Advertisement

ದೀಪಾವಳಿ: ಈ ಬಾರಿ ಗ್ರಾಹಕರ ಕೈ ಸುಡುವ ಪಟಾಕಿಗಳು!

11:38 AM Nov 02, 2021 | Team Udayavani |

ಬೆಂಗಳೂರು: ಬೆಳಕಿನ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಪಟಾಕಿಗಳು ಮಾರುಕಟ್ಟೆಗೇನೋ ಲಗ್ಗೆ ಇಟ್ಟಿವೆ. ಆದರೆ ಈ ಬಾರಿ ನಿಮಗೆ ಬೇಕಾದಷ್ಟು ಪಟಾಕಿಗಳು ಸಿಗುವುದು ಅನುಮಾನ; ಒಂದು ವೇಳೆ ಸಿಕ್ಕರೂ ಅವು ನಿಮ್ಮ ಕೈಸುಡಲಿವೆ! ಕಳೆದ ವರ್ಷ ಕೊನೆಯ ಕ್ಷಣದಲ್ಲಿ ಹಸಿರು ಪಟಾಕಿಗೆ ಅನುಮತಿ ನೀಡಲಾಯಿತು.

Advertisement

ಈ ಮಧ್ಯೆ ಕೊರೊನಾ ಹಾವಳಿಯಿಂದ ವೇತನ ಕಡಿತ, ಬೋನಸ್‌ ಸಿಗದಿರುವುದು ಸೇರಿದಂತೆ ಹಲವು ಕಾರಣಗಳು ಸಂಭ್ರಮದ ಆಚರಣೆಗೆ ಕೊಕ್ಕೆ ಹಾಕಿದವು. ಆದರೆ, ಈ ಸಲ ವೇತನದಿಂದ ಹಿಡಿದು ಎಲ್ಲವೂ ಬಹುತೇಕ ಸಹಜಸ್ಥಿತಿಗೆ ಮರಳಿದೆ. ಭರ್ಜರಿ ಆಚರಣೆಗೆ ಜನ ಸಜ್ಜು ಕೂಡ ಆಗಿದ್ದಾರೆ. ಆದರೆ, ಪಟಾಕಿಗಳ ಪೂರೈಕೆ ಪ್ರಮಾಣ ಕಡಿಮೆ ಆಗಿದೆ. ಜತೆಗೆ ಅವುಗಳ ದರದಲ್ಲಿ ಕೂಡ ಏರಿಕೆ ಆಗಿದೆ. ಇದರ ಪರಿಣಾಮ ಗ್ರಾಹಕರ ಮೇಲೆ ಆಗಲಿದ್ದು, ಇಲ್ಲಿಯೂ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಕೋವಿಡ್‌-19 ಮೊದಲ ಮತ್ತು 2ನೇ ಅಲೆ ಮುಗಿಯುತ್ತಿದ್ದಂತೆ ಮೂರನೇ ಅಲೆಯ ಭೀತಿ ಎಲ್ಲೆಡೆ ಸೃಷ್ಟಿಯಾಯಿತು. ಇದರಿಂದ ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳ ಪೂರೈಕೆ ಸಮರ್ಪಕವಾಗಿ ಆಗಿಲ್ಲ. ಮತ್ತೂಂದೆಡೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹಾಗಾಗಿ, ಉತ್ಪಾದನಾ ವೆಚ್ಚದಲ್ಲಿ ಶೇ. 20-30ರಷ್ಟು ಹೆಚ್ಚಳ ಆಗಿದೆ. ಇದರ ನಡುವೆ ಪಟಾಕಿ ಹೊಡೆಯಲು ಅನುಮತಿ ಸಿಗುತ್ತದೆಯೋ ಇಲ್ಲವೋ ಎಂಬುದು ಕೂಡ ಅನುಮಾನ ಆಗಿತ್ತು. ಇದೆಲ್ಲವೂ ಪೂರೈಕೆ ಖೋತಾ ರೂಪದಲ್ಲಿ ಪರಿಣಮಿಸಿದೆ. ಲಭ್ಯತೆ ಕಡಿಮೆ;

ಗ್ರಾಹಕರು ಹೆಚ್ಚು: “ನಾನು ವಿವಿಧ ಪ್ರಕಾರದ ಪಟಾಕಿಗಳ 500 ಕೇಸ್‌ಗಳಿಗೆ ಬೇಡಿಕೆ ಇಟ್ಟಿದ್ದೆ. ಆದರೆ, ಪೂರೈಕೆ ಆಗಿದ್ದು ಇದರರ್ಧದಷ್ಟು. ಅದೂ ಶೇ. 10-15ರಷ್ಟು ಹೆಚ್ಚು ದರ ವಿಧಿಸಲಾಗಿದೆ. ಅದರಲ್ಲೂ ಲಾರಾಗಳು (ಸಾವಿರ, ಹತ್ತುಸಾವಿರದ ಪಟಾಕಿ ಸರಗಳು) ತುಂಬಾ ಕಡಿಮೆ ಪೂರೈಕೆ ಆಗಿವೆ. ಸಗಟುದಾರರೇ ಹೆಚ್ಚಿನ ಬೆಲೆಗೆ ಖರೀದಿಸಿದ್ದರಿಂದ, ಚಿಲ್ಲರೆ ವ್ಯಾಪಾರಿಗಳಿಗೂ ಇದು ವರ್ಗಾವಣೆ ಆಗುತ್ತದೆ. ಕೊನೆಗೆ ಗ್ರಾಹಕರಿಗೆ ಸಹಜವಾಗಿ ದುಬಾರಿ ಆಗುತ್ತದೆ.

ಇದನ್ನೂ ಓದಿ;- ಎರಡೇ ದಿನದಲ್ಲಿ ಹೊಸ ನಾಯಕನ ಆಯ್ಕೆ: ಅಚ್ಚರಿ ಘೋಷಣೆ ಸಾಧ್ಯತೆ ಎಂದ ಬಿಸಿಸಿಐ ಮೂಲಗಳು

Advertisement

ಆದರೆ, ಇದು ನಮಗೂ ಅನಿವಾರ್ಯವಾಗಿದೆ’ ಎಂದು ಹೊಸೂರು ರಸ್ತೆಯ ಎಸ್‌ಎಲ್‌ವಿ ಕ್ರ್ಯಾಕರ್ನ ರಾಮಸ್ವಾಮಿ ನರಳೂರು ತಿಳಿಸುತ್ತಾರೆ. “ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ, ಈ ಸಲ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಆದರೆ, ಪೂರೈಕೆ ಕಡಿಮೆ ಇದೆ. ಬೇಡಿಕೆ ಇಟ್ಟಿದ್ದಕ್ಕಿಂತ ಶೇ. 30ರಿಂದ 40ರಷ್ಟು ಕಡಿಮೆ ಲಭ್ಯವಾಗುತ್ತಿದೆ. ಇದಕ್ಕೆ ಮುಖ್ಯವಾಗಿ ಕಚ್ಚಾ ವಸ್ತು ಗಳು ಸಮ ರ್ಪಕ ವಾಗಿ ಸಕಾಲದಲ್ಲಿ ಲಭ್ಯವಾ ಗಿಲ್ಲ. ಇನ್ನು ಹಸಿರು ಪಟಾಕಿಗೆ ಮಾತ್ರ ಅವಕಾಶ ಇದ್ದುದರಿಂದ ಉತ್ಪಾದನಾ ಮಳಿಗೆಗಳಲ್ಲಿ ಕೆಲವರು ಪರವಾನಗಿ ಪಡೆಯದಿದ್ದರಿಂದ ಉತ್ಪಾದನೆ ಸಾಧ್ಯವಾಗಿಲ್ಲ. ಈ ಮಧ್ಯೆ ಮೂರನೇ ಅಲೆಯ ಭೀತಿ ಇತ್ತು. ಮತ್ತೂಂದೆಡೆ ಬೇಡಿಕೆ ಹೆಚ್ಚಳವಾಗಿದ್ದು, ಪೂರೈಕೆ ಕಡಿಮೆ ಇರುವುದು, ತೈಲ ಬೆಲೆ ಏರಿಕೆಯಾಗಿ ದ್ದರಿಂದ ಸಾಗಾಣಿಕೆ ವೆಚ್ಚ ಅಧಿಕವಾಗಿರುವುದು ಮತ್ತಿತರ ಕಾರಣಗಳಿಂದ ಪಟಾಕಿ ದರ ಏರಿಕೆ ಆಗಿದೆ’ ಎಂದು ಶಿವಕಾಶಿಯ ಪಟಾಕಿ ವಿತರಕ ಸತೀಶ್‌ ಶರವಣ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಪೂರೈಕೆ ಕಡಿಮೆ ಒಳ್ಳೆಯದಾಯ್ತು!

“ನಾವು ಬೇಡಿಕೆ ಇಟ್ಟಿದ್ದರಲ್ಲಿ ಶೇ. 75ರಷ್ಟು ಪಟಾಕಿಗಳು ಪೂರೈಕೆ ಆಗಿವೆ. ಶೇ. 25ರಷ್ಟು ಕೊರತೆ ಆಗಿರುವುದಕ್ಕೆ ತಯಾರಕರು ಸೂಕ್ತ ಸಮಜಾಯಿಷಿಯನ್ನೂ ನೀಡಿದ್ದಾರೆ. ಖರೀದಿ ದರ ಮಾತ್ರ ಶೇ. 8ರಿಂದ 12ರಷ್ಟು ಏರಿಕೆ ಆಗಿದೆ. ಆದರೆ, ನನ್ನ ಪ್ರಕಾರ ಕಡಿಮೆ ಪೂರೈಕೆ ಆಗಿದ್ದೇ ಒಳ್ಳೆಯದಾಯಿತು ಅನಿಸುತ್ತಿದೆ. ಯಾಕೆಂದರೆ, ಇದುವರೆಗೆ ಪಟಾಕಿ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇದಕ್ಕೆ ಇನ್ನೂ ವೇತನ ಆಗಿಲ್ಲ. ಮಂಗಳವಾರ ದಿಂದ ಬಹುಶಃ ಪಿಕ್‌ಅಪ್‌ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದು ನಗರದ ಲಕ್ಷ್ಮೀ ಟ್ರೇಡರ್ನ ಜಯರಾಂ.

ಸಂಭ್ರಮವಿಲ್ಲ…

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಗಲಿಕೆಯಿಂದ ದೀಪಾವಳಿಗೆ ಆಚರಣೆಗೆ ನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಂಭ್ರಮ ಇಲ್ಲ. ಪುನೀತ್‌ ಅವರಿಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅದರಲ್ಲೂ ಯುವಕರ ಸಂಖ್ಯೆ ಅತ್ಯಧಿಕವಾಗಿದೆ. ದೀಪಾವಳಿ ಹೊಸ್ತಿಲಲ್ಲಿ ಇದ್ದಾಗಲೇ ತಮ್ಮ ನೆಚ್ಚಿನ ನಾಯಕ ಅಗಲಿದ್ದರಿಂದ ಬಹುತೇಕರು ಪಟಾಕಿ ಹೊಡೆದು, ದೀಪಾವಳಿ ಸಂಭ್ರಮ ಆಚರಣೆಗೆ ಮುಂದಾಗುತ್ತಿಲ್ಲ.

  • – ವಿಜಯಕುಮಾರ್‌ ಚಂದರಗಿ
Advertisement

Udayavani is now on Telegram. Click here to join our channel and stay updated with the latest news.

Next