೀವಶಾಸ್ತ್ರದ ಪರೀಕ್ಷೆಗೆ ಹಾಜರಾಗುವುದರಿಂದ ಎಲ್ಲ ಕೇಂದ್ರಗಳಲ್ಲಿ ಜೀವಶಾಸ್ತ್ರ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next