Advertisement

ರಾಜ್ಯಕ್ಕೆ ಜಿಲ್ಲೆ ಪ್ರಥಮ, ಜಿಪಂ ಅಧ್ಯಕ್ಷ ಹರ್ಷ

08:44 AM Aug 11, 2020 | Suhan S |

ಶಿಡ್ಲಘಟ್ಟ: ಕೋವಿಡ್ ಸಮಯದಲ್ಲೂ ಪ್ರಾಣದ ಹಂಗು ತೊರೆದು ಶಿಕ್ಷಕರು ವಿದ್ಯಾರ್ಥಿಗಳ ಮನೆ ಮನೆಗಳಿಗೆ ತೆರಳಿ ಬೋಧನೆ ಮಾಡಿದ ಶಿಕ್ಷಕರಿಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬರಲು ಶ್ರಮ ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ(ಚಿನ್ನಿ) ಅಭಿನಂದನೆ ಸಲ್ಲಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಬಳಿಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಡಾ.ಕೆ.ಸುಧಾಕರ್‌ರವರು ಅಧಿಕಾರ ಸ್ವೀಕಾರ ಮಾಡಿದಾಗ ಅವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಎಂದು ಹೇಳಿದ್ದರು. ಅದೇ ರೀತಿ ನಮ್ಮ ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಬೋಧನೆ ಹಾಗೂ ಆನ್‌ಲೈನ್‌ ತರಗತಿ ನಡೆಸಿ ಎಸ್‌ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದೇವೆ ಎಂದರು.

ಜಿಲ್ಲಾದ್ಯಂತ 350ರಿಂದ 360 ಶಿಕ್ಷಕರನ್ನು ಕರೆಸಿ ಸಭೆ ನಡೆಸಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅವರಲ್ಲಿ ಉತ್ತೇಜನ ನೀಡಿ ಮಕ್ಕಳಿಗೆ ಸಂಜೆ ವೇಳೆಯಲ್ಲಿ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗಾಗಲೇ ಹೇಳಿದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಶಾಲೆಗಳಿಗೆ ತಲಾ ಒಂದೊಂದು ಲ್ಯಾಪ್‌ಟಾಪ್‌ಗ್ಳನ್ನು ನೀಡಲಾಗುವುದು ಎಂದು ತಿಳಿಸಿದರು.

15,513 ಮಕ್ಕಳು ಪರೀಕ್ಷೆಗೆ ಹಾಜರ್‌: ಜಿಲ್ಲಾಧಿಕಾರಿ ಆರ್‌. ಲತಾ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನ ಬರಲು ಶ್ರಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲೆಯಲ್ಲಿ 287 ಶಾಲೆಗಳಿದ್ದು, ಇದರಲ್ಲಿ 111 ಸರ್ಕಾರಿ ಶಾಲೆಗಳು, 45 ಅನುದಾನ ಸಹಿತ, 118 ಅನುದಾನ ರಹಿತ ಶಾಲೆಗಳು, 13 ವಸತಿ ಶಾಲೆಗಳಲ್ಲಿ ಒಟ್ಟು 15,676 ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 15,513 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. 7,527 ವಿದ್ಯಾರ್ಥಿನಿಯರು 7949 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ಕೋರ್‌ ಕಮಿಟಿ ರಚನೆ: 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಕಳೆದ ವರ್ಷ 19 ನೇ ಸ್ಥಾನ ಬಂದಿತ್ತು. ಈ ವರ್ಷ ಮೊದಲ ಸ್ಥಾನ ಬರಲು 2700 ಶಿಕ್ಷಕರ ಶ್ರಮವಿದೆ ಹಾಗೂ ಈ ಹಿಂದೆಯೇ ಜಿಲ್ಲೆ ಮೊದಲ ಸ್ಥಾನ ಬರಲು ನಿವೃತ್ತ ಪ್ರೊಫೆಸರ್‌ ಒಳಗೊಂಡಂತೆ ಕೋರ್‌ ಕಮಿಟಿ ರಚನೆ ಮಾಡಿ ಪ್ರತಿ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಗಮನ ಹರಿಸಲಾಗುತ್ತಿತ್ತು ಎಂದು ತಿಳಿಸಿದರು.

Advertisement

ವಿನೂತನ ಪ್ರಯತ್ನ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ  ನಿದೇಶಕ ಎಸ್‌.ನಾಗೇಶ್‌ ಮಾತನಾಡಿ, ಜಿಲ್ಲಾಡಳಿತ ಮಾರ್ಗ  ದರ್ಶನದಂತೆ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು. ಪ್ರತಿಯೊಬ್ಬ ಶಿಕ್ಷಕರ ಶ್ರಮದಿಂದ ಜಿಲ್ಲೆ ಮೊದಲ ಸ್ಥಾನ ಬರಲು ಕಾರಣವಾಗಿದೆ.ಕೋವಿಡ್‌ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ವಿನೂತನ ಪ್ರಯತ್ನಗಳನ್ನು ಮಾಡಲಾಯಿತು ಎಂದು ಹೇಳಿದರು. ಕೋವಿಡ್‌ ಸಂದರ್ಭದಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರೋತ್ಸಾಹ ನೀಡಿದ ಕೆ.ಎಸ್‌.ಆರ್‌.ಟಿ.ಸಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆಗಳು ಸಲ್ಲಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲಾಗುವುದು ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next