Advertisement

ಜಿಲ್ಲೆಯ ಬಾಲಕಿಯರು ಮುಂಬೈಗೆ ಮಾರಾಟ?

10:43 AM Sep 24, 2019 | Suhan S |

ಬಾಗಲಕೋಟೆ: ಜಿಲ್ಲೆಯ ಅಪ್ರಾಪ್ತ ಬಾಲಕಿಯರು ಮುಂಬೈಗೆ ಮಾರಾಟ ಆಗುತ್ತಿದ್ದಾರಾ? ಇಂತಹವೊಂದು ಗಂಭೀರ ಆರೋಪ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೇಳಿ ಬಂದಿದ್ದರೂ ಇದೀಗ ಅದಕ್ಕೆ ಪುಷ್ಟಿ ನೀಡುವಂಥ ಪ್ರಕರಣವೊಂದು ನಡೆದಿದೆ.

Advertisement

ಬಾಗಲಕೋಟೆಗೂ ಮುಂಬೈಗೂ ಬಹು ವರ್ಷಗಳಿಂದ “ವಿವಿಧ’ ವಿಷಯಗಳಿಗೆ ನಂಟಿದೆ. ಕೆಲವರು ಬೇಕೆಂದೇ ಅಲ್ಲಿಗೆ ಹೋದರೆ ಇನ್ನೂ ಕೆಲವರು ಒತ್ತಾಯ  ಪೂರ್ವಕವಾಗಿ “ರೆಡ್‌ ಲೈಟ್‌’ ಜಾಲಕ್ಕೆ ಸಿಲುಕಿದ್ದ ಪ್ರಸಂಗ ನಡೆದಿವೆ. ಇದೀಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಸ್ವತಃ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಗಂಭೀರ ಶಂಕೆಯೊಂದಿಗೆ ಜಿಲ್ಲಾಧಿಕಾರಿಗೆ ವಿಸ್ತೃತ ಪತ್ರವೊಂದನ್ನು ಬರೆದಿದ್ದು, ಮಕ್ಕಳ ಕಳ್ಳ ಸಾಗಾಣಿಕೆ ವಿಷಯದಲ್ಲಿ ಮೂವರು ಮಹಿಳೆಯರ ಮೇಲೆ ಬಲವಾದ ಶಂಕೆ ಇದೆ, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಏನಿದು ಸಮಿತಿ ಶಂಕೆ?: ಜಮಖಂಡಿಯ 17 ವರ್ಷದ ಬಾಲಕಿಗೆ ಬಾಲ್ಯ ವಿವಾಹವಾಗಿದ್ದು, ಅದು ಹಿರಿಯರ ಸಮ್ಮುಖದಲ್ಲಿ ವಿಚ್ಛೇದನ ಕೂಡಾ ಆಗಿತ್ತು. ಈ ಕುರಿತು ಬಾಲಕಿಯ ತಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಲಿಖೀತ ಹೇಳಿಕೆ ಬರೆದು ಕೊಟ್ಟಿದ್ದು, ಆ ಹೇಳಿಕೆಯಿಂದ ಮಕ್ಕಳ ಕಳ್ಳ ಸಾಗಣೆ ನಡೆದಿರುವ ಗಂಭೀರ ಶಂಕೆ ಇದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಜಮಖಂಡಿಯ ಒಬ್ಬರು, ಗುಳೇದಗುಡ್ಡ ಇಬ್ಬರು ಸೇರಿ ಮೂವರು ಮಹಿಳೆಯರು ಮಕ್ಕಳ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

ಸಿಬ್ಬಂದಿ ಭಾಗಿ ಆರೋಪ?: ಇನ್ನೊಂದು ಆಘಾತಕಾರಿ ಅಂಶವೆಂದರೆ ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಕಳ್ಳ ಸಾಗಣೆ ಹಾಗೂ ಮಕ್ಕಳ ಆಶ್ರಯ ಕೇಂದ್ರಗಳ ಬೇಜವಾಬ್ದಾರಿ ಇದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಗಂಭೀರ ಆರೋಪ ಕೇಳಿ ಬಂದಾಗ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ನೀಡಿ ನೋಟಿಸ್‌ ಕೊಡುವ ಪ್ರಯತ್ನವೂ ನಡೆದಿಲ್ಲ. ಹಲವು ವರ್ಷಗಳಿಂದ ಇಲಾಖೆಯಲ್ಲಿರುವ ಕೆಲ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ವಿಷಯದಲ್ಲಿ ಗಂಭೀರ ಆರೋಪ-ದೂರು ಬಂದರೂ ಸುಮ್ಮನಿದ್ದಾರೆ. ಇಂತಹ ವಿಷಯದಲ್ಲಿ ಹಣಕಾಸಿನ ಒಪ್ಪಂದಗಳೂ ನಡೆದಿವೆ ಎಂಬ ಆರೋಪ ಕೇಳಿ ಬಂದಿದೆ.

ನಡೆಯಬೇಕಿದೆ ತನಿಖೆ: ಮಹಿಳೆ-ಮಕ್ಕಳ ಕಳ್ಳ ಸಾಗಣೆ ಯಂತಹ ಗಂಭೀರ ಆರೋಪ ಕುರಿತು ಇಲಾಖೆಯ ಸೂಪರ್‌ವೈಜರ್‌, ಸಂಬಂಧಿಸಿದ ಕೇಸ್‌ ವರ್ಕರ್‌ ಹಾಗೂ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬೇಕಿದೆ. ಇದರಲ್ಲಿ ಯಾವುದೇ ರಾಜಕೀಯ ಒತ್ತಡ, ಪ್ರಭಾವ ಬೀರುವ ಪ್ರಯತ್ನಗಳಿಂದ ತನಿಖೆ ದಾರಿ ತಪ್ಪದಿರಲಿ ಎಂಬುದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರೊಬ್ಬರ ಒತ್ತಾಯ.

Advertisement

ರಾಜಕೀಯ ನಾಯಕರ ಹಿಂಬಾಲಕರ ಹೆಸರು :  ಮಕ್ಕಳ ಕಳ್ಳ ಸಾಗಣೆ ವಿಷಯದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸಂಶಯವ್ಯಕ್ತಪಡಿಸಿ ನೇರವಾಗಿ ಒಂದು ಎನ್‌ ಜಿಒ, ಮೂವರು ಮಹಿಳೆಯರ ಹೆಸರು ಉಲ್ಲೇಖೀಸಿ ಡಿಸಿಗೆ ದೂರು ನೀಡಿದೆ. ಆ ಹೆಸರುಗಳು ಗಮನಿಸಿದರೆ ಪ್ರಭಾವಿ ರಾಜಕೀಯ ಮುಖಂಡರ ಹಿಂಬಾಲಕರ ಹೆಸರೇ ಪ್ರಮುಖವಾಗಿವೆ. ಅಲ್ಲದೇ ಗ್ರಾಮೀಣ ಭಾಗದ ಅದರಲ್ಲೂ ಆರ್ಥಿಕ ಆಶಕ್ತವಾಗಿರುವ ಹೆಣ್ಣು ಮಕ್ಕಳೇ ಹೆಚ್ಚಿಗೆ ಇರುವ ಕುಟುಂಬಗಳನ್ನು ದಾಳವಾಗಿಸಿಕೊಂಡು ಅವರಿಗೆ ಹಣದ ಆಮಿಷವೊಡ್ಡಿ ಮಕ್ಕಳ ಮಾರಾಟದಂತಹ ಪ್ರಕರಣ ನಡೆಯುತ್ತಿವೆ. ಇದಕ್ಕೆ ಮಹಾರಾಷ್ಟ್ರದ ಮುಂಬೈ, ಸೊಲ್ಲಾಪುರ, ಕೊಲ್ಲಾಪುರ, ಸತಾರಾ, ಸಾಂಗ್ಲಿ ಸಹಿತ ಹಲವು ಕಡೆ ಏಜೆಂಟ್‌ರೂ ಇದ್ದಾರೆ. ಅವರೊಂದಿಗೆ ಜಿಲ್ಲೆಯ ಕೆಲ ಪ್ರಭಾವಿಗಳೇ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಜಮಖಂಡಿಯ ಪ್ರಕರಣವೊಂದರಿಂದ ಮಕ್ಕಳ ಕಳ್ಳ ಸಾಗಣೆ ಕುರಿತು ಬಲವಾದ ಸಂಶಯ ಬಂದಿದೆ. ಈ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಬಾಲಕಿಯ ಹೇಳಿಕೆ, ಅವರ ತಾಯಿಯ ಲಿಖೀತ ಹೇಳಿಕೆ ಹಿನ್ನೆಲೆಯಲ್ಲಿ ಈ ಸಂಶಯ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. –ಗುಲಾಬ ಸಿ. ನದಾಫ, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ

ಇದು ನೇರವಾಗಿ ನಮ್ಮ ಇಲಾಖೆಗೆ ಸಂಬಂಧಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದೇವೆ. ಸಮಿತಿ ವ್ಯಕ್ತಪಡಿಸಿದ ಸಂಶಯಗಳಲ್ಲಿ ಕೆಲವು ದೃಢಪಟ್ಟರೆ, ಕೆಲವು ಸಹಜ ಆರೋಪಗಳಾಗಿವೆ. ಈ ಕುರಿತು ತನಿಖೆಯ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸೋಮವಾರ ಸಲ್ಲಿಸಿದ್ದೇವೆ. –ಅಶೋಕ ಬಸಣ್ಣನವರ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next