Advertisement

ದ.ಕ. ಜಿಲ್ಲಾ ಬೋರ್ಡ್‌ನಿಂದ ಆರಂಭವಾದ ಶಾಲೆಗೀಗ 109ರ ಸಂಭ್ರಮ

09:49 AM Dec 05, 2019 | Lakshmi GovindaRaju |

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1910 ಶಾಲೆ ಆರಂಭ
ಐದು ವರ್ಷಗಳಿಂದ ಸರಕಾರದ ಶಿಕ್ಷಕರೇ ಇಲ್ಲ!

ಮೂಡುಬಿದಿರೆ: 1910ರಲ್ಲಿ ದ.ಕ. ಜಿಲ್ಲಾ ಬೋರ್ಡ್‌ನಿಂದ ನಿಡ್ಡೋಡಿಯಲ್ಲಿ ಆರಂಭವಾದ ಕಿ.ಪ್ರಾ.ಶಾಲೆ ಕಾರಣಾಂತರಗಳಿಂದ ಮುಚ್ಚಲ್ಪಡುವ ಸ್ಥಿತಿ ಬಂದಾಗ ನಿಡ್ಡೋಡಿ ಬಾವ ನಾರಾಯಣ ಶೆಟ್ಟಿ ಅವರು ಈ ಸಂಸ್ಥೆಯನ್ನು “ಶ್ರೀ ಸತ್ಯನಾರಾಯಣ’ ಹೆಸರಿನಲ್ಲಿ ವಹಿಸಿಕೊಂಡರು. 1937ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿ 8ನೇ ತರಗತಿಯವರೆಗೆ ಶಾಶ್ವತ ಮನ್ನಣೆ ಪಡೆದು ಸರಕಾರಿ ಅನುದಾನ ಪಡೆಯುವಲ್ಲಿ ಸಫಲವಾಯಿತು. 1948ರ ಬಳಿಕ ಸಂಚಾಲಕರಾಗಿ ನಾರಾಯಣ ಶೆಟ್ಟಿಯವರ ಪುತ್ರ ಎನ್‌. ಶಿವರಾಮ ಹೆಗ್ಡೆ, ವಸಂತ ಅಜಿಲ, ದಿನಕರ ಶೆಟ್ಟಿ, ಜೋಕಿಂಕೊರೆಯಾ ಕಾರ್ಯ ನಿರ್ವಹಿಸಿದ್ದು ಈಗ ನಾರಾಯಣ ಶೆಟ್ಟಿಯವರ ಮೊಮ್ಮಗ ಯದುನಾರಾಯಣ ಶೆಟ್ಟಿ ಶಾಲಾಡಳಿತದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ಸ್ಥಾಪನೆಯ ಸಂದರ್ಭ ಪರಿ ಸರದ ಕಲ್ಲಮುಂಡ್ಕೂರು, ಸಂಪಿಗೆ, ಅಶ್ವತ್ಥಪುರ, ಬಂಗೇರಪದವು, ಶುಂಠಿ ಲಪದವು, ದಡ್ಡು, ಐಕಳದಲ್ಲಿ ಶಾಲೆಗಳಿರಲಿಲ್ಲ. ಈಗ ಈ ಪರಿ ಸರದಲ್ಲಿ ಸುಮಾರು 8 ಶಾಲೆಗಳಿವೆ. ಶಾಲೆಯ ಉಚ್ಛಾ†ಯ ಸ್ಥಿತಿಯಲ್ಲಿ ಮಕ್ಕಳ ಸಂಖ್ಯೆ 600ಕ್ಕೂಅಧಿಕ ಇತ್ತು ಎಂದು ಹೇಳಲಾಗಿದೆ. ಈಗ 1ರಿಂದ 7ರ ವರೆಗೆ ತರಗತಿಗಳಿದ್ದು 41 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶೂನ್ಯ ಶಿಕ್ಷಕರ ಶಾಲೆ!
5 ವರ್ಷಗಳಿಂದ ಈ ಶಾಲೆಯಲ್ಲಿ ಸರಕಾರಿ ಅನುದಾನಿತ ಶಿಕ್ಷಕರೇ ಇಲ್ಲ. ಆಡಳಿತ ಮಂಡಳಿಯೇ ನಾಲ್ವರು ಶಿಕ್ಷಕರನ್ನು ನೇಮಿಸಿಕೊಂಡು ಗೌರವಧನ ನೀಡಿ ಶಾಲೆಯನ್ನು ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಸುಸಜ್ಜಿತ ಸೌಲಭ್ಯಗಳು
ವಿಶಾಲ ತರಗತಿ ಕೋಣೆಗಳು, ಕುಡಿಯುವ ನೀರು, ಶೌಚಾಲಯ, “ಕಲ್ಯಾಣಿ ಹೆಗ್ಗಡ್ತಿ ರಂಗಮಂದಿರ’, ವಿಶಾಲ ಆಟದ ಬಯಲು, ಉತ್ತಮ ನಿರ್ವಹಣೆಯ ಉದ್ಯಾನವನ, ಆಟೋಟಗಳ ಪರಿಕರಗಳು, ಕಂಪ್ಯೂಟರ್‌ ಲ್ಯಾಬ್‌ ಇವೆ. ಯಕ್ಷಗಾನ, ಕರಾಟೆ, ಸಂಗೀತ, ನೃತ್ಯ ತರಗತಿಗಳು ನಡೆಯುತ್ತಿವೆ. ಹಳೆವಿದ್ಯಾರ್ಥಿ ಸಂಘದವರು ಪ್ರತಿವರ್ಷ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಲೇಖನ ಸಾಮಗ್ರಿಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಹತ್ತಿರದ (ದಡ್ಡು, ಶುಂಠಿಲಪದವು)ಕನ್ನಡ ಶಾಲೆಗಳೆಲ್ಲ ಮುಚ್ಚುತ್ತಿರುವ ಈ ಹೊತ್ತಿನಲ್ಲಿ ತಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಶಾಲೆಯನ್ನು ಊರವರು, ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ ಇನ್ನಷ್ಟು ಉನ್ನತಿಗೇರಿಸುವ ಹಂಬಲವನ್ನು ಶಾಲಾಡಳಿತ ನಿರ್ದೇಶಕ ಯದುನಾರಾಯಣ ಶೆಟ್ಟಿ ಅವರು ಹೊಂದಿದ್ದಾರೆ.

Advertisement

ಹೆಮ್ಮೆಯ ಹಳೆವಿದ್ಯಾರ್ಥಿಗಳು
ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಮೋಹನದಾಸ ಹೆಗ್ಡೆ, ಮಾಜಿ ಸೈನಿಕ ಜೋನ್‌ ಕೊರೆಯಾ ಅರಿಯಾಳ, ಉದ್ಯಮಿ ಪ್ರೇಮದಾಸ ಶೆಟ್ಟಿ ಮುಂಬಯಿ, ಎಸಿಸಿಎ (ಯು.ಕೆ.) ಜಯರಾಮ ಸುವರ್ಣ ಹೊಸಬೆಟ್ಟು, ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಕೃಷಿಕ ಕೃಷ್ಣ ರೈ, ಡಾ| ಚಿನ್ಮಯಾನಂದ ರೈ ಅಮೆರಿಕ, ಕೃಷಿ, ಹೈನುಗಾರಿಕೆಯಲ್ಲಿ ಹೆಸರಾದ ಮುಚ್ಚಾರು ವಿದ್ಯಾಧರ ಹೆಗ್ಡೆ, ಸಾಫ್ಟ್‌ವೇರ್‌ ಎಂಜಿನಿಯರ್‌, “ಆತ್ಮಿಕ’ ಕಿರುಚಿತ್ರಕ್ಕೆ ಪಂಚ ಪ್ರಶಸ್ತಿಗಳಿಸಿದ ವಿವೇಕ ಪ್ರಭು,ಮಹರಷ್ಟ್ರದ ವಿದ್ಯುನ್‌ಮಂಡಲದ ಅಧಿಕಾರಿ ಕೆ.ಎಸ್‌.ರಾವ್‌ ಅಂಬುಜಾಕ್ಷ ಭಟ್‌ ಗೋವಾ, ಪತ್ರಕರ್ತ ಕಿರಣ್‌ ಮಂಜನಬೈಲ್‌, ಚಿತ್ರ ನಟಿ ಆರಾಧನಾ ಭಟ್‌ ಈ ಶಾಲೆಯ ಸಾಧಕ ವಿದ್ಯಾರ್ಥಿಗಳು.

ಪ್ರಶಸ್ತಿ ಪುರಸ್ಕೃತರು
ಮುಖ್ಯಶಿಕ್ಷಕರಾಗಿದ್ದ ನಾಟಕಕಾರ ಪುಟ್ಟಣ್ಣ ಪೂಜಾರಿ, ಸ್ಕೌಟ್ಸ್‌ನ ಕಬ್ಬಿನಾಲೆ ಶ್ರೀನಿವಾಸ ಭಟ್‌ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಶೀನಪ್ಪ ಶೆಟ್ಟಿ, ಯು. ರಾಮಚಂದ್ರ ಭಟ್‌, ಡೆನಿಸ್‌ ಎಸ್‌. ಪಿಂಟೋ, ಎನ್‌. ರಘುರಾಮ ಶೆಟ್ಟಿ, ಜಗನ್ನಾಥ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದ ಶ್ಯಾಮಸುಂದರ ರಾವ್‌ ಇವರೆಲ್ಲ ಮುಖ್ಯಶಿಕ್ಷಕರು. ರಂಗ ವಿನ್ಯಾಸಕಾರ ಸಿಲ್ವೆಸ್ಟರ್‌ ರೋಡ್ರಿಗಸ್‌, ಚಂದಯ್ಯ ಪೂಜಾರಿ, ಕರುಣಾಕರ ಶೆಟ್ಟಿ, ಸ್ಟೆಲ್ಲಾ, ನಿರ್ಮಲಾ, ನಾಗೇಶ ರಾವ್‌ ಇವರೆಲ್ಲ ವಿವಿಧ ಕಾರಣಗಳಿಗಾಗಿ ಉಲ್ಲೇಖನೀಯರು.

ಈ ಗ್ರಾಮೀಣ ಶಾಲೆಯಲ್ಲಿ ಇಲಾಖೆಯ ಶಿಕ್ಷಕರಿಲ್ಲದಿದ್ದರೂ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪ್ರೋತ್ಸಾಹದೊಂದಿಗೆ ಉತ್ತಮ ರೀತಿಯಲ್ಲಿ ಈ ಶಾಲೆ ನಡೆಯುತ್ತಿದೆ. ಇಲಾಖೆ ಈ ಬಗ್ಗೆ ಗಮನಹರಿಸಬೇಕಾಗಿದೆ
-ಸೌಮ್ಯಾ,  ಪ್ರಭಾರ ಮುಖ್ಯೋಪಾಧ್ಯಾಯಿನಿ

ಈ ಶಾಲೆಯಲ್ಲಿ ಇಳಿಮುಖವಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುವಂತೆ ಪ್ರಯತ್ನಿಸಲಾಗುತ್ತಿದೆ ಹಳೆವಿದ್ಯಾರ್ಥಿಗಳನ್ನೆಲ್ಲ ಸಂಪರ್ಕಿಸಿ ಒಂದು ಉತ್ತಮ ಮಾದರಿ ಶಾಲೆಯನ್ನಾಗಿ ಈ ವಿದ್ಯಾಕೇಂದ್ರವನ್ನು ಬೆಳೆಸುವ ಇರಾದೆ ಇದೆ.
– ಬಿ. ಆರ್‌. ಪ್ರಸಾದ್‌, ಹಳೆ ವಿದ್ಯಾರ್ಥಿ.

- ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next