Advertisement

Vijayapura: ಡಿಕೆ ಶಿವಕುಮಾರ್ ಎಂದಿಗೂ ಮುಖ್ಯಮಂತ್ರಿ ಆಗಲಾರರು: ಭವಿಷ್ಯ ನುಡಿದ ಯತ್ನಾಳ್

06:29 PM Aug 18, 2023 | keerthan |

ವಿಜಯಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಸೂಪರ್ ಸಿ.ಎಂ. ರೀತಿ ವರ್ತಿಸುತ್ತಿದ್ದಾರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ದುರ್ಬಲಗೊಳಿಸಿ ಮುಖ್ಯಮಂತ್ರಿಯಾಗುವ ಹುನ್ನಾರ ನಡೆಸಿದ್ದಾರೆ. ಆದರೆ ಶಿವಕುಮಾರ್ ಎಂದಿಗೂ ಮುಖ್ಯಮಂತ್ರಿ ಆಗಲಾರರು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅರು, ತಮ್ಮ ಬೆನ್ನಿಗೆ 15 ಶಾಸಕರಿದ್ದರೂ ಹೆಚ್ಚು ಶಾಸಕರ ಬೆಂಬಲ ಇರುವ ಸಿದ್ಧರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶಿವಕುಮಾರ ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಹೋದವರು ಮರಳಿ ಬರುತ್ತಾರೆ ಎನ್ನುವ ಹೇಳಿಕೆ ಹಿಂದೆ ಸಿದ್ದರಾಮಯ್ಯ ಶಕ್ತಿ ಕುಗ್ಗಿಸುವ ಹುನ್ನಾರ ಅಡಗಿದೆ ಎಂದು ವಿಶ್ಲೇಷಿಸಿದರು.

ಸಿದ್ಧರಾಮಯ್ಯ ಅವರ ವಿರುದ್ಧ ಇರುವ ಶಾಸಕರನ್ನು ಒಗ್ಗೂಡಿಸಿ ಇದಕ್ಕಾಗಿ ರಾಜಕೀಯವಾಗಿ ಮುಗಿಸಲು ಡಿಸಿಎಂ ದೊಡ್ಡ ಯೋಜನೆಯನ್ನೇ ಮಾಡಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಯಾರ್ಯಾರ ಮನೆಗೆ ತಿರುಗಿ, ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಆರೋಪಿಸಿದರು.

ಶಿವಕುಮಾರ್ ಅವರಿಂದ ಏನೆಲ್ಲ ನೋವು ಅನುಭವಿಸಿದರೂ ಸಿದ್ದರಾಮಯ್ಯ ಸುಮ್ಮನಿದ್ದಾರೆ. ಈ ನೋವೇ ಅವರು ಶಿವಕುಮಾರ ಅವರಿಗೆ ಅಧಿಕಾರ ಬಿಟ್ದಟುಕೊಡದಂತೆ ಮಾಡಲಿದೆ. ನಾನೇ ಕಾಂಗ್ರೆಸ್ ಕೊನೆ ಮುಖ್ಯಮಂತ್ರಿ ಎನ್ನುವ ಸ್ಥಿತಿ ಇದ್ದು, 5 ತಿಂಗಳಾದರೂ ಸರಿ, 5 ವರ್ಷವಾದರೂ ಸರಿ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಹೀಗಾಗಿ ಸಿ.ಎಂ. ಆಗುವ ಭಾಗ್ಯ ಶಿವಕುಮಾರಗೆ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.

ತನಿಖೆ ನಡೆಸಲಿ: ಒಂದೊಮ್ಮೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ತನಿಖೆ ನಡೆಸಲು ಈ ಸರ್ಕಾರಕ್ಕೆ ಧೈರ್ಯ ಇದೆಯೇ, ಇದ್ದರೆ 6 ತಿಂಗಳಲ್ಲಿ ತನಿಖೆ ಮುಗಿಸಲಿ. ಬಿ.ಎಸ್.ಯಡಿಯೂರಪ್ಪ ವಿರುದ್ಧ ನಾನು ಮಾಡಿರುವ ಆರೋಪದ ಕುರಿತು ತನಿಖೆ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ. ನಮ್ಮಲ್ಲಿಯೂ ಭ್ರಷ್ಟರಿದ್ದರೆ ತನಿಖೆಯಿಂದಾದರೂ ಬಿಜೆಪಿ ಸ್ವಚ್ಛಗೊಳ್ಳಲಿದೆ ಎಂದರು.

Advertisement

ಬಿಜೆಪಿ ಸರ್ಕಾರ ಇದ್ದಾಗ 40 ಪರ್ಸೆಂಟೇಸ್ ಕಮೀಷನ್ ಪಡೆದಿತ್ತು ಎಂಬುದಕ್ಕೆ ಸಚಿವ ಎಂ.ಬಿ.ಪಾಟೀಲ ಅವರ ಬಳಿ ಆಡಿಯೋ, ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಕ್ಯಾಸೆಟ್ ಕಾಲ ಹೋಗಿ ಪೆನ್‍ಡ್ರೈವ್ ಕಾಲ ಬಂದಿದೆ ಎಂದು ಛೇಡಿಸಿದರು.

ಎಂ.ಬಿ.ಪಾಟೀಲ ಅವರು ಐದು ವರ್ಷ ಸಚಿವನಾಗಿರುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಯತ್ನಾಳ ವಿಡಯೋ ನನ್ನ ಬಳಿ ಇವೆ ಬಿಡುಗಡೆ ಮಾಡುತ್ತೇನೆ ಎಂದಿರುವ ಸಚಿವ ಪಾಟೀಲ ಅವರಿಗೆ ಅಧಿಕಾರದ ಅರಳು ಮರಳು ಹಿಡಿದಿದೆ ಎಂದು ಕುಟುಕಿದರು.

ವರ್ಗಾವಣೆ ದಂದೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ವೇತನ ನೀಡಲೂ ಸಾಧ್ಯವಾದ ದುಸ್ಥಿತಿ ಇದೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಳಿ ಪೆನ್ ಡ್ರೈವ್ ಇದೆ ಎಂದು ಬ್ಲಾಕ್‍ಮೇಲ್ ಮಾಡಿ ಬಾಯಿ ಮುಚ್ಚಿಸುವ ಬೆದರಿಕೆ ತಂತ್ರ ಬೇಡ. ಧೈರ್ಯ ಇದ್ದರೆ ಯಾರ್ಯಾರ ಡೈವ್, ಯಾರ್ಯಾರ ಪೆನ್ ಇದೆಯೋ ಬಿಡುಗಡೆ ಮಾಡಲಿ. ಯಾರ್ಯಾರದ್ದು ಏನೇನಿದೆ ಎಂಬುದು ನನಗೂ ಗೊತ್ತಿದೆ. ಇಂಥ ಹೇಳಿಕೆ ಕೊಡುವವರದ್ದು ಏನೇನಿದೆ ಎಂಬುದೂ ನನಗೆ ಗೊತ್ತಿದೆ. ಆದರೆ ನಾನು ಬ್ಲ್ಯಾಕ್ ಮೇಲ್ ಮಾಡಲಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಬಾಂಬೆ ಟೀಂ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬುದೆಲ್ಲ ಊಹಾಪೋಹ ಹಾಗೂ ಕಾಂಗ್ರೆಸ್ ನಡೆಸಿರುವ ಅಪ್ರಚಾರ. ಶಾಸಕ ಮುನಿರತ್ನ ಬಿಜೆಪಿ ಪಕ್ಷದಲ್ಲೇ ನನ್ನ ರಾಜಕೀಯ ಜೀವನ ಕೊನೆಗೊಳ್ಳಲಿದೆ ಎಂದಿದ್ದಾರೆ. ಇಂಥ ಅಪಪ್ರಚಾರದಿಂದ ಭಯ ಹುಟ್ಟಿಸಿ, ಲೋಕಸಭಾ ಚುನಾವಣೆಗೆ ವಾತಾವರಣ ವಾಮ ಮಾರ್ಗದ ಸಿದ್ಧತೆ ನಡೆಸಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಏನೇ ತಂತರ ಮಾಡಿದರೂ ಲೋಕಸಭೆ ಚುನಾವಣೆಯಲ್ಲಿ ದೇಶಕ್ಕೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ರಾಜ್ಯದಲ್ಲಿ ಬಿಜೆಪಿ ಮತ್ತೆ 25 ಸ್ಥಾನ ಗೆಲ್ಲುವುದು ಖಚಿತ. ದೇಶಕ್ಕೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಇಂತವರ ನಾಯಕತ್ವ ದೇಶಕ್ಕೆ ಬೇಕಿಲ್ಲ. ಭಾರತವನ್ನು ವಿಶ್ವದ ಆರ್ಥಿಕ ಬಲಿಷ್ಠ ರಾಷ್ಟ್ರಗಳಲ್ಲಿ 5ನೇ ಸ್ಥಾನಕ್ಕೆ ತಂದಿರುವ ಮೋದಿ ಅವರ ನಾಯಕತ್ವ ಬೇಕಿದ್ದು, ದೇಶದ ಮತದಾರರು ಮತ್ತೊಮ್ಮೆ ಮೋದಿ ಅವರ ಕೈ ಬಲಪಡಿಸಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬಿಜೆಪಿ ಮುಖಂಡ ಎಸ್.ಟಿ.ಸೋಮಶೇಖರ್ ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ. ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಶಾಸಕನಾಗಿದ್ದ ನಾನು ಪಟೇಲರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದಿದ್ದೆ. ಅಧಿಕಾರದಲ್ಲಿರುವ ನಾಯಕರನ್ನು ವಿಪಕ್ಷದವರು ಭೇಟಿ ಮಾಡುವುದು ಸಾಮಾನ್ಯ. ರಾಜಕೀಯದ ಹೊರತಾಗಿ ಭೇಟಿ ಮಾಡಿದರೆ ತಪ್ಪೇನಿದೆ ಎಂದರು.

ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದು ಸುರ್ಜೆವಾಲಾ ಹೇಳಿಕೆಗೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ, ಸುರ್ಜೇವಾಲಾ ಭಾರತೀಯ ಮತದಾರರನ್ನು ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯೇ ರಾಕ್ಷಸತ್ವದಿಂದ ಕೂಡಿದೆ. ಅದರ ವಂಶದ ಹಿನ್ನೆಲೆಯಲೇ ಸರಿ ಇಲ್ಲ, ಅದು ಹೈಬ್ರಿಡ್ ತಳಿಯ ರಾಕ್ಷಸ ಸಂತತಿ. ಕಾಂಗ್ರೆಸ್ ಪಕ್ಷ ಎಂಥ ಮನಸ್ಥಿತಿ ಹೊಂದಿದೆ ಎಂಬುದನ್ನು ದೇಶದ ಮತದಾರರು ಇನ್ನಾದರೂ ಅರ್ಥೈಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next