Advertisement

ಕಾಲ್ಪನಿಕ “ಚಂಬಲ್‌’ನಲ್ಲಿ ಡಿ.ಕೆ.ರವಿ ಹೆಜ್ಜೆ ಗುರುತು!

05:19 AM Feb 23, 2019 | |

ಇದು ಡಿ.ಕೆ.ರವಿ ಕಥೆನಾ? “ಚಂಬಲ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾದ ದಿನದಿಂದಲೂ ಇಂತಹ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಆದರೆ, ಚಿತ್ರತಂಡ ಮಾತ್ರ ಇದು ಸ್ಫೂರ್ತಿ ಪಡೆದ ಕಥೆ ಎಂದು ಹೇಳಿಕೊಂಡೇ ಬರುತ್ತಿತ್ತು. ಈಗ ಚಿತ್ರ ಬಿಡುಗಡೆಯಾಗಿದೆ. ಮತ್ತೆ ಅದೇ ಪ್ರಶ್ನೆ ಎದ್ದಿದೆ: ಇದು ಡಿ.ಕೆ.ರವಿ ಕಥೆನಾ? “ಇದು ಕಾಲ್ಪನಿಕ ಕಥೆ’ ಎಂಬ ಸೂಚನೆಯೊಂದಿಗೆ ಸಿನಿಮಾ ಆರಂಭವಾದರೂ, ಸಿನಿಮಾ ನೋಡುವಾಗ ನಿಮಗೆ ಡಿ.ಕೆ.ರವಿಯವರ ಕಥೆ ಎದ್ದು ಕಾಣುತ್ತದೆ.

Advertisement

ಚಿತ್ರದಲ್ಲಿ ಪಾತ್ರದ ಹೆಸರುಗಳು ಬದಲಾಗಿದೆಯಷ್ಟೇ. ಆದರೆ, ಡಿ.ಕೆ.ರವಿ ನಡೆದುಬಂದ ಹಾದಿ, ಅವರ ಕೆಲಸದ ಹಿನ್ನೆಲೆ, ಆ ನಂತರದ ಘಟನೆಗಳು …. ಹೀಗೆ ಎಲ್ಲವನ್ನು ಯಥಾವತ್ತಾಗಿ “ಸ್ಫೂರ್ತಿ’ ಪಡೆದು “ಚಂಬಲ್‌’ ಮಾಡಿದ್ದಾರೆ ಜೇಕಬ್‌ ವರ್ಗಿಸ್‌. ಹಾಗಾಗಿ, ಇದನ್ನು ನೀವು “ನೈಜ ಘಟನೆಯಿಂದ ಪ್ರೇರೇಪಿತ ಸಿನಿಮಾ’ ಎನ್ನಲಡ್ಡಿಯಿಲ್ಲ. ನಾಯಕನ ಹಿನ್ನೆಲೆ ಆರಂಭವಾಗೋದೇ ಕೋಲಾರದಿಂದ.

ಕೋಲಾರದ ಮರಳು ಮಾಫಿಯಾ, ಅಕ್ರಮಗಳ ವಿರುದ್ಧ  ಕ್ರಮಕೈಗೊಳ್ಳುತ್ತಲೇ ಆ ಊರಿನ ಶಾಸಕನ ಕೆಂಗಣ್ಣಿಗೆ ಗುರಿಯಾಗುವ ಜಿಲ್ಲಾಧಿಕಾರಿಯೊಬ್ಬ, ಮುಂದೆ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗವಾಗಿ, ದೊಡ್ಡ ದೊಡ್ಡ ಬಿಲ್ಡರ್‌ಗಳ ಕಚೇರಿಗಳಿಗೆ ರೈಡ್‌ ಮಾಡುವ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಷ್ಟು ಹೇಳಿದ ಮೇಲೆ ಇದು ಕಾಲ್ಪನಿಕ ಕಥೆಯೋ, ನೈಜವೋ ಎಂಬುದನ್ನು ನೀವು ಸುಲಭವಾಗಿ ಊಹಿಸಬಹುದು.

ಇಲ್ಲಿ ಮೆಚ್ಚಬೇಕಾದ ವಿಚಾರವೆಂದರೆ ನಿರ್ದೇಶಕ ಜೇಕಬ್‌, ಯಾವುದನ್ನೂ ಇಲ್ಲಿ ಅತಿಯಾಗಿ ತೋರಿಸಿಲ್ಲ ಮತ್ತು ಎಕ್ಸೆ„ಟ್‌ ಆಗಿಲ್ಲ. ನೈಜ ಹಿನ್ನೆಲೆಯಲ್ಲಿರುವ ಕಥೆಯನ್ನು ಸಿನಿಮಾ ಮಾಡುವಾಗ ಸಾಕಷ್ಟು ಸೂಕ್ಷ್ಮ ಸಂಗತಿಗಳು, ಗೊಂದಲಗಳು ಎದುರಾಗುತ್ತವೆ. ಅವೆಲ್ಲಕ್ಕಿಂತ ಹೆಚ್ಚಾಗಿ ವಿವಾದಕ್ಕಿಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ವಿಚಾರದಲ್ಲಿ ಜೇಕಬ್‌ ತಯಾರಿ ಚೆನ್ನಾಗಿದೆ. ಒಂದು ಸಿನಿಮಾವಾಗಲು ಎಷ್ಟು ಅಂಶಗಳು ಬೇಕೆಂಬುದು ಅವರಿಗೆ ಚೆನ್ನಾಗಿದೆ ಗೊತ್ತಿದೆ.

ಅದೇ ಕಾರಣದಿಂದ ಆ ಅಂಶಗಳನ್ನಷ್ಟೇ ಹೈಲೈಟ್‌ ಮಾಡಿ, ಮಿಕ್ಕಿದ್ದನ್ನು ಕೈ ಬಿಟ್ಟಿದ್ದಾರೆ. ಇನ್ನು, ಇದು ಡಿ.ಕೆ.ರವಿಯವರ ಘಟನೆಗಳನ್ನು ಹೋಲುವಂತಹ ಸಿನಿಮಾವಾದರೂ, ನಿರ್ದೇಶಕರು ತಮ್ಮ ಕಲ್ಪನೆಗೆ ಹಾಗೂ ಸಿನಿಮಾ ದೃಷ್ಟಿಯಿಂದ ಒಂದಷ್ಟು ದೃಶ್ಯಗಳನ್ನು ಹೆಣೆದಿದ್ದಾರೆ. ಆ ದೃಶ್ಯಗಳಿಗೆ ಮಾಡಿದ ಪೂರ್ವತಯಾರಿ ಹಾಗೂ ಅದರ ಹಿಂದಿನ ಶ್ರಮ ಎದ್ದು ಕಾಣುತ್ತದೆ. ಸಹಜವಾಗಿಯೇ ಒಂದು ಕುತೂಹಲವಿರುತ್ತದೆ.

Advertisement

ಚಿತ್ರದ ಕ್ಲೈಮ್ಯಾಕ್ಸ್‌  ವಿಚಾರದಲ್ಲಿ ನಿರ್ದೇಶಕರು ಹೇಗೆ ಯೋಚಿಸಿರಬಹುದು ಎಂದು. ಜೇಕಬ್‌, ತಮ್ಮದೇ ಒಂದು ಯೋಚನೆ ಹಾಗೂ ಲೆಕ್ಕಾಚಾರದ ಮೂಲಕ ಕ್ಲೈಮ್ಯಾಕ್ಸ್‌ ಕಟ್ಟಿಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ನಡೆಯುವ ಗೇಮ್‌ ಪ್ಲ್ರಾನ್‌ಗಳು, ಅದರ ಹಿಂದಿರುವ ಅಂಶಗಳು ಚಿತ್ರದ ಜೀವಾಳ. ನಿರ್ದೇಶಕ ಜೇಕಬ್‌ ಈ ಹಿಂದೆ “ಪೃಥ್ವಿ’ಯಲ್ಲಿ ಬಳ್ಳಾರಿಯ ಮೈನಿಂಗ್‌ ಮಾಫಿಯಾದ ಬಗ್ಗೆ ಹೇಳಿದ್ದರು.

ಈ ಬಾರಿ ನೈಜ ಘಟನೆ ಪ್ರೇರೇಪಿತ ಸಿನಿಮಾ ಮೂಲಕ ದಕ್ಷ ಅಧಿಕಾರಿಗಳು ಹೇಗೆ ಉಸಿರುಕಟ್ಟುವ ವಾತಾವಾರಣದಲ್ಲಿ ಕೆಲಸ ಮಾಡಬೇಕಾಗುತ್ತದೆ, ಕಾನೂನು ಪಾಲಿಸುತ್ತಾ ಭ್ರಷ್ಟರ ಮಟ್ಟ ಹಾಕಲು ಮುಂದಾದರೆ ಅವರ ಕಥೆ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ನೀವು ನೀನಾಸಂ ಸತೀಶ್‌ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದರೆ ಆ ಇಮೇಜ್‌ ಅನ್ನು ಪಕ್ಕಕ್ಕೆ ಸರಿಸಿ “ಚಂಬಲ್‌’ ನೋಡಬೇಕು.

ಆ ಮಟ್ಟಿನ ಬದಲಾವಣೆ ಈ ಪಾತ್ರದಲ್ಲಿದೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವನ್ನು ಇಷ್ಟಪಡುವವರಿಗೆ, ಅತಿಯಾದ ಥ್ರಿಲ್‌, ಟ್ವಿಸ್ಟ್‌ ಬೇಕು ಎಂದು ಬಯಸುವವರಿಗೆ “ಚಂಬಲ್‌’ ಹೆಚ್ಚು ರುಚಿ ಕೊಡಲಾರದು. ಅದು ಬಿಟ್ಟು, ಒಂದು ಬೇರೆ ಜಾನರ್‌ ಸಿನಿಮಾ ನೋಡಬೇಕು, ತಣ್ಣಗೆ ಆ ಸಿನಿಮಾ ನಮ್ಮನ್ನು ತಟ್ಟಬೇಕು ಎಂದುಕೊಂಡವರಿಗೆ “ಚಂಬಲ್‌’ ಇಷ್ಟವಾಗಬಹುದು. ಮೊದಲೇ ಹೇಳಿದಂತೆ ಇಲ್ಲಿ ನಿರ್ದೇಶಕರು ಯಾವ ಪಾತ್ರವನ್ನು ಅತಿಯಾಗಿ ದುಡಿಸಿಕೊಳ್ಳಲು ಹೋಗಿಲ್ಲ.

ಒಂದು ಗಂಭೀರ ವಿಷಯಕ್ಕೆ ಎಷ್ಟು ಮಾನ್ಯತೆ ಕೊಟ್ಟು ಹೇಳಬೇಕೋ, ಅದನ್ನು ಜೇಕಬ್‌ ನೀಟಾಗಿ ಮಾಡಿದ್ದಾರೆ. ಹೊಸ ಗೆಟಪ್‌ನಲ್ಲಿ, ಗಂಭೀರ ಪಾತ್ರದಲ್ಲಿ ಸತೀಶ್‌ ಅವರನ್ನು ನೋಡಬೇಕು ಎಂದು ಬಯಸುವವರು “ಚಂಬಲ್‌’ ನೋಡಬಹುದು. ಈ ಹಿಂದೆ ತಾವು “ಬ್ರಾಂಡ್‌’ ಆಗಿದ್ದ ಪಾತ್ರಗಳನ್ನು ಪಕ್ಕಕ್ಕೆ ಸರಿಸಿ ಸತೀಶ್‌, “ಚಂಬಲ್‌’ನಲ್ಲಿ ಹೊಸ ರೀತಿ ಕಾಣಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಸುಭಾಶ್‌ ಆಗಿ, ಆ ಪಾತ್ರವನ್ನು ತುಂಬಾ ಗಂಭೀರವಾಗಿ ಮತ್ತು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿ ಸೋನು ಗೌಡ ಅವರಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. ಉಳಿದಂತೆ ಅಚ್ಯುತ್‌ ಕುಮಾರ್‌, ಸತ್ಯ, ರೋಜರ್‌ ನಾರಾಯಣ್‌, ಪವನ್‌ ಸೇರಿದಂತೆ ಇತರರು ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಕಥೆಯ ಗಂಭೀರತೆಯನ್ನು ಹೆಚ್ಚಿಸಿದೆ.

ಚಿತ್ರ: ಚಂಬಲ್‌
ನಿರ್ಮಾಣ: ಜೇಕಬ್‌ ಫಿಲಂಸ್‌
ನಿರ್ದೇಶನ: ಜೇಕಬ್‌ ವರ್ಗಿಸ್‌
ತಾರಾಗಣ: ಸತೀಶ್‌ ನೀನಾಸಂ, ಸೋನು ಗೌಡ, ಸತ್ಯ, ಅಚ್ಯುತ್‌ಕುಮಾರ್‌, ರೋಜರ್‌ ನಾರಾಯಣ್‌, ಪವನ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next