Advertisement

ಕನ್ನಡ ಕಟ್ಟುವ ಕೆಲಸ ನಿರಂತರ ಸಾಗಲಿ: ಪಾಟೀಲ ಆಶಯ

04:18 PM Oct 15, 2018 | |

ಹಾರೂಗೇರಿ: ಸರಕಾರಿ ಪೋಷಿತ ಸಮ್ಮೇಳನಗಳಿಗಿಂತ ಸ್ವಯಂ ಪ್ರೇರಿತ ಸಂಘಟನೆಗಳು ಕನ್ನಡ ಕಟ್ಟುವ ಕಾಯಕದಲ್ಲಿ ತೀವ್ರ ಆಸಕ್ತಿ ವಹಿಸುತ್ತಿರುವುದು ಭವಿಷ್ಯದ ಶುಭ ಸೂಚನೆ ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಯ.ರು. ಪಾಟೀಲ ಹೇಳಿದರು. ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದ ವಿಶ್ವಗುರು ಬಸವಣ್ಣನವರ ವೇದಿಕೆಯಲ್ಲಿ ರವಿವಾರ ನಡೆದ ಬೆಳಗಾವಿ, ಬಾಗಲಕೋಟೆ, ವಿಜಯಪುರ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ-2018ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಇಂದು ನಾಡಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿದ್ದು, ಅವು ಕನ್ನಡದ ಪ್ರೀತಿಯ ಜತೆಗೆ ಕನ್ನಡ ಮನಸ್ಸುಗಳನ್ನು ಬೆಸೆಯುತ್ತಿವೆ. ಈ ದಿಸೆಯಲ್ಲಿ ಬೆಳಕು ಸಂಸ್ಥೆಯ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಮಾದರಿಯಾಗಿದೆ ಎಂದರು.

ಅಪಮೌಲ್ಯ ಬದಲಾಯಿಸಿ: ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ರಾಜಕಾರಣ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಯಾವುದನ್ನು ನಾವು ಜೀವನದ ಮೌಲ್ಯವಲ್ಲವೆಂದು ಒಪ್ಪಲು ಸಾಧ್ಯವಿಲ್ಲದ ಅಪಮೌಲ್ಯಗಳನ್ನು ನಾವು ಬದಲಾಯಿಸಲೇಬೇಕು. ಒಪ್ಪಲು ಸಾಧ್ಯವಿಲ್ಲದ ಜಾತಿಯತೆ, ಭಯೋತ್ಪಾದನೆ, ಅಪರಾಧಗಳನ್ನು ನಮಗೆ ಎಲ್ಲ ತಿಳಿವಳಿಕೆ, ಸಾಮರ್ಥ್ಯವಿದ್ದರೂ ಬದಲಾಯಿಸದಿದ್ದಲ್ಲಿ ನಾವೇ ಪ್ರಥಮ ದೇಶದ್ರೋಹಿಗಳಾಗುತ್ತೇವೆ. ಸಾಹಿತ್ಯಾಸಕ್ತರು, ಸಾಹಿತಿಗಳು, ಕವಿಗಳು, ಮಠಾಧೀಶರು, ಪ್ರಜ್ಞಾವಂತರು, ಸಮಾಜ ಸೇವಕರು, ಸಮಾಜದ ಓರೆಕೋರೆಗಳನ್ನು ತಿದ್ದಿ, ಸರಿ ದಾರಿಗೆ ತರಬೇಕಿದೆ ಎಂದರು.

ಬೆಳಕು ಸಂಸ್ಥೆ ರಾಜ್ಯಾಧ್ಯಕ್ಷ ಅಣ್ಣಪ್ಪ ಮೇಟಿಗೌಡ ಮಾತನಾಡಿ, ಇಂದಿನ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಭವಿಷ್ಯದ ಮುನ್ಸೂಚನೆಯಾಗಿದೆ ಎಂದರು.  ಎಸ್‌ಪಿಎಂ ಮಂಡಳ ಅಧ್ಯಕ್ಷ ತ್ರಿಕಾಲ ಅಮರಸಿಂಹ ಪಾಟೀಲ ಸಮಾರಂಭ ಉದ್ಘಾಟಿಸಿದರು. ಬೆಳಗ್ಗೆ ಕಾಳಿಕಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ತುಕಾರಾಮ ಬಡಿಗೇರ ನಾಡ ಧ್ವಜಾರೋಹಣ ನೆರವೇರಿಸಿದರು. ನಂತರ ಎಲ್ಲ ಗಣ್ಯರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಲಗದ ಶ್ರೀ ಧರೀಖಾನ ಅಜ್ಜನವರು ಸಾನ್ನಿಧ್ಯ ವಹಿಸಿದ್ದರು.

ಸಮ್ಮೇಳನಾಧ್ಯಕ್ಷ ಡಾ| ವಿ.ಎಸ್‌. ಮಾಳಿ, ಮಾಜಿ ಶಾಸಕ ಬಿ.ಸಿ. ಸರಿಕರ, ಗಣ್ಯರಾದ ರಾಮಣ್ಣ ಗಸ್ತಿ, ಬಾಲಕೃಷ್ಣ ಜಂಬಗಿ, ಡಿ.ಸಿ. ಸದಲಗಿ, ಮೀನಾಕ್ಷಿ ನೆಲಗಳಿ, ಮೋಹನಗೌಡ ಪಾಟೀಲ, ಸಾಹಿತಿ ಸಿದ್ದಣ್ಣ ದಿವಾಣ, ರಾಜ್ಯ ಸಂಘಟಕ ರಾಜು ಐತವಾಡೆ, ವಿಠ್ಠಲ ಬಡಿಗೇರ, ಚಂದ್ರಶೇಖರ ಒಡೆಯರ, ಗುರುರಾಜ ರಾಯಬಾಗಕರ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next