Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜು

03:59 PM Aug 09, 2019 | Suhan S |

ಮೈಸೂರು: ಕೇರಳದ ವೈನಾಡು, ಕೊಡಗು ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ 90 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಹರಿಬಿಡುತ್ತಿರುವುದರಿಂದ ಎದುರಾಗುವ ಯಾವುದೇ ಸಮಸ್ಯೆ ನಿಭಾಯಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನದಿಗೆ ಹೆಚ್ಚಿನ ನೀರು ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದು, ಕಳೆದ ವರ್ಷ ಇಂತದ್ದೇ ಪರಿಸ್ಥಿತಿ ಎದುರಾದಾಗ ಎಲ್ಲೆಲ್ಲಿ ಸಮಸ್ಯೆ ಉಂಟಾಗಿತ್ತು ಎಂಬುದರ ಆಧಾರದ ಮೇಲೆ ಅಂತಹ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ನದಿ ಪಾತ್ರದಲ್ಲಿನ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗದೆ ಕಳೆದ ಎರಡು ತಿಂಗಳಲ್ಲಿ ಸಾಧಾರಣ ಮಳೆ ಯಾಗಿತ್ತು. ಆದರೆ, ವೈನಾಡು ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಅಲ್ಲಿನ ಬನ ಸಾಗರ ಜಲಾಶಯ ಭರ್ತಿಯಾಗಿದೆ. ಇದರ ಪರಿಣಾಮ ಅಲ್ಲಿ ಹೊರ ಹರಿವು ಹೆಚ್ಚು ಮಾಡಿರುವುದರಿಂದ, ಮೂರ್‍ನಾಲ್ಕು ದಿನಗಳ ಹಿಂದೆ ಕಬಿನಿ ಜಲಾಶಯಕ್ಕೆ ಕೇವಲ 4 ಸಾವಿರ ಕ್ಯೂಸೆಕ್‌ ಇದ್ದ ಒಳ ಹರಿವು ಬುಧವಾರದಿಂದ ದಿಢೀರ್‌ 60 ಸಾವಿರ ಕ್ಯೂಸೆಕ್‌ವರೆಗೆ ಹೆಚ್ಚಳವಾಗಿದೆ. 84 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಜಲಾಶಯದ ಮಟ್ಟವನ್ನು 2 ಅಡಿಗಳಷ್ಟು ಬಾಕಿ ಕಾಪಾಡಿಕೊಂಡು ಹೆಚ್ಚುವರಿಯಾಗಿ ಬರುತ್ತಿರುವ ಅಷ್ಟೂ ನೀರನ್ನು ನದಿಗೆ ಬಿಡಲಾಗುತ್ತಿದೆ.

ಕಳೆದ ವರ್ಷ ಕೂಡ 80 ಸಾವಿರ ಕ್ಯೂಸೆಕ್‌ ಬಿಟ್ಟಿದ್ದ ರಿಂದ ಎಚ್.ಡಿ.ಕೋಟೆ ತಾಲೂಕಿನ ಕೆಲ ಗ್ರಾಮಗಳು, ನಂಜನಗೂಡು ಪಟ್ಟಣ ಮತ್ತು ಕೆಲ ಗ್ರಾಮಗಳ ಜನ ವಸತಿ ಪ್ರದೇಶ ಮತ್ತು ಜಮೀನುಗಳು ಜಲಾವೃತವಾಗಿ ಸಮಸ್ಯೆ ಉಂಟಾಗಿತ್ತು. ಈ ಬಾರಿಯೂ ಅಂತದೇ ಸಮಸ್ಯೆಗಳು ಮರುಕಳಿಸುವ ಕಾರಣ ಕೃಷಿ ಜಮೀನು, ಜನವಸತಿ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ ಎಂದರು.

ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್‌, ಲೋಕೋಪಯೋಗಿ, ತೋಟಗಾರಿಕೆ, ಸೆಸ್ಕ್, ಪೊಲೀಸ್‌, ಅಗ್ನಿಶಾಮಕ ಮತ್ತು ತುರ್ತುಸೇವೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ಕೊಡಲಾಗಿದೆ.

Advertisement

ಕೊಡಗು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿರು ವುದರಿಂದ ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿರುವುದರಿಂದ ಜಲಾಶಯದಿಂದ 55 ಸಾವಿರ ಕ್ಯೂಸೆಕ್‌ಗಳಷ್ಟು ನೀರು ಹೊರ ಬಿಡುತ್ತಿರು ವುದರಿಂದ ನದಿ ಪಾತ್ರದ ಪಿರಿಯಾಪಟ್ಟಣ, ಕೆ.ಆರ್‌. ನಗರ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಮಸ್ಯೆ ಎದು ರಾಗಲಿದೆ. ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತ ವಾಗುವ ಕಾರಣ ಅಗತ್ಯವಿರುವ ಕಡೆಗಳಲ್ಲಿ ತುರ್ತಾಗಿ ಗಂಜಿಕೇಂದ್ರ ತೆರೆಯುವ ಜೊತೆಗೆ ಮಳೆಯಲ್ಲಿ ಸಿಲುಕವ ಜನರಿಗೆ ಬೆಡ್‌ಶೀಟ್, ಮಳೆ ಕೋಟ್, ಸೊಳ್ಳೆಬತ್ತಿ ವ್ಯವಸ್ಥೆ ಮಾಡುವ ಜೊತೆಗೆ ಆರೋಗ್ಯ ಸೇವೆ ಒದಗಿಸಲು ಸೂಚಿಸಲಾಗಿದೆ. ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದ ಅಂಚಿಗೆ ನೀರು ನುಗ್ಗದಂತೆ ಮರಳು ಮೂಟೆಯ ತಡೆಗೋಡೆ ನಿರ್ಮಿಸುವುದು, ನಂಜನಗೂಡು ಪಟ್ಟಣದ ಹಳೇ ಬೀದಿ, ತೋಪಿನ ಬೀದಿ, ಬೊಕ್ಕಹಳ್ಳಿ, ಎಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಾಲ್ಕು ಬೋಟ್ ಬಳಕೆ: ಕಬಿನಿ ಪ್ರವಾಹದಿಂದ ಮುಳುಗಡೆಯಾದರೆ ಪರಿಹಾರ ಕಾರ್ಯಕ್ಕಾಗಿ ನಾಲ್ಕು ಬೋಟ್‌ಗಳನ್ನು ಕಾದಿರಿಸಲಾಗಿದೆ. ಈಗಾಗಲೇ ಎಚ್.ಡಿ.ಕೋಟೆ ತಾಲೂಕಿನ ಬಾವಲಿಗೆ ಒಂದು, ನಂಜನಗೂಡಿಗೆ ಒಂದು ಬೋಟ್ ಕಳುಹಿಸಿದ್ದು, ಇನ್ನೆರಡು ಬೋಟ್‌ಗಳನ್ನು ತುರ್ತು ಸಂದರ್ಭದಲ್ಲಿ ಬಳಸಲು ಕಾದಿರಿಸಲಾಗಿದೆ. ಮಳೆ ಅನಾಹುತದ ಸಮ ಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲು ಪ್ರತಿ ತಾಲೂಕಿಗೂ 25ಲಕ್ಷ ಹಣ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ನಿಧಿಯಲ್ಲಿ 12 ಕೋಟಿ ರೂ. ಹಣವಿದೆ. ಹೀಗಾಗಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದರು.

ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳಲು ಪ್ರವಾಹ ಪರಿಸ್ಥಿತಿ ತಗ್ಗಿದ ಬಳಿಕ ತಾಲೂಕುವಾರು ಸಮೀಕ್ಷೆ ಮಾಡಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕಾರಿ ಗಳ ತಂಡ ರಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾದಲ್ಲಿ ಬದಲಿ ಮಾರ್ಗಕ್ಕೆ ಕ್ರಮವಹಿಸಿದ್ದು, ಮಾರ್ಗ ಬದಲಾವಣೆ ಬಗ್ಗೆ ಸ್ಪಾಟ್ಲೈಟ್ ,ಸೈನ್‌ ಬೋರ್ಡ್‌ ಹಾಕಲು ತಿಳಿಸಲಾಗಿದೆ. ಇದಲ್ಲದೆ ವಿದ್ಯುತ್‌ ತಂತಿ ಕಡಿದು ಬಿದ್ದರೆ ಯಾವುದೇ ಅನಾಹುತ ವಾಗದಂತೆ ತತಕ್ಷಣ ಫೀಡರ್‌ಲೇನ್‌ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿರುವ ನುರಿತ ಈಜು ಗಾರರ ಪಟ್ಟಿ ಮಾಡಿದ್ದು, ಯಾವುದೇ ಸಂದರ್ಭದಲ್ಲಿ ಎದುರಾಗುವ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರು ವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲೇ ಇರುವಂತೆ ಸೂಚಿಸಲಾಗಿದೆ. ರಜೆ ಇದ್ದರೂ ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೋಗುವಂತಿಲ್ಲ. ಮೊಬೈಲ್ ಫೋನ್‌ ಕೂಡ ಸ್ವಿಚ್ಆಫ್ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next